ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲು ಸಂಸದ ಪ್ರತಾಪ್ ಸಿಂಹ ಮೈಸೂರಿನ ಮನೋರಂಜನ್ಗೆ ಪಾಸ್ ಕೊಟ್ಟಿದ್ದರು. ಆದರೆ ಮನೋರಂಜನ್ ಅಧಿವೇಶನಲ್ಲಿ ಕಲರ್ ಬಾಂಬ್ ಸಿಡಿಸಿ ಅವಾಂತರ ಸೃಷ್ಟಿ ಮಾಡಿದ್ದರು. ಆ ಬಳಿಕ ಸಂಸದ ಪ್ರತಾಪ್ ಸಿಂಹನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿತ್ತು. ಬಂಧನ ಮಾಡಿ ತನಿಖೆ ಮಾಡುವಂತೆಯೂ ಅಬ್ಬರಿಸಿತ್ತು. ಆದರೆ ಸಂಸದ ಪ್ರತಾಪ್ ಸಿಂಹ ಮಾತ್ರ ಮೌನಕ್ಕೆ ಶರಣಾಗಿದ್ದರು. ಪಾಸ್ ಕೊಟ್ಟಿದ್ದು ಬಹುದೊಡ್ಡ ಅಪರಾಧ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಮೌನಕ್ಕೆ ಶರಣಾಗುವ ಮೂಲಕ ಪ್ರತಾಪ್ ಸಿಂಹ ತಪ್ಪನ್ನು ಒಪ್ಪಿಕೊಂಡಿದ್ದರು. ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಬಳಿಕವೂ ಆಗಿರುವ ಘಟನೆಗೆ ವಿಷಾದ ಕೋರಿ, ಸ್ಪಷ್ಟನೆ ನೀಡಬಹುದಿತ್ತು. ಅದನ್ನೂ ಮಾಡಲಿಲ್ಲ.. ಇದೀಗ ಮತ್ತೊಂದು ಆರೋಪ ಕಾಂಗ್ರೆಸ್ನಿಂದ ಬಂದಿದೆ.
ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಆರೋಪ ಏನು..?
ಅಣ್ಣ ಸಂಸತ್ ದಾಳಿಕೋರರಿಗೆ ಪಾಸ್ ನೀಡುವುದರಲ್ಲಿ ನಿರತರು. ಅದೇ ಸಂಸದರ ತಮ್ಮ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳ್ಳತನ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಸಹೋದರನ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿದೆ. ಹಾಸನದ ಬೇಲೂರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳ್ಳತನ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹನ ವಿರುದ್ಧ ಆರೋಪ ಹೊರಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೊಳ್ಳೆ ಹೊಡೆಯೋದ್ರಲ್ಲೇ ಬಿಜೆಪಿ ಬ್ಯುಸಿ. ದಕ್ಷ ಅಧಿಕಾರಿ ತಹಶೀಲ್ದಾರ್ ಮಮತಾ, ಈ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಕೈಜೋಡಿಸಿದ್ದು, ಸಚಿವ ಈಶ್ವರ್ ಖಂಡ್ರೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಬಿಜೆಪಿ ಕರ್ನಾಟಕ ಹಾಗು ಬಿಜೆಪಿ ಜನಪ್ರತಿನಿಧಿಗಳು ಮತ್ತು ಅವರ ಕುಟುಂಬಸ್ಥರು ಕೊಳ್ಳೆ ಹೊಡೆಯುವುದರಲ್ಲೇ ಬ್ಯುಸಿಯಾಗಿರುವುದೇಕೆ? ಎಂದು ಪ್ರಶ್ನೆ ಮಾಡಿದೆ.
ಹಾಸನದಲ್ಲಿ ನಡೆದಿದ್ದು ಏನು..? ಆರೋಪ ಯಾಕೆ..?
2024-25ನೇ ಸಾಲಿನಲ್ಲಿ ಶುಂಠಿ ಬೆಳೆಯುವ ಉದ್ದೇಶದಿಂದ ಜಮೀನು ಮಾಲೀಕರಿಂದ ಜಾಗವನ್ನು ಬಾಡಿಗೆಗೆ ಕರಾರು ಮಾಡುಕೊಂಡಿದ್ದ ವಿಕ್ರಂ ಸಿಂಹ, ಜಮೀನಿನಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಲು ಯತ್ನ ಮಾಡಿದ್ದಾರೆ ಅನ್ನೋದು ಆರೋಪ. ಬೇಲೂರು ತಹಶೀಲ್ದಾರ್ ಮಮತಾ, ಮಧ್ಯಪ್ರವೇಶ ಮಾಡಿ ಮರಗಳು ಅರಣ್ಯ ಇಲಾಖೆಗೆ ಸಾಗಾಟವಾಗುವಂತೆ ಮಾಡಿದ್ದಾರೆ. ರಾತ್ರೋರಾತ್ರಿ ಬೃಹತ್ ಮರಗಳ ಮಾರಣಹೋಮ ಮಾಡಿರುವ ವಿಕ್ರಂ ಸಿಂಹ ವಿರುದ್ಧ ಇಲ್ಲೀವರೆಗೂ ಎಫ್ಐಆರ್ ದಾಖಲು ಆಗಿಲ್ಲ ಅನ್ನೋದು ಅಚ್ಚರಿಯಾದರೂ ಸತ್ಯ. ವಿಕ್ರಂ ಸಿಂಹ ಜಮೀನು ಬಾಡಿಗೆ ಪಡೆದ ಕರಾರು ಪತ್ರ ಇದ್ದರೂ ಜಾಗದ ಮಾಲೀಕರ ವಿರುದ್ಧ ಮಾತ್ರ ಎಫ್ಐಆರ್ ಮಾಡಿದೆ ಅರಣ್ಯ ಇಲಾಖೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿ ಕ್ರೌರ್ಯ ಮೆರೆಯಲಾಗಿದೆ. ನಂದಿ, ಹೆಬ್ಬೇವು, ಹಲಸು, ಅಂಟ್ವಾಳ, ಬೀಟೆ, ತ್ಯಾಗ, ಹೊನ್ನೆ ಜಾತಿಯ ಬೃಹತ್ ಗಾತ್ರದ ಮರಗಳನ್ನು ಕತ್ತರಿಸಲಾಗಿದೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ನಂದಗೊಂಡನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿದ್ದ ಹಾಗೂ ಸರ್ಕಾರಿ ಗೋಮಾಳ ಜಾಗದಲ್ಲಿ ಬೆಳೆದಿದ್ದ ನೂರಾರು ನೆಲಸಮ ಆಗಿವೆ.

ಪ್ರತಾಪ್ ಸಿಂಹನ ಪಾತ್ರ ಏನಿದೆ ಇದರಲ್ಲಿ..?
ಪ್ರತಾಪ್ ಸಿಂಹ ಪಾಸ್ ಕೊಟ್ಟ ಬಳಿಕ ಯುವಕ ಮನೋರಂಜನ್ ಸಂಸತ್ನಲ್ಲಿ ಹುಚ್ಚಾಟ ಆಗಿದ್ದ.. ಇನ್ನು ವಿಕ್ರಂ ಸಿಂಹ ಬಾಡಿಗೆಗೆ ಪಡೆದ ಜಮೀನು ಮಾಲೀಕ ಮರಗಳನ್ನು ಕತ್ತರಿಸಿ ಮಾರಾಟ ಮಾಡಿದ್ದಾನೆ. ಇದರಲ್ಲಿ ವಿಕ್ರಂ ಸಿಂಹನ ಪಾತ್ರವೂ ಇಲ್ಲ. ಆದರೂ ಪ್ರತಾಪ್ ಸಿಂಹನ ಸಹೋದರ ಅನ್ನೋ ಕಾರಣಕ್ಕೆ ಆರೋಪಗಳ ಸುರಿಮಳೆ ಆಗ್ತಿದೆ. ವಿಕ್ರಂ ಸಿಂಹನ ಪಾತ್ರ ಇದ್ದರೆ ಖಂಡಿತ ಸರ್ಕಾರ ದೂರು ದಾಖಲು ಮಾಡಿಕೊಂಡು ಬಂಧನ ಮಾಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಎಕ್ಸ್ನಲ್ಲಿ ಪೋಸ್ಟ್ ಮಾಡುವುದಕ್ಕೆ ಸೀಮಿತ ಆಗುವುದು ಕೇವಲ ಟಾರ್ಗೆಟ್ ಮಾಡಿದಂತೆ ಕಾಣಿಸುತ್ತದೆ. (Congress) ಕಾಂಗ್ರೆಸ್ ಸರ್ಕಾರ ಜನಮನ್ನಣೆ ಗಳಿಸುತ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ನೂರಾರು ಮರಗಳನ್ನು ಕತ್ತರಿಸಿದವರ ವಿರುದ್ಧ ಕೇಸ್ ಹಾಕಬೇಕು, ತಪ್ಪಿದ್ದರೆ ಬಂಧನ ಮಾಡಬೇಕು. ಯಾವುದೇ ಸ್ವಂತ ಜಮೀನಿನಲ್ಲೂ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ಅತ್ಯಗತ್ಯ. ಆಗಿದ್ದರೂ ಮರಗಳನ್ನು ಕಡಿದಿದ್ದು ಹೇಗೆ..? ಅರಣ್ಯ ಇಲಾಖೆ ಅನುಮತಿ ನೀಡಿದ್ಯಾ..? ಅನ್ನೋ ಬಗ್ಗೆ ಅರಣ್ಯ ಸಚಿವರು ಉತ್ತರ ಕೊಡಬೇಕಿದೆ. ಇನ್ನು ಮೌನಕ್ಕೆ ಶರಣಾಗಿರುವ ಪ್ರತಾಪ್ ಸಿಂಹ ಮೌನ ಮುರಿದು ಮಾತನಾಡದಿದ್ದರೆ ಎಲ್ಲವೂ ಸತ್ಯ ಎನ್ನುವಂತಾಗಲಿದೆ.
ಕೃಷ್ಣಮಣಿ