ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಎಂದೇ ಹೆಸರಾದ ಪ್ರಜ್ವಲ್ ದೇವರಾಜ್ ಈಗ ತಮ್ಮ ಅಭಿನಯದ ಅರ್ಜುನ್ ಗೌಡ ಚಿತ್ರದ ಬಿಡುಗಡೆಯ ಸಮಯದಲ್ಲೇ ಹೊಸದೊಂದು ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.
ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಅಲ್ಲದಿದ್ದರೂ, ಮಿನಿಮಮ್ ಗ್ಯಾರಂಟಿ ಹೀರೋ ಎಂಬ ಪಟ್ಟವನ್ನಂತೂ ಗಳಿಸಿದ್ದಾರೆ. ಅವರ ಚಿತ್ರಗಳು ಅಂದ್ರೆ ಸೆಟಲೈಟ್ ರೈಟ್ಸ್ ಗಳಿಗೆ ಮೋಸವಿಲ್ಲ ಎಂಬ ಮಾತು ಸ್ಯಾಂಡಲ್ ವುಡ್ ನಲ್ಲಿ ಚಾಲ್ತಿಯಲ್ಲಿದೆ. ಹಾಗಾಗಿ ಅವರ ಕೈಯಲ್ಲಿ ಸದಾ ಸಿನಿಮಾಗಳು ಇದ್ದೇ ಇರುತ್ತವೆ. ಅವರ ಹಿಂದಿನ ಚಿತ್ರಗಳ ಫಲಿತಾಂಶ ಸಿಹಿಯೋ, ಕಹಿಯೋ, ಆದರೆ, ಪ್ರಜ್ವಲ್ ಮಾತ್ರ ಬಿಡುವಿಲ್ಲದಂತೆ ಅವರು ಹೊಸ ಚಿತ್ರಗಳಿಗೆ ಸಹಿ ಹಾಕುತ್ತಲೇ ಇರುತ್ತಾರೆ.
ಈಗ ಪ್ರಜ್ವಲ್ ನಾಯಕರಾಗಿ ನಟಿಸುತ್ತಿರುವ ” ಗಣ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಆರ್ ಪಿ ಸಿ ಲೇಔಟ್ ನ ಸಂಕಷ್ಟ ಹರ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ವಿತರಕ ದೇವೇಂದ್ರ ರೆಡ್ಡಿ ಆರಂಭ ಫಲಕ ತೋರಿದರು. ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಕ್ಯಾಮೆರಾ ಚಾಲನೆ ಮಾಡಿದ್ದಾರೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಹರಿ ಪ್ರಸಾದ್ ಜಕ್ಕ ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಹರಿಪ್ರಸಾದ್ ಅವರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ .
ಚರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಪ್ರಜ್ವಲ್ ಅವರಿಗೆ ನಾಯಕಿಯಾಗಿ ಸಾರಾ ಹರೀಶ್(ಭರತ ಬಾಹುಬಲಿ ಖ್ಯಾತಿ) ನಟಿಸುತ್ತಿದ್ದಾರೆ. ಸಂಪತ್ ಕುಮಾರ್, ರವಿ ಕಾಳೆ, ಶಿವರಾಜ್ ಕೆ ಆರ್ ಪೇಟೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಫೆಬ್ರವರಿ ಮೊದಲವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.