ಭಾಗ-೧: ವಚನ ಚಳುವಳಿಯ ಪುನರುತ್ಥಾನ ಇಂದಿನ ತುರ್ತು ಅಗತ್ಯ
~ ಡಾ. ಜೆ ಎಸ್ ಪಾಟೀಲ.
ಈ ಉಪಖಂಡವು ಆರ್ಯ ವಲಸಿಗರ ಅತಿಕ್ರಮಣ ಪೂರ್ವ ಮತ್ತು ಅತಿಕ್ರಮಣೋತ್ತರ ಕಾಲಘಟ್ಟದಲ್ಲಿ ಇಲ್ಲಿ ಮೌಖಿಕವಾಗಿ ಹಲವು ಬಗೆಯ ವೈವಿದ್ಯಮಯ ಜನಪದೀಯ ಆಚರಣೆಗಳು ಅಸ್ತಿತ್ವದಲ್ಲಿದ್ದವು. ಈ ಜನಪದೀಯ ಆಚರಣೆಗಳು ಗ್ರಾಂಥಿಕ ಸ್ವರೂಪದಲ್ಲಿರದೆಯೂ ಪರಂಪರಾಗತವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿವೆ. ಪೂರ್ವದಿಂದಲೂ ಈ ನೆಲದಲ್ಲಿ ಬಹುತ್ವದ ಚಿಂತನೆ ಹಾಸುಹೊಕ್ಕಾಗಿ ಇತ್ತು. ಪ್ರಾಚೀನ ಕಾಲದಿಂದ ಮೊದಲ್ಗೊಂಡು ಇಂದಿನ ಅಧುನಿಕ ಕಾಲದ ವರೆಗೂ ವಿವಿಧತೆಯಲ್ಲಿ ಭಾರತವನ್ನು ಮೀರಿಸುವ ಇನ್ನೊಂದು ರಾಷ್ಟ್ರ ಜಗತ್ತಿನ ಕಾಣಲಾರೆವು. ಈ ನೆಲದಲ್ಲಿ ಸುಮಾರು ೨೦ˌ೦೦೦ ಕ್ಕೂ ಮಿಕ್ಕು ಮಾತೃಭಾಷೆಗಳುˌ ಸುಂದರ ಸಂಸ್ಕ್ರತಿಗಳ ಪ್ರಾದೇಶಿಕ ವೈವಿಧ್ಯಗಳು, ಭೌಗೋಳಿಕ ಭೂಸಿರಿಗಳುˌ ಸಾವಿರಾರು ವರ್ಷಗಳ ಅವಿಚ್ಛಿನ್ನ ಇತಿಹಾಸ, ವಿಭಿನ್ನ ಜಾತಿˌ ಜನಾಂಗˌ ಮತ್ತು ಸಮುದಾಯಗಳ ಆಗರ ಈ ನೆಲ.
ಹೀಗೆ ವಿವರಿಸಲಾಗದಷ್ಟು ಅಘಾದವಾಗಿರುವ ಈ ನೆಲದ ಸಂಸ್ಕೃತಿ ಮತ್ತು ನಾಗರಿಕತೆಯ ರೂಪುಗೊಳ್ಳುವಿಕೆಯಲ್ಲಿ ಇಲ್ಲಿನ ಎಲ್ಲ ಜನಾಂಗದ ಕೊಡುಗೆಯಿದೆ. ಈ ಭೂಖಂಡದಲ್ಲಿ ಕಾಲಕಾಲಕ್ಕೆ ಘಟಿಸಿಹೋದ ಮಹತ್ತರ ವೈಚಾರಿಕ ಮನ್ವಂತರಗಳುˌ ಚಳುವಳಿಗಳುˌ ವಾಗ್ವಾದಗಳುˌ ಶ್ರವಣಧಾರೆಗಳು ಇಡೀ ಜಗತ್ತನ್ನೇ ಬೆರಗುಗೊಳಿಸುವಷ್ಟು ಪ್ರಖರವಾಗಿವೆ. ಈ ಎಲ್ಲ ವಿಭಿನ್ನತೆಗಳ ಹೊರತಾಗಿಯೂ ಇಲ್ಲಿ ದೊಡ್ಡಮಟ್ಟದ ನಾಗರಿಕ ಕಲಹಗಳಾಗಲಿˌ ಅಂತರ್ ಯುದ್ಧಗಳಾಗಲಿ ಘಟಿಸಿದ ದೃಷ್ಟಾಂತಗಳು ಅಪರೂಪ. ಎಲ್ಲರೂ ಕೂಡಿ ಬಾಳುವ ಸಮಷ್ಟಿ ಪ್ರಜ್ಞೆˌ ಸಹನೆˌ ಸೌಹಾರ್ದತೆˌ ಸಹಿಷ್ಣತೆ ಮತ್ತು ಪರಸ್ಪರ ಗೌರವಾದರˌ ಪ್ರೀತಿ-ಪ್ರೇಮಗಳೇ ಈ ನೆಲದ ಅಂತಃಶಕ್ತಿಯಾಗಿ ಅದನ್ನು ಇವತ್ತಿನ ವರೆಗೆ ಉಳಿಸಿˌ ಜಗತ್ತಿನ ದೈತ್ಯ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಎದ್ದು ನಿಲ್ಲಿಸಿವೆ. ಒಬ್ಬರನ್ನು ಮುಗಿಸಿ ಮತ್ತೊಬ್ಬರು ಬದುಕುವ ಸ್ವಾರ್ಥ ಸಂಸ್ಕ್ರತಿ ಭಾರತದ ಮೂಲ ಗುಣ ಲಕ್ಷಣಲ್ಲ.
ವಿಭಿನ್ನ ಜನಾಂಗಗಳೆಲ್ಲ ಸಮರಸದಿಂದ ಕೂಡಿ ಬಾಳುವ ಕ್ರಮಗಳೇ ಇಲ್ಲಿನ ಪ್ರಜಾಪ್ರಭುತ್ವದ ಅಡಿಪಾಯ. ನಮ್ಮ ಹಳ್ಳಿಗಳಲ್ಲಿ ಅಲ್ಪಸಂಖ್ಯಾತರ ಮನೆಗಳಲ್ಲಿ ಗ್ರಾಮ ದೇವತೆಗಳ ಪೂಜೆ ನಡೆಯುತ್ತಿದ್ದರೆ ಬಹುಸಂಖ್ಯಾತರ ಮನೆಗಳಲ್ಲಿ ಸೂಫಿ ಸಂತರ ಆರಾಧನೆ ನಡೆಯುತ್ತವೆ. ಆದರೆ ಇತ್ತೀಚಿಗೆ ಈ ಬಹುತ್ವ ಸಂಸ್ಕೃತಿಯನ್ನು ಅಳಿಸಿಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಕೋಮುವಾದಿ ರಾಜಕೀಯ ಚಟುವಟಿಕೆಗಳು ಮತ್ತು ನಕಲಿ ಸಂಸ್ಕೃತಿ ರಕ್ಷಕ ಶಕ್ತಿಗಳು ಈ ದೇಶದ ಮೂಲ ಶಕ್ತಿಯಾಗಿರುವ ಜಾತ್ಯಾತೀತತೆˌ ಹಾಗೂ ಬಹುಸಂಸ್ಕ್ರತಿಯ ಅಡಿಪಾಯವನ್ನು ಶಿಥಿಲಗೊಳಿಸುತ್ತಿವೆ. ಅಂದಿನಿಂದ ಇಂದಿನವರೆಗೆ ಈ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತ ಹೀಗೆ ಬೆಳೆದು ನಿಂತಿದೆ. ಆಗಿನಿಂದಲೂ ಈ ಪ್ರತಿಗಾಮಿ ಶಕ್ತಿಗಳು ದೇಶದ ಅಭಿವೃದ್ಧಿಗೆ ಕಾಲ್ತೊಡಕಾಗಿ ಕೆಲಸ ಮಾಡಿವೆ. ಇಲ್ಲಿನ ಬಹುತ್ವ ಪರಂಪರೆಯ ನಾಶಕ್ಕೆ ಅರ್ಹನಿಶಿ ಪ್ರಯತ್ನಿಸಿವೆ.
ರಾಜಪ್ರಭುತ್ವದ ಅಂತ್ಯದ ನಂತರ ಇಂದಿನ ಪ್ರಜಾಪ್ರಭುತ್ವದಲ್ಲಿ ಇಲ್ಲಿನ ಬಹುತ್ವ ಚಿಂತನೆಗಳನ್ನು ನಾಶಗೊಳಿಸುವ ಹುನ್ನಾರಗಳು ಮರಳಿ ಮುನ್ನೆಲೆಗೆ ತರುವ ಮೂಲಕ ದೇಶವನ್ನು ಶಿಲಾಯುಗಕ್ಕೆ ಮರಳಿ ಕೊಂಡೊಯ್ಯುವ ದುಸ್ಸಾಹಸ ಆರಂಭಗೊಂಡಿವೆ. ಸರ್ವಸಂಗ ಪರಿತ್ಯಾಗಿಗಳಂತೆ ವರ್ತಿಸುವ ಸನ್ಯಾಸಿಗಳುˌ ಧಾರ್ಮಿಕ ಮುಖಂಡರುˌ ಮಠಾಧೀಪತಿಗಳುˌ ಹಾಗೂ ನಕಲಿ ಬಾಬಾಗಳು ಈಗ ರಾಜಕೀಯ ಪಕ್ಷಗಳನ್ನು ಮತ್ತು ಜನರಿಂದ ಚುನಾಯಿಸಲ್ಪಟ್ಟ ಸರಕಾರವನ್ನು ನಿಯಂತ್ರಿಸುವ ಅಪಾಯಕಾರಿ ಮಟ್ಟದಲ್ಲಿ ಬೆಳೆದಿದ್ದಾರೆ. ಶತಮಾನಗಳಿಂದ ಶೋಷಣೆಗೊಳಗಾದ ಈ ನೆಲದ ಮೂಲನಿವಾಸಿಗಳ ಏಳಿಗೆಗಾಗಿ ಅಂಗೀಕರಿಸಲ್ಪಟ್ಟ ಭಾರತದ ಸಂವಿಧಾನದ ಬಗ್ಗೆ ಜನರಲ್ಲಿ ಅಸಹನೆˌ ಅಪನಂಬಿಕೆಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ವೈಜ್ಞಾನಿಕ ಸಮಾವೇಶಗಳನ್ನು ಶಂಖ ಊದುವ ಮೂಲಕ ಉದ್ಘಾಟಿಸಿ ವಿಜ್ಞಾನರಂಗದಲ್ಲೂ ಧಾರ್ಮಿಕ ಮೌಢ್ಯಗಳನ್ನು ಬಿತ್ತಲಾಗುತ್ತಿದೆ.
ದೇಶದ ಪ್ರತಿಭಾವಂತ ಯುವಕರಿಗೆ ಜ್ಞಾನ ನೀಡುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ˌ ಸಾವಿರಾರು ಜನರಿಗೆ ಅನ್ನ ಆಶ್ರಯ ನೀಡುತ್ತಿರುವ ಸಾರ್ವಜನಿಕ ಉದ್ಯಮಗಳನ್ನು ಹಾಗೂ ವಿವಿಧ ಸಾಂವಿಧಾನಿಕ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆ. ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಸಾಂಘಿಕ ಲೂಟಿˌ ಅಲ್ಪಸಂಖ್ಯಾತರುˌ ಹಿಂದುಳಿದವರುˌ ಮತ್ತು ದಲಿತರ ಮೇಲೆ ಹಲ್ಲೆಗಳುˌ ಗುಂಪು ಗೂಂಡಾಗಿರಿಗಳು ಮಿತಿ ಮೀರುತ್ತಿವೆ. ಈ ರೀತಿಯಾಗಿ ಕೋಮುವಾದಿ ಶಕ್ತಿಗಳು ದೇಶದ ಸಂಸ್ಕ್ರತಿಯನ್ನು ನಾಶಗೊಳಿಸುವ ಕಾರ್ಯ ಮಾಡುತ್ತಿವೆ. ಇಂತಹ ಸಂದಿಗ್ಧತೆಗಳ ನಡುವೆಯೂ ಈ ನೆಲದ ಸಂವೇದನಾಶೀಲ ಸಾಮಾನ್ಯ ಜನತೆ ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಿಕೊಳ್ಳುತ್ತಲೆ ಭಾರತವನ್ನು ನಿರಂತರವಾಗಿ ರಕ್ಷಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ ಈ ನೆಲವು ಪ್ರಾಚೀನ ಕಾಲದಿಂದಲೂ ಅನೇಕ ಪ್ರತಿರೋಧದ ಚಳುವಳಿಗಳನ್ನು ಕಂಡಿದೆ.
ಲಿಂಗಾಯತ ವಿಚಾರಧಾರೆ ಮತ್ತು ಬಹುತ್ವದ ಚಿಂತನೆ
ಇಂತಹ ವಿಷಮ ಸಂದರ್ಭದಲ್ಲಿ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಾಯತ ವಿಚಾರಧಾರೆಯನ್ನು ಹಾಗು ವಚನ ಚಳುವಳಿ ಮಾದರಿಯಲ್ಲಿ ಜನಪರ ಚಳುವಳಿಯನ್ನು ಮತ್ತೆ ಭಾರತದಲ್ಲಿ ಮರುಸ್ಥಾಪಿಸುವುದು ಈಗ ಹಿಂದೆಂದಿಗಿಂತ ಹೆಚ್ಚು ಅಗತ್ಯವಿದೆ. ಅಂದು ಬಸವಣ್ಣ ಹಾಗು ಅಸಂಖ್ಯಾತ ಶರಣರು ಕಲ್ಯಾಣದಲ್ಲಿ ಆರಂಭಿಸಿದ್ದು ನೈಜ ಅರ್ಥದಲ್ಲಿ ಬಹುಜನ ಚಳುವಳಿಯೆ. ಸಾಂಸ್ಕ್ರತಿಕˌ ಆರ್ಥಿಕˌ ಶೈಕ್ಷಣಿಕˌ ಧಾರ್ಮಿಕ ಮತ್ತು ಸಾಮಾಜಿಕ ಯಜಮಾನಿಕೆಯು ಮೇಲ್ವರ್ಗದ ವೈದಿಕರ ಕಪಿಮುಷ್ಟಿಯಲ್ಲಿದ್ದು ಈ ನೆಲದ ನೈಜ ವಾರಸುದಾರರು ಪಶುಗಳಿಗಿಂತ ಕೀಳಾಗಿ ಕಾಣಲ್ಪಡುತ್ತಿದ್ದ ಸಂದರ್ಭದಲ್ಲಿ ಬಸವಾದಿ ಶರಣರು ಸಮಸಮಾಜ ನಿರ್ಮಾಣಕ್ಕಾಗಿ ಬಹುಜನ ಚಳುವಳಿ ಆರಂಭಿಸಿದ್ದರು. ಆ ಚಳುವಳಿಯು ಬಹುತ್ಪದ ರಕ್ಷಣೆˌ ಬಹುಜನರ ಕಲ್ಯಾಣ ಮತ್ತು ಜನತಂತ್ರದ ಪ್ರತಿಷ್ಠಾಪನೆಯ ಉದ್ದೇಶ ಹೊಂದಿತ್ತು.
ಇಂದಿನ ಪ್ರಜಾಪ್ರಭುತ್ವದಲ್ಲಿ ಸಂಸ್ಕ್ರತಿಯ ಹೆಸರಿನಲ್ಲಿ ಪ್ರಭುತ್ವವನ್ನು ನಿಯಂತ್ರಿಸುತ್ತಿರುವ ಪಟ್ಟಭದ್ರ ಶಕ್ತಿಗಳು ನಿರ್ಭಯವಾಗಿ ನಿರಂಕುಶತನದಿಂದ ಜನರ ಮೇಲೆ ಏಕ ಸಂಸ್ಕ್ರತಿ ಹೇರುತ್ತಿದ್ದಾರೆ. ಈ ಹೇರುವಿಕೆ ಹನ್ನೆರಡನೇ ಶತಮಾನದಲ್ಲಿ ಕೂಡ ಅಸ್ತಿತ್ವದಲ್ಲಿತ್ತು. ವೈದಿಕರ ಈ ಹೇಯ ಕೃತ್ಯದ ವಿರುದ್ಧ ಬಸವಣ್ಣನವರ ನೇತ್ರತ್ವದಲ್ಲಿ ಬಹುಜನರೆಲ್ಲ ಸಂಘಟಿತರಾಗಿ ಕಟ್ಟಿದ ಚಳುವಳಿಯೆ ಲಿಂಗಾಯತ ವಿಚಾರಧಾರೆ. ಕಲ್ಯಾಣದಲ್ಲಿ ಅಂದು ಸ್ಪೋಟಗೊಂಡ ಶರಣರ ಕ್ರಾಂತಿ ಅದೊಂದು ಸರ್ವಾಂಗೀಣ ಪ್ರಗತಿಗಾಗಿನ ಬಹುಮುಖಿ ಚಿಂತನೆಯ ಚಳುವಳಿಯಾಗಿತ್ತು. ಇಲ್ಲಿನ ಬಹುತ್ವ ಚಿಂತನೆಯನ್ನು ನಾಶಪಡಿಸಲೆತ್ನಿಸುತ್ತಿದ್ದ ಕರ್ಮಟ ಶಕ್ತಿಗಳ ಕೈಯಿಂದ ಈ ನೆಲವನ್ನು ರಕ್ಷಿಸುವುದೆ ಶರಣ ಚಳುವಳಿಯ ಬಹುಮುಖ್ಯ ಆಶಯವಾಗಿತ್ತು. ಹಾಗಾಗಿ ಈ ನೆಲದಲ್ಲಿ ಆಗಿನ್ನೂ ರಾಷ್ಟ್ರದ ಸ್ಪಷ್ಟ ಪರಿಕಲ್ಪನೆ ಕುಡಿಯೊಡೆಯುವ ಮುನ್ನವೆ ವಚನ ಚಳುವಳಿಯು ನೈಜದಲ್ಲಿ ಒಂದು ರಾಷ್ಟ್ರೀಯವಾದಿ ಚಳುವಳಿಯಾಗಿ ಹೊರಹೊಮ್ಮಿತ್ತು.
ಮುಂದುವರೆಯುವುದು….