ಹಾವೇರಿ : ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಜಿಲ್ಲೆಯಲ್ಲಿ ನಡೆಯಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಿನ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಈ ವಿಷಯ ತಿಳಿಸಿದ್ದು, ಮುಂದಿನ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬ ಬಗ್ಗೆ ಚರ್ಚೆ ಆಯ್ತು. ಬೆಂ.ಗ್ರಾಮಾಂತರ, ಬೆಳಗಾವಿ , ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಸೇರಿದಂತೆ ಒಟ್ಟು 9 ಜಿಲ್ಲೆಗಳು ಸಾಹಿತ್ಯ ಸಮ್ಮೇಳನ ನಡೆಸುವ ಬೇಡಿಕೆ ಇಟ್ಟಿದ್ದವು.
ಒಟ್ಟು 46 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. 17 ಮತಗಳು ಮಂಡ್ಯ ಜಿಲ್ಲೆಗೆ ಬಂತು. ಬಳ್ಳಾರಿ ಜಿಲ್ಲೆಗೆ 16 ಮತಗಳು ಬಂದವು. ಉತ್ತರ ಕನ್ನಡ ಜಿಲ್ಲೆಗೆ ಒಂದೂ ಮತ ಬರಲಿಲ್ಲ. ಅತಿ ಹೆಚ್ಚು ಮತ ಪಡೆದ ಮಂಡ್ಯ ಜಿಲ್ಲೆಯಲ್ಲಿ ಮುಂದಿನ ಅಖಿಲ ಭಾರತ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಮಂಡ್ಯ ಜಿಲ್ಲೆಯಲ್ಲಿ ಮುಂದಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ ಮಾಡಲಾಗಿದ್ದು, ಉಳಿದ ಕೆಲವು ಅಂಶಗಳನ್ನು ಬಹಿರಂಗ ಸಭೆಯಲ್ಲಿ ಹೇಳುವುದಾಗಿ ಮಹೇಶ್ ಜೋಷಿ ತಿಳಿಸಿದರು.

ಶನಿವಾರ ಡಾ. ಮಹೇಶ್ ಜೋಶಿ ನೇತೃತ್ವದಲ್ಲಿ ಸಭೆ ನಡೆದರೂ ಸಹ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಮಹೇಶ್ ಜೋಶಿ ಮುಂದಿಟ್ಟ ಹೊಸ ಸೂತ್ರಕ್ಕೆ ಎಲ್ಲಾ ಜಿಲ್ಲೆಗಳು ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಭಾನುವಾರಕ್ಕೆ ಸಭೆ ಮುಂದೂಡಲಾಗಿತ್ತು.
ಚಾಮರಾಜನಗರ, ಯಾದಗಿರಿ, ರಾಮನಗರ ಜಿಲ್ಲೆಗಳಲ್ಲಿ ಇದುವರೆಗೂ ಸಾಹಿತ್ಯ ಸಮ್ಮೇಳನ ನಡೆದಿಲ್ಲ ಎಂಬ ಕುರಿತು ಸಭೆಯಲ್ಲಿ ಚರ್ಚೆ ನಡೆದಿತ್ತು. ರಾಜಕೀಯ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ತಿಂಗಳು ಸ್ಥಳ ನಿರ್ಧರಿಸೋಣ ಎಂದು ತಿಳಿಸಿದರು .