ಲೋಕಸಭಾ ಚುನಾವಣೆ ಮುಗಿದ ಬಳಿಕ ಸರ್ಕಾರ ಉರುಳಿತ್ತೆ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಸಾಕಷ್ಟು ನಾಯಕರು ಭವಿಷ್ಯ ನುಡಿದಿದ್ದಾರೆ. ಆದರೆ ಇದೇ ಮಾತನ್ನು ರಾಜ್ಯ ಸರ್ಕಾರದಲ್ಲಿ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ. ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿಲ್ಲ, ಬದಲಿಗೆ ಆಪರೇಷನ್ ಕಮಲ ಮಾಡುವ ಬಿಜೆಪಿ ಟೀಂ ಆಕ್ಟೀವ್ ಆಗಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇನ್ನು ಯಾವ ಶಾಸಕರನ್ನು ಭೇಟಿ ಮಾಡ್ತಿದ್ದಾರೆ, ಅದೇ ಶಾಸಕರು ನನಗೆ ಹಾಗು ಸಿಎಂ ಸಿದ್ದರಾಮಯ್ಯಗೆ ಹೇಳ್ತಿದ್ದಾರೆ. ಏನ್ ಆಫರ್ ಮಾಡ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ಮುಂದಿನ ವಿಧಾನಸಭಾ ಅಧಿವೇಶನ ನಡೆಯಲಿ, ಎಲ್ಲಾ ವಿಚಾರ ಬಯಲು ಮಾಡ್ತೇನೆ ಎಂದಿದ್ದಾರೆ. ಸರ್ಕಾರ ಬೀಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿರುವ ಹೇಳಿಕೆಗೆ ಕಾಂಗ್ರೆಸ್ನಲ್ಲೇ ಅಪಸ್ವರ.
ಆಪರೇಷನ್ ಕಮಲ ಡಿಕೆಶಿ ಹೇಳಿಕೆ ಬಗ್ಗೆ ಯಾರು ಏನು ಹೇಳಿದ್ರು..?
ಬೆಂಗಳೂರಲ್ಲಿ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಆಪರೇಷನ್ ಕಮಲ ಮಾಡಲು ಕನಿಷ್ಟಪಕ್ಷ 65 ಶಾಸಕರು ಬೇಕು, ಅಷ್ಟು ಸಿಕ್ತಾರಾ ಬಿಜೆಪಿಗೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಬರೀ 5 ಶಾಸಕರೂ ಸಿಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದುವರಿದು, ಆಪರೇಷನ್ ಕಮಲ ನಂತರ ಇವರ ಕಥೆ ಏನಾಗಿದೆ ಗೊತ್ತಿದೆಯಲ್ಲ. ಬಿಜೆಪಿ ಮುಳುಗುತ್ತಿರೋ ಹಡಗಲ್ಲ. ಬಿಜೆಪಿ ಈಗಾಗಲೇ ಮುಳುಗಿ ಹೋಗಿರುವ ಹಡಗು ಎಂದು ವ್ಯಂಗ್ಯ ಮಾಡಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, ಶಾಸಕರಿಗೆ ಆಫರ್ ಕೊಟ್ಟಿರುವ ಬಗ್ಗೆ ಡಿಸಿಎಂಗೆ ಮಾಹಿತಿ ಇರಬಹುದು. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಒಂದು ವೇಳೆ ಆ ರೀತಿಯ ಮಾಹಿತಿ ಗೊತ್ತಾದ್ರೆ ನಾವು ಹೈಕಮಾಂಡ್ಗೆ ತಿಳಿಸುತ್ತೇವೆ ಎಂದಿದ್ದಾರೆ. ಬಿಜೆಪಿ ನಾಯಕರಾದ ಅಶ್ವತ್ಥ ನಾರಾಯಣ, ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಬಿಜೆಪಿಯಿಂದ ಯಾವುದೇ ರೀತಿಯ ಆಪರೇಷನ್ ಇಲ್ಲ, ಕಾಂಗ್ರೆಸ್ನ ಒಳ ಜಗಳದಿಂದ ಸರ್ಕಾರ ಬೀಳಿಸಿಕೊಳ್ಳಬೇಕು ಅಷ್ಟೆ. ಸಚಿವ ಸತೀಶ್ ಜಾರಕಿಹೊಳಿ ಒಂದಷ್ಟು ಶಾಸಕರು ಕರೆದುಕೊಂಡು ಹೋಗ್ತಿದ್ರು. ಡಿ.ಕೆ ಶಿವಕುಮಾರ್ ಒಂದಷ್ಟು ಶಾಸಕರನ್ನು ಕರೆದುಕೊಂಡು ಹೋಗಬಹುದು. ಇದರಿಂದ ಅವರ ಸರ್ಕಾರ ಬೀಳಬಹುದೇ ಹೊರತು ನಮ್ಮಿಂದಲ್ಲ. ಇವಾಗ ಯಾರಾದರೂ ಆಪರೇಷನ್ ಮಾಡೋಕೆ ಸಾಧ್ಯನಾ..? ಎಂದು ಮರುಪ್ರಶ್ನೆ ಎಸೆದಿದ್ದಾರೆ.
ಸತೀಶ್ ಜಾರಕಿಹೊಳಿ ತಂಡದಿಂದ ಪ್ರವಾಸದ ಗುಟ್ಟೇನು..?
ಸತೀಶ್ ಜಾರಕಿಹೊಳಿ 20 ಶಾಸಕರ ಜೊತೆ ಮೈಸೂರು ದಸರಾಗೆ ಪ್ರವಾಸ ಕೈಗೊಳ್ಳುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಈ ಪ್ರವಾಸಕ್ಲೆ ಕೆಪಿಸಿಸಿ ಬ್ರೇಕ್ ಹಾಕಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಸತೀಶ್ ಜಾರಕಿಹೊಳಿ ಬಂಡಾಯದ ಬಾವುಟಕ್ಕೆ ಶಾಂತಿ ಮಂತ್ರ ಪಠಿಸಿದ್ದಾರೆ. ಸ್ನೇಹಿತರು ಪ್ರವಾಸಕ್ಕೆ ಹೋಗ್ತಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ. ಇನ್ನು ಸಚಿವ ಜಮೀರ್ ಆಹ್ಮದ್ ಮಾತನಾಡಿ, ಕಾಂಗ್ರೆಸ್ನಲ್ಲಿ ಯಾವ ಟೀಂ ಇಲ್ಲ, ಯಾರು ತಪ್ಪು ಮಾಹಿತಿ ಕೊಡ್ತಿದ್ದಾರೆ ಅಂತಾ ನಂಗೆ ಅರ್ಥ ಆಗ್ತಿಲ್ಲ. ಸಿದ್ದರಾಮಯ್ಯ ಅವ್ರನ್ನ ಯಾರು ಡಿಸ್ಟರ್ಬ್ ಮಾಡ್ತಿಲ್ಲ. ಶಾಸಕರು ಟೂರ್ ಹೋದ್ರೆ ಏನಾಯ್ತು..? ಸತೀಶ್ ಜಾರಕಿಹೊಳಿ ಪಕ್ಷದ ವಿರೋಧಿ ಕೆಲಸ ಮಾಡ್ತಿಲ್ಲ. ಅವರೆಲ್ಲಾ ಸ್ನೇಹಿತರು, ರಜೆ ಇದೆ ಸೋ ಟೂರ್ ಮಾಡಿದ್ರೆ ತಪ್ಪೇನು ಎಂದಿದ್ದಾರೆ. ಇದ್ರ ಬೆನ್ನಲ್ಲೇ ಬೆಳಗಾವಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಯಮಕನಮರಡಿ ಹೊರತುಪಡಿಸಿ, ಕೇವಲ ಹುಕ್ಕೇರಿ ಕಾರ್ಯಕರ್ತರ ಸಭೆ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಮುನಿಸಿನ ನಡುವೆ ಬೆಳಗಾವಿ ಜಿಲ್ಲೆಗೆ ಓರ್ವ ಉಪಮುಖ್ಯಮಂತ್ರಿ ಬಂದಿದ್ದರೂ ಯಾವುದೇ ಶಾಸಕರು ಹಾಗಯ ಸಚಿವರಿ ಬಂದಿಲ್ಲ ಎನ್ನುವುದು ವಿಶೇಷ.

ಸತೀಶ್ ಜಾರಕಿಹೊಳಿ ಮಾತ್ರ ಅಡ್ಜಸ್ಟ್ಮೆಂಟ್ ಮಾತನಾಡಿದ್ದಾರೆ..
ಸತೀಶ್ ಜಾರಕಿಹೊಳಿ ಮುನಿಸು ವಿಚಾರದ ಬಗ್ಗೆ ಡಿ.ಕೆ ಶಿವಕುಮಾರ್ ಮಾತನಾಡಿ, ಸತೀಶ್ ಜಾರಕಿಹೊಳಿ ಹಾಗು ನನ್ನ ನಡುವೆ ಎನೂ ಇಲ್ಲ, ಇತ್ತಿಚೆಗೆ ಅವರು ನನ್ನನ್ನು ಭೇಟಿ ಮಾಡಿದ್ದರು. ಶಾಸಕರ ಜೊತೆಗೆ ಪ್ರವಾಸ ಹೋಗುವ ಕುರಿತು ನನ್ನ ಜೊತೆಗೆ ಚರ್ಚೆ ಮಾಡಿಲ್ಲ ಎಂದಿದ್ದರು. ಡಿ.ಕೆ ಶಿವಕುಮಾರ್ ಬೆಳಗಾವಿ ರಾಜಕೀಯಕ್ಕೆ ಎಂಟ್ರಿ ಆಗಿರೋದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಗರಂ ಆಗಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೂ ಸತೀಶ್ ದೂರು ನೀಡಿದ್ದಾರೆ. ಬೆಳಗಾವಿ ವಿಚಾರಕ್ಕೆ ಯಾರೂ ತಲೆ ಹಾಕಬಾರದು, ನಮ್ಮ ಜಿಲ್ಲೆಯಲ್ಲಿ ಬೇರೆಯವ್ರಿಗೆ ಏನ್ ಕೆಲಸ, ಮಾಹಿತಿ ಇಲ್ಲದೆ ಸಭೆ ಮಾಡೋದು ಎಷ್ಟು ಸರಿ ಎಂದಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಸಚಿವ ಸತೀಶ್ ಜಾರಕಿಹೊಳಿ, ‘ನಾನು ಪಕ್ಷಕ್ಕೆ ಮಾತ್ರ ಕಾಂಪ್ರಮೈಸ್ ಆಗಿದ್ದೇನೆ, ಆದರೆ ವೀಕ್ ಆಗಿಲ್ಲ ಅಂದಿದ್ದಾರೆ. ಇಷ್ಟೆಲ್ಲಾ ಆದ್ಮೇಲೂ ಡಿ.ಕೆ ಶಿವಕುಮಾರ್ ಬೆಳಗಾವಿಯಲ್ಲಿ ಸಭೆ ನಡೆಸಿದ್ದಾರೆ. ಹುಕ್ಕೇರಿ ಕಾರ್ಯಕರ್ತರ ಸಭೆ ನಡೆಸಿ ಸತೀಶ್ಗೆ ಕೌಂಟರ್ ಮಾಡಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಜಿಲ್ಲೆಗೆ ಬಂದಾಗಲೂ ಯಾರೊಬ್ಬ ನಾಯಕರೂ ಸ್ವಾಗತಕ್ಕೆ ಬಾರದೆ ಸತೀಶ್ ರೀ ಕೌಂಟರ್ ಮಾಡಿದ್ದಾರೆ. ಇದನ್ನು ಮರೆ ಮಾಚಲು ಆಪರೇಷನ್ ಕಮಲ ಸುದ್ದಿ ಬಿಟ್ಟಿದ್ದಾರೆ ಡಿ.ಕೆ ಶಿವಕುಮಾರ್ ಎನ್ನಲಾಗ್ತಿದೆ.