ರಕ್ಷಾ ಬಂಧನ ಹಬ್ಬಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನ ಸಹೋದರಿ ಖಮರ್ ಮೊಹಿನ್ ಶೇಖ್ ದೆಹಲಿಗೆ ಆಗಮಿಸಿ ರಾಖಿ ಕಟ್ಟಲಿದ್ದಾರೆ.
“ಕೋವಿಡ್ ಕಾರಣದಿಂದ ಕಳೆದ 2-3 ವರ್ಷಗಳಿಂದ ಮೋದಿ ಅವರನ್ನು ಭೇಟಿಯಾಗಿ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಈ ವರ್ಷ ನಾನು ನನ್ನ ಕೈಯಾರೆ ತಯಾರಿಸಿದ ರಾಖಿ ಹಾಗೂ ಕೃಷಿ ಸಂಬಂಧಿ ಪುಸ್ತಕದೊಂದಿಗೆ ದೆಹಲಿಗೆ ತೆರಳಲಿದ್ದೇನೆ” ಎಂದು ಖಮರ್ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ ಎಂದು ಮಂಗಳವಾರ (ಆಗಸ್ಟ್ 22) ವರದಿಯಾಗಿದೆ.
“ರಕ್ಷಾ ಬಂಧನ ಪ್ರಯುಕ್ತ ನಾನು ಅವರಿಗೆ ವಿಶೇಷವಾಗಿ ಕೆಂಪು ಬಣ್ಣದ ರಾಖಿ ಮಾಡಿದ್ದೇನೆ. ಕೆಂಪು ಬಣ್ಣವನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೊದಲು, ನಾನು ಅವರನ್ನು ಗುಜರಾತ್ನ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿದ್ದೆ. ಅದು ನೆರವೇರಿದೆ. ಬಳಿಕ ನಾನು ರಾಖಿ ಕಟ್ಟಿದಾಗಲೆಲ್ಲ ಅವರು ಪ್ರಧಾನಿಯಾಗಬೇಕು ಎಂಬ ನನ್ನ ಆಸೆಯನ್ನು ವ್ಯಕ್ತಪಡಿಸುತ್ತಿದ್ದೆ. ಅವರ ಪ್ರತಿಕ್ರಿಯೆ ಯಾವಾಗಲೂ ಸಕಾರಾತ್ಮಕವಾಗಿತ್ತು, ನಿಮ್ಮ ಎಲ್ಲಾ ಆಸೆಗಳನ್ನು ದೇವರು ಪೂರೈಸುತ್ತಾನೆ ಎನ್ನುತ್ತಿದ್ದರು ಈಗ ಪ್ರಧಾನಿಯಾಗಿ ಭಾರತದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ” ಎಂದು ಖಮರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಖಮರ್ ಅವರು ಮದುವೆಯಾದ ಮೇಲೆ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ವಾಸವಿದ್ದಾರೆ.
ಕಳೆದ 30 ವರ್ಷಗಳಿಂದ ಪ್ರಧಾನಿ ಮೋದಿ ಅವರಿಗೆ ಖಮರ್ ಅವರು ರಾಖಿ ಕಟ್ಟುತ್ತಿದ್ದಾರೆ ಎಂದು ಎಎನ್ಐ ವರದಿ ತಿಳಿಸಿದೆ. ರಕ್ಷಾ ಬಂಧನ ಎಂದು ಕರೆಯುವ ರಾಖಿ ಹಬ್ಬ ಸಹೋದರ ಸಹೋದರಿಯರ ಹಬ್ಬವಾಗಿದೆ. ಸಹೋದರರ ಕೈಗಳಿಗೆ ರಾಖಿ ಕಟ್ಟಿ ಸಹೋದರಿಯರು ಶುಭ ಹಾರೈಸುತ್ತಾರೆ. ಈ ಬಾರಿ ಆಗಸ್ಟ್ 30ರಂದು ಹಬ್ಬವನ್ನು ಆಚರಿಸಲಾಗುತ್ತಿದೆ.