ಸಂತ್ರಸ್ತೆ ಸಹೋದರನ ಪರ ವಕೀಲ ಬಾಲನ್ ವಾದ ಮಂಡಿಸಿದ್ದು, ಬಿ.ಎಸ್ ಯಡಿಯೂರಪ್ಪ ಬಂಧನಕ್ಕೆ ನಿರ್ದೇಶನ ಕೋರಿ ಸಂತ್ರಸ್ತೆ ಸಹೋದರ ಅರ್ಜಿ ಸಲ್ಲಿಸಿದ್ದಾನೆ ಎಂದಿದ್ದಾರೆ. ಈ ವೇಳೆ ಸಿವಿ ನಾಗೇಶ್ ಮಧ್ಯಪ್ರವೇಶ ಮಾಡಿದ್ದು, ದೂರುದಾರೆ ಮಹಿಳೆ ಅರ್ಜಿದಾರ ಪುತ್ರನ ವಿರುದ್ಧವೇ ಕೇಸ್ ದಾಖಲಿಸಿದ್ದರು. ಬಿಜೆಪಿಯು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿತ್ತು ಎಂದಿದ್ದಾರೆ. ಇದಕ್ಕೆ ಅಡ್ವೊಕೇಟ್ ಜನರಲ್ ಹಾಗು ವಕೀಲ ಎಸ್ ಬಾಲನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪುತ್ರ, ಪುತ್ರಿ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಉಗ್ರಪ್ಪ ಅವರ ವಿರುದ್ಧವೂ ದೂರು ನೀಡಲಾಗಿದೆ. ಸಿಆರ್ಪಿಸಿ ಸೆಕ್ಷನ್ 41(1) ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದಾಗ ಆರೋಪಿಯನ್ನು ಬಂಧಿಸಲಾಗದು. ಬಂಧನ ವಾರೆಂಟ್ ಪಡೆಯಲು ತನಿಖಾಧಿಕಾರಿಗಳು ಪದೇ ಪದೇ ಹೀಗೆ ಮಾಡುತ್ತಿದ್ದಾರೆ. ಇಲ್ಲಿ ತನಿಖಾಧಿಕಾರಿಗಳು ರಾಜಕೀಯ ಮಾಸ್ಟರ್ಗಳ ಆಜ್ಞೆ ಪಾಲಿಸುತ್ತಾರೆ ಎಂದು ಸಿ.ವಿ ನಾಗೇಶ್ ವಾದಿಸಿದ್ದಾರೆ. ಜೂನ್ 12ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕಾಗಿ ನಾನು ದೆಹಲಿಗೆ ಹೋಗುತ್ತೇನೆ. ನಿಮ್ಮ ಮುಂದೆ ಜೂನ್ 17ರಂದು ಹಾಜರಾಗುತ್ತೇನೆ ಎಂದು ಕೋರಿದ್ದಾರೆ. ಆದರೆ, ಈಗ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಜೂ 17 ರಂದು ಹಾಜರಾಗುವುದಾಗಿ ಪೊಲೀಸರಿಗೆ ಉತ್ತರ ನೀಡಿದ್ದೇವೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ ಸಿ ವಿ ನಾಗೇಶ್.
![](https://pratidhvani.com/wp-content/uploads/2024/06/1711859508_1710476079_yediyurappa.jpg)
ಹಾಗಾದರೆ ಸೋಮವಾರ ವಿಚಾರಣೆಗೆ ಹಾಜರಾಗಲು ಸಿದ್ದರಿದ್ದೀರಾ..? ಎಂದು ಬಿ.ಎಸ್ ಯಡಿಯೂರಪ್ಪ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ವೇಳೆ ಹೈಕೋರ್ಟ್ ಆದೇಶ ಪಾಲಿಸಲಾಗುವುದು ಎಂದು ಸಿ.ವಿ ನಾಗೇಶ್ ತಿಳಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಮನೆಯಲ್ಲಿಯೇ ಈ ಘಟನೆ ನಡೆದಿದೆ.. ಆದರೆ ಬಿ.ಎಸ್ ಯಡಿಯೂರಪ್ಪ ಮನೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ ಎಂದಿದ್ದಾರೆ. ಈ ವೇಳೆ ತನಿಖೆ ಹೇಗೆ ನಡೆಸಬೇಕು ಎನ್ನೋದನ್ನು ತನಿಖಾಧಿಕಾರಿ ತೀರ್ಮಾನಿಸಬೇಕು ಎಂದಿದೆ ಹೈಕೋರ್ಟ್.
ಫೆಬ್ರವರಿ 2ರಂದು ನಡೆದಿರುವ ಘಟನೆಯ ವಿಡಿಯೊ ಮತ್ತು ಆಡಿಯೋ ಇದೆ ಎಂದು ಅಡ್ವೊಕೇಟ್ ಜನರಲ್ ಹೇಳಿದಾಗ ಎಲ್ಲಿ ತೋರಿಸಿ ನೋಡೋಣ ಎಂದಿದೆ ಪೀಠ. ಈ ವೇಳೆ ಸಿ.ವಿ ನಾಗೇಶ್ ಕೂಡ ಎಲ್ಲಿದೆ ತೋರಿಸಿ ನೋಡೋಣ ಎಂದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೀಠ, ಪರಿಸ್ಥಿತಿ ತಿಳಿಗೊಳಿಸಿದೆ. ಸಂತ್ರಸ್ತೆಯನ್ನು ಬಿ.ಎಸ್ ಯಡಿಯೂರಪ್ಪ ರೂಮಿಗೆ ಕರೆದೊಯ್ದಿದ್ದಾರೆ.. ಬಿ.ಎಸ್ ಯಡಿಯೂರಪ್ಪ ಹೇಳಿಕೆಯ ವಿಡಿಯೋ ರೆಕಾರ್ಡಿಂಗ್ ಲಭ್ಯವಿದೆ ಎಂದು ಅಡ್ವೊಕೇಟ್ ಜನರಲ್ ಮಾಹಿತಿ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿಯನ್ನು ನೀವು ಏಕೆ ಬಂಧಿಸಬೇಕು..? ಅವರು ಓಡಿ ಹೋಗುತ್ತಾರೆಯೇ..? ನೀವು ನ್ಯಾಯಾಲಯದಲ್ಲಿ ಸಮಯ ಕೇಳುವುದಿಲ್ಲವೇ..? ಧ್ವನಿ ಮಾದರಿ ನೀಡಲು ಅವರು ಬಂದಿದ್ದಾರೆ. ಅವರು ನಿಮ್ಮ ತನಿಖೆಗೆ ಸಹಕರಿಸಿದ್ದಾರೆ. ಕೆಲವೊಮ್ಮೆ ಇಂಥವು ನಡೆಯುತ್ತವೆ. ಸುಪ್ರೀಂಕೋರ್ಟ್ ಆದೇಶ ಮಾಡಿದರೂ ಅವುಗಳು ಪಾಲನೆಯಾಗದ ಸಂದರ್ಭವಿದೆ. ನಾಲ್ಕು ದಿನದಲ್ಲಿ ಅವರು ಬರದಿದ್ದರೆ ಆಕಾಶ ಕಳಚಿ ಬೀಳಲಿದೆಯೇ..? ಈಗ ಹೊರಡಿಸಿರುವ ವಾರೆಂಟ್ ನೋಡಿದರೆ ಅನುಮಾನ ಬರುತ್ತದೆ..? ಎಂದಿದೆ ಹೈಕೋರ್ಟ್ ಪೀಠ.
![](https://pratidhvani.com/wp-content/uploads/2024/06/BSYediyurappa-2.jpg)
ಯಾವುದೇ ಅನುಮಾನಪಡುವ ಅಗತ್ಯವಿಲ್ಲ. ತನಿಖಾಧಿಕಾರಿಗೆ ಬಂಧನ ಅಗತ್ಯವಿದೆ ಎಂದು ಅನಿಸಿದೆ. ಫೆಬ್ರವರಿ 2 ರ ಘಟನೆಗೆ ಮಾರ್ಚ್ 14 ರಂದು ದೂರು ದಾಖಲಾಗಿದೆ.. ಇಲ್ಲಿಯವರೆಗೆ ಸುಮ್ಮನಿದ್ದು ಈಗ ವಾರೆಂಟ್ ಪಡೆದಿರಯವುದೇಕೆ..? ಮಾಜಿ ಸಿಎಂ, ತನಿಖೆ ತಪ್ಪಿಸಿಕೊಳ್ಳಲು ಸಾಧ್ಯವೇ ? ಕೋರ್ಟ್ನಲ್ಲಿ ನೀವು ಸಮಯ ಕೇಳುವಂತೆ ಅವರೂ ಕೇಳಿದ್ದಾರಲ್ಲವೇ ಎಂದು ಹೈಕೋರ್ಟ್ ಅಡ್ವೊಕೇಟ್ ಜನರಲ್ಗೆ ಪ್ರಶ್ನಿಸಿದೆ. ಈ ವೇಳೆ ಬೇರೆ ಒತ್ತಡದಿಂದ ಬಂಧಿಸುತ್ತಿದ್ದಾರೆ ಎಂಬ ಭಾವನೆ ಬರಬಾರದು. ತನಿಖೆಗೆ ಬರುವುದಿಲ್ಲವೆಂದು ಮಾಜಿ ಸಿಎಂ ಹೇಳುತ್ತಿಲ್ಲ. ಯಾರನ್ನು ತೃಪ್ತಿಪಡಿಸಲು ಬಂಧಿಸಲು ಮುಂದಾಗುತ್ತಿದ್ದೀರಿ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ತನಿಖಾಧಿಕಾರಿ ಬಂಧನದ ಅಗತ್ಯವಿದೆ ಎಂದು ಭಾವಿಸಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಹೇಳಿದಾಗ, ಹಾಗಿದ್ದರೆ ಬಂಧನದ ಅಗತ್ಯವಿಲ್ಲದ ಸೆಕ್ಷನ್ನಲ್ಲಿ 2 ನೋಟಿಸ್ ಏಕೆ ನೀಡಿದಿರಿ..? ಮಾಜಿ ಮುಖ್ಯಮಂತ್ರಿಯನ್ನು ಈ ರೀತಿ ಟ್ರೀಟ್ ಮಾಡಿದರೆ, ಸಾಮಾನ್ಯ ಮನುಷ್ಯನ ಗತಿಯೇನು..? ಇದಕ್ಕಿಂತ ಹೆಚ್ಚನ್ನು ನಾನು ಹೇಳುವುದಿಲ್ಲ ಎಂದು ಪೀಠ ಅಸಮಾಧಾನ ಹೊರಹಾಕಿದೆ. ಈ ವೇಳೆ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಬಿ.ಎಸ್ ಯಡಿಯೂರಪ್ಪ ಪರ ವಕೀಲರು ಪೀಠಕ್ಕೆ ಮನವಿ ಮಾಡಿದ್ದಾರೆ. ನೀವು ಲಿಖಿತ ದಾಖಲೆ ಸಲ್ಲಿಸಿದ್ದೀರಿ. ಜೂನ್ 17ರಂದು ವಿಚಾರಣೆಗೆ ಬರುತ್ತೇನೆ ಎಂದಿದ್ದೀರಿ. ವಿಚಾರಣೆಗೆ ಹಾಜರಾಗುತ್ತೇನೆಂದು ಈಗ ನಿರಾಕರಿಸಬಾರದು ಎಂದಿರುವ ಹೈಕೋರ್ಟ್, ಮುಂದಿನ ವಿಚಾರಣೆವರೆಗೂ ಬಂಧನ ಮಾಡದಂತೆ ಸೂಚನೆ ನೀಡಿದೆ. ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ. ತನಿಖೆಗೆ ಹಾಜರಾಗುವಂತೆ ಬಿ.ಎಸ್ ಯಡಿಯೂರಪ್ಪಗೆ ಹೈಕೋರ್ಟ್ ಸೂಚನೆ ನೀಡಿದೆ.. ಪ್ರಕರಣ ರದ್ದು ಕೋರಿದ್ದ ಅರ್ಜಿಯಲ್ಲಿ ಸರ್ಕಾರಕ್ಕೆ ನೋಟಿಸ್ ಮಾಡಿದೆ ಹೈಕೋರ್ಟ್..
ಕೃಷ್ಣಮಣಿ