ನವದೆಹಲಿ: ಅದಾನಿ ಸಮೂಹದ ವಿಚಾರದಲ್ಲಿ ಮುಚ್ಚಿಡುವುದಕ್ಕೆ ಅಥವಾ ಭಯ ಪಡುವುದಕ್ಕೆ ಏನೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಸ್ಪಷ್ಟನೆ ನೀಡಿದ್ದಾರೆ.
ಆಡಳಿತಾರೂಢ ಬಿಜೆಪಿಯು ಉದ್ಯಮಿ ಗೌತಮ್ ಅದಾನಿ ಅವರ ಪರವಾಗಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
ಅದಾನಿ ಸಮೂಹದ ಷೇರು ಅಕ್ರಮದ ಕುರಿತು ಇತ್ತೀಚೆಗೆ ಹಿಂಡನ್ ಬರ್ಗ್ ಎಂಬ ಸಂಶೋಧನಾ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ, ಅದಾನಿ ಸಮೂಹವು ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿತ್ತು.
ಹೀಗಾಗಿ ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಲೇಬೇಕೆಂದು ಪಟ್ಟು ಹಿಡಿದ ವಿರೋಧ ಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ಬಜೆಟ್ ಅದಿವೇಶನದ ಕಲಾಪಕ್ಕೆ ಸೋಮವಾರ ಪದೇ ಪದೇ ಅಡ್ಡಿಪಡಿಸಿದವು. ಇದರಿಂದಾಗಿ ಅಧಿವೇಶನವನ್ನು ಮಾರ್ಚ್ 13ಕ್ಕೆ ಮುಂದೂಡಲಾಗಿದೆ.
ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಮಾಧ್ಯದವರೊಂದಿಗೆ ಮಾತನಾಡಿರುವ ಅಮಿತ್ ಶಾ, ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಮನಕ್ಕೆ ತಂದಿದೆ. ಸುಪ್ರೀಂ ಕೋರ್ಟ್’ಗೆ ವಿಷಯ ಮುಟ್ಟಿದ ಬಳಿಕ ಸಚಿವನಾಗಿ ನಾನು ಹೇಳಿಕೆ ನೀಡುವುದು ಸರಿಯಲ್ಲ. ಆದರೆ ಇದರಲ್ಲಿ ಬಿಜೆಪಿಗೆ ಮುಚ್ಚಿಡಲು ಏನೂ ಇಲ್ಲ, ಭಯಪಡಲೂ ಏನೂ ಇಲ್ಲ ಎಂದು ಹೇಳಿದ್ದಾರೆ.
ಅವರು (ವಿರೋಧ ಪಕ್ಷದವರು) ಏಕೆ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತಿಲ್ಲ? ಪೆಗಾಸಸ್ ಪ್ರಕರಣ ಬೆಳಕಿಗೆ ಬಂದಾಗಲೂ ಸಾಕ್ಷಿಯೊಂದಿಗೆ ಕೋರ್ಟ್’ಗೆ ಹೋಗಿ ಎಂದು ಅವರಿಗೆ ಹೇಳಿದ್ದೆ. ಆದರೆ, ಹಾಗೆ ಮಾಡಲಿಲ್ಲ. ಅವರಿಗೆ ಬೊಬ್ಬೆ ಹೊಡೆಯುವುದಷ್ಟೇ ಗೊತ್ತಿದೆ. ನ್ಯಾಯಾಲಯ ನಮ್ಮ ಹಿಡಿತದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು, ಕೇಸರಿ ಪಕ್ಷಕ್ಕೆ (ಬಿಜೆಪಿಗೆ) 2024ರ ಸಾರ್ವತ್ರಿಕ ಚುನಾವಣೆಗೆ ಪ್ರತಿಸ್ಪರ್ಧಿಗಳೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಸಂಪೂರ್ಣ ಬೆಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.