ದೇಶದ ಹಿತಾಸಕ್ತಿ ಕಾಯಲು ವಿರೋಧ ಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ, ಜತೆಗೂಡುವುದು ಅತ್ಯುತ್ತಮ ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ನಾಳೆ ದೊಡ್ಡ ಮಟ್ಟದ ಸಭೆ ನಡೆಯಲಿದೆ. ಇದು ಕೇವಲ ಒಂದು ಪಕ್ಷದ ಸಭೆಯಲ್ಲ. ದೇಶದ 140 ಕೋಟಿ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ತಾಜ್ ವೆಸ್ಟ್ಎಂಡ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಯನ್ನ ನೀಡಿದ್ದಾರೆ.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಆಯೋಜಿಸುತ್ತಿರುವ ಈ ಸಭೆಗೆ, ಕೆಪಿಸಿಸಿ ಪರವಾಗಿ ಎಲ್ಲರಿಗೂ ಸ್ವಾಗತ ಕೋರುತ್ತೇನೆ. ಈ ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಪಡೆದ ಫಲಿತಾಂಶವನ್ನೇ 2024ರ ಚುನಾವಣೆಯಲ್ಲಿ ಪಡೆಯಲು ಕೆಲಸ ಮಾಡಲಾಗುವುದು.
ಇನ್ನು ಈ ಸಭೆಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ನಿಯೋಜಿತ ನಾಯಕರ ಹೊರತಾಗಿ ಬೇರೆ ಯಾವುದೇ ನಾಯಕರು ಸಭೆ ನಡೆಯುವ ಹೋಟೆಲ್ ಹಾಗೂ ಬೇರೆ ಪಕ್ಷಗಳ ನಾಯಕರ ಆಹ್ವಾನಕ್ಕೆ ವಿಮಾನ ನಿಲ್ದಾಣಗಳಲ್ಲಿ ಬರಬೇಡಿ ಎಂದು ಪಕ್ಷದ ನಾಯಕರಲ್ಲಿ ಮನವಿ ಮಾಡುತ್ತೇನೆ. ಎಂದು ಹೇಳಿಕೆಯನ್ನ ಕೂಡ ನೀಡಿದ್ದಾರೆ.
ಕೆಲವು ಸಚಿವರು ಹಾಗೂ ನಾಯಕರಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಅನುಮತಿ ಇಲ್ಲದವರು ಹೋಟೆಲ್ ಗೆ ಬರಬೇಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದು, ವಿಪಕ್ಷಗಳ ಸಭೆಯನ್ನ ಸಾಕಷ್ಟು ಕಟ್ಟೆಚ್ಚರಿಕೆಯಿಂದ ನಡೆಸಲಾಗುತ್ತಿರುವುದು ಕೂಡ ಸ್ಪಷ್ಟವಾಗುತ್ತಿದೆ .
ಒಟ್ಟಾರೆಯಾಗಿ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆ ದೇಶದ ಗಮನ ಸೆಳೆದಿದ್ದು 2024ರಲ್ಲಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವನ್ನ ಕಟ್ಟಿ ಹಾಕಲು ಎಲ್ಲಾ ರೀತಿಯಾದ ಚರ್ಚೆಯನ್ನ ಇಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಇದಕ್ಕೆ ಬೇಕಾದ ವೇದಿಕೆ ಕೂಡ ಸಿದ್ಧವಾಗಿದ್ದು, ಈಗ ದೇಶದ ಜನರ ಚಿತ್ತ ನಾಳೆ ನಡೆಯಲಿರುವ ವಿಪಕ್ಷಗಳ ಸಭೆಯತ್ತ ನೆಟ್ಟಿರೋದು ಸುಳ್ಳಲ್ಲ.