ಪುನೀತ್ ರಾಜ್ ಕುಮಾರ್ ನಿಧನರಾಗಿ ಹನ್ನೊಂದು ದಿನ ಕಳೆದಿದೆ. ಈ ಹನ್ನೊಂದು ದಿನಗಳಲ್ಲಿ ನಾಡು ಹಿಂದೆಂದೂ ಕಾಣದ ಪ್ರಮಾಣದ ಅಭಿಮಾನ, ಮೆಚ್ಚುಗೆ, ಆರಾಧನೆಯನ್ನು ಕಂಡ ಒಬ್ಬ ವ್ಯಕ್ತಿಯಾಗಿ ಪುನೀತ್ ಹೊರಹೊಮ್ಮಿದ್ದಾರೆ. ಸಿನಿಮಾ, ನಟನೆ, ಗ್ಲಾಮರ್, ಸ್ಟಾರ್ ಗಿರಿಗಳನ್ನೆಲ್ಲಾ ಮೀರಿ ಒಬ್ಬ ಮಹಾ ಮಾನವತಾವಾದಿಯಾಗಿ, ಜೀವಪರ ಕಾಳಜಿಯ ಮನುಷ್ಯನಾಗಿ ಪುನೀತ್ ಇಂದು ಕನ್ನಡಿಗರ ಮುಂದೆ ಮೇರು ಮಾದರಿಯಾಗಿ ನಿಂತಿದ್ದಾರೆ.
ಅದರಲ್ಲೂ ಪುನೀತ್ ಅವರ ಪ್ರಚಾರ ಬಯಸದ, ನಿಸ್ವಾರ್ಥ ಸಮಾಜಸೇವೆಯ ವಾಸ್ತವಾಂಶಗಳು ಅವರ ಸಾವಿನ ಬಳಿಕ ಬಯಲಾಗುತ್ತಲೇ ಜನಸಾಮಾನ್ಯರು ಅವರನ್ನು ದೇವತಾಮನುಷ್ಯನ ರೀತಿಯಲ್ಲಿ ನೋಡತೊಡಗಿದ್ದಾರೆ. ಸಿನಿಮಾದ ಮಂದಿ ಎಂದರೆ ಗಾಸಿಫ್, ವಿವಾದ, ದುರಹಂಕಾರವೇ ಭೂಷಣ ಎಂಬ ಇಂದಿನ ಆ ರಂಗದ ಸ್ಥಿತಿಯ ಹಿನ್ನೆಲೆಯಲ್ಲಿ ತಮ್ಮ ವೃತ್ತಿಬದುಕಿನ ಸುದೀರ್ಘ ಅವಧಿಯಲ್ಲಿ(ಬಾಲನಟನ ಕಾಲದಿಂದಲೂ) ಯಾವುದೇ ವಿವಾದವಿಲ್ಲದೆ, ಗಾಸಿಫ್ ಗಳಿಗೆ ಆಸ್ಪದವನ್ನೇ ನೀಡದೆ ಘನತೆಯ ನಟನಾಗಿ ಇದ್ದ ಪುನೀತ್, ಆ ಕಾರಣಕ್ಕೆ ಸಂಪಾದಿಸಿದ್ದ ಸದಾಭಿಪ್ರಾಯ ಮತ್ತು ಮೆಚ್ಚುಗೆಯ ಹೊರತಾಗಿಯೂ ಇದೀಗ ಅವರ ಜನಸೇವೆ ಮತ್ತು ಪ್ರಚಾರಬಯಸದ ವಿನೀತ ಜನಪರ ಕೆಲಸಗಳು ಅವರನ್ನು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಚ್ಚರಿಯ ವ್ಯಕ್ತಿತ್ವವನ್ನಾಗಿ ಮಾಡಿವೆ. ಈ ಕಾಲದಲ್ಲೂ ಇಂತಹ ವ್ಯಕ್ತಿತ್ವ ಇರಲು ಸಾಧ್ಯವಾ ಎನ್ನುವ ಮಟ್ಟಿನ ಅಚ್ಚರಿಯನ್ನು ಪುನೀತ್ ಅಗಲಿಕೆ ಬಿಟ್ಟುಹೋಗಿದೆ.
ವೈಯಕ್ತಿಕ ಪ್ರಚಾರ, ವ್ಯಾವಹಾರಿಕ ಮತ್ತು ರಾಜಕೀಯ ಲಾಭಕ್ಕಾಗಿಯೇ ಎಲ್ಲವನ್ನೂ ಮಾಡುವ ಸೆಲೆಬ್ರಿಟಿಗಳೇ ತುಂಬಿರುವಾಗ, ಸಿನಿಮಾದಂತಹ ಗ್ಲಾಮರ್ ಲೋಕದಲ್ಲಿದ್ದೂ ಯಾವ ಪ್ರಚಾರ, ವೈಯಕ್ತಿಕ ಲಾಭವನ್ನೂ ಬಯಸದೇ ಪುನೀತ್ ಮಾಡಿದ ಜನಸೇವಾ ಕಾರ್ಯಗಳು, ಒಳಿತನ್ನು ಕಾಣುವುದೇ ಅಪರೂಪ ಎಂಬಂತಹ ಸನ್ನಿವೇಶದಲ್ಲಿ ಜನರಿಗೆ ಹೊಸ ಭರವಸೆಯಾಗಿ ಕಂಡಿವೆ. ಮರುಭೂಮಿಯಲ್ಲಿ ಬೊಗಸೆ ನೀರು ಕಂಡಂತೆ ಜನ ಪುನೀತ್ ಅವರ ಒಳಿತಿಗೆ ಮುಗಿಬಿದ್ದಿದ್ದಾರೆ. ಅದನ್ನು ಸಂಭ್ರಮಿಸುತ್ತಿದ್ದಾರೆ.
ಹಾಗಾಗಿಯೇ ಇದೀಗ ಈ ಹತ್ತು-ಹನ್ನೆರಡು ದಿನಗಳಲ್ಲೇ ಪುನೀತ್ ನಾಡಿನ ಮನೆಮನೆಯ ಆರಾಧ್ಯ ದೈವವಾಗಿ ಬದಲಾಗಿದ್ದಾರೆ. ಅವರು ಮಣ್ಣಾದ ಮಣ್ಣಿನಲ್ಲೂ ಜನ ದೈವತ್ವ ಕಾಣತೊಡಗಿದ್ದಾರೆ. ನಗರ- ಪಟ್ಟಣ, ಪೇಟೆಗಳ ಬೀದಿಗಳಿಗೆ, ವೃತ್ತಗಳಿಗೆ ಪುನೀತ್ ರಾಜಕುಮಾರ್ ಹೆಸರನ್ನಿಟ್ಟು, ಮರೆಯಾದ ತಮ್ಮ ಕಣ್ಮಣಿಯನ್ನು ಅಜರಾಮರವಾಗಿಸುವ ಪ್ರಯತ್ನದಲ್ಲಿದ್ದಾರೆ.
ಪಾರ್ಕು,ರಸ್ತೆ, ವೃತ್ತ, ಬಡಾವಣೆಗಳಿಗೆ ಪುನೀತ್ ಹೆಸರು ನಾಮಕರಣ ಅನ್ನೋದು ರಾಜ್ಯದ ಮೂಲೆಮೂಲೆಯಲ್ಲೂ ಒಂದು ಟ್ರೆಂಡ್ ಆಗಿ ಬದಲಾಗಿದ್ದು, ಚಿಕ್ಕಪುಟ್ಟ ಹಳ್ಳಿಗಳಲ್ಲೂ ಓಣಿ, ಬೀದಿಗಳಿಗೂ ಪುನೀತ್ ಹೆಸರು ನಾಮಕರಣ ಮಾಡಲಾಗುತ್ತಿದೆ. ಅದರಲ್ಲೂ ಮಲೆನಾಡಿನ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಸೊರಬ, ಹೊಸನಗರ ಭಾಗದಲ್ಲಂತೂ ಬಹುತೇಕ ಪ್ರತಿ ಹಳ್ಳಿಯಲ್ಲೂ ಒಂದಲ್ಲಾ ಒಂದು ರಸ್ತೆಗೆ, ಒಂದು ವೃತ್ತಕ್ಕೆ ಪುನೀತ್ ಹೆಸರು ಇಡಲಾಗುತ್ತಿದೆ. ಜೊತೆಗೆ ಕನ್ನಡ ಧ್ವಜಕಟ್ಟೆ ಕಟ್ಟಿ, ಅದರ ಮೇಲೆ ಪುನೀತ್ ಪ್ರತಿಮೆ, ಫೋಟೋ ಪ್ರತಿಷ್ಠಾಪಿಸಲಾಗುತ್ತಿದೆ.
ಹಾಗಾಗಿ ಗಾರೆ ಕೆಲಸಗಾರರು, ಫೋಟೋ ಪ್ರಿಂಟಿಂಗ್, ಫ್ರೇಮಿಂಗ್ ಮಾಡುವವರು, ಪ್ರತಿಮೆ ತಯಾರಿಕರಿಗೆ ಈಗ ಬಿಡುವಿಲ್ಲದ ಕೆಲಸ! ಪುನೀತ್ ಫೋಟೋಗಳಿಗಾಗಿ ಹಳ್ಳಿಯ ಯುವಕರು ಪರದಾಡುತ್ತಿರುವುದನ್ನು ಗಮನಿಸಿದ ಸಾಗರದ ಪದ್ಮಶ್ರೀ ಫೋಟೋ ಸ್ಟುಡಿಯೋ ಮಾಲೀಕರು, ಸೋಮವಾರದಿಂದ ಮೂರು ದಿನಗಳ ಕಾಲ ಪುನೀತ್ ಅವರ ಭಾವಚಿತ್ರಗಳನ್ನು ಉಚಿತವಾಗಿ ವಿತರಿಸುವ ಘೋಷಣೆ ಮಾಡಿದ್ದಾರೆ. ಹಾಗೇ ಹಳ್ಳಿಹಳ್ಳಿಗಳಲ್ಲೂ ಧ್ವಜಕಟ್ಟೆಗೆ ಬೇಕಾದ ಮರಳು, ಸಿಮೆಂಟ್, ಇಟ್ಟಿಗೆ, ಕಬ್ಬಿಣದ ಕಂಬಿಗಳನ್ನು ಕೂಡ ಉಚಿತವಾಗಿ ಕೊಡಲು ವರ್ತಕರು, ಕೆಲಸಗಾಗರು ಮುಂದೆ ಬರುತ್ತಿದ್ದಾರೆ.
ಜೊತೆಗೆ ಸಾಗರ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಜನಸಾಮಾನ್ಯರು, ಎಂದೂ ಯಾರಿಗೂ ಜಯಕಾರ ಹಕ್ಕದ, ಸಿನಿಮಾವನ್ನು ಕೂಡ ಹೆಚ್ಚಾಗಿ ನೋಡದ ಹಳ್ಳಿಯ ಸಾಮಾನ್ಯರು ಕೂಡ ಪುನೀತ್ ಹೆಸರಿನ ಫಲಕ ಹಾಕಲು, ಧ್ವಜ ಕಟ್ಟೆ ಕಟ್ಟಲು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿದ್ದು, ಸ್ವತಃ ಕಷ್ಟಪಟ್ಟು ದುಡಿದ ಅಷ್ಟಿಷ್ಟು ಕಾಸನ್ನೇ ಉದಾರವಾಗಿ ದೇಣಿಗೆ ನೀಡಿ ಪುನೀತ್ ಹೆಸರನ್ನು ತಮ್ಮೂರಿನ ರಸ್ತೆಗೆ, ವೃತ್ತಕ್ಕೆ ಇಡುವುದು ತಮ್ಮ ಕರ್ತವ್ಯ ಎಂಬಂತೆ ಮುಂದೆ ಬರುತ್ತಿದ್ದಾರೆ. ಹಾಗಾಗಿ ಈ ಹೊತ್ತು ಆ ಭಾಗದ ಹಳ್ಳಿಗಳಲ್ಲಿ ಒಂದು ಸುತ್ತ ಹೋಗಿಬಂದರೆ, ಬಹುತೇಕ ಪ್ರತಿ ಹಳ್ಳಿಯಲ್ಲೂ ಪುನೀತ್ ಹೆಸರಿನ ನಾಮಫಲಕ, ಧ್ಜಜಕಟ್ಟೆಗಳು ಒಂದೋ ಪೂರ್ಣಗೊಂಡು ರಾರಾಜಿಸುತ್ತಿರುವುದನ್ನು, ಇಲ್ಲವೇ ನಿರ್ಮಾಣ ಹಂತದಲ್ಲಿರುವುದನ್ನು ಕಾಣಬಹುದು.
ಹಾಗೆ ನೋಡಿದರೆ, ಪುನೀತ್ ಅವರನ್ನು ಹೀಗೆ ಜನ ಭಾವಾವೇಶಕ್ಕೆ ಬಿದ್ದು ಹೀಗೆ ಆರಾಧಿಸುತ್ತಿರುವುದು ತೀರಾ ಅನಿರೀಕ್ಷಿತವೇನಲ್ಲ. ರಾಜ್ ಕುಮಾರ್, ಶಂಕರ್ ನಾಗ್ ಅವರನ್ನು ಸರ್ವಕಾಲಕ್ಕೂ ಆರಾಧಿಸುವ ಮತ್ತು ಅವರ ಸಿನಿಮಾದ ಆಚೆಯ ಬದುಕಿನ ಕಾರಣಕ್ಕೆ ಮೆಚ್ಚಿ ಅನುಸರಿಸುವ ಕನ್ನಡಿಗರು, ಅವರ ಅಗಲಿಕೆಯ ದಶಕಗಳ ಬಳಿಕವೂ ಇಂದಿಗೂ ಹೆಚ್ಚುತ್ತಲೇ ಇದ್ದಾರೆ. ಆದರೆ, ಪುನೀತ್ ಅವರ ಯಾವ ರಾಜಕೀಯ ಸಿದ್ಧಾಂತ, ಪಕ್ಷ-ಪಾರ್ಟಿಯ ಒಲವಿಲ್ಲದ, ಯಾವ ಹಮ್ಮುಬಿಮ್ಮು, ಸ್ಟಾರ್ ವಾರ್ ಕ್ಷುಲ್ಲಕತನವಿಲ್ಲದ ವ್ಯಕ್ತಿತ್ವ ಮತ್ತು ನಿಸ್ವಾರ್ಥದ ಸೇವೆ ಮತ್ತು ಬಡವರ ಪರ ನೈಜ ಕಾಳಜಿಯ ಕೆಲಸಗಳು ಅವರನ್ನು ಎಲ್ಲರಿಗಿಂತ ಎತ್ತರಕ್ಕೆ ಏರಿಸಿವೆ.
ಆ ಕಾರಣಕ್ಕಾಗಿಯೇ ಜನ ಎಲ್ಲಕ್ಕೂ ಮಿಗಿಲಾಗಿ, ಪುನೀತ್ ಅವರನ್ನು ತಮ್ಮ ಕಣ್ಣೆದುರಿನ ಆದರ್ಶ ಮಾದರಿಯಾಗಿ ಸ್ವೀಕರಿಸಿದ್ದಾರೆ. ಬದುಕಿದ್ದಾಗ ಯೂತ್ ಐಕಾನ್ ಆಗಿದ್ದ ಪುನೀತ್, ಸಾವಿನ ಬಳಿಕ ಇಡೀ ನಾಡಿನ ಹೆಮ್ಮೆಯ ಮೇರು ಮಾದರಿಯಾಗಿ ಬೆಳೆದುನಿಂತಿದ್ದಾರೆ. ಹಾಗಾಗೇ ಎಲ್ಲರ ಮನೆಮಗನಂಥ ‘ಅಪ್ಪು’ ಎಂಬ ವ್ಯಕ್ತಿತ್ವ ಮತ್ತು ವ್ಯಕ್ತಿ ಚಿತ್ರ ಈಗ ಕೇವಲ ಸಿನಿಮಾ ಪೋಸ್ಟರಿಗೆ ಸೀಮಿತವಾಗಿಲ್ಲ; ಅವರು ಎಲ್ಲರ ಮನೆ ಮತ್ತು ಮನದ ಗೋಡೆಯ ಚಿತ್ರವಾಗಿದ್ದಾರೆ!