ಬಾಗಲಕೋಟೆ: ಸ್ಥಳದಲ್ಲೇ 18 ಸಾವಿರ ಫಲಾನುಭವಿಗಳಿಗೆ ಸಮಸ್ಯೆಯನ್ನು ಬಗೆಹರಿಸಿ, ಪರಿಹಾರ ಸಹ ನೀಡುತ್ತೇವೆ ಹೂರತು ನಾಳೆ ಬಾ ಅನ್ನಲ್ಲ, ನಮ್ಮದು ನಾಳೆ ಬಾ ಎನ್ನುವ ಪಕ್ಷವೂ ಅಲ್ಲ ಎಂದು ಕಾಂಗ್ರೆಸ್’ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.
ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆದ ಹಳ್ಳಿಯ ಕಡೆಗೆ ಸರ್ಕಾರದ ನಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ನಾವು ಬಂದು ಬುರುಡೆ ಬಿಟ್ಟು ಏನೋ ಮಾಡಿಬಿಡುತ್ತೇವೆ, ಎಲ್ಲ ಕೊಟ್ಟು ಬಿಡುತ್ತೇವೆ, ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಎಷ್ಟು ದುಡ್ಡು ಬೇಕೋ ಕೊಡುತ್ತೇವೆ ಎಂದು ಹೇಳಿ ಹೋಗುವ ಕಾರ್ಯಕ್ರಮ ಇದು ಅಲ್ಲ, ಜನರ ಸಮಸ್ಯೆ ಬಗೆಹರಿಸಿ, ಪರಿಹಾರ ನೀಡುವ ಕಾರ್ಯಕ್ರಮ ಎಂದು ಹೇಳಿದರು.
50 ವರ್ಷ ದೇಶ ಆಳಿದ್ದಾರೆ, ರಾಜ್ಯದಲ್ಲೂ 50 ವರ್ಷ ಆಳಿದ್ದಾರೆ, ನಿಮ್ಮ ಕೈಯಲ್ಲಿ ಅಧಿಕಾರ, ಹಣ, ಅಂತಸ್ತು, ಎಲ್ಲ ಇದ್ದಾಗ ಯಾಕೆ ಕೊಡಲಿಲ್ಲ. ಈಗ ಇನ್ನೊಮ್ಮೆ ಅಧಿಕಾರ ಕೊಡಿ ಅಂತ ಹೇಳುತ್ತಾರೆ. ನಮ್ಮ ಜನ ಪ್ರಜ್ಞಾವಂತರಿದ್ದಾರೆ. ಕೆಲವರು ನಾಳೆ ಬಾ ಅಂತ ಬೋರ್ಡ್ ಹಾಕುವವರಿಗೆ, ಜನರು ಕೂಡ ನಾಳೆ ಅಂತ ಹೇಳ್ತಾರೆ ಎಂದು ತಿರುಗೇಟು ನೀಡಿದರು.
ಇನ್ನು ಕಲಾದಗಿ ಗ್ರಾಮಕ್ಕೆ ಕಂದಾಯ ಸಚಿವ ಆರ್,ಅಶೋಕ್ ಭೇಟಿ ನೀಡುತ್ತಿದ್ದಂತೆ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು. ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಿ ಸ್ವಾಗತಿಸಿದರು. ಎತ್ತಿನ ಚಕ್ಕಡಿ ಮೂಲಕ ಮಹಿಳೆಯರ ಕುಂಭ ಮೇಳ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಚಿವರಾದ ಮುರಗೇಶ್ ನಿರಾಣಿ ಹಾಗೂ ಸಂಸದರಾದ ಪಿ.ಸಿ.ಗದ್ದಿಗೌಡರ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.