ಕರೋನಾ ಸಂಕಷ್ಟ ಕಾಲದಲ್ಲಿ ಭಾರತ ಸಿಲುಕಿ ನರಳಾಡುತ್ತಿದೆ. ಲಾಕ್ಡೌನ್ ಮಾಡಿ ಕರೋನಾ ನಿಯಂತ್ರಣ ಮಾಡೋಣ ಎಂದರೆ ದೇಶ ಮುನ್ನಡೆಸಲು ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಅದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಜೀವ ಉಳಿಸಿಕೊಳ್ಳೋಣ ಜೀವನ ಆಮೇಲೆ ನೋಡೋಣ ಎಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದವರು, ಮೆಲ್ಲಗೆ ಗೃಹ ಸಚಿವಾಲಯದ ಮೂಲಕ ಜೀವನವೇ ಮುಖ್ಯ, ಕರೋನಾ ಸೋಂಕು ಎಷ್ಟು ಜನರಿಗೆ ಬರುತ್ತದೆಯೋ ಬರಲಿ, ಅಂತಿಮವಾಗಿ ಸರ್ಕಾರದ ಕೈಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅನ್ಲಾಕ್ ಮಾಡುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಪರ್ಯಾಯವಾಗಿ ‘PM-CARES’ ನಿಧಿ ಸ್ಥಾಪಿಸಿದ್ದಾರೆ.
52 ದಿನಗಳ ಹಿಂದೆ ಅಂದರೆ ಮಾರ್ಚ್ 28, 2020ರಂದು PM-CARES ನಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿದ್ದರು. ಉದ್ಯಮಿಗಳು ಸೇರಿದಂತೆ ಸಾರ್ವಜನಿಕರೂ ಸಂಘಸಂಸ್ಥೆಗಳೂ ಕೂಡ PM-CARES ಫಂಡ್ಗೆ ತಮ್ಮ ಕೈಲಾದ ಧನ ಸಹಾಯ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿದ PM-CARES ಗೆ ಬಂದಿರುವ ಹಣ ಹಾಗೂ ಅದರಿಂದ ಖರ್ಚು ಮಾಡಿರುವ ಲೆಕ್ಕವನ್ನು ಬಿಡುಗಡೆ ಮಾಡಬೇಕು ಎಂದು ಹಲವಾರು ರಾಜಕೀಯ ನಾಯಕರು ಒತ್ತಾಯಿಸಿದ್ದರು. ಈ ನಡುವೆ PM-CARES ಬಂದಿರುವ ಎಲ್ಲಾ ದೇಣಿಗೆ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ (NDRF ) ನಿಧಿಗೆ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆ ಮಾಡಲಾಗಿದೆ. ಇನ್ಮುಂದೆ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮೂಲಕವೇ ವೆಚ್ಚ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಕೇಳಿಕೊಳ್ಳಲಾಗಿದೆ.
ಈ ರೀತಿ ಕರೋನಾ ವಿರುದ್ಧ ಸಕಲ ಸೌಕರ್ಯ ಕಲ್ಪಿಸಲು ಸ್ಥಾಪನೆಯಾದ PM-CARES ನಿಧಿಯ ಲೆಕ್ಕಾಚಾರವನ್ನು ಬಹಿರಂಗ ಮಾಡುವಂತೆ ಕೇಳಿದ್ದ ವಿರೋಧ ಪಕ್ಷಗಳಿಗೆ ಬಿಜೆಪಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್ ಸಂತೋಷ್ ಟ್ವೀಟರ್ ಮೂಲಕ ವಿರೋಧಿಗಳನ್ನು ಕಿಚಾಯಿಸಿದ್ದಾರೆ. “ಯಾರೆಲ್ಲಾ PM-CARES ಲೆಕ್ಕ ಕೇಳಿದಿರಿ. ಆ ಸಾಕ್ಷಿ ಇಲ್ಲಿದೆ ನೋಡಿ” ಎಂದು ವೆಂಟಿಲೇಟರ್ ಚಿತ್ರ ಹಾಕಿ ಪೋಸ್ಟ್ ಮಾಡಿದ್ದಾರೆ. “ಆಸ್ಪತ್ರೆಗಳಿಗೆ ವೆಂಟಿಲೇಟರ್ ತಲುಪಲು ಶುರುವಾಗಿದೆ. ಕಳೆದ 65 ವರ್ಷದಲ್ಲಿ ವೆಂಟಿಲೇಟರ್ ಪೂರೈಕೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಕೆಲಸ ಈಗ ಆಗುತ್ತಿದೆ” ಎಂದು ದೇಶವನ್ನು ಹಲವಾರು ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಆದರೆ, ರಾಷ್ಟ್ರೀಯ ಮಾಧ್ಯಮಗಳ ವರದಿ ಬೆಚ್ಚಿ ಬೀಳುವಂತೆ ಮಾಡಿದೆ.
ಭಾರತ ಸರ್ಕಾರ ಲೋಕಲ್ ವೋಕಲ್ ಮೂಲಕ ಮೇಡ್ ಇನ್ ಇಂಡಿಯಾ ಯೋಜನೆಯಲ್ಲಿ 50 ಸಾವಿರ ವೆಂಟಿಲೇಟರ್ ಖರೀದಿ ಮಾಡಲು ಕಳೆದ ಬುಧವಾರ ರಾತ್ರಿ ಹಣ ಬಿಡುಗಡೆ ಮಾಡಿದೆ. “ಪಿಎಂ ಕೇರ್ಸ್” ಮೂಲಕ 2 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸಲು ಸಜ್ಜಾಗುತ್ತಿದೆ. ಒಂದು ವೆಂಟಿಲೇಟರ್ಗೆ ಬರೋಬ್ಬರಿ 4 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದುಂದು ವೆಚ್ಚ ಮಾಡಿರುವುದು ಯಾರ ದುಡ್ಡು ಎಂದು ಪ್ರಶ್ನಿಸಲಾಗುತ್ತಿದೆ. ಮಾರ್ಚ್ 24 ರಿಂದ ಲಾಕ್ಡೌನ್ ಜಾರಿ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಸೌಲಭ್ಯ ಹೆಚ್ಚಿಸಲು ಕ್ರಮವಹಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಇದೀಗ ವೆಂಟಿಲೇಟರ್ಗೆ ದುಬಾರಿ ಹಣ ಕೊಟ್ಟು ಖರೀದಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಾಮಾನ್ಯವಾಗಿ ವೆಂಟಿಲೇಟರ್ ಬೆಲೆ ಎಷ್ಟು..?
ಐಐಟಿ ರೂರ್ಕಿ ಸಂಸ್ಥೆ ಕಳೆದ ಏಪ್ರಿಲ್ನಲ್ಲಿ 25 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಂಪೂರ್ಣ ತಂತ್ರಜ್ಞಾನದಲ್ಲಿ ವೆಂಟಿಲೇಟರ್ ಅಭಿವೃದ್ಧಿಪಡಿಸಿದ್ದಾಗಿ ಘೋಷಿಸಿದರು. ಇಂಡಿಯನ್ ರೈಲ್ವೆ ಕಪುರ್ತಲಾ ರೈಲು ಕೋಚ್ ಕಾರ್ಖಾನೆಯಲ್ಲಿ ತುಂಬಾ ಕಡಿಮೆ ಬೆಲೆಯ ವೆಂಟಿಲೇಟರ್ಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಕಳೆದ ತಿಂಗಳು ಘೋಷಿಸಿತ್ತು. ಅದರ ಬೆಲೆ ಕೇವಲ 10 ಸಾವಿರ ರೂಪಾಯಿ ಮಾತ್ರ. ಹೆಚ್ಚೆಚ್ಚು ಉತ್ಪಾದಿಸಲು ICMR ಅನುಮತಿಯನ್ನು ಕೋರಿದ್ದೇವೆ ಎಂದಿದ್ದರು. ಇನ್ನೂ 3 ವಾರಗಳ ಹಿಂದೆ ಬೆಂಗಳೂರು ಮೂಲದ ‘ಡೈನಾಮ್ಯಾಟಿಕ್ ಟೆಕ್ನಾಲಜೀಸ್’ ಬಳಕೆ ಮಾಡಿದ ಬಳಿಕ ಬಿಸಾಡಬಹುದಾದ ವೆಂಟಿಲೇಟರ್ ಅಭಿವೃದ್ಧಿಪಡಿಸಿದೆ. ಈ ವೆಂಟಿಲೇಟರ್ ವಿದ್ಯುತ್ ಇಲ್ಲದೆ ಕೆಲಸ ಮಾಡುತ್ತದೆ ಮತ್ತು ಇದರ ಬೆಲೆ ಕೇವಲ 2,500 ರೂಪಾಯಿ ಮಾತ್ರ ಎಂದು ಘೋಷಣೆ ಮಾಡಿತ್ತು.
ಆದರೆ, ನಮ್ಮ ಭಾರತ ಸರ್ಕಾರ ಕೈಗೆಟುಕುವ ಬೆಲೆಯಲ್ಲಿ ಅಂದಾಜು 10 ಸಾವಿರದಿಂದ 25 ಸಾವಿರ ಆಸುಪಾಸಿನಲ್ಲಿ ಉತ್ತಮ ಗುಣಮಟ್ಟದ ಜೀವರಕ್ಷಕ ಸಾಧನವಾದ ವೆಂಟಿಲೇಟರ್ ಸಿಗುವಾಗ 50 ಸಾವಿರ ರೂಪಾಯಿಗೆ ಖರೀದಿಸಲು ಸಮ್ಮತಿ ಸೂಚಿಸಿದ್ದು, ಒಂದು ವೆಂಟಿಲೇಟರ್ಗೆ ಪಿಎಂ ಕೇರ್ಸ್ನಿಂದ 4 ಲಕ್ಷ ರೂಪಾಯಿ ಕೊಡುತ್ತಿರುವುದು ನ್ಯಾಯವೇ..? ಐಐಟಿ ರೂರ್ಕಿ ಸಂಸ್ಥೆ ಉಲ್ಲೇಖಿಸಿರುವುದಕ್ಕಿಂದ ಶೇಕಡ 1,600 ಪಟ್ಟು ಹೆಚ್ಚಿನ ವೆಚ್ಚದಲ್ಲಿ ಖರೀದಿ ಮಾಡಲಾಗುತ್ತಿದೆ. ಇನ್ನೂ ಭಾರತೀಯ ರೈಲ್ವೆ ಇಲಾಖೆ ನೀಡಿರುವ ಪ್ರಸ್ತಾವನೆಗೆ ಹೋಲಿಸಿದರೆ ಶೇಕಡಾ 4 ಸಾವಿರ ಪಟ್ಟು ಹೆಚ್ಚು ಕೊಟ್ಟು ಖರೀದಿ ಮಾಡಲಾಗ್ತಿದೆ. ಈ ವ್ಯವಹಾರದಲ್ಲಿ ಯಾರು ಹಣ ಗಳಿಸುತ್ತಿದ್ದಾರೆ..? ಎಂದು ಪ್ರಶ್ನಿಸಲಾಗುತ್ತಿದೆ. ಉತ್ತರ ಕೊಡಬೇಕಿದೆ. ಉತ್ತರ ಸಿಗುತ್ತೋ..?ಮೌನವೇ ಉತ್ತರವಾಗುತ್ತೋ ಅನ್ನೋದು ಈಗಿರುವ ಅನುಮಾನ. ಆದರೂ ಒಂದು ವೆಂಟಿಲೇಟರ್ಗೆ 4 ಲಕ್ಷದಂತೆ ಒಳ್ಳೆಯ ಉದ್ದೇಶಕ್ಕೆ ಸ್ಥಾಪನೆಯಾದ ಪಿಎಂ ಕೇರ್ಸ್ ಹಣ ಬಳಕೆಯಾಗುತ್ತಿರುವುದು ಜನರ ನೆಮ್ಮದಿ ಕೆಡಿಸಿದಂತೆಯೇ ಸರಿ.