ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ನಡೆದ ಕಾಲ್ತುಳಿತ ದುರಂತದ ಬೆನ್ನಲೇ.. ಈಗ ಪ್ರಯಾಗರಾಜ್ ನ ಮಹಾ ಕುಂಭಮೇಳದಲ್ಲಿ (Maha kumbh 2025) ನಡೆದ ಕಾಲ್ತುಳಿತ (Stampede case) ದುರಂತದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಈ ದುರಂತದಲ್ಲಿ ಸಾವಿಗೀಡಾದ ಜನರ ಸಂಖ್ಯೆ ಎಷ್ಟು ಎಂಬ ಬಗ್ಗೆ ಮತ್ತೊಮ್ಮೆ ಚರ್ಚೆ ಗರಿಗೆದರಿದೆ.

ಹೌದು ಮಹಾಕುಂಭದಲ್ಲಿ ಮೌನಿ ಅಮವಾಸ್ಯೆಯ ಹಿಂದಿನ ರಾತ್ರಿ ನಡೆದ ಕಾಲ್ತುಳಿತದಲ್ಲಿ ಸಂಭವಿಸಿದ ಸಾವಿನ ಬಗ್ಗೆ ಉತ್ತರ ಪ್ರದೇಶ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಈ ಬಗ್ಗೆ ಖಾಸಗಿ ಮಾಧ್ಯಮ ಸಂಸ್ಥೆ ಬಿಬಿಸಿ ವಾಸ್ತವ ವರದಿ ಮಾಡಿರುವುದು ಕೋಲಾಹಲಕ್ಕೆ ಕಾರಣವಾಗಿದೆ .
ಉತ್ತರ ಪ್ರದೇಶ ಸರ್ಕಾರ ಈ ಕಾಲ್ತುಳಿತದಲ್ಲಿ ಕೇವಲ 37 ಜನರು ಸಾವನ್ನಪ್ಪಿದ್ದಾರೆ ಎಂದು ಈ ಹಿಂದೆ ಹೇಳಿಕೊಂಡಿತ್ತು. ಆದರೆ ಬಿಬಿಸಿ ಈ ಬಗ್ಗೆ ಸಂಬಂಧಿತ ಪುರಾವೆಗಳನ್ನು ಕಲೆಹಾಕಿ ಪ್ರಸ್ತುತಪಡಿಸಿದ್ದು, ಆ ಪ್ರಕಾರ ಈ ಕಾಲ್ತುಳಿತದಲ್ಲಿ ಕನಿಷ್ಠ 82 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.

ಈ ವರದಿ ಸಾರ್ವಜನಿಕವಾದ ನಂತರ, ಸಮಾಜವಾದಿ ಪಕ್ಷದ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಸರ್ಕಾರ ನೀಡಿರುವ ಸಂಖ್ಯೆ ಮತ್ತು ಬಿಬಿಸಿ ಹೇಳಿದ ಈ ಅಂಕಿ ಅಂಶಗಳಲ್ಲಿನ ದೊಡ್ಡ ವ್ಯತ್ಯಾಸದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.