ಸೋಮವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಸಲುವಾಗಿ ಕರ್ನಾಟಕ್ಕೆ ಆಗಮಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಸುಮಾರು 12,795 ಕೋಟಿ ಮೌಲ್ಯದ ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಗಡ್ಕರಿ, ನಾನು ಕೇಂದ್ರ ಜಲಸಂಪನ್ಮೂಲ ಸಚಿನನಾಗಿದ್ದ ಸಮಯದಲ್ಲಿ ಸುಮಾರು 20 ಅಂತರರಾಜ್ಯ ಜಲ ವಿವಾದವನ್ನು ಬಗೆಹರಿಸಿದೆ. ಆದರೆ, ಕರ್ನಾಟಕ ಮಹಾರಾಷ್ಟ್ರ ನಡುವಿನ ಕೃಷ್ಣ ಜಲ ವಿವಾದವನ್ನು ನನ್ನಿಂದ ಬಗೆಹರಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಿಸುವ ಸಂಬಂಧ ಮಾತನಾಡಿ, ಪ್ರತಿ ವರ್ಷ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರವಾಹ ಬಂದಾಗಲೆಲ್ಲ ಅಲ್ಲಿರುವ ಜನರು ಆಲಮಟ್ಟಿ ಜಲಾಶಯವನ್ನು ದೂರುತ್ತಾರೆ. ವಾಟರ್ ಗ್ರಿಡ್ಗಳನ್ನು ಸರಿಯಾಗಿ ರೂಪಿಸುವ ಮೂಲಕ ಈ ರೀತಿ ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ನಾವು ಕೆರೆಗಳನ್ನು ಸರ್ಮಪಕವಾಗಿ ನಿರ್ವಹಿಸಬೇಕು ಮತ್ತು ನದಿ ಪಾತ್ರಗಳು ಒತ್ತುವರಿಯಾಗದಂತೆ ಎಚ್ಚರ ವಹಿಸಬೇಕು. ಇಂತಹ ಕ್ರಮಗಳನ್ನು ಅಗತ್ಯವಾಗಿ ಪಾಲಿಸಿದರೆ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.

ಈ ವೇಳೆ ನೂತನ ಯೋಜನೆಗಳ ಬಗ್ಗೆ ಮಾತನಾಡಿ, ಬೆಳಗಾವಿ ಪುಣೆ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುವುದು. ಈ ಯೋಜನೆಯೂ ಕಾರ್ಯರೂಪಕ್ಕೆ ಬಂದರೆ 100 ಕಿ.ಮೀಗಳ ಅಂತರ ಕಡಿಮೆಯಾಗಲಿದೆ. ಹಾಗೆಂದ ಮಾತ್ರಕ್ಕೆ ಈಗಿರುವ ಹೆದ್ದಾರಿಯ ಪ್ರಾಮುಖ್ಯತೆ ಏನು ಕಡಿಮೆಯಾಗುವುದಿಲ್ಲ ಎಂದರು.
ಸರ್ಕಾರವೂ ಹೆದ್ದಾರಿ ಯೋಜನೆಗಳನ್ನು ಘೋಷಣೆ ಮಾಡಿದ ನಂತರ ಭೂಮಾಫಿಯಾದವರು ಜನರಿಂದ ಭೂಮಿಯನ್ನು ಖರೀದಿಸಿ, ನಂತರ ಅದೇ ಭೂಮಿಯನ್ನು ದೊಡ್ಡಮೊತ್ತಕ್ಕೆ ವಾಪಸ್ ಸರ್ಕಾರಕ್ಕೆ ಮಾರಿಕೊಳ್ಳತ್ತಾರೆ. ಹೆದ್ದಾರಿಗೆ ಹೊಂದಿಕೊಂಡಿರುವ ಭೂಮಿಗಳನ್ನು ಸರ್ಕಾರವೇ ಖರೀದಿಸಿ ಸ್ಮಾರ್ಟ್ ಹಳ್ಳಿಗಳ್ಳನ್ನು ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಮೊಮ್ಮಾಯಿಗೆ ವಿನಂತಿ ಮಾಡಿದರು.
ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಸಲುವಾಗಿ ಹಲವು ರಸ್ತೆಗಳನ್ನು ನಿರ್ಮಿಸಲಾಗಿದೆ. ಬಾಗಲಕೋಟೆ ಜಿಲ್ಲೆಯಿಂದ ಮಹಾರಾಷ್ಟ್ರದ ಪಂಡರಾಪುರ ಹಾಗೂ ತುಳಜಾಪುರಕ್ಕೆ ಸಂಪರ್ಕಿಸಲು ರಸ್ತೆಗಳನ್ನು ನಿರ್ಮಿಸಲಾಗಿದೆ. ರಸ್ತೆ ಹಾಗೂ ಹೆದ್ದಾರಿ ಯೋಜನೆಗಳಿಗೆ ಹೂಡಿಕೆ ಮಾಡಲು ನಮ್ಮಗೆ ಎಂದಿಗೂ ಸಂಪನ್ಮೂಲ ಕೊರತೆ ಎದುರಾಗಿಲ್ಲ. ಈವರೆಗೆ ನಾನು ಸಚಿವನಾದ ನಂತರ ಒಟ್ಟು 50 ಸಾವಿರ ಲಕ್ಷ ಕೋಟಿಯನ್ನು ಯೋಜನೆಗಳಿಗಾಗಿ ವಿನಿಯೋಗಿಸಿದ್ದೇನೆ. 2024ರ ವೇಳೆಗೆ ಭಾರತದ ಹೆದ್ದಾರಿಗಳನ್ನು ವಿಶ್ವದರ್ಜೆಗೇರಿಸಲಾಗುವುದು ಎಂದು ಭರವಸೆ ನೀಡಿದರು.
