ದಿನಕ್ಕೊಂದು ತಿರುವು ಪಡೆಯುತ್ತಿರುವ 11 ವರ್ಷಗಳ ನಡೆದ ಸೌಜನ್ಯಾ ಪ್ರಕರಣ ಹೋರಾಟದಲ್ಲಿ ಭಾನುವಾರ (ಆಗಸ್ಟ್ 27) ಮತ್ತೊಂದು ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಗೋಚರಿಸಿದೆ.
ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳವು ನೇತ್ರಾವತಿ ನದಿಯಿಂದ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ಸಾಮೂಹಿಕ ಪ್ರಾರ್ಥನೆ ಆಯೋಜಿಸಿದೆ. ಈ ಪಾದಯಾತ್ರೆ ಆರಂಭಗೊಂಡಿದ್ದು ಸೌಜನ್ಯ ತಾಯಿ ಕುಸುಮಾವತಿ ಹಾಗೂ ಅವರ ಕುಟುಂಬದ ಮಹಿಳಾ ಸದಸ್ಯರು ಭಾಗಿಯಾಗಿದ್ದಾರೆ.
ಇದೇ ವೇಳೆ ಸೌಜನ್ಯಾಳ ತಾಯಿ ಆರೋಪ ಮಾಡಿರುವ ಧೀರಜ್ ಕೆಲ್ಸ ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಸಾಮಾಜಿಕ ಜಾಲತಾಣದಲ್ಲಿ ನಾವು ನಿಮ್ಮಗಾಗಿ ಅಣ್ಣಪ್ಪ ಬೆಟ್ಟದ ಬಳಿ ಕಾಯುತ್ತಿರುತ್ತೇವೆ ಎಂಬ ಸಂದೇಶ ಹಾಕಿ, ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲವೆಂದು ಅಣ್ಣಪ್ಪ ಸ್ವಾಮಿಯ ಮುಂದೆ ಅಣೆ ಪ್ರಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಹೀಗಾಗಿ ಇಂದಿನ ಕ್ಷೇತ್ರದ ನಾಗರೀಕರಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಣ್ಣಪ್ಪ ಬೆಟ್ಟದ ಮುಂಭಾಗ ಧರ್ಮಸ್ಥಳದ ನಾಗರೀಕರು ಹಾಗೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬೇಟ್ಟದ ಸುತ್ತ ಸರ್ಪಗಾವಲು ಹಾಕಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಶ್ಯಂತ್ ಅವರು ಸ್ವತ: ಫೀಲ್ಡ್ ಗಿಳಿದಿದ್ದು ಕ್ಷೇತ್ರಕ್ಕೆ ದೌಡಯಿಸಿ ಕಾನೂನು ಸುವ್ಯವಸ್ಥೆಯ ವಹಿಸಿಕೊಂಡಿದ್ದಾರೆ.
ಈಗಾಗಲೇ ಕ್ಷೇತ್ರದ ಪ್ರಮುಖರ ಜೊತೆ ಎಸ್ಪಿ ಮಾತುಕತೆ ನಡೆಸಿದ್ದಾರೆ. ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಹೈ ಸೆಕ್ಯುರಿಟಿ ನಿಯೋಜಿಸಿದ್ದಾರೆ. ಅಣ್ಣಪ್ಪ ಸ್ವಾಮಿ ಬೆಟ್ಟ ದ ಮುಂಭಾಗ ಬ್ಯಾರಿಕೇಡ್ ಅಳವಡಿಸಲಾಗಿದೆ. ಸೌಜನ್ಯ ತಾಯಿ ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಬರುವಾಗ ಗೊಂದಲ ಆಗದಂತೆ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ. ಇದೆ ವೇಳೆ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಸಾವಿರಾರು ಜನರು ಜಮಾಯಿಸಿದ್ದಾರೆ. ಧ್ವನಿವರ್ಧಕದ ಮೂಲಕ ಬೆಟ್ಟದ ಮುಂಭಾಗದಿಂದ ದೂರ ಸರಿಯುವಂತೆ ಪೊಲೀಸರು ಜನರಲ್ಲಿ ವಿನಂತಿಸುತ್ತಿದ್ದಾರೆ
ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ವಿಶ್ವ ಹಿಂದೂ ಪರಿಷತ್, ಬಜರಂಗಳ ಕಾರ್ಯಕರ್ತರ ಪಾದಯಾತ್ರೆ ಈಗಾಗಲೇ ಆರಂಭಗೊಂಡಿದೆ. ನೇತ್ರಾವತಿ ನದಿ ಆಗಮಿಸಿದ ಸೌಜನ್ಯಾ ತಾಯಿ ಕುಸುಮಾವತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಅಣ್ಣಪ್ಪ ಬೆಟ್ಟದತ್ತ ಮೆರವಣಿಗೆಯಲ್ಲಿ ಬರುತ್ತಿದ್ದಾರೆ.ಇಂದು ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಆಣೆ ಪ್ರಮಾಣ ಸಾಧ್ಯತೆಯಿದ್ದು ಸೌಜನ್ಯಾ ಪ್ರಕರಣ ತಾರ್ಕಿಕ ಅಂತ್ಯ ಸಿಗಲಿದೆಯೇ ಎಂಬುವುದು ಸದ್ಯದ ಕುತೂಹಲ.