ಐಸಿಸಿ.. ಕ್ರಿಕೆಟ್ ಜಗತ್ತಿಗೆ ಬಾಸ್.. ಬಿಸಿಸಿಐ ವಿಶ್ವಕ್ರಿಕೆಟ್ನ ಲಕ್ಷ್ಮೀ ಪುತ್ರ.. ಕುಬೇರ.. ದೊಡ್ಡಣ್ಣ..! ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಿಂದಿನಿಂದಲೂ ಬಂದಿರುವ ಒಂದು ನಿಯಮ ಇದೆ. ಅದು ಯಾವುದೇ ಕ್ರಿಕೆಟ್ ಸಂಸ್ಥೆಯಾಗಿರಲಿ.. ಆ ದೇಶದ ಸರ್ಕಾರ ಕ್ರಿಕೆಟ್ ಸಂಸ್ಥೆಯಲ್ಲಿ ಕಡ್ಡಿ ಅಲ್ಲಾಡಿಸುವಂತಿಲ್ಲ.

ಒಂದು ವೇಳೆ ಕ್ರಿಕೆಟ್ ಸಂಸ್ಥೆಯ ಆಡಳಿತದಲ್ಲಿ ಅಲ್ಲಿನ ಸರ್ಕಾರ ಭಾಗಿಯಾದ್ರೆ ಅಂತಹ ಕ್ರಿಕೆಟ್ ಸಂಸ್ಥೆಗೆ ನಿಷೇಧ ವಿಧಿಸುವ ಸರ್ವಾಧಿಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ಇದೆ. ಈ ಹಿಂದೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆಗಳ ಮೇಲೆ ಅಲ್ಲಿನ ಸರ್ಕಾರ ಹಸ್ತಕ್ಷೇಪ ಮಾಡಿದಾಗ ಯಾವುದೇ ಮುಲಾಜಿಲ್ಲದೆ ನಿಷೇಧಕ್ಕೆ ಒಳಪಡಿಸಿದ್ದ ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ.

ಆದರೆ ಇವತ್ತು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಐಸಿಸಿ ನಿಯಮಗಳು ಪಾಲನೆ ಆಗುತ್ತಿಲ್ಲ ಯಾಕೆ..? ಪಾಕ್ ಕ್ರಿಕೆಟ್ ಮಂಡಳಿಯಂತೂ ಸಂಪೂರ್ಣವಾಗಿ ಪಾಕ್ ಸರ್ಕಾರದ ಕೈಗೊಂಬೆಯಾಗಿದೆ. ಹಾಗೇ ಬಾಂಗ್ಲಾ ದೇಶದ ಕ್ರಿಕೆಟ್ ಮಂಡಳಿಯೂ ಬಾಂಗ್ಲಾ ದೇಶದ ಸರ್ಕಾರದ ಕಪಿಮುಷ್ಠಿಯಲ್ಲಿದೆ.

ನಿಜ, 2026ರ ಟಿ-20 ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವುದು ಭಾರತ ಮತ್ತು ಶ್ರೀಲಂಕಾ. ಅಂದ ಹಾಗೇ, ಶ್ರೀಲಂಕಾದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನದ ಆಟಗಾರರಿಗೆ ರಕ್ಷಣೆ ಇದೆ. ಆದ್ರೆ ಭಾರತದಲ್ಲಿ ಮಾತ್ರ ಅಣ್ತಮ್ಮಸ್ಗೆ ಭದ್ರತೆಯ ಬಗ್ಗೆ ನಂಬಿಕೆ ಇಲ್ವಂತೆ…! ಅಷ್ಟಕ್ಕೂ ಭಾರತದಲ್ಲಿ ಪಾಕ್ ಆಡಲ್ಲ ಅನ್ನೋದಕ್ಕೆ ಬಲವಾದ ಕಾರಣಗಳಿವೆ. ಯಾಕಂದ್ರೆ ಪಾಕ್ ನೆಲದಲ್ಲಿ ಭಾರತ ಆಡಲ್ಲ. ದ್ವೀಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲ. ಹೀಗಾಗಿ ಪಾಕ್ ಭಾರತದ ನೆಲದಲ್ಲಿ ಆಡುವುದಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳುವಂತಹುದ್ದೇ. ಆದ್ರೆ ಬಾಂಗ್ಲಾಗೆ ಏನಾಗಿದೆ…?

ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಅಧಿಕಾರ ಚಲಾಯಿಸುತ್ತಿರುವುದು ಪಾಕಿಸ್ತಾನ ಬೆಂಬಲದ ಸರ್ಕಾರ. ಹೀಗಾಗಿ ಬಾಂಗ್ಲಾದೇಶಕ್ಕೆ ಕಿವಿಹಿಂಡಿ ಭಾರತದ ವಿರುದ್ಧ ದ್ವೇಷ ಕಾರುವಂತೆ ಮಾಡಿರೋದು ಪಾಕಿಸ್ತಾನ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕಾರಣದಿಂದಲೇ ಬಾಂಗ್ಲಾದೇಶ ಭಾರತದಲ್ಲಿ ಆಡಲ್ಲ. ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಐಸಿಸಿ ಮೇಲೆ ಒತ್ತಡ ಹೇರಿತ್ತು. ಪಾಪ ಪಾಕ್ ಮಾತನ್ನು ನಂಬಿದ್ದ ಬಾಂಗ್ಲಾದೇಶ ಟಿ-20 ವಿಶ್ವಕಪ್ನಿಂದಲೇ ಗೇಟ್ ಪಾಸ್ ಪಡೆದುಕೊಂಡಿತ್ತು. ಪರಿಣಾಮ, ಬಾಂಗ್ಲಾದೇಶದ ನೆರವಿಗೆ ಬಂದಿದ್ದು ಪಾಕ್ ಸರ್ಕಾರ. ಬಾಂಗ್ಲಾ ಮನವಿಯನ್ನು ತಿರಸ್ಕರಿಸಿದ್ದ ಐಸಿಸಿ ಮೇಲೆ ಪಾಕ್ ಒತ್ತಡ ಹೇರಿತ್ತು.
ಹಿಂದೆ ಮುಂದೆ ಯೋಚನೆ ಮಾಡದೇ ಐಸಿಸಿ ಮೇಲೆ ಪ್ರಬಲ ಅಸ್ತ್ರವನ್ನೇ ಪ್ರಯೋಗಿಸಿದ್ದ ಪಾಕ್, ಭಾರತ ವಿರುದ್ಧದ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಹೇಳಿತ್ತು. ಹೀಗಾಗಿ ಈ ಫೆಬ್ರವರಿ 15ರಂದು ನಡೆಯಲಿರುವ ಇಂಡೋ ಪಾಕ್ ಪಂದ್ಯಕ್ಕೆ ಗ್ರಹಣ ಬಡಿದಿತ್ತು. ಕೊನೆಗೂ ಮಾತುಕತೆ, ಸಂಧಾನದ ಮೂಲಕ ಪಾಕಿಸ್ತಾನ ಭಾರತದ ವಿರುದ್ಧ ಆಡಲು ಒಪ್ಪಿಕೊಂಡಿತ್ತು. ಸದ್ಯ ಫೆಬ್ರವರಿ 15ರಂದು ನಡೆಯುವುದು ಬರೀ ಕ್ರಿಕೆಟ್ ಪಂದ್ಯವಲ್ಲ. ರಣಘೋರ ಯುದ್ಧವೂ ಅಲ್ಲ.. ಅಲ್ಲಿ ಬ್ಯಾಟ್ – ಬಾಲ್ನ ಸದ್ದಿಗಿಂತ ಜಾಸ್ತಿ ನಡೆಯುವುದು ಝಣ ಝಣ ಕಾಂಚಾಣದ ಪ್ರವಾಹ…!

ಮೇಲ್ನೋಟಕ್ಕೆ ಪಾಕ್ ವಿರುದ್ಧ ಆಡಿದ್ರೆ ಬಿಸಿಸಿಐಗೆ ಸಿಗೋದು ಚಿಲ್ರೆ ಕಾಸು.. ಆದ್ರೆ ಐಸಿಸಿಗೆ ಹಾಗಲ್ಲ. ಟೂರ್ನಿಯ ವೆಚ್ಚವನ್ನು ನಿಭಾಯಿಸಿಕೊಂಡು ಬೊಕ್ಕಸವನ್ನು ತುಂಬಿಸುವಂತಹ ಪಂದ್ಯ. ಅದೇ ಪಾಕಿಸ್ತಾನಕ್ಕೆ ಭಾರತದ ವಿರುದ್ದದ ಒಂದೇ ಒಂದು ಪಂದ್ಯದಿಂದ ಇಡೀ ವರ್ಷದ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಅಕೌಂಟ್ನಲ್ಲಿ ದುಡ್ಡು ಉಳಿಸುವಂತಹ ಮ್ಯಾಚ್..! ಹಾಗಾಗಿಯೇ ಪದೇ ಪದೇ ಪಾಕ್ ಕ್ರಿಕೆಟ್ ಮಂಡಳಿ ಭಾರತದ ವಿರುದ್ದ ಪಂದ್ಯವನ್ನು ಆಡಿಸುವಂತೆ ಐಸಿಸಿ ಮೇಲೆ ಒತ್ತಡ ಹೇರುತ್ತಿರುವುದು. ಈ ನಡುವೆ ಕ್ರಿಕೆಟ್ ಜಗತ್ತಿಗೆ ದೊಡ್ಡಣ್ಣನಾದ್ರೂ ಬಿಸಿಸಿಐ ಪದೇ ಪದೇ ಪಾಕಿಸ್ತಾನ ವಿರುದ್ಧ ಸಂಧಾನ ಮಾಡುತ್ತಿರುವುದು ಅಚ್ಚರಿಯನ್ನುಂಟು ಮಾಡುತ್ತಿದೆ.

ಹಾಗಂತ ಖಂಡಿತವಾಗಿಯೂ ನಾನು ಪಾಕ್ ಕ್ರಿಕೆಟ್ ಆಟಗಾರರ ವಿರೋಧಿಯಲ್ಲ. ಇಮ್ರಾನ್ಖಾನ್, ಜಾವೇದ್ ಮಿಯಾಂದಾದ್, ವಾಸಿಂ ಅಕ್ರಮ್, ವಕಾರ್ ಯೂನಸ್, ಇಂಜಿ, ಶೋಯೆಬ್ ಅಖ್ತರ್, ಸಕ್ಲೇನ್ ಮುಷ್ತಾಕ್ ಹೀಗೆ ಪಾಕ್ನ ಅಪ್ರತಿಮ ಆಟಗಾರರ ಪ್ರತಿಭೆ, ಸಾಮಥ್ರ್ಯಕ್ಕೆ ಬೆರಗಾಗಿರುವುದಂತೂ ನಿಜ. ಜಿದ್ದಿನಿಂದ ಆಡುವ ಕಲೆಯನ್ನು ಪಾಕ್ ಕ್ರಿಕೆಟಿಗರಿಂದ ಕಲಿತುಕೊಳ್ಳಬೇಕು. ಆದ್ರೆ ಈಗೀನ ತಂಡದ್ದಲ್ಲ. 1990ರಿಂದ 2010ರ ತನಕದ ಪಾಕ್ ತಂಡವನ್ನು ನೆನಪಿಸಿಕೊಂಡ್ರೆ ಕ್ರಿಕೆಟ್ ಜಗತ್ತಿನ ಎಂತಹುದ್ದೇ ತಂಡಕ್ಕೂ ಸಡ್ಡು ಹೊಡೆಯುವ ತಾಕತ್ತು ಇತ್ತು. ಆದ್ರೆ ಈಗ ಇಲ್ಲ. ಕಾರಣ ಅಲ್ಲಿನ ಕ್ರಿಕೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ರಾಜಕೀಯ, ಅಂತರಿಕ ಕಲಹದಿಂದ ಪಾಕ್ ತಂಡದ ಗತಕಾಲದ ವೈಭವ ಕೇವಲ ನೆನಪು ಅಷ್ಟೇ ಎಂಬಂತಾಗಿದೆ.

ಈಗ ವಿಷ್ಯಕ್ಕೆ ಬರೋಣ.. 2026ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ದ ಆಡಲ್ಲ ಅಂದಿರೋದು ಬಾಂಗ್ಲಾದೇಶಕ್ಕೋಸ್ಕರ..! ಬಾಂಗ್ಲಾದೇಶÀ ಭಾರತದಲ್ಲಿ ಆಡಲ್ಲ ಅಂದಿರೋದು ಪಾಕಿಸ್ತಾನಕ್ಕೋಸ್ಕರ.. ಐಡಿಯಾ ಏನೋ ಸೂಪರ್ ಆಗಿದೆ. ಹೇಗಾದ್ರೂ ಮಾಡಿ ಭಾರತವನ್ನು ಕಟ್ಟಿಹಾಕಿ ಇಕ್ಕಟ್ಟಿಗೆ ಸಿಲುಕಿಸುವ ತಂತ್ರ. ಆದ್ರೆ ಐಸಿಸಿ ಬಾಂಗ್ಲಾ ದೇಶವನ್ನು ಕ್ಯಾರೇ ಮಾಡಲಿಲ್ಲ. ಅಲ್ಲದೆ ಬಾಂಗ್ಲಾ ಬದಲು ಸ್ಕಾಟ್ಲೆಂಡ್ ತಂಡಕ್ಕೆ ಆಡಲು ಅನುಮತಿ ನೀಡಿತ್ತು. ಇದು ಪಾಕ್ ಕ್ರಿಕೆಟ್ ಮಂಡಳಿಗಿಂತಲೂ ಪಾಕ್ ಸರ್ಕಾರವನ್ನು ಕುಪಿತಗೊಳ್ಳುವಂತೆ ಮಾಡಿತ್ತು. ಹಾಗೇ ಐಪಿಎಲ್ನಲ್ಲಿ ಬಾಂಗ್ಲಾದೇಶದ ಮುಷ್ತಾಫಿಝುರ್ ರಹಮಾನ್ ಅವರನ್ನು ಬಿಸಿಸಿಐ ಕೈಬಿಟ್ಟಿರುವುದು ಬಾಂಗ್ಲಾದೇಶಕ್ಕಿಂತಲೂ ಪಾಕ್ಗೆ ಹೆಚ್ಚು ರೋಷಾಗ್ನಿಯನ್ನುಂಟು ಮಾಡಿತ್ತು. ಅಲ್ಲದೆ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಪಿಸಿಬಿಗೆ ಆದೇಶವನ್ನು ನೀಡಿತ್ತು.

ಈ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪಾಕ್ ಸರ್ಕಾರದ ರಣತಂತ್ರ ಮೇಲ್ನೋಟಕ್ಕೆ ಈಗ ಯಶಸ್ವಿಯಾಗಿದೆ. ಏತನ್ಮಧ್ಯೆ ಪಿಸಿಬಿ ಕೆಲವೊಂದು ಷರತ್ತುಗಳನ್ನು ವಿಧಿಸಿದ್ರೂ ಐಸಿಸಿ ಮಣಿಯಲಿಲ್ಲ. ಕೊನೆಗೆ ಶ್ರೀಲಂಕಾ, ಪಾಕ್, ಬಾಂಗ್ಲಾದೇಶಗಳ ಸರ್ಕಾರಗಳು ಒಗ್ಗೂಡಿಕೊಂಡು ಈಗ ಇಂಡೋ ಪಾಕ್ ಕ್ರಿಕೆಟ್ ಸಮರಕ್ಕೆ ಮುಹೂರ್ತವನ್ನಿಟ್ಟಿದೆ.
ಪ್ರಶ್ನೆ ಅದಲ್ಲ.. ಇಷ್ಟೆಲ್ಲಾ ಕಿತಾಪತಿ ಮಾಡಿರುವ ಪಾಕಿಸ್ತಾನದ ವಿರುದ್ಧ ಭಾರತ ಆಡಲೇಬೇಕಾದ ಅನಿವಾರ್ಯತೆ ಇತ್ತಾ ಅನ್ನೋದು..? ಈ ನಡುವೆ ಪಾಕಿಸ್ತಾನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಪ್ರಮುಖ ರಾಷ್ಟ್ರಗಳ ಬೆಂಬಲವನ್ನು ಪಾಕಿಸ್ತಾನ ಪಡೆದುಕೊಂಡಿದೆ. ಯಾಕಂದ್ರೆ ಏಷ್ಯನ್ ಕ್ರಿಕೆಟ್ನ ಕೌನ್ಸಿಲ್ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ.

ದುಡ್ಡಿನಲ್ಲಿ ಬಿಸಿಸಿಐ ದೊಡ್ಡವ. ಆದ್ರೆ ಪಾಕ್, ಶ್ರೀಲಂಕಾ, ಬಾಂಗ್ಲಾ ಈಗ ಒಗ್ಗಟ್ಟಿನ ಮಂತ್ರ ಪಠಿಸುವಂತೆ ಕಾಣಿಸುತ್ತಿದೆ. ಈ ಮೂಲಕ ಪಿಸಿಬಿ, ಬಿಸಿಸಿಐನ ಮೇಲೆ ಹಿಡಿತ ಸಾಧಿಸಲು ಯಶಸ್ವಿಯಾಗಿದೆ. ಹಾಗೇ ಐಸಿಸಿ ಕೂಡ.. ಇತ್ತ ಬಿಸಿಸಿಐಯನ್ನು ಬಿಡುವ ಹಾಗಿಲ್ಲ. ಅತ್ತ ಪಿಸಿಬಿಯನ್ನು ಬಿಟ್ಟು ಕೊಡುವಂತಿಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಐಸಿಸಿಗೆ ದುಡ್ಡೇ ಮುಖ್ಯವಾಗಿತ್ತು. ಹಾಗೇ ಬಿಸಿಸಿಐಗೆ ಬರೋ ದುಡ್ಡನ್ನು ತಿರಸ್ಕಾರ ಮಾಡೋದು ಯಾಕೆ ಎಂಬ ಮನೋಸ್ಥಿತಿಗೆ ಬಂದಂತಿದೆ.
ಹಾಗೇ ಹೇಳುವುದಾದ್ರೆ, ಬಿಸಿಸಿಐಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಒಂದೇ ಮಾತಿನಲ್ಲೇ ಟಿ-20 ವಿಶ್ವಕಪ್ನಿಂದಲೇ ಹೊರಗಟ್ಟುವ ಸಾಮಥ್ರ್ಯವಿತ್ತು. ಪಾಕ್ ವಿರುದ್ಧ ನಾವೂ ಆಡಲ್ಲ ಎಂಬ ಮಾತು ಹೇಳುತ್ತಿದ್ರೆ ಬಾಂಗ್ಲಾದೇಶದಂತೆ ಪಾಕ್ ಕ್ರಿಕೆಟ್ ತಂಡ ಕೂಡ ಟೂರ್ನಿಯಿಂದಲೇ ಹೊರಬೀಳುತ್ತಿತ್ತು.

ಆದ್ರೆ ಬಿಸಿಸಿಐ ಅಂತಹುದ್ದೊಂದು ದಿಟ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಹಾಗೇ ಸುಮ್ಮನೆ ಬರೋ ದುಡ್ಡನ್ನು ಯಾಕೆ ಕೈಚೆಲ್ಲಬೇಕು. ಒಂದು ವೇಳೆ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ರೆ, ಬಿಸಿಸಿಐನ ಬೊಕ್ಕಸ ತುಂಬುತ್ತಿರುವ ಮುಖೇಶ್ ಅಂಬಾನಿಯ ಸ್ನೇಹ ಕೂಡ ಮುರಿದು ಬೀಳುತ್ತಿತ್ತು. ಹಾಗೇ ಕಾರ್ಪೋರೇಟ್ ಜಗತ್ತಿನ ಪ್ರಮುಖ ಕಂಪೆನಿಗಳ ಸಂಬಂಧಗಳು ಹಾಳಾಗುತ್ತಿದ್ದವು. ದುಡ್ಡಿನ ಹಿಂದೆ ಬಿದ್ದಿರುವ ಬಿಸಿಸಿಐಗೆ ದೇಶಪ್ರೇಮ, ಪ್ರತಿಷ್ಠೆಗಿಂತ ಪಾಕ್ ವಿರುದ್ಧದ ಪಂದ್ಯವೇ ಮುಖ್ಯವಾಗಿದೆ. ಈ ಕಾರಣದಿಂದಲೇ ಪಾಕ್ ವಿರುದ್ದ ಬಿಸಿಸಿಐ ಕೂಡ ಆಡಲು ಒಪ್ಪಿಕೊಂಡಿರೋದು. ಒಂದು ವೇಳೆ ಈ ಪಂದ್ಯವನ್ನು ಗೆದ್ರೆ ಪಾಕ್ ವಿರುದ್ದ ಜಯಭೇರಿ.. ಸೋತ್ರೆ ಇದು ಬರೀ ಆಟವಷ್ಟೇ.. ಸೋಲು -ಗೆಲುವು ಸಹಜ ಎಂಬ ಟ್ಯಾಗ್ ಲೈನ್ ಇದ್ದದ್ದೇ..!
ಒಟ್ಟಿನಲ್ಲಿ ಪಾಕ್ – ಬಾಂಗ್ಲಾ ಎಂಬ ಅಣ್ತಮ್ಮಸ್ ಒತ್ತಡಕ್ಕೆ ಮಣಿದ ಐಸಿಸಿ – ಬಿಸಿಸಿಐಗೆ ದುಡ್ಡೇ ಮುಖ್ಯವಾಗಿ ಹೋಯ್ತು. ಇಲ್ಲಿ ಐಸಿಸಿ ಅಧ್ಯಕ್ಷ ಅಮಿತ್ ಶಾ ಪುತ್ರನಾಗಿರುವ ಕಾರಣಕ್ಕೆ ಬಿಸಿಸಿಐ ಕೂಡ ಒತ್ತಡ ಹೇರುವಂತಿಲ್ಲ. ಅದು ಅಲ್ಲದೇ 2026ರ ಟಿ-20 ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವುದು ಕೂಡ ಬಿಸಿಸಿಐನೇ.

ಆದರೂ ರಾಜಕೀಯವಾಗಿ ಅಮೇರಿಕಾ, ಚೀನಾವನ್ನು ಬಳಸಿಕೊಂಡು ಭಾರತದ ವಿರುದ್ದ ಸಮರ ಸಾರಿರುವ ಪಾಕಿಸ್ತಾನ ಕ್ರಿಕೆಟ್ನಲ್ಲಿ ಬಾಂಗ್ಲಾದೇಶವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಐಸಿಸಿ ವಿರುದ್ಧ ಮೇಲುಗೈ ಸಾಧಿಸಿರುವುದಂತೂ ಸುಳ್ಳಲ್ಲ. ಏನೇ ಆದ್ರೂ ದುಡ್ಡಿನ ಹಿಂದೆ ಬಿದ್ದಿರುವ ಬಿಸಿಸಿಐ ತನ್ನತನವನ್ನು ಕಳೆದುಕೊಂಡಿದೆ. ವಿಶ್ವಕ್ರಿಕೆಟ್ನ ದೊಡ್ಡಣ್ಣ, ಕುಬೇರ ಎಂಬ ಬಿರುದುಗಳಿದ್ರೂ ಕಾಸಿನ ಮುಂದೆ ಎಲ್ಲವೂ ನಗಣ್ಯ..! ಯಾಕಂದ್ರೆ ಭಾರತ – ಪಾಕ್ ನಡುವಿನ ಪಂದ್ಯದಲ್ಲಿ ಸುಮಾರು 5000 ಕೋಟಿ ವಹಿವಾಟು ನಡೆಯುತ್ತಿದೆ. ಏನಿದ್ರೂ ಕುರುಡು ಕಾಂಚಾಣದ ಮಹಿಮೆ..ಅಷ್ಟೇ..!
ವಿಶೇಷ ವರದಿ-ಸನತ್ ರೈ






