ಲೋಕಸಭೆಯಲ್ಲಿ ಭದ್ರತಾ ಲೋಪ ಎಸಗಿರುವ ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮನೋರಂಜನ್ ಡಿ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನನ್ನ ಮಗ ಒಳ್ಳೆಯವನು ಮತ್ತು ಪ್ರಾಮಾಣಿಕ ಎಂದು ಮನೋರಂಜನ್ ತಂದೆ ದೇವರಾಜ್ ಡಿ ಅವರು ಹೇಳಿದ್ದಾರೆ.
ʻಆತ ಒಂದು ವೇಳೆ ಏನಾದರೂ ತಪ್ಪು ಮಾಡಿದ್ದರೆ ಆತ ನನ್ನ ಮಗ ಅಲ್ಲ. ಆದರೆ ಅವನು ಒಳ್ಳೆಯವನು. ಅವನು ದೆಹಲಿಯಲ್ಲಿ ಇದ್ದ ಎನ್ನುವುದು ನನಗೆ ಗೊತ್ತಿಲ್ಲ. ಅವನು ಕಾಲೇಜಿನಲ್ಲಿದ್ದಾಗ ವಿದ್ಯಾರ್ಥಿ ನಾಯಕನಾಗಿದ್ದ. ಆತನ ಕೃತ್ಯವನ್ನು ನಾನು ಖಂಡಿಸುತ್ತೇನೆʼ ಎಂದು ದೇವರಾಜ್ ಡಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಲೋಕಸಭೆಯೊಳಗೆ ಮನೋರಂಜನ್ ಕೃತ್ಯ ಎಸಗಿದ ಬೆನ್ನಲ್ಲೇ ಮೈಸೂರು ನಗರದ ವಿಜಯನಗರ ಪೊಲೀಸರು ಆತನ ಮನೆಗೆ ತೆರಳಿ ಮಾಹಿತಿ ಪಡೆದರು.
ʻನಾಲ್ಕು ದಿನಗಳ ಹಿಂದೆ ನಾನು ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೊರಟ್ಟಿದ್ದ. ಈ ಕೃತ್ಯದ ಬಳಿಕ ನನಗೆ ಸ್ನೇಹಿತರು ಮತ್ತು ಸಂಬಂಧಿಗಳಿಂದ ಫೋನ್ ಬಂದಿದೆ. ನಾನೂ ಮಗನಿಗೆ ಫೋನ್ ಮಾಡಲು ಯತ್ನಿಸಿದ್ದೆ, ಆದರೆ ಆತ ಸಂಪರ್ಕಕ್ಕೆ ಸಿಗ್ತಿಲ್ಲ. ನನಗೆ ಆಘಾತವಾಗಿದೆ. ನನ್ನ ಮಗ ಪ್ರಾಮಾಣಿಕ ಮತ್ತು ಒಳ್ಳೆಯ ಮಗ. ಆದರೆ ಆತ ಲೋಕಸಭೆಯೊಳಗೆ ನುಗ್ಗಿದ್ದನ್ನು ಖಂಡಿಸುತ್ತೇನೆʼ ಎಂದು ದೇವರಾಜ್ ಡಿ ಅವರು ಹೇಳಿದ್ದಾರೆ.
35 ವರ್ಷದ ಮನೋರಂಜನ್ಗೆ ಮದುವೆ ಆಗಿರಲಿಲ್ಲ. ಈತ ತನ್ನ ತಂದೆಯೊಂದಿಗೆ ಊರಲ್ಲಿ ಕೃಷಿ ಮಾಡುತ್ತಿದ್ದ. ಅದಕ್ಕೂ ಮೊದಲು ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ನನ್ನ ಮಗ ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದ. ಅದರಲ್ಲೂ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದ. ಕಾಲೇಜು ದಿನಗಳಲ್ಲೇ ವಿದ್ಯಾರ್ಥಿ ನಾಯಕನಾಗಿದ್ದ ಈತ ಸಮಾಜ ಸುಧಾರಣೆ ಬಗ್ಗೆ ಆಲೋಚನೆ ಮಾಡ್ತಿದ್ದ
ಎಂದು ತಂದೆ ದೇವರಾಜ್ ಅವರು ಹೇಳಿದ್ದಾರೆ.