ಒಂದು ಸಮಾಜವಾಗಿ ನಾವು ವಿಫಲವಾಗುತ್ತಿದ್ದೇವೆಯೇ ? ಈ ಪ್ರಶ್ನೆ ಒಂದು ಗಂಭೀರ ವಾಟ್ಸಾಪ್ ಚರ್ಚೆಯಲ್ಲಿ ಮೂಡಿದ್ದು. ಇನ್ನೂ ಒಂದು ಹೆಜ್ಜೆ ಮುಂದುವರೆಯುವುದಾದರೆ, ಒಂದು ನಾಗರಿಕತೆಯಾಗಿ ನಾವು ಕುಸಿಯುತ್ತಿದ್ದೇವೆಯೇ ಎಂದೂ ಕೇಳಬಹುದು. ಈ ಪ್ರಶ್ನೆಗೆ ಉತ್ತರ ಹುಡುಕಲು ದೇಶಪರ್ಯಟನೆ ಮಾಡಬೇಕಿಲ್ಲ. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಸಾಂಸ್ಥಿಕವಾಗಿ ಪ್ರತಿನಿಧಿಸುವ ಚುನಾಯಿತ ಜನಪ್ರತಿನಿಧಿಗಳು ಲೋಕಸಭೆ, ವಿಧಾನಸಭೆಗಳ ಕಲಾಪಗಳಲ್ಲೇ ಉತ್ತರ ನೀಡುತ್ತಿದ್ದಾರೆ. ಡಿಜಿಟಲ್ ಮಾಧ್ಯಮಗಳು ಉತ್ತರಿಸುತ್ತಿವೆ. ಎರಡರಲ್ಲಿ ಯಾವ ಪ್ರಶ್ನೆ ಜಟಿಲ ಎಂದು ಯೋಚಿಸುವಾಗ, ನಾಗರಿಕ ಪ್ರಜ್ಞೆಯನ್ನೇ (Civic Sense) ಕಳೆದುಕೊಳ್ಳುತ್ತಿರುವ ಒಂದು ವಿಶಾಲ ಸಮಾಜ ಸಹಜವಾಗಿ ನಾಗರಿಕತೆಯ ಪ್ರಜ್ಞೆಯನ್ನೂ (Civilization sense) ಕಳೆದುಕೊಳ್ಳುತ್ತಿರುವುದು ಢಾಳಾಗಿ ಕಾಣುತ್ತಿದೆ.

ಒಂದು ಸಮಾಜದ ಆರೋಗ್ಯಕರ ಸ್ಥಿತಿಯನ್ನು ಅಳೆಯಲು ಅವಲಂಬಿಸುವ ಮಾನದಂಡ ಅಲ್ಲಿನ ಜನರ ವರ್ತನೆ, ಸಹಜೀವಿಗಳ ಬಗ್ಗೆ ಧೋರಣೆ, ಬಳಸುವ ಭಾಷೆ-ಪರಿಭಾಷೆ ಮತ್ತು ನಡೆ-ನುಡಿಯಲ್ಲಿ ಇರಬೇಕಾದ ಸಂಯಮ, ಸಭ್ಯತೆ, ಸೌಜನ್ಯ. ಮೌನದಲ್ಲಿ ಕಾಣಲಾಗದ ಈ ಲಕ್ಷಣಗಳನ್ನು ಸಾಮಾನ್ಯವಾಗಿ ಮಾತನಾಡುವ ವೈಖರಿಯಲ್ಲಿ ಗುರುತಿಸಲಾಗುತ್ತದೆ. ಇದನ್ನೇ ಭಾಷಾ ಸೌಜನ್ಯ ಅಥವಾ ಸಭ್ಯತೆ ಎನ್ನಲಾಗುತ್ತದೆ. ಆಧುನಿಕತೆ ಮತ್ತು ಮುಂದುವರೆದ ನಾಗರಿಕತೆಯನ್ನು (advanced civilization) ಮೈಗೂಡಿಸಿಕೊಂಡ ಸುಶಿಕ್ಷಿತ ಸಮಾಜ ಈ ಎರಡೂ ಲಕ್ಷಣಗಳನ್ನು ರೂಢಿಸಿಕೊಂಡು, ಸಾಮಾನ್ಯ ಜನರೊಡನೆ ಸಂವಹನ ನಡೆಸಬೇಕಾಗುತ್ತದೆ.

ಸಾಂವಿಧಾನಿಕ ನೈತಿಕತೆ
ಭೌಗೋಳಿಕವಾಗಿ ಒಂದು ದೇಶ ಮತ್ತು ಸಂಸ್ಕೃತಿ ಎಂಬ ವಿಶಾಲ ಹಂದರದಲ್ಲಿ ಗುರುತಿಸಲಾಗುವ ʼ ಸಮಾಜಗಳು ʼ ಈ ಮೌಲ್ಯಯುತ ವಿವೇಕ ಮತ್ತು ಲಕ್ಷಣಗಳನ್ನು ಆಳ್ವಿಕೆಯ ಕೇಂದ್ರಗಳಲ್ಲಿ, ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ರಾಜಕಾರಣದಲ್ಲಿ ಹಾಗೂ ವಿದ್ಯುನ್ಮಾನ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅಂತರೀಕರಣಗೊಳಿಸಿಕೊಳ್ಳಬೇಕಾಗುತ್ತದೆ (Internalise). ಈ ದೃಷ್ಟಿಯಿಂದಲೇ ಚುನಾಯಿತ ಜನಪ್ರತಿನಿಧಿಗಳನ್ನೊಳಗೊಂಡ ಶಾಸನಸಭೆಗಳು, ಮುದ್ರಣ ಹಾಗೂ ವಿದ್ಯುನ್ಮಾನ ಡಿಜಿಟಲ್ ಮಾಧ್ಯಮಗಳು ಹಾಗೂ ಶೈಕ್ಷಣಿಕ ಕೇಂದ್ರಗಳು ಸಭ್ಯತೆ ಮತ್ತು ಸೌಜನ್ಯದ ಪ್ರಾತಿನಿಧಿಕ ಸಂಸ್ಥೆಗಳಾಗಿ ಕಾಣುತ್ತವೆ. ಈ ಮೂರೂ ಸಂಸ್ಥೆಗಳಲ್ಲಿ ಮೌಲ್ಯಗಳು ಕುಸಿಯಲಾರಂಭಿಸಿದರೆ ಅದು ಸಾಮಾಜಿಕ ವೈಫಲ್ಯದ ಮೊದಲ ಹೆಜ್ಜೆ ಎಂದೇ ಗುರುತಿಸಬಹುದು. ಡಾ. ಬಿ.ಆರ್. ಅಂಬೇಡ್ಕರ್ ಇದನ್ನೇ ಸಾಂವಿಧಾನಿಕ ನೈತಿಕತೆಯ ( Constitutional Morality ) ಚೌಕಟ್ಟಿನಲ್ಲಿ ವ್ಯಾಖ್ಯಾನಿಸಿದ್ದರು. ಭಾರತದ ರಾಜಕಾರಣದಲ್ಲಿ ನೈತಿಕ ಮೌಲ್ಯಗಳು ಗಟ್ಟಿಯಾಗಿದ್ದ ಕಾಲದಲ್ಲಿ ಅಂಬೇಡ್ಕರ್ ಈ ಎಚ್ಚರಿಕೆ ನೀಡಿದ್ದರು. ವರ್ತಮಾನದ ರಾಜಕೀಯ ನೋಡಿದರೆ, ಬಾಬಾ ಸಾಹೇಬರ ದೂರದೃಷ್ಟಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.

ಭಾರತದ ಪ್ರಜಾಪ್ರಭುತ್ವೀಯ ಆಳ್ವಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಸೌಜನ್ಯ, ಸಂಯಮ, ಸಭ್ಯತೆ ಮತ್ತು ವ್ಯಕ್ತಿ ಘನತೆ ಮುಂತಾದ ಉದಾತ್ತ ಗುಣಗಳನ್ನು ಕಳೆದುಕೊಂಡು ಕನಿಷ್ಠ ಎರಡು ದಶಕಗಳಂತೂ ಆಗಿವೆ. ಸಂಸತ್ತು, ವಿಧಾನಸಭೆ/ವಿಧಾನಪರಿಷತ್ತಿನ ಕಲಾಪಗಳಲ್ಲಿ ತಮ್ಮ ಸಾಂವಿಧಾನಿಕ ಜವಾಬ್ದಾರಿ, ನೈತಿಕ ಹೊಣೆಗಾರಿಕೆಯನ್ನು ಶಾಸನಬದ್ಧ ಕಟ್ಟಳೆಗಳೆಂದು ಭಾವಿಸದೆ, ವೈಯುಕ್ತಿಕ ವಿವೇಕ/ವಿವೇಚನೆಗೊಳಪಟ್ಟ ಲಕ್ಷಣಗಳು ಎಂದು ಪರಿಭಾವಿಸಿರುವ ಮಾದರಿಯನ್ನು ನಾವು ಕಾಣುತ್ತಿದ್ದೇವೆ. ಶಾಸನಸಭೆಗಳಿಗೆ ಚುನಾಯಿತರಾಗುವ ರಾಜಕಾರಣಿಗಳು, ಸದನಗಳ ಕಲಾಪದಲ್ಲಿ ಭಾಗವಹಿಸುವಾಗ ತಾವು ಸಾಮಾನ್ಯ ಪ್ರಜೆ ಆಗಿರುವುದಿಲ್ಲ, ದೇಶದ/ರಾಜ್ಯದ ಸಮಸ್ತ ಜನತೆಯ ಪ್ರತಿನಿಧಿಗಳಾಗಿ ಇರುತ್ತೇವೆ ಎಂಬ ಪರಿಜ್ಞಾನ ಇರಬೇಕು. ಅಲ್ಲಿ ಆಡುವ ಪ್ರತಿಯೊಂದು ಮಾತೂ ಸಹ ನಾಗರಿಕತೆಯ ನಿಷ್ಕರ್ಷೆಗೊಳಗಾಗುತ್ತದೆ ಎಂಬ ಜಾಗ್ರತೆ ಇರಬೇಕು.

ಒಂದು ಹಂತದಲ್ಲಿ ಸಂಸತ್ತು/ವಿಧಾನಮಂಡಲಗಳಲ್ಲಿ ಚುನಾಯಿತ ರಾಜಕೀಯ ನಾಯಕರು ಘನತೆಗಾಗಿ, ಔದಾತ್ಯಗಳಿಗಾಗಿ, ಮೌಲ್ಯಗಳಿಗಾಗಿ ಪೈಪೋಟಿ ನಡೆಸುತ್ತಿದ್ದರು. ಸಂಸದೀಯ ಮುತ್ಸದ್ದಿ (Parlimentary Statesman) ಎಂಬ ಹೆಸರು ಗಳಿಸಲು ತಮ್ಮ ವರ್ತನೆ, ಧೋರಣೆ, ಚರ್ಚೆಗಳಲ್ಲಿ ಸಂಯಮ, ಸೌಜನ್ಯ, ಸಭ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಸಚಿವರು ತಮ್ಮ ಇಲಾಖೆಗೆ ಸಂಬಂಧ ಪಟ್ಟ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ದಾಖಲೆಸಹಿತ ಹಾಜರಾಗುತ್ತಿದ್ದರು. ಕೆಲವು ಅಪವಾದಗಳಿದ್ದರೂ ಸಹ, ಪ್ರಶ್ನೋತ್ತರಗಳು, ಸಂಯಮದಿಂದ ನಡೆಯುತ್ತಿದ್ದವು. ಈ ಕಲಾಪಗಳಲ್ಲಿ ನಡೆಯುವ ಚರ್ಚೆ ಮತ್ತು ಉದ್ಭವಿಸುವ ಪ್ರಶ್ನೆಗಳು ಸಾಮಾನ್ಯ ಜನತೆಯ ಧ್ವನಿ ಎಂಬ ಅರಿವು ಇರುತ್ತಿತ್ತು. ಹಾಗಾಗಿಯೇ 20ನೆ ಶತಮಾನದ ಭಾರತೀಯ ಸಂಸತ್ತು ಉನ್ನತ ಮೌಲ್ಯಗಳ ನಾಯಕರನ್ನು ಸೃಷ್ಟಿಸಿತ್ತು. ಬಹುಶಃ ಅಟಲ್ ಬಿಹಾರಿ ವಾಜಪೇಯಿಯ ನಂತರ ಯಾರನ್ನೂ ಸಹ ಈ ನೆಲೆಯಲ್ಲಿ ಗುರುತಿಸಲಾಗುವುದಿಲ್ಲ.

ವರ್ತಮಾನದ ಸಂದರ್ಭದಲ್ಲಿ
ಬಹುಶಃ ಮಿಲೆನಿಯಂ ಮಕ್ಕಳಿಗೆ (20-25 ವಯೋಮಾನ) ಇವೆಲ್ಲವನ್ನೂ ಹೇಳಿದರೆ ನಂಬುವುದಿಲ್ಲ. ಏಕೆಂದರೆ ಈ ಯುವ ಸಮಾಜ ನೋಡಿರುವ ಸದನಗಳಲ್ಲಿ ಈ ಲಕ್ಷಣಗಳು ಕಾಣುವುದೇ ಇಲ್ಲ. ಲೋಕಸಭೆಯನ್ನು ಪ್ರವೇಶಿಸುವ ಮುನ್ನ ಹೊಸ್ತಿಲಿಗೆ ನಮಸ್ಕರಿಸಿ ಒಳಹೋಗುತ್ತಿದ್ದ, ತಮ್ಮನ್ನು ಪ್ರಶ್ನಿಸಲಾಗುತ್ತದೆ ಎಂದು ತಿಳಿದರೆ, ತಪ್ಪದೆ ಹಾಜರಾಗುತ್ತಿದ್ದ ನಾಯಕರೆಲ್ಲಿ, ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಹಾದಿಗಳನ್ನು ಹುಡುಕುವ, ಸದನದ ಗೌರವವನ್ನೂ ಲೆಕ್ಕಿಸದೆ ವರ್ತಿಸುವ ನಾಯಕರೆಲ್ಲಿ ? ನಾವು ಎಲ್ಲಿಂದ ಎಲ್ಲಿಗೆ ತಲುಪಿದ್ದೇವೆ ? 78 ವರ್ಷಗಳ ಪ್ರಜಾಸತ್ತಾತ್ಮಕ ಆಳ್ವಿಕೆ, ಸಾಂವಿಧಾನಿಕ ಆಡಳಿತ , ಜನಪ್ರತಿನಿಧಿಗಳಿಗೆ ಕನಿಷ್ಠ ಸೌಜನ್ಯವನ್ನೂ ಕಲಿಸಿಲ್ಲ ಎಂದರೆ, ಇದು ಯಾರ ವೈಫಲ್ಯ ?

ಫೆಬ್ರವರಿ 4ರಂದು ಸಂಸತ್ತಿನಲ್ಲಿ ನಡೆದ ಘಟನೆಗಳು ಈ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ದೇಶದ ರಾಜಕೀಯ ನಾಯಕರಿಗೆ ಕಳಂಕ ತರುವಂತಹ ಸುದ್ದಿ ಪ್ರಕಟವಾಗಿರುವುದು, ವೈರಲ್ ಆಗುತ್ತಿರುವುದು ಕಳವಳದ ವಿಚಾರ. ಇದರ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸ್ವತಃ ಪ್ರಧಾನಮಂತ್ರಿಗಳು ಸ್ವಯಂ ಪ್ರೇರಿತವಾಗಿ ಸ್ಪಷ್ಟನೆ ನೀಡಬೇಕಿತ್ತು. ಬ್ರಿಟನ್ನಿನ ಲೇಬರ್ ಪಕ್ಷದ ಸಂಸದ ಪೀಟರ್ ಮಂಡೇಲ್ಸನ್ ತಮ್ಮ ವಿರುದ್ಧ ಆರೋಪಗಳು ಕಂಡಕೂಡಲೇ ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿ ಇದು ಊಹಿಸಲಾಗದ ವಿಷಯ. ಇರಲಿ, ಈ ವಿವಾದದಲ್ಲಿ ತಪ್ಪೊಪ್ಪಿಗೆ, ನಿರಾಕರಣೆಗಿಂತಲೂ ಮುಖ್ಯವಾಗಿ ನೋಡಬೇಕಿರುವುದು ದೇಶದ ಸಂಸತ್ತಿನ ಘನತೆಯ ಕಡೆಗೆ. ವಿರೋಧ ಪಕ್ಷಗಳ ಪ್ರಶ್ನೆಗಳು ಸಾಂವಿಧಾನಿಕ ನಿಯಮಗಳ ಅನುಸಾರ ಇದೆಯೋ ಇಲ್ಲವೋ ಎಂಬ ಕಾನೂನಾತ್ಮಕ ಪ್ರಶ್ನೆಗಿಂತಲೂ, ದೇಶದ ರಾಜಕೀಯ ನಾಯಕತ್ವದ ನೈತಿಕತೆಯ ಪ್ರಶ್ನೆ ಮುಖ್ಯವಾಗಬೇಕಲ್ಲವೇ ? ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದರ ವರ್ತನೆ ಅಸಾಂವಿಧಾನಿಕವಾದರೆ ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಲು ಯಾರೂ ಅಡ್ಡಿಬರುವುದಿಲ್ಲ.
ಇದನ್ನೂ ಓದಿ: Online Games: ಮಗನ ಆನ್ಲೈನ್ ಗೇಮ್ ಹುಚ್ಚಿಗೆ ತಾಯಿ ಕುಟುಂಬ ಸರ್ವನಾಶ
ರಾಷ್ಟ್ರಪತಿಗಳ ಭಾಷಣಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಬೇಕಿದ್ದ ಸಂಸದೀಯ ಭಾಷಣವನ್ನು ತಡೆಗಟ್ಟುವ ಕಾಂಗ್ರೆಸ್ ಸಂಸದರ ನಡೆಯ ಸರಿ ತಪ್ಪುಗಳ ಪ್ರಶ್ನೆಗಿಂತಲೂ ಈ ಸಂದರ್ಭದಲ್ಲಿ ನಡೆದ ಚರ್ಚೆ ಮತ್ತು ಆರೋಪ ಪ್ರತ್ಯಾರೋಪಗಳು ಸಂಸದೀಯ ನೈತಿಕತೆಯ (Parliamentary Morals) ಸ್ಪಷ್ಟ ಉಲ್ಲಂಘನೆಯಾಗಿ ಕಾಣುತ್ತದೆ. ನಿವೃತ್ತ ಜನರಲ್ ಮನೋಜ್ ಮುಕುಂದ್ ನರಾವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಕೆಲವು ಆಕ್ಷೇಪಾರ್ಯ ಅಂಶಗಳನ್ನು ಕುರಿತು ರಾಹುಲ್ ಗಾಂಧಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಾಗ ನೆಹರೂ ಮತ್ತು ಎಡ್ವಿನಾ ಸಂಬಂಧಗಳನ್ನು ಕುರಿತ ಏಳು ದಶಕಗಳ ಹಿಂದಿನ ಪುಸ್ತಕವನ್ನು ಪ್ರಸ್ತಾಪಿಸುವ ಬಿಜೆಪಿ ಸಂಸದರ ನಡೆ ಏನನ್ನು ಸೂಚಿಸುತ್ತದೆ. ಅನೈತಿಕತೆಯನ್ನು ತುಲನಾತ್ಮಕವಾಗಿ ನೋಡುವ ವಿಕೃತ ಮನಸ್ಥಿತಿಯನ್ನಲ್ಲವೇ ? “ ನೀವು ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದರೆ ನಾವು ನಿಮ್ಮ ಚರಿತ್ರೆಯನ್ನೇ ತೆರೆದಿಡುತ್ತೇವೆ ,,,,,” ಎಂಬ ಪ್ರಮೇಯವನ್ನು ನಾಗರಿಕ ಲಕ್ಷಣ ಎನ್ನಲಾದೀತೇ ? ಸಂಸತ್ತಿನಲ್ಲಿರುವ 542 ಸದಸ್ಯರು ದೇಶದ 142 ಕೋಟಿ ಜನತೆಯ ಧ್ವನಿ ಎಂಬ ಸಾಮಾನ್ಯ ಪರಿಜ್ಞಾನ ಚುನಾಯಿತ ಪ್ರತಿನಿಧಿಗಳಲ್ಲಿ ಇರಬೇಕಲ್ಲವೇ ?

ಇದೇ ಅವಲಕ್ಷಣದ ಮತ್ತೊಂದು ಮಗ್ಗುಲನ್ನು ಕರ್ನಾಟಕ ವಿಧಾನಸಭೆ ತೋರಿಸಿದೆ. ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕುರಿತು ಚರ್ಚೆ ನಡೆಯುತ್ತಿರುವ ವೇಳೆ, ಕಾಂಗ್ರೆಸ್ ಶಾಸಕರು ಬಿಜೆಪಿ ನಾಯಕರ ವಿರುದ್ಧ ಬಳಸಿರುವ ನಿಂದನೀಯ ಪದಗಳು, ಅಸಭ್ಯ ಬೈಗುಳ ಮತ್ತು ಅನಾಗರಿಕ ಶಬ್ದಗಳು, ಕುಸಿಯುತ್ತಿರುವ ಮೌಲ್ಯಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣುತ್ತವೆ. ಆರೆಸ್ಸೆಸ್ ಸಂಘಟನೆಯನ್ನು, ವಿರೋಧ ಪಕ್ಷದ ನಾಯಕರನ್ನು ತುಚ್ಚ ಭಾಷೆಯಲ್ಲಿ ನಿಂದಿಸುವ, ಅಸಭ್ಯ ಭಾಷೆಯಲ್ಲಿ ದೂಷಿಸುವ ಈ ಕಾಂಗ್ರೆಸ್ ಶಾಸಕರ ವರ್ತನೆಯನ್ನು ಹೇಗೆ ಬಣ್ಣಿಸುವುದು ? ಶಾಸಕ ಶರಣು ಸಲಗರ ಅವರನ್ನು ಖಂಡಿಸುವಾಗ, ಆತನ ಮಡದಿಯನ್ನು ಪ್ರಸ್ತಾಪಿಸಿರುವುದು ಯಾವ ಸಂಸ್ಕೃತಿಯನ್ನು ತೋರುತ್ತದೆ. ವಿಧಾನಪರಿಷತ್ತಿನ ಅಧ್ಯಕ್ಚರು ಶಾಸಕಿ ಉಮಾಶ್ರೀ ಅವರಿಗೆ ಅವಹೇಳನ ಮಾಡಿರುವುದು ಯಾವ ಸಾಂವಿಧಾನಿಕ ಸಂಸ್ಕೃತಿ ? ನಿಂದನೆಯಾಗಲೀ, ಹೊಗಳಿಕೆಯಾಗಲೀ ನಾವು ಬಳಸುವ ಭಾಷೆಯ ಸಭ್ಯತೆ ಎದುರಾಳಿಯ ವ್ಯಕ್ತಿತ್ವವನ್ನು ಅವಲಂಬಿಸುವುದಿಲ್ಲ, ನಮ್ಮ ವ್ಯಕ್ತಿಗತ ನೈತಿಕತೆಯನ್ನು ಅವಲಂಬಿಸುತ್ತದೆ.

ಆರೆಸ್ಸೆಸ್ ವಿರುದ್ಧ ಮಾತನಾಡಿದ ಮಾತ್ರಕ್ಕೆ ಅಸಾಂವಿಧಾನಿಕ ಪದಬಳಕೆಯ ಪರವಾನಗಿ ನೀಡಿದಂತಾಗುವುದಿಲ್ಲ. ಆರೆಸ್ಸೆಸ್ ವಿರೋಧಿಸುವ ಭರದಲ್ಲಿ ಈ ಶಾಸಕರ ಅಸಭ್ಯ, ಅಸಂವೇದನೆಯ ಮಾತುಗಳನ್ನು ವೈಭವೀಕರಿಸಿ, ಸಂಭ್ರಮಿಸುವ ಪೋಸ್ಟ್ಗಳು ಪ್ರಗತಿಪರ ಎನಿಸಿಕೊಳ್ಳುವ ವಾಟ್ಸಾಪ್ ಗುಂಪುಗಳಲ್ಲೂ, ಫೇಸ್ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿವೆ. ಕೆಲವು ಯು ಟ್ಯೂಬರ್ಗಳೂ ಸಹ ಈ ಮಾತುಗಳನ್ನು ಯಥಾವತ್ತಾಗಿ ಬಿಂಬಿಸುವ ಮೂಲಕ ತಮ್ಮ ನೋಡುಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಸತ್ಯವೋ ಅಸತ್ಯವೋ ಚರಿತ್ರೆಯಲ್ಲಿ ಆಗಿರಬಹುದಾದ ತಪ್ಪುಗಳು ಇಂದಿನ ನಾಯಕರ ಅಪರಾಧಗಳಿಗೆ ರಹದಾರಿ ನೀಡುವುದಿಲ್ಲ. ಹಿಂದಿನ ಆಳ್ವಿಕೆಯ ಪ್ರಮಾದಗಳು ಪ್ರಸ್ತುತ ಸರ್ಕಾರದ ಅಪರಾಧಗಳಿಗೆ ಪರವಾನಗಿಯನ್ನೂ ನೀಡುವುದಿಲ್ಲ. ಆದಾಗ್ಯೂ ಅತ್ಯಾಚಾರದಿಂದ ಭ್ರಷ್ಟಾಚಾರದವರೆಗೂ ಜನಪ್ರತಿನಿಧಿಗಳು ತಮ್ಮ ಉತ್ತರದಾಯಿತ್ವವನ್ನು ಮರೆತು ಹಿಂದೆ ನಡೆದ ಮತ್ತೊಬ್ಬರ ಅಪರಾಧಗಳನ್ನು ರಕ್ಷಾ ಕವಚದಂತೆ ಬಳಸುತ್ತಿರುವುದು ಸಂಸದೀಯ ಮೌಲ್ಯಗಳ ಪಾತಾಳ ಕುಸಿತದ ಸಂಕೇತವಾಗಿ ಕಾಣುತ್ತದೆ.

ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿ
ಈ ಬೆಳವಣಿಗೆಯನ್ನು ಸರಿಪಡಿಸುವ ಮತ್ತು ಆರೋಗ್ಯಕರ ಚರ್ಚೆಯನ್ನು ನಡೆಸುವ ಮಾದರಿಗಳನ್ನು ಕಲ್ಪಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ವಿಶೇಷವಾಗಿ ಅತಿಹೆಚ್ಚು ಜನರನ್ನು, ಅತಿ ಶೀಘ್ರವಾಗಿ ತಲುಪುವ ಡಿಜಿಟಲ್ ಪ್ಲಾಟ್ಫಾರ್ಮ್ಗಳು, ಖಾಸಗಿ ಯು ಟ್ಯೂಬರ್ಗಳು ಮತ್ತು ಸಾಮಾಜಿಕ ಮಾಧ್ಯಮಗಳು (Social Media) ಈ ನೈತಿಕ ಜವಾಬ್ದಾರಿಯನ್ನು ಹೊರಬೇಕಾಗಿದೆ. ದುರದೃಷ್ಟವಶಾತ್, ಅಸಭ್ಯ/ಸಂಯಮರಹಿತ ಭಾಷೆಯನ್ನು ʼ ಸಾಮಾಜಿಕ ಮಾಧ್ಯಮದ ಪರಿಭಾಷೆ ʼ (social media language) ಎಂದು ವರ್ಗೀಕರಿಸುವ ಮಟ್ಟಿಗೆ ಸೋಷಿಯಲ್ ಮೀಡಿಯಾಗಳ ಬಳಕೆದಾರರು ಮತ್ತು ಕೆಲವು ನಿರೂಪಕರೂ ಸಹ ಹದಗೆಡಿಸಿದ್ದಾರೆ. ಭಾಷಾ ಸೌಜನ್ಯ, ಸಭ್ಯತೆ, ಸಂಯಮ ಮತ್ತು ಘನತೆಯ ಪ್ರಜ್ಞೆ ಚುನಾಯಿತರಲ್ಲಿ ಇಲ್ಲ, ಮತದಾರರಲ್ಲಿ, ಸಾಮಾನ್ಯ ನಾಗರಿಕರಲ್ಲಾದರೂ ಇರಬೇಕಲ್ಲವೇ ?

ಭಾರತದ ಯಾವುದೇ ಭಾಷೆಯಲ್ಲಾದರೂ ಬೈಗುಳ ಅಥವಾ ನಿಂದನೀಯ ಪದಗಳ ಬಳಕೆಯಲ್ಲಿ ಹೆಣ್ಣು ಅಥವಾ ಕೆಳಸ್ತರದ ಜಾತಿಗಳು ಕೇಂದ್ರವಾಗಿರುವುದು ವಾಸ್ತವ. ಇದನ್ನು ಅರಿತಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಣ್ಣು ಕುಲವನ್ನು ಅವಮಾನಿಸುವಂತಹ ಅವಾಚ್ಯ ಪದಗಳನ್ನು, ನಿಂದನೆ ಅಥವಾ ಖಂಡನೆಯ ನೆಪದಲ್ಲಿ ಬಳಸುತ್ತಿರುವುದು ನಮ್ಮ ನಾಗರಿಕ ಪ್ರಜ್ಞೆಯ ಭ್ರಷ್ಟತೆಗೆ ಸಂಕೇತವಾಗಿದೆ. ಬಹುತೇಕ ವಿದ್ಯಾವಂತರನ್ನೇ ಪ್ರತಿನಿಧಿಸುವ ಫೇಸ್ ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಚರ್ಚೆಗಳಲ್ಲಿ ಬಳಸುವ ಪ್ರತಿಕ್ರಿಯಾತ್ಮಕ ಪರಿಭಾಷೆಯಲ್ಲೂ ಇದೇ ಅವಾಚ್ಯ ಶಬ್ದಗಳೇ ರಾರಾಜಿಸುತ್ತವೆ. “ ಏಟಿಗೆ ಎದಿರೇಟು ” ಪ್ರಮೇಯ ಬಳಸಿಕೊಂಡು ಇದನ್ನು ಸಮರ್ಥಿಸಿಕೊಳ್ಳುವ ಮನಸ್ಸುಗಳೂ ನಮ್ಮ ನಡುವೆ ಇದೆ.

ಆದರೆ ಈ ಅಸಭ್ಯತೆ ಮತ್ತು ಸಂಯಮವಿಲ್ಲದ ಭಾಷಾ ಬಳಕೆ ಸಮಾಜಕ್ಕೆ ಏನು ಸಂದೇಶ ನೀಡುತ್ತದೆ ? ಡಿಜಿಟಲ್ ಮಾಧ್ಯಮವನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿಸುವ ಮಿಲೆನಿಯಂ ಮಕ್ಕಳಿಗೆ ಎಂತಹ ಮಾದರಿಯನ್ನು ಸೂಚಿಸುತ್ತವೆ ? ಈಗಾಗಲೇ ವಿದ್ಯುನ್ಮಾನ ಮಾಧ್ಯಮಗಳ ಕೆಲವು ರಿಯಾಲಿಟಿ ಷೋಗಳು, ಹಾಸ್ಯ, ಮನರಂಜನೆಯ ಹೆಸರಿನಲ್ಲಿ ಈ ದುರವಸ್ಥೆಯನ್ನು ಬಹುತೇಕವಾಗಿ ಸಾಂಸ್ಥೀಕರಿಸಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ನೈತಿಕ ವಿಜ್ಞಾನ (Moral Science) ಎಂಬ ಪಠ್ಯಕ್ರಮ ಇತಿಹಾಸದ ಕಸದ ಬುಟ್ಟಿ ಸೇರಿದೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿಯಿಂದ ಬೋಧಕ ವರ್ಗಗಳೂ ಹಿಂದೆ ಸರಿಯುತ್ತಿವೆ. ರಾಜಕೀಯ, ಧರ್ಮ, ಅಧ್ಯಾತ್ಮ, ಶಿಕ್ಷಣ ಯಾವುದೇ ಕ್ಷೇತ್ರದಲ್ಲೂ ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಿಸುವ ಮಾದರಿ ವ್ಯಕ್ತಿತ್ವಗಳನ್ನು ಕಟ್ಟಿಕೊಡಲು ವಿಫಲವಾಗಿರುವ ಭಾರತೀಯ ಸಮಾಜದಿಂದ ಮಿಲೆನಿಯಂ ಮಕ್ಕಳು ಏನು ನಿರೀಕ್ಷಿಸಲು ಸಾಧ್ಯ ?

ಆರೋಗ್ಯಕರ ಸಮಾಜದ ಕಡೆಗೆ
ಒಂದು ಆರೋಗ್ಯಕರ ಸಮಾಜವನ್ನು ಕಟ್ಟಲು, ಭವಿಷ್ಯದ ತಲೆಮಾರಿಗೆ ಮಾನವೀಯ ಮೌಲ್ಯಗಳನ್ನು ಕಲಿಸಲು ಬೇಕಾದ ಯಾವುದೇ ಪ್ರಯತ್ನಗಳನ್ನು ಕಾಣಲಾಗುತ್ತಿಲ್ಲ. ಆಳ್ವಿಕೆ ನಡೆಸುವ ಚುನಾಯಿತ ಜನಪ್ರತಿನಿಧಿಗಳಿಂದ ಆಡಳಿತದ ನ್ಯೂನತೆಗಳನ್ನು ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವ ಮಾಧ್ಯಮ ವಕ್ತಾರರವರೆಗೂ ವಿಸ್ತರಿಸುವ ವಿಶಾಲ ಹಂದರದಲ್ಲಿ ಭಾರತೀಯ ಸಮಾಜ ತನ್ನ ಮೌಲ್ಯಾದರ್ಶಗಳನ್ನು, ನೈತಿಕತೆ ಮತ್ತು ಸಭ್ಯತೆಯನ್ನು ಕಳೆದುಕೊಂಡಿರುವುದು ಢಾಳಾಗಿ ಕಾಣುತ್ತಿದೆ. ಪ್ರತಿಯೊಂದು ಸ್ತರದಲ್ಲೂ ಅನಾರೋಗ್ಯಕರ ವಾತಾವರಣವನ್ನೇ ಕಾಣುತ್ತಿದ್ದೇವೆ. ಸುಶಿಕ್ಷಿತ, ಆಧುನಿಕ, ನಾಗರಿಕ ಮುಂತಾದ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಒಂದು ಸಮಾಜ ರೋಗಗ್ರಸ್ತವಾಗಲು ಈ ಅವಲಕ್ಷಣಗಳೇ ಕಾರಣವಾಗುತ್ತವೆ ಅಲ್ಲವೇ ?
ಈಗಾಗಲೇ ನೈತಿಕವಾಗಿ ಪಾತಾಳದಲ್ಲಿದ್ದೇವೆ, ಭವಿಷ್ಯದಲ್ಲಿ ಎಲ್ಲಿಗೆ ತಲುಪಲಿದ್ದೇವೆ ? ಈ ಪ್ರಶ್ನೆ ಪ್ರಜ್ಞಾವಂತ ಮನಸ್ಸುಗಳನ್ನು ಕಾಡಬೇಕಲ್ಲವೇ ?
-೦-೦-೦-೦-೦-






