ಬಿಜೆಪಿ ಪ್ರತಿಮೆ ನಿರ್ಮಾಣ ಮಾಡುವುದು, ದೇವಸ್ಥಾನ ಕಟ್ಟುವುದು, ದೇಶಭಕ್ತಿ ತೋರಿಸುವುದು. ಆ ಮೂಲಕ ಮತಳನ್ನು ಕೇಳುವುದು ಬಿಜೆಪಿ ಮಾಡಿಕೊಂಡು ಬಂದಿರುವ ರಾಜಕೀಯ ಹಿನ್ನೋಟ. ಆದರೆ ಇದೀಗ ಉತ್ತರ ಪ್ರದೇಶದ ಅಯೋಧ್ಯೆ ಮಾದರಿಯಲ್ಲೇ ರಾಮನಗರದ ರಾಮದೇವರ ಬೆಟ್ಟವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬೆಳಗಾವಿಯ ಸುವರ್ಣಸೌಧದಲ್ಲಿ ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ವಿರೋಧ ಪಕ್ಷಗಳು ವಿರೋಧಿ ಹೇಳಿಕೆ ನೀಡುತ್ತವೆ. ಆ ಮೂಲಕ ಇದನ್ನು ರಾಜಕೀಯಕ್ಕೆ ಬದಲಾಯಿಸಬಹುದು ಅನ್ನೋದು ಅಶ್ವತ್ಥನಾರಾಯಣ ಅವರ ಹೇಳಿಕೆ ಉದ್ದೇಶ ಇದ್ದಿರಬಹುದು. ಇಲ್ಲದಿದ್ದರೆ ಸುಖಾಸುಮ್ಮನೆ ರಾಮನಗರದ ರಾಮದೇವರ ಬೆಟ್ಟದ ವಿಚಾರ ಬೆಳಗಾವಿಯಲ್ಲಿ ಹೇಳುವ ಅವಶ್ಯಕತೆ ಏನೂ ಇರಲಿಲ್ಲ. ಆದರೆ ಅಶ್ವತ್ಥ ನಾರಾಯಣ ಊಹೆ ಮಾಡಿದಂತೆ ವಿಪಕ್ಷಗಳ ಪ್ರತಿಕ್ರಿಯೆ ಇರಲಿಲ್ಲ. ಎಲ್ಲವೂ ಅದಲು ಬದಲಾಯ್ತು.
ರಾಮನ ದೇವಸ್ಥಾನ, ಸೀತೆಯ ದೇವಸ್ಥಾನ ಎಲ್ಲವನ್ನೂ ಕಟ್ಟಲಿ..!
ಶ್ರೀರಾಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲಿರುವ ರಾಮನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯ ನಾಥ್ ಆಹ್ವಾನಿಸಿದ್ದೇವೆ. ಅಭಿವೃದ್ಧಿಗೆ ಮುಂದಿನ ಬಜೆಟ್ನಲ್ಲಿ ಸಿಎಂ ಹಣ ಘೋಷಣೆ ಮಾಡುತ್ತಾರೆ. ಈ ಮೂಲಕ ರಾಮನಗರದ ರಾಮದೇವರ ಬೆಟ್ಟವನ್ನು ಹಿಂದೂ ಧಾರ್ಮಿಕ ಕೇಂದ್ರವನ್ನಾಗಿ ಮಾಡುತ್ತೇವೆ ಎಂದಿದ್ದಾರೆ ಸಚಿವ ಅಶ್ವತ್ಥ ನಾರಾಯಣ. ಸಚಿವರ ಮಾತಿಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು,. ಅಯೋಧ್ಯೆಯ ರಾಮ ಮಂದಿರವನ್ನಾದರೂ ಕಟ್ಟಲಿ, ಸೀತಾ ಮಂದಿರವನ್ನಾದರೂ ಕಟ್ಟಲಿ, ಬೇಕಿದ್ದರೆ ಅಶ್ವತ್ಥ ನಾರಾಯಣ ಮಂದಿರವನ್ನೇ ಕಟ್ಟಲಿ ನಾವು ವಿರೋಧ ಮಾಡುವುದಿಲ್ಲ ಎಂದಿದ್ದಾರೆ.

3 ವರ್ಷದಿಂದ ಯಾಕೆ ಅಭಿವೃದ್ಧಿ ಮಾಡಲಿಲ್ಲ – ಕುಮಾರಸ್ವಾಮಿ ಪ್ರಶ್ನೆ
ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ತುಮಕೂರಿನ ಚಿಕ್ಕನಾಯಕನಹಳ್ಳಿ ಪಂಚರತ್ನ ಯಾತ್ರೆ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದು, ಇವರದ್ದೇ ಸರ್ಕಾರ ಇದೆ ಮೂರೂವರೆ ವರ್ಷದಿಂದ ಮಾಡದೆ ಇದ್ದವರು, ಇವಾಗ ಮಾಡ್ತಾರಾ…? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಮೂರು ತಿಂಗಳಿಗೆ ಚುನಾವಣೆ ಬರ್ತಾ ಇದೆ. ಇವರನ್ನೇ ಜನ ಸರ್ಕಾರದಿಂದ ಹೊರಗೆ ಇಡುವ ಮನಸ್ಸಿನಲ್ಲಿದ್ದಾರೆ. ಇವಾಗ ರಾಮನಗರದಲ್ಲಿ ಮಂದಿರ ಕಟ್ಟುವ ಕೆಲಸ ಮಾಡ್ತೇವೆ ಅಂತಾ ಇವರು ಹೊರಟಿದ್ದಾರೆ. ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ. ಯುಪಿ ಸಿಎಂ ಕರೆತಂದು ಇಲ್ಲಿ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾಧೀಶರನ್ನು ಕರೆತಂದು, ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೇ ಮಾಡುತ್ತೇನೆ. ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡೋದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೇ ಮಂದಿರ ನಿರ್ಮಾಣ ಮಾಡಿಸುತ್ತೇನೆ. ನನಗೆ ದೇವರು ಇನ್ನು ಶಕ್ತಿ ಕೊಟ್ಟಿದ್ದಾನೆ ಎಂದು ಉಗ್ರವಾಗಿ ಟೀಕಿಸಿದ್ದಾರೆ.
ರಾಜಕೀಯ ಕಾರಣಕ್ಕೆ ರಾಮಮಂದಿರ ಎನ್ನುತ್ತಿದ್ಯಾ ಬಿಜೆಪಿ..?
ಡಿಕೆ ಶಿವಕುಮಾರ್ ಸೇರಿದಂತೆ ರಾಮ ಮಂದಿರ ನಿರ್ಮಾಣವನ್ನು ಸ್ವಾಗತ ಮಾಡಿದ್ದಾರೆ. ಆದರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆದುಕೊಂಡು ಚುನಾವಣೆಯಲ್ಲಿ ಲಾಭ ಪಡೆಯುವ ಹುನ್ನಾರ ಮಾಡಿದ್ಯಾ ಎನ್ನುವ ಅನುಮಾನ ಕಾಡದೆ ಇರದು. ಐದು ವರ್ಷ ಸರ್ಕಾರ ಇದ್ದಾಗಲೇ ಮಾಡ ಬಹುದಿತ್ತು. ಇನ್ನು ಅಧಿಕಾರಕ್ಕೆ ಬಂದು ಮೂರು ವರ್ಷದಿಂದಲೇ ಈ ಯೋಜನೆ ಜಾರಿ ಮಾಡಬಹುದಿತ್ತು. ಆದರೆ ಚುನಾವಣೆಗೂ ಮುನ್ನ ಯೋಜನೆಗಳನ್ನು ಜಾರಿ ಮಾಡ್ತೇವೆ ಎಂದು ಘೋಷಣೆ ಮಾಡುವುದು ಚುನಾವಣಾ ಗಿಮಿಕ್ ಎನ್ನುವುದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಆದರೆ ಅಭಿವೃದ್ಧಿ ಕಾರ್ಯಗಳನ್ನು ತೋರಿಸಿ ಮತ ಕೇಳಬೇಕಿದ್ದ ಸರ್ಕಾರ, ಕೇವಲ ಭಾವನೆಗಳನ್ನು ಮುಂದಿಟ್ಟು ಮತ ಕೇಳುವುದು ವಿರೋಧ ಪಕ್ಷಗಳು ಹೇಳಿದಂತೆ ನಾಚಿಕೆಗೇಡಿನ ಸಂಗತಿಯೇ ಸರಿ. ಅಷ್ಟಕ್ಕೂ ಕೇವಲ ಭರವಸೆ ಕೊಡದೆ ಚುನಾವಣೆಗೂ ಮುನ್ನವೇ ಮಂದಿರವನ್ನು ನಿರ್ಮಾಣ ಮಾಡಿದರೆ ಅದನ್ನೂ ಒಪ್ಪಬಹುದು. ಆದರೆ ಮುಂದಿನ ಬಜೆಟ್ನಲ್ಲಿ ಹಣ ಇಡುವುದು, ಅದಕ್ಕೂ ಮೊದಲೇ ಬೃಹತ್ ಸಮಾವೇಶ ಮಾಡಿ ಪ್ರಚಾರ ಪಡೆಯುವುದು ಯಾವ ಲೆಕ್ಕ ಅಲ್ಲವೇ..?
ಕೃಷ್ಣಮಣಿ