ವಿವಾದಾತ್ಮಕ ಟ್ವೀಟ್ ಕಾರಣಕ್ಕೆ ಬೆಂಗಳೂರು ಪೊಲೀಸರಿಂದ (Bengaluru Police) ಬಂಧಿತರಾಗಿದ್ದ ನಟ ಮತ್ತು ಜನಪರ ಹೋರಾಟಗಾರ ಚೇತನ್ ಅಹಿಂಸಾ (chethan ahimsa) ಅವರಿಗೆ ಜಾಮೀನು ದೊರೆತಿದೆ. ಆದರೆ ಜಾಮೀನು ನೀಡಲು ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಪೂರೈಸಲು ಸರ್ಕಾರಿ ರಜಾ ದಿನಗಳು (Goverment Holiday) ಅಡ್ಡಿಯಾಗಿರುವುದರಿಂದ ಅವರು ಬಹುತೇಕ ಸೋಮವಾರ ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಲಿದ್ದಾರೆ.
ಕಳೆದ ಮಂಗಳವಾರ ಚೇತನ್ ಅವರನ್ನು ಅವರ ಮನೆಯವರಿಗೆ ಯಾವುದೇ ಮಾಹಿತಿ ನೀಡದೆ ನಿಗೂಢವಾಗಿ ಬಂಧಿಸಿದ್ದು ಬೆಂಗಳೂರಿನ ಶೇಶಾದ್ರಿಪುರಂ ಠಾಣೆ ಪೊಲೀಸರು (Shesadripuramm Police Station), ಐಪಿಸಿ ಸೆಕ್ಷನ್ 505(2) ಮತ್ತು 504ರ ಅಡಿ, ಜಾತಿ, ಧರ್ಮ ಮತ್ತು ಎರಡು ಗುಂಪಿನ ನಡುವೆ ದ್ವೇಷ ಹರಡುವ ಹೇಳಿಕೆ ಹಾಗೂ ಅಪರಾಧ ಕೃತ್ಯ ಎಸಗಲು ಪ್ರಚೋದನೆ ಆರೋಪ ಹೊರಿಸಿ ಎಫ್ ಐಆರ್ ದಾಖಲಿಸಿದ್ದರು.
ಶೇಶಾದ್ರಿಪುರ ಪೊಲೀಸರು ಚೇತನ್ ಅವರ ವಿರುದ್ಧ ಆರೋಪಕ್ಕೆ ಸಾಕ್ಷಿಯಾಗಿ ಪರಿಗಣಿಸಿರುವುದು ಅವರು ಎರಡು ವರ್ಷಗಳ ಹಿಂದೆ ಮಾಡಿದ್ದ ಒಂದು ಟ್ವೀಟ್. ಆ ಟ್ವೀಟ್ ನಲ್ಲಿ ಅವರು, ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಾಧೀಶ ಕೃಷ್ಣ ದೀಕ್ಷಿತ್ (High Court Justics Krishna Dixit) ಅವರು ನೀಡಿದ್ದ ಒಂದು ಹೇಳಿಕೆಯನ್ನು ಉಲ್ಲೇಖಿಸಿ ಚೇತನ್ ಅವರು, “ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಆರೋಪಿ ರಾಕೇಶ್ ಬಿ (Rape Victim B Ralesh) ಅವರಿಗೆ ಬಂಧನಪೂರ್ವ ಜಾಮೀನು (Bail) ಮಂಜೂರು ಮಾಡಿ, ‘ಅತ್ಯಾಚಾರದ ನಂತರ ಮಲಗುವುದು ಒಬ್ಬ ಭಾರತೀಯ ಮಹಿಳೆಗೆ (Indian Women) ನಾಚಿಕೆಗೇಡಿನ ಸಂಗತಿ. ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿಕ್ರಿಯಿಸುವ ರೀತಿಯಲ್ಲ ಅದು’ ಎಂಬ ಹೇಳಿಕೆ ನೀಡಿದ್ದಾರೆ. 21ನೇ ಶತಮಾನದಲ್ಲ್ಊ ನ್ಯಾಯಾಂಗದ ದೀಕ್ಷಿತ್ ಅವರ ಈ ಸ್ತ್ರೀ ದ್ವೇಷ ನಾಚಿಕೆಗೇಡಿನ ಸಂಗತಿ” ಎಂದು ಟ್ವೀಟ್(27/06/2020ರಂದು) ಮಾಡಿದ್ದರು.
ಇದೀಗ ಹಿಜಾಬ್ ವಿವಾದದ (Hijab Row) ಕುರಿತ ಪ್ರಕರಣದ ವಿಚಾರಣೆ ಅದೇ ನ್ಯಾಯಮೂರ್ತಿಗಳ ಮುಂದೆ ಬಂದ ಹಿನ್ನೆಲೆಯಲ್ಲಿ ಫೆ.16ರಂದು ಹಳೆಯ ಟ್ವೀಟ್ ಮರುಟ್ವೀಟ್ ಮಾಡಿ, “ಈ ಟ್ವೀಟನ್ನು ನಾನು ಎರಡು ವರ್ಷಗಳ ಹಿಂದೆ ಕರ್ನಾಟಕ ಹೈ ಕೋರ್ಟಿನ ತೀರ್ಪಿನ ಬಗ್ಗೆ ಬರೆದಿದ್ದೆ. ಜಸ್ಟೀಸ್ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಪ್ರಕರಣದ ಕುರಿತು ಈ ತರಹದ ಅಸಹ್ಯಕರ ಹೇಳಿಕೆಯನ್ನು ನೀಡಿದ್ದರು. ಈಗ ಅದೇ ನ್ಯಾಯಾಧೀಶರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಈ ಕುರಿತು ಬೇಕಾದ ಸ್ಪಷ್ಟತೆಯಿದೆಯೇ?” ಎಂದು ಪ್ರಶ್ನಿಸಿದ್ದರು.
Also Read : ನಟ ಚೇತನ್ ಅಹಿಂಸಾ ಬಂಧನ | ಸಿನೆಮಾ ಮಾದರಿಯಲ್ಲೇ ನಡೆದ ಇಡೀ ದಿನದ ಬೆಳವಣಿಗೆ ಇಲ್ಲಿದೆ
ಈ ಎರಡು ಟ್ವೀಟ್ ಗಳು ‘ಜಾತಿ, ಧರ್ಮ ಮತ್ತು ಎರಡು ಗುಂಪಿನ ನಡುವೆ ದ್ವೇಷ ಹರಡುವ ಹೇಳಿಕೆ ಹಾಗೂ ಅಪರಾಧ ಕೃತ್ಯ ಎಸಗಲು ಪ್ರಚೋದನೆ ನೀಡುವೆ’ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಲಿಂಗ ಸಂವೇದನೆ ಮತ್ತು ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕಾದ ಸ್ಥಾನದಲ್ಲಿರುವವರೇ ಅದಕ್ಕೆ ತದ್ವಿರುದ್ಧವಾಗಿ ಮಾತನಾಡಿರುವುದು ಎಷ್ಟು ಸರಿ ಮತ್ತು ಅಂತಹ ಮನಸ್ಥಿತಿಯವರು ಹೆಣ್ಣುಮಕ್ಕಳ ಖಾಸಗೀತನದ ಸಂಕೀರ್ಣ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಬಗೆಯಲ್ಲಿ ಪ್ರತಿಕ್ರಿಯಿಸಬಹುದು ಎಂಬುದು ನಟ ಚೇತನ್ ಟ್ವೀಟ್ ಸಾರಾಂಶ ಎಂಬುದು ಯಾರಿಗಾದರೂ ಮೇಲ್ನೋಟಕ್ಕೆ ಅರಿವಾಗುವ ಸಂಗತಿ.

ಅದರ ಹೊರತಾಗಿಯೂ ಆ ಟ್ವೀಟ್ ನಲ್ಲಿ ಗುಂಪುಗಳ ನಡುವೆ ಸಂಘರ್ಷಕ್ಕೆ ಎಡೆಮಾಡುವ ಮತ್ತು ಅಪರಾಧಕ್ಕೆ ಪ್ರಚೋದನೆ ನೀಡುವ ಅಂಶಗಳನ್ನು ಪತ್ತೆ ಮಾಡಿರುವ ಶೇಶಾದ್ರಿಪುರಂ ಪೊಲೀಸರ ಸೂಕ್ಷ್ಮಗ್ರಹಿಕೆ ಮತ್ತು ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ, ಚೇತನ್ ಅವರ ರೀಟ್ವೀಟ್ ಮಾಡಿದ ಅದೇ ಫೆಬ್ರವರಿ ತಿಂಗಳ ಎರಡನೇ ವಾರದ ಆಸುಪಾಸಿನಲ್ಲಿ ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತು ಆ ಬಳಿಕ ಶಿವಮೊಗ್ಗದ ಯುವಕ ಹರ್ಷ ಹತ್ಯೆಯ (Shivamogga Harsha Murder) ಹಿನ್ನೆಲೆಯಲ್ಲಿ ರಾಜ್ಯದ ಸಚಿವರು, ಶಾಸಕರು, ಸ್ವಾಮೀಜಿಗಳು, ಹಿಂದೂ ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ನಿರಂತರವಾಗಿ ನೀಡುತ್ತಿರುವ ಹಿಂಸೆಗೆ ಪ್ರಚೋದನೆ ನೀಡುವ ಮತ್ತು ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ನಿರಂತರ ಹೇಳಿಕೆಗಳ ವಿಷಯದಲ್ಲಿ ಯಾಕೆ ರಾಜ್ಯ ಪೊಲೀಸರು ಇದೇ ಸಾಮಾಜಿಕ ಕಾಳಜಿ ಮತ್ತು ಕರ್ತವ್ಯನಿಷ್ಠೆಯನ್ನು ತೋರುತ್ತಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸ್ವತಃ ರಾಜ್ಯ ಸರ್ಕಾರದ ಭಾಗವಾಗಿರುವ ಹಿರಿಯ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಅವರೇ ಹರ್ಷ ಹತ್ಯೆ ಘಟನೆಗೆ ನೇರವಾಗಿ ಮುಸ್ಲಿಮ್ ಗೂಂಡಾಗಳೇ ಕಾರಣ ಎನ್ನುವ ಮೂಲಕ ಒಂದಿಡೀ ಸಮುದಾಯವನ್ನು ಪ್ರಕರಣದ ತನಿಖೆ, ವಿಚಾರಣೆಗೆ ಮುನ್ನವೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮಾತುಗಳನ್ನಾಡಿದರು. ಜೊತೆಗೆ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ ಕಾಪಾಡಲು ಪೊಲೀಸರೇ ಹೇರಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ (Violation of Prohibition Law) ಮೃತ ಯುವಕನ ಶವಯಾತ್ರೆಯ ನಡೆಸಿದ್ದಲ್ಲದೆ, ಸ್ವತಃ ಸಚಿವರೇ ಅದರ ನೇತೃತ್ವವನ್ನೂ ವಹಿಸಿದ್ದರು ಮತ್ತು ಸಚಿವರು ಮತ್ತು ಪೊಲೀಸರ ಕಣ್ಣೆದುರೇ ಗುಂಪು ಒಂದು ಕೋಮಿನ ಮನೆ-ಅಂಗಡಿ-ವಾಹನಗಳನ್ನು ಪುಡಿಗಟ್ಟಿದ್ದರು. ಸ್ವತಃ ಪೊಲೀಸರ ಮೇಲೆಯೇ ಯುವರಕ ಪಡೆಗಳು ಮಾರಕಾಸ್ತ್ರ ಝಳಪಿಸಿದ್ದರು. ಈ ಹೇಳಿಕೆ ಮತ್ತು ನಡವಳಿಕೆಗಳು ಕೋಮು ದ್ವೇಷ, ಕೋಮು ಹಿಂಸಾಚಾರ, ಸಾಮಾಜಿಕ ಸಾಮರಸ್ಯಕ್ಕೆ ಭಂಗ, ಕಾನೂನು ಉಲ್ಲಂಘನೆ, ಹಿಂಸಾಚಾರಕ್ಕೆ ಕುಮ್ಮಕ್ಕು, ದ್ವೇಷಕ್ಕೆ ಕುಮ್ಮಕ್ಕು, ಪೊಲೀಸ್ ಮತ್ತು ಕಾನೂನು ವಿರುದ್ಧದ ನಡವಳಿಕೆ ಮುಂತಾದ ಯಾವ ವ್ಯಾಪ್ತಿಗೆ ಬರದ ಶಾಂತಿ ಮತ್ತು ಸುವ್ಯವಸ್ಥೆ ಕಾಯುವ ಪ್ರಯತ್ನಗಳೇ? ಎಂಬುದು ಕೇಳಿಬರುತ್ತಿರುವ ಪ್ರಶ್ನೆ.

ಹಾಗೇ, ನ್ಯಾಯಾಧೀಶರ ಕುರಿತ ನಟ ಚೇತನ್ ಮಾತುಗಳೇ ಶೇಶಾದ್ರಿಪುರಂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಅವರ ಪರಮ ಕರ್ತವ್ಯನಿಷ್ಠೆ ಮತ್ತು ಕಾನೂನು ಪಾಲನೆಗೆ ಕಾರಣವಾಗಿದೆ ಎಂಬುದನ್ನು ಒಪ್ಪುವುದಾದರೆ, ನ್ಯಾಯಾಧೀಶರು ಮತ್ತು ನ್ಯಾಯಾಂಗದ ಬಗ್ಗೆ ಅವಹೇಳನಕಾರಿಯಾದ ಮತ್ತು ವ್ಯಂಗ್ಯದ ಮಾತುಗಳನ್ನು ಪದೇಪದೇ ಆಡಿದ ದಾಖಲೆ ಇರುವ ರಾಜಕೀಯ ಮುಖಂಡರನ್ನು ಅವರು ಹೇಗೆ ಮರೆತುಬಿಟ್ಟರು ಎಂಬ ಪ್ರಶ್ನೆಯೂ ಕೇಳಿಬಂದಿದೆ.
ಏಕೆಂದರೆ; ಕಳೆದ ವರ್ಷದ ಕರೋನಾ ಲಸಿಕೆ ವಿಷಯದಲ್ಲಿ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ, ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ ಟಿ ರವಿ (CT Ravi), “ನ್ಯಾಯಾಧೀಶರೇನು ಸರ್ವಜ್ಞರಲ್ಲ” ಎಂದು ಹೇಳಿದ್ದರು(13/05/2021). ನ್ಯಾಯಾಧೀಶರ ಘನತೆಗೇ ಮಸಿ ಬಳಿಯುವ ಮತ್ತು ಜನಸಾಮಾನ್ಯರು ನ್ಯಾಯಾಲಯದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತರುವ ಇಂತಹ ಹೇಳಿಕೆ ನೀಡಿದರೂ ಈವರೆಗೆ ಯಾವ ನ್ಯಾಯಾಲಯವೂ ಅವರನ್ನು ಪ್ರಶ್ನಿಸಿದ ಉದಾಹರಣೆಯಾಗಲೀ, ಯಾವ ಪೊಲೀಸರು ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ನ್ಯಾಯಾಂಗದ ಮೇಲಿನ ವಿಶ್ವಾಸ ಕಾಯ್ದ ನಿದರ್ಶನವಾಗಲೀ ಯಾಕಿಲ್ಲ ಎಂಬುದು ಜಾಲತಾಣದಲ್ಲಿ ಕೇಳಿಬರುತ್ತಿರುವ ಪ್ರಮುಖ ಪ್ರಶ್ನೆ.

ಹಾಗೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಅಂದಿನ ಕೇಂದ್ರ ಸಚಿವ ಸದಾನಂದ ಗೌಡ (sadanandegowda) ಮತ್ತು ಸಿ ಟಿ ರವಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಬೆಳಗಾವಿಯ ವಕೀಲ ಭೀಮನಗೌಡ ಪರಗೊಂಡ ಎಂಬುವರು ಹೈಕೋರ್ಟಿಗೆ ಪತ್ರವನ್ನೂ ಬರೆದಿದ್ದರು. ಆ ಪತ್ರದ ಕುರಿತಾಗಿಯೂ ಈವರೆಗೆ ಯಾವ ಕ್ರಮ ಜರುಗಿದ ಸುದ್ದಿ ಇಲ್ಲ!

ಇನ್ನು ಅದೇ 2021ರ ಮೇ ಮೂರನೇ ವಾರದಲ್ಲಿ ಬಿಜೆಪಿ ನಾಯಕ ಹಾಗೂ ಮೈಸೂರು ಸಂಸದ ಪ್ರತಾಪ ಸಿಂಹ (Pratap Simha) ಕೂಡ, ಒಂದು ಸಮುದಾಯವನ್ನು ನಿಂದಿಸಿ, ಅವರು ವಿರುದ್ಧ ದ್ವೇಷ ಹುಟ್ಟುವಂತೆ ಮತ್ತು ಸ್ವತಃ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದರು (17/05/2021). ಆ ವೀಡಿಯೋ ಸಾಕಷ್ಟು ವೈರಲ್ ಆಗಿ, ವಿವಾದವೂ ಆಗಿತ್ತು. ನ್ಯಾಯಾಧೀಶರ ಕರ್ತವ್ಯದ ಬಗ್ಗೆಯೇ ಅವಹೇಳನಕಾರಿಯಾಗಿ ಸಂಸದರು ಮಾತನಾಡಿದ್ದರು. ಆದರೆ, ಈವರೆಗೂ ಸಾರ್ವಜನಿಕ ಆಗ್ರಹದ ಹೊರತಾಗಿಯೂ ಅವರ ವಿರುದ್ಧ ಯಾವ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಿದರ್ಶನವಿಲ್ಲ! ಯಾಕೆ ಎಂಬುದು ನೆಟ್ಟಿಗರು ಎತ್ತಿರುವ ಪ್ರಶ್ನೆ.
ಇನ್ನು ಶಿವಮೊಗ್ಗದ ಹರ್ಷ ಕೊಲೆಯ ಹಿನ್ನೆಲೆಯಲ್ಲಿ ಅವರ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಭೇಟಿ ನೀಡಿದ್ದ ಕಾಳಿಮಠದ ಋಷಿಕುಮಾರ ಸ್ವಾಮಿಯಂತೂ (Rishikumara Swamy) ಕೊಲೆಗೆ ಒಂದಿಡೀ ಸಮುದಾಯವನ್ನೇ ಬೊಟ್ಟುಮಾಡಿ, “ನಮ್ಮವರ ಒಂದು ತಲೆಗೆ ನಿಮ್ಮ ಹತ್ತು ತಲೆ ತೆಗೆಯುತ್ತೇವೆ. ನಾವು ಕೊಚ್ಚಲು ನಿಂತರೆ ಯಾವ ಹರಿಹರಬ್ರಹ್ಮ ಬಂದರೂ ತಡೆಯಲಾಗದು” ಎಂದು ನೇರವಾಗಿ ಕೋಮು ಹಿಂಸೆ ಮತ್ತು ಸಾಮೂಹಿಕ ಹತ್ಯೆಗೆ ಕರೆ ನೀಡಿದ್ದರು. ರಾಜ್ಯದ ಎಲ್ಲಾ ಪ್ರಮುಖ ಟಿವಿ ಕ್ಯಾಮರಾಗಳ ಎದುರೇ ಆ ಸ್ವಾಮಿ ನೀಡಿದ ಇಂತಹ ಹೇಳಿಕೆಯ ಹೊರತಾಗಿಯೂ ಅವರ ವಿರುದ್ಧ ಈ ಕ್ಷಣದವರೆಗೆ ಯಾವ ಪೊಲೀಸ್ ಠಾಣೆಯಲ್ಲೂ ಸ್ವಯಂಪ್ರೇರಿತ ದೂರು ದಾಖಲಾದ ಉದಾಹಣೆ ಇಲ್ಲ.

ಹಾಗೇ ಬೆಜ್ಜವಳ್ಳಿಯ ವಿಶ್ವ ಸಂತೋಷ್ ಸ್ವಾಮೀಜಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ (Snthosh swamy , pramod Muthalik) ಸೇರಿದಂತೆ ನೂರಾರು ಮಂದಿ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಕೂಡ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸರಣಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು. ಟಿವಿ ಕ್ಯಾಮರಾಗಳ ಮುಂದೆಯೇ ಅವರುಗಳು ನೀಡಿದ ಹೇಳಿಕೆಗಳು ಜಗಜ್ಜಾಹೀರಾಗಿದ್ದವು. ಆದರೂ ಯಾವೊಂದು ಪೊಲೀಸರು ಅವರ ವಿರುದ್ಧ ಯಾವ ಸ್ವಯಂಪ್ರೇರಿತ ದೂರು ದಾಖಲಿಸಿದ ಮಾಹಿತಿ ಈವರೆಗೂ ಇಲ್ಲ!
ಇನ್ನು ಹಿಜಾಬ್ ಗಲಭೆಯ ವೇಳೆ ಶಿವಮೊಗ್ಗದ ಕಾಲೇಜೊಂದರ ಮುಂದಿನ ಧ್ವಜಸ್ತಂಭದ ಮೇಲೆ ಕೇಸರಿ ಧ್ವಜ ಹಾರಿಸಿದ ವಿಷಯದ ಕುರಿತು ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಸರ್ಕಾರದ ಭಾಗವಾಗಿರುವ ಸಚಿವ ಕೆ ಎಸ್ ಈಶ್ವರಪ್ಪ, “ಮುಂದೊಂದು ದಿನ ತ್ರಿವರ್ಣ ಧ್ವಜ ಹಾರುವ ಕೆಂಪು ಕೋಟೆಯ ಮೇಲೂ ಭಗವಾಧ್ವಜ ಹಾರಿಸುತ್ತೇವೆ” ಎಂದು ಟಿವಿ ಕ್ಯಾಮರಾಗಳ ಮುಂದೆಯೇ ಹೇಳಿದ್ದರು. ದೇಶದ ರಾಷ್ಟ್ರಧ್ವಜನ ಮತ್ತು ಸಂವಿಧಾನಕ್ಕೆ ಅವಮಾನ ಮಾಡುವ ಇಂತಹ ಹೇಳಿಕೆಯನ್ನು ಸರ್ಕಾರದ ಭಾಗವಾದ ಸಚಿವರೇ ನೀಡಿದ್ದರೂ ಮತ್ತು ಆ ಹೇಳಿಕೆಯ ಕುರಿತು ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದರೂ ಶಿವಮೊಗ್ಗ, ಬೆಂಗಳೂರು ಪೊಲೀಸರು ಸೇರಿದಂತೆ ಯಾವೊಬ್ಬ ಪೊಲೀಸರೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತಮ್ಮ ಕಾನೂನು ಬದ್ಧತೆ ಮತ್ತು ದೇಶಭಕ್ತಿಯನ್ನು ಮೆರೆಯಲಿಲ್ಲ! ಏಕೆ ಎಂಬುದು ಪ್ರಮುಖವಾಗಿ ಕೇಳಿಬರುತ್ತಿರುವ ಪ್ರಶ್ನೆ.
Also Read: ಪರಪ್ಪನ ಅಗ್ರಹಾರ ಜೈಲಿನಲ್ಲಿ 39ನೇ ಜನ್ಮದಿನ ಆಚರಸಿಕೊಳ್ಳುತ್ತಿರುವ ಚೇತನ್ ಅಹಿಂಸಾ!
ಚೇತನ್ ವಿಷಯದಲ್ಲಿ ತೋರಿದ ಸಾಮಾಜಿಕ ಕಾಳಜಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ಪೊಲೀಸರು, ನೇರಾನೇರ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ, ಕಣ್ಣೆದುರಿಗೇ ದೊಂಬಿ ಗಲಭೆ ನಡೆಯುತ್ತಿರುವಾಗಲೂ ಮೂಕಪ್ರೇಕ್ಷಕರಾಗಿದ್ದ ಸಚಿವರು, ನಾಯಕರ ವಿರುದ್ಧವಾಗಲೀ, ‘ಕೊಚ್ಚಿ ಕೊಲ್ಲಿ’ ಎಂದು ಕರೆ ಕೊಡುವ ಸ್ವಾಮಿಗಳ ಬಗ್ಗೆಯಾಗಲೀ ಯಾಕೆ ತೋರಲಿಲ್ಲ ಎಂಬುದು ಕೇವಲ ಚರ್ಚೆಯ ಮಟ್ಟದಲ್ಲಿ ನಿಲ್ಲುವುದಿಲ್ಲ. ಅದು ಅಂತಿಮವಾಗಿ ರಾಜ್ಯದ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲಿನ ಜನಸಾಮಾನ್ಯರ ನಂಬಿಕೆಗೆ ಪೆಟ್ಟು ಕೊಡುತ್ತಿದೆ ಮತ್ತು ಅಂತಿಮವಾಗಿ ಒಟ್ಟಾರೆ ವ್ಯವಸ್ಥೆಗೆ ಇದು ಆತಂಕಕಾರಿ ಎಂಬುದನ್ನು ಪೊಲೀಸ್ ಉನ್ನತಾಧಿಕಾರಿಗಳು ಮತ್ತು ನ್ಯಾಯಾಂಗ ಅರಿಯದೇ ಹೋದರೆ, ಇನ್ನಷ್ಟು ಇಂತಹ ಅಪಸವ್ಯಗಳನ್ನು, ಪಕ್ಷಪಾತಿ ನಡೆಗಳನ್ನು ನಿತ್ಯ ಕಾಣಬೇಕಾಗಬಹುದು.