ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ಒಂದು ಸುತ್ತು ಪರಿಹಾರ ಒದಗಿಸದರು ಹೀರಾಟ ನಿಲ್ಲುತ್ತಿಲ್ಲ. ಅದೇ ರೀತಿ ಕಬ್ಬು ಬೆಳೆಗಾರರಿಗೆ ದರ ಪಾವತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಧ್ಯೆ ಜಟಾಪಟಿ ನಿಂತಿಲ್ಲ.. ಅನೇಕ ದಿನಗಳಿಂದ ಕಬ್ಬು ಬೆಳಗಾರರ ದರ ಪಾವತಿ ವಿಚಾರಕ್ಕೆ X ನಲ್ಲಿ ಸಿಎಂ ಮತ್ತು ಕೇಂದ್ರ ಸಚಿವರು ಬಹಿರಂಗವಾಗಿ ಜಟಾಪಟಿ ನಡೆಸುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಷಿ ಬಹಿರಂಗ ಪತ್ರ ಬರೆದಿದ್ದಾರೆ.
ಇತ್ತೀಚಿಗಿನ ಕಬ್ಬು ಬೆಳೆಗಾರರ ಕಲ್ಯಾಣದ ಬಗೆಗಿನ ನಿಮ್ಮ ಕಾಳಜಿಯನ್ನು ಪ್ರಶಂಸಿಸುತ್ತೇನೆ. ಆದರೆ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಸಕ್ಕರೆ ಕ್ಷೇತ್ರದ ದೀರ್ಘಾವಧಿ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳು ಮತ್ತು ಮೂಲಭೂತ ವಾಸ್ತವಗಳನ್ನು ಕಡೆಗಣಿಸುವಂತೆ ತೋರುತ್ತಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಂಗತಿಗಳನ್ನು ನಾನು ಪುನಃ ಹೇಳಲು ಬಯಸುತ್ತೇನೆ ಎಂದು ಪತ್ರ ಬರೆದಿದ್ದಾರೆ.

“2025-26ರ ಸಾಲಿನಲ್ಲಿ ಕ್ವಿಂಟಲ್ಗೆ 355 ರೂ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಅನ್ನು 10.25% ಇಳುವರಿ ದರದಲ್ಲಿ, ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸುಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಈ ಬೆಲೆಯು ಉತ್ಪಾದನಾ ವೆಚ್ಚದ ಮೇಲೆ 105% ಕ್ಕಿಂತ ಹೆಚ್ಚಿನ ಅಂತರವನ್ನು ಒದಗಿಸುತ್ತದೆ. ಇದು ರೈತರ ರಕ್ಷಣೆಯಲ್ಲಿ ಅಭೂತಪೂರ್ವ ಮಟ್ಟವಾಗಿದೆ. FRP ಕೇವಲ ಕನಿಷ್ಠ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ರಾಜ್ಯಗಳು ಹೆಚ್ಚಿನ ರಾಜ್ಯ ಸಲಹಾ ಬೆಲೆ (SAP) ಘೋಷಿಸಲು ಮುಕ್ತವಾಗಿವೆ. ಆದರೆ ಕರ್ನಾಟಕದಲ್ಲಿ SAP ಅನ್ನು ಘೋಷಿಸಿಲ್ಲ.

ಇನ್ನು ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಮೂಲಕ ಸಕ್ಕರೆ ಕ್ಷೇತ್ರವನ್ನು ಬಲಪಡಿಸಿದೆ. ಇದು ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಮತ್ತು ಸ್ಥಿರ ಆದಾಯದ ಮೂಲವನ್ನು ಒದಗಿಸಿದ್ದು, ರೈತರಿಗೆ ಕಬ್ಬಿನ ಮಾರಾಟದ ಬೆಲೆಯನ್ನು ಸುಧಾರಿಸಿದೆ. ಎಥೆನಾಲ್ ಸರಬರಾಜು ವರ್ಷ 2013-14 ರಿಂದ, ಡಿಸ್ಟಿಲರಿಗಳು 2.18 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಆದಾಯ ಗಳಿಸಿವೆ. ಇದರಲ್ಲಿ ಕಬ್ಬು ಆಧಾರಿತ ಡಿಸ್ಟಿಲರಿಗಳಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ಎಥೆನಾಲ್ ಮಾರಾಟದಿಂದ 1.29 ಲಕ್ಷ ಕೋಟಿ ರೂ. ಸೇರಿದೆ. ಇದು ಸಕ್ಕರೆ ಕಾರ್ಖಾನೆಗಳ ಬಾಕಿಯನ್ನು ತ್ವರಿತವಾಗಿ ಪಾವತಿಸಲು ಮತ್ತು ರೈತರಿಗೆ ಆದಾಯದ ಸ್ಥಿರತೆಯನ್ನು ಒದಗಿಸಲು ಅನುವು ಮಾಡಿಕೊಟ್ಟಿದೆ. ಜೊತೆಗೆ ಚಿಲ್ಲರೆ ಮತ್ತು ಮುಕ್ತ ಸಕ್ಕರೆ ಮಾರುಕಟ್ಟೆಗಳಲ್ಲಿ ಬೆಲೆಯ ಸ್ಥಿರತೆಯನ್ನು ಖಚಿತಪಡಿಸಿದೆ.
ಈ ಕ್ಷೇತ್ರದಲ್ಲಿ ಕರ್ನಾಟಕ ಸಾಧಿಸಿರುವ ಪ್ರಗತಿ ಗಮನಾರ್ಹವಾಗಿದೆ. 2013 ರವರೆಗೆ, ಇಡೀ ದೇಶದಲ್ಲಿ OMC ಗಳಿಗೆ ಎಥೆನಾಲ್ ಪೂರೈಕೆಯು ಕೇವಲ 38 ಕೋಟಿ ಲೀಟರ್ ಆಗಿತ್ತು. ಮಿಶ್ರಣ ಮಟ್ಟವು ಕೇವಲ 1.53% ಇತ್ತು. ಇಂದು ಕರ್ನಾಟಕ ಮೂಲದ ಡಿಸ್ಟಿಲರಿಗಳು ESY 2024-25ರ ಅವಧಿಯಲ್ಲಿ 139.8 ಕೋಟಿ ಲೀಟರ್ ಎಥೆನಾಲ್ ಅನ್ನು ಪೂರೈಸಿವೆ. ESY 2025-26 ಕ್ಕಾಗಿ, ಕರ್ನಾಟಕ ಡಿಸ್ಟಿಲರಿಗಳಿಗೆ ಈಗಾಗಲೇ 133 ಕೋಟಿ ಲೀಟರ್ಗಳ ಹಂಚಿಕೆ ಮಾಡಲಾಗಿದೆ ಎಂದರು.

2014-15 ಮತ್ತು 2020-21ರ ನಡುವೆ, ಸಕ್ಕರೆ ಕಾರ್ಖಾನೆಗಳಲ್ಲಿ ದ್ರವ್ಯತೆ (liquidity) ಸುಧಾರಿಸಲು ಮತ್ತು ಕಬ್ಬಿನ ಬಾಕಿಗಳನ್ನು ಸಕಾಲದಲ್ಲಿ ಪಾವತಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಸರಣಿಯ ಸಮಗ್ರ ಸಹಾಯ ಯೋಜನೆಗಳನ್ನು ಜಾರಿಗೆ ತಂದಿತು. ಅವುಗಳಲ್ಲಿ ಹೆಚ್ಚಿನವು UPA ಅವಧಿಗೆ ಸಂಬಂಧಿಸಿವೆ. ಇವುಗಳಲ್ಲಿ ಬಫರ್ ಸ್ಟಾಕ್ ರಚನೆಗೆ ಬೆಂಬಲ, ರಫ್ತು ನೆರವು ಮತ್ತು ಸಾಗಣೆ ವೆಚ್ಚಗಳ ಮರುಪಾವತಿ ಸೇರಿವೆ. ಆದ್ದರಿಂದ ಕೇಂದ್ರ ಸರ್ಕಾರವು ಮೂಲ ಸಮಸ್ಯೆದಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಹೇಳುವುದು ಸರಿಯಲ್ಲ. ಇದಕ್ಕೆ ವಿರುದ್ಧವಾಗಿ, ಕೇಂದ್ರವು ಬೆಲೆ ಸ್ಥಿರತೆ ಮತ್ತು ಮಾರುಕಟ್ಟೆ ವೈವಿಧ್ಯತೆ ಎರಡನ್ನೂ ಖಚಿತಪಡಿಸಿದೆ. ಆದರೆ ಪಾವತಿ ಜಾರಿ, ನೀರಾವರಿ ಮತ್ತು ಸಬ್ಸಿಡಿ ವಿತರಣೆಯಂತಹ ಸ್ಥಳೀಯ ಅನುಷ್ಠಾನದ ಜವಾಬ್ದಾರಿಯು ರಾಜ್ಯ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ರೈತರ ಮೇಲಿನ ಹೊರೆ ಕಡಿಮೆ ಮಾಡಲು ಕೆಲಸ ಮಾಡಬೇಕಿತ್ತು ಆದರೆ ನಿಮ್ಮ ಸರ್ಕಾರವು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಆರ್ಥಿಕತೆಯ ಉತ್ಪಾದಕ ವಲಯಗಳನ್ನು ಹಿಂಡಿ ಹಾಕಿದೆ. ಸಕ್ಕರೆ ಕಾರ್ಖಾನೆಗಳಿಗೆ ನೀರು ಸರಬರಾಜು ಮತ್ತು ಲಿಫ್ಟಿಂಗ್ ಶುಲ್ಕವನ್ನು ವರ್ಷಕ್ಕೆ 5 ಲಕ್ಷದಿಂದ 1 ಕೋಟಿಗೆ ಏರಿಸಲಾಗಿದೆ. ವಿದ್ಯುತ್ ಪ್ರತಿ ಯೂನಿಟ್ಗೆ 60 ಪೈಸೆ ಎನರ್ಜಿ ಸೆಸ್ ವಿಧಿಸಲಾಗಿದೆ. ಡೀಸೆಲ್ ಮೇಲಿನ ವ್ಯಾಟ್ (VAT) ಅನ್ನು ಶೇಕಡಾ 50 ರಷ್ಟು ಹೆಚ್ಚಿಸಿದ್ದು, ಹೆಚ್ಚುವರಿ ಆದಾಯವಾಗಿ 7 ಸಾವಿರದಿಂದ 7,500 ಕೋಟಿ ರೂ ಗಳಿಸಿದೆ. 30ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇಕಡಾ 276% ರಷ್ಟು ತೆರಿಗೆಗಳೊಂದಿಗೆ, ಈ ವರ್ಷ ಕೇವಲ ಮದ್ಯದ ಅಬಕಾರಿಯಿಂದಲೇ 39 ಸಾವಿರ ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿದೆ.

ಇಂಧನ ಬೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಟನ್ಗೆ 500ರಿಂದ 550 ಮತ್ತು 750 ರಿಂದ 800 ಕ್ಕೆ ಏರಿಸಿದೆ. ಇದು ಕಬ್ಬು ಬೆಳೆಗಾರರ ಮೇಲೆ ಹೊರೆಯನ್ನು ಹೆಚ್ಚಿಸಿದೆ. ಇದಲ್ಲದೆ, ರಾಜ್ಯ ಸರ್ಕಾರವು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯಿದೆ, 2024 ರ ಅಡಿಯಲ್ಲಿ ಹೊಸ ವಾಣಿಜ್ಯ ವಾಹನಗಳ ಮೇಲೆ ಹೆಚ್ಚುವರಿ 3% ರಸ್ತೆ ತೆರಿಗೆಯನ್ನು ವಿಧಿಸಿದ್ದು, ಇದು ರೈತರಿಗೆ ಮೂಲಭೂತ ವೆಚ್ಚಗಳನ್ನು ಹೆಚ್ಚಿಸಿದೆ ಎಂದು ಪ್ರಹ್ಲಾದ್ ಜೋಷಿ ಪತ್ರ ಬರೆದಿದ್ದಾರೆ.

ನೆರೆಯ ರಾಜ್ಯವಾದ ಮಹಾರಾಷ್ಟ್ರವು ಇತ್ತೀಚೆಗೆ ಏಪ್ರಿಲ್ 2025 ರಲ್ಲೇ ತನ್ನ ಕೊನೆಯ ವಿದ್ಯುತ್ ಖರೀದಿ ಒಪ್ಪಂದವನ್ನು (PPA) ಜಾರಿಗೆ ತಂದಿದೆ. ಆದರೆ ಕರ್ನಾಟಕದಲ್ಲಿ PPA 2017-18ರಲ್ಲೇ ಕೊನೆದು. PPA ಗಳು ಸಹ-ಉತ್ಪಾದನಾ ಘಟಕಗಳಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಭರವಸೆಯ ಆದಾಯವನ್ನು ಒದಗಿಸುತ್ತವೆ. ಇದರಿಂದಾಗಿ ಅವುಗಳಿಗೆ ಬ್ಯಾಂಕ್ ಹಣಕಾಸು ಪಡೆಯಲು ಅನುವು ಮಾಡಿಕೊಡುತ್ತವೆ. ಕರ್ನಾಟಕದಲ್ಲಿ ಹೊಸ PPA ಗಳ ಕೊರತೆಯು ಅದರ ಸಕ್ಕರೆ ಕಾರ್ಖಾನೆಗಳನ್ನು ಸ್ಥಿರ ಆದಾಯದ ಮೂಲದಿಂದ ವಂಚಿತಗೊಳಿಸಿದೆ. ಇದರ ಜೊತೆಗೆ, ವಿದ್ಯುತ್ ದರವನ್ನು ಮೊದಲು ಏಪ್ರಿಲ್ 2023ರಲ್ಲಿ (ಪ್ರತಿ ಯೂನಿಟ್ಗೆ ಸುಮಾರು 70 ಪೈಸೆ) ಏಪ್ರಿಲ್ 2025ರಲ್ಲಿ (ಸರ್ಚಾರ್ಜ್ ಆಗಿ ಪ್ರತಿ ಯೂನಿಟ್ಗೆ 36 ಪೈಸೆ) ಎರಡು ಬಾರಿ ಹೆಚ್ಚಿಸಲಾಗಿದೆ. ಇಂತಹ ಅನಿಯಂತ್ರಿತ ವೆಚ್ಚ ಏರಿಕೆಗಳು ಸಕ್ಕರೆ ಕಾರ್ಖಾನೆಗಳ ಕಾರ್ಯಸಾಧ್ಯತೆಯನ್ನು ಮತ್ತು ವಿಸ್ತರಣೆಯ ಮೂಲಕ ರೈತರ ಆದಾಯ ಭದ್ರತೆಯನ್ನು ಮತ್ತಷ್ಟು ಕುಗ್ಗಿಸಿವೆ ಎಂದಿದ್ದಾರೆ














