ದೇಶದಲ್ಲಿ ದಿನದಿಂದ ದಿನಕ್ಕ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ಮೂರನೇ ಅಲೆಯ ಮುನ್ಸೂಚನೆಯನ್ನು ನೀಡಿವೆ. ಈಗಷ್ಟೇ ಜನಜೀವನ ಸಹಜ ಸ್ಥಿತಿಗೆ ಬರುತ್ತಿದ್ದು ಆರ್ಥಿಕ ಪರಿಸ್ಥಿ ಕೂಡ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ಈ ಮಧ್ಯೆ ದೇಶದಲ್ಲಿ ಪಂಚರಾಜ್ಯ ಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳು ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದಂತೆ ಕಾಣುತ್ತಿವೆ.
ರಾಜಕೀಯ ಪಕ್ಷಗಳು ನಡೆಸುವ ಸಮಾವೇಶಗಳು ಕೋವಿಡ್ ಸೂಪರ್ ಸ್ಪ್ರೆಡರ್ ಆಗಿ ಪರಿಣಮಿಸಲಿವೆ. ಈ ಮಧ್ಯೆ ಅಲಹಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಚುನಾವಣೆಗಳನ್ನು ಒಂದೆರಡು ತಿಂಗಳುಗಳ ಕಾಲ ಮುಂದೂಡುವಂತೆ ಮನವಿ ಮಾಡಿದ್ದರು. ಚುನಾವಣೆ ನಡೆಯುವ ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ನಡೆಸಿ ದಿನಾಂಕಗಳನ್ನು ಘೋಷಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.
ಆದರೆ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಹೆಚ್ಚು ಒಲವು ಹೊಂದಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಬುಧವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಮುಖ್ಯ ಚುನಾವಣಾಧಿಕಾರಿ ಸುಶೀಲ್ ಚಂದ್ರ ಮತ್ತಿತ್ತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ರಾಷ್ಟ್ರೀಯ ಪಕ್ಷಗಳ ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರು ನಿಗದಿತ ಸಮಯದಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿವೆ.
ಈ ಸಂಬಂಧ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ, BSP ಹಾಗೂ RLD ಪಕ್ಷದ ಪ್ರತಿನಿಧಿಗಳು ಕೋವಿಡ್ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸುವಂತೆ ಆಯೋಗಕ್ಕೆ ಸಲಹೆಯನ್ನ ನೀಡಿವೆ. ಈ ಸಂಬಂಧ ಆಯೋಗವು ಪಂಚರಾಜ್ಯಗಳ ಚುನಾವಣೆ ದಿನಾಂಕವನ್ನು ಜನವರಿಯಲ್ಲಿ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.
ಸಭೆ ನಂತರ ಮುಖ್ಯ ಚುನಾವಣಾಧಿಕಾರಿ ಸುಶೀಲ್ ಚಂದ್ರ ಮಾತನಾಡಿ, ʻʻಚುನಾವಣೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಮರುಕ್ಷಣದಿಂದ ನಮ್ಮ ಕರ್ತವ್ಯ ಶುರುವಾಗುತ್ತದೆ. ಅಲ್ಲಿಯವರೆಗೂ ಕೋವಿಡ್ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆʼʼ ಎಂದು ತಿಳಿಸಿದ್ದಾರೆ.
ಹಾಲಿ ನಡೆಯುತ್ತಿರುವ ಚುನಾವಣಾ ರ್ಯಾಲಿಗಳಲ್ಲಿ ಕೋವಿಡ್ ಮಾರ್ಗಸೂಚಿಗಳು ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿರುವ ಬಗ್ಗೆ ಆಯೋಗವು ಕ್ರಮವನ್ನು ಜರುಗಿಸಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರ “ಈ ಬಗ್ಗೆ ನಾವು ಈಗಾಗಲೇ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆಯನ್ನ ನಡೆಸಿದ್ದೇವೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ನಾವು ಆಯೋಗದ ಕಡೆಯಿಂದ ನಾವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದೇವೆ” ಎಂದು ಉತ್ತರಿಸಿದ್ದಾರೆ.
ಸದ್ಯ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ಚುನಾವಣೆಗಳನ್ನು ನಡೆಸಲು ಆಗ್ರಹಗಳು ಕೇಳಿ ಬಂದಿರುವ ಕಾರಣ ನಾವು ಈ ಬಗ್ಗೆ ಪರಿಶೀಲಿಸಲಿದ್ದೇವೆ ಮತ್ತು ಚುನಾವಣೆ ನಡೆಯುವ ಇನ್ನು ನಾಲ್ಕು ರಾಜ್ಯಗಳಲ್ಲು ಸಹ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಚಂದ್ರ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಸಭೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಗಿಸಿರುವುದಾಗಿ ಗೋಚರಿಸುತ್ತಿವೆ. ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿವೆ ಎಂದು ತಿಳಿಸಿದ್ದಾರೆ.
ಚುನಾವಣೆ ಮುಗಿದ ನಂತರ ಸೋಂಕು ಹೆಚ್ಚಾಗಿ ಹರಡದಂತೆ ಕ್ರಮಗಳನ್ನು ವಹಿಸಲಾಗುವುದು. ಮತದಾನದ ಅವಧಿಯನ್ನ ಒಂದು ಗಂಟೆ ಹೆಚ್ಚಿಸಲಾಗುವುದು. ಮತದಾನ ನಡೆಯುವ ಪ್ರದೇಶದ ಸುತ್ತಮುತ್ತ ಕೋವಿಡ್ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಪಾಲಿಸಲಾಗುವುದು ಮತ್ತು ಹೆಚ್ಚುವರಿ ಬೂತ್ ಗಳನ್ನು ಸ್ಥಾಪಿಸಲಾಗುವುದು . ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸುಶೀಲ್ ಚಂದ್ರ ವಿವರಿಸಿದ್ದಾರೆ.