ದೇಶದಲ್ಲಿ ನೀಟ್ ಎಕ್ಸಾಂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ನಡೆದು ತಿಂಗಳಾಗ್ತಿದೆ. ಇಲ್ಲಿವರೆಗೂ ಸಿಬಿಐನವ್ರು ಹಲವರನ್ನು ಬಂಧಿಸಿದ್ದಾರೆ. ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳಿದ್ದಾರೆ, ಅವರಿಗೂ ಶಿಕ್ಷೆ ಆಗ್ಬೇಕು ಎಂದು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳ ಒಕ್ಕೊರಲಿನಿಂದ ಆಗ್ರಹ ಮಾಡಿದ್ದಾರೆ. ನಿನ್ನೆ ಸಂಸತ್ ಕಲಾಪದಲ್ಲೇ ಪ್ರತಿಪಕ್ಷದ ನಾಯಕರು ಪರೀಕ್ಷಾ ಅಕ್ರಮದ ಬಗ್ಗೆ ಧನಿ ಎತ್ತಿದ್ದಾರೆ. 7 ವರ್ಷದಲ್ಲಿ 70 ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿದೆ ಆಗಿದೆ ಅನ್ನೋ ಚರ್ಚೆ ಆಗ್ಬೇಕಿತ್ತು. ಆದ್ರೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳ ಮಾತು ಕೇಳಿಸದಂತೆ ಮೈಕ್ ಮ್ಯೂಟ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
![](https://pratidhvani.com/wp-content/uploads/2024/06/rahul-gandhi_1200x630xt-1024x538.jpg)
ಸಂಸತ್ನಲ್ಲಿ ನೀಟ್ ಪರೀಕ್ಷೆ ಹಗರಣದ ಬಗ್ಗೆ ರಾಹುಲ್ಗಾಂಧಿ ಚರ್ಚೆಗೆ ಮುಂದಾದ್ರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ರಾಷ್ಟ್ರಪತಿ ಭಾಷಣದ ಮೇಲಷ್ಟೇ ಚರ್ಚೆ ಮಾಡ್ಬೇಕು.. ಬೇರೆ ವಿಷ್ಯ ಚರ್ಚೆ ಬೇಡ ಎಂದು ಮೊದಲೇ ವಾರ್ನ್ ಮಾಡಿದ್ರು. ವಿಪಕ್ಷದವ್ರು ಪಟ್ಟು ಹಿಡಿದಿದ್ರು, ರಾಹುಲ್ಗಾಂಧಿ ಭಾಷಣ ಮಾಡ್ತಿದ್ದಾಗ ಮೈಕ್ ಆಫ್ ಮಾಡಿಸಿದ್ರು ಅಂತಾ ವಿರೋಧ ಪಕ್ಷಗಳು ಆರೋಪ ಮಾಡಿದ್ರು. ನಾನು ಮಾತಾಡ್ತಿದ್ದೀನಿ, ನನ್ನ ಮೈಕ್ ಆಫ್ ಆಗಿದೆ. ನಿಮ್ಮತ್ರ ಬಟನ್ ಇದ್ಯಲ್ಲ. ಅದನ್ನ ಒತ್ತಿ ಆನ್ ಮಾಡಿ ಎಂದು ಸದನದಲ್ಲೇ ಹೇಳುವ ಮೂಲಕ ನಮ್ಮ ಮಾತಿಗೆ ಕಡಿವಾಣ ಹಾಕಬೇಡಿ ಅಂದ್ರು. ಆದರೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ನಾನು ಮೈಕ್ ಬಂದ್ ಮಾಡಿಲ್ಲ. ಇಲ್ಲಿನ ವ್ಯವಸ್ಥೆ ಏನಂತ ಗೊತ್ತಿರಲಿ. ಇಲ್ಲಿ ಯಾವ ಬಟನ್ನೂ ಇರಲ್ಲ ಅಂದ್ರು.
![](https://pratidhvani.com/wp-content/uploads/2024/06/ನೀಟ್-3-1024x576.jpg)
ದೇಶದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಅವರಿಗೆ ನಾವು ಜಂಟಿ ಸಂದೇಶ ಕೊಡಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಪಟ್ಟು ಹಿಡಿದು ಮಾತನಾಡಿದ್ರು. ಸರ್.. ಆಯ್ತು.. ಕೇಳಿಸಿಕೊಳ್ಳಿ.. ವಿಪಕ್ಷ-ಸರ್ಕಾರ ಜಂಟಿ ಸಂದೇಶ ಕೊಡ್ಬೇಕು. ವಿದ್ಯಾರ್ಥಿಗಳ ಭವಿಷ್ಯದ ವಿಚಾರ ಇದು. ನೀಟ್ ವಿಷ್ಯವನ್ನ ಚರ್ಚೆ ಮಾಡಲೇಬೇಕು ಅಂದ್ರು. ರಾಹುಲ್ ಗಾಂಧಿ ನೀಟ್ ಅಕ್ರಮದ ವಿಷಯ ಪ್ರಸ್ತಾಪ ಮಾಡ್ತಿದ್ದಂತೆ ಮತ್ತೆ ಮೈಕ್ ಆಫ್ ಆಯ್ತು.. ಸ್ಪೀಕರ್ ಓಂ ಬಿರ್ಲಾ ರಾಹುಲ್ಗಾಂಧಿ ಮಾತನ್ನ ಮೊಟಕುಗೊಳಿಸಿ ಕೇಂದ್ರ ಸಂಸದೀಯ ಮಂತ್ರಿ ಅರ್ಜುನ್ ರಾಮ್ರಿಗೆ ಮಾತಾಡಲು ಅವಕಾಶ ಕೊಟ್ರು. ಇದ್ರಿಂದ ಪ್ರತಿಪಕ್ಷದವರು ಕೆರಳಿ ಕೆಂಡವಾದ್ರು..
ವಿಪಕ್ಷಗಳ ಮನವಿಗೆ ಸ್ಪೀಕರ್ ಓಂ ಬಿರ್ಲಾ ಕ್ಯಾರೆ ಅನ್ನಲಿಲ್ಲ.. ಕೊನೆಗೆ ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿದ್ರು. ಮತ್ತೆ ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಕಲಾಪ ಶುರುವಾಯ್ತು.. ಮತ್ತೆ ಕೇಂದ್ರ ಸಚಿವ ಕಿರಣ್ ರಿಜೀಜುಗೆ ಮಾತಾಡಲು ಅವಕಾಶ ಕೊಟ್ರು. ನೀಟ್ ವಿಷ್ಯದಲ್ಲಿ ಚರ್ಚೆಗೆ ಮತ್ತೆ ಪಟ್ಟು ಹಿಡಿದ್ರು.. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಷ್ಟ್ರಪತಿ ಭಾಷಣದ ಮೇಲೆ ಚರ್ಚೆ ಮಾಡಲ್ವಾ? ರಾಷ್ಟ್ರಪತಿ ಭಾಷಣ ಬಗ್ಗೆ ಚರ್ಚೆ ಆಗಬಾರದೇ? ಆಯ್ತು ಬಿಡಿ ಕಲಾಪ ಮುಂದೂಡಿಕೆ ಮಾಡ್ತೀನಿ ಎಂದೇಳಿ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ ಎಂದು ತಿಳಿಸಿ ಎದ್ದು ಹೋದ್ರು.
![](https://pratidhvani.com/wp-content/uploads/2024/06/Loksabha.jpg)
ರಾಜ್ಯಸಭೆಯಲ್ಲೂ ನೀಟ್ ಅಕ್ರಮದ ವಿಚಾರವನ್ನ ಮಲ್ಲಿಕಾರ್ಜುನ ಖರ್ಗೆ ಚರ್ಚೆಗೆ ತಗೊಂಡ್ರು.. ಆದ್ರೆ ರಾಜ್ಯಸಭೆ ಅಧ್ಯಕ್ಷರಾದ ಜಗದೀಪ್ ಧನ್ಕರ್ ಅವಕಾಶ ಕೊಡ್ಲಿಲ್ಲ.. ಖರ್ಗೆ ಜೀ ಬೆಂಗಳೂರಿಗೆ ಹೋಗ್ತಿದ್ದೀರಾ..? ನಿಮಗೆ ಸ್ಪೆಷಲ್ ಫ್ಲೈಟ್ ಕಾಯ್ತಾ ಇದೆ. ಬೇಗ ನಿಮ್ಮ ಭಾಷಣ ಮುಗಿಸಿಬಿಡಿ ಅಂದ್ರು. ಆದರೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಮಾನಯಾನ ಸಚಿವರು ನಮ್ಮವರೇ, ಹೈದ್ರಾಬಾದ್ನವ್ರು ಅವ್ರತ್ರ ಮಾತಾಡ್ತಿನಿ. ಬೇಕಿದ್ರೆ ವಿಮಾನ ಟೈಂ ವಿಸ್ತರಿಸಿಕೊಳ್ತೀನಿ. ದೇಶದ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ನೀಟ್ ಎಕ್ಸಾಂ ಪೇಪರ್ ಲೀಕ್ ಆಗುತ್ತೆ, ಕಳೆದ 7 ವರ್ಷದಲ್ಲಿ 70 ಸಲ ಪೇಪರ್ ಲೀಕ್ ಆಗಿದೆ ಅಂತಾ ಚಾಟಿ ಬೀಸಿದ್ರು,
ಆದರೆ ರಾಜ್ಯದ ಪರವಾಗಿ ಸದಾ ದನಿ ಎತ್ತುವ ಮಾಜಿ ಪ್ರಧಾನಿ ದೇವೇಗೌಡ್ರು, ನೀಟ್ ಅಕ್ರಮದ ಬಗ್ಗೆ ಮಾತನಾಡಿದ್ರು. ಆದರೆ NDA ಮೈತ್ರಿಕೂಟದಲ್ಲಿ ಇರುವ ಕಾರಣಕ್ಕೆ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ರು. ನೀಟ್ ಪರೀಕ್ಷೆಯ ಕುರಿತು, ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಸದನದಲ್ಲಿ ಅಭಿಪ್ರಾಯ ಮಂಡಿಸಿ, ನೀಟ್ ಪರೀಕ್ಷೆಯ ಸುತ್ತ ನಡೆದಿರುವ ಘಟನೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಈಗಾಗಲೇ ವಿದ್ಯಾರ್ಥಿಗಳ ಹಿತರಕ್ಷಣೆ ದೃಷ್ಟಿಯಿಂದ ಕ್ರಮ ಕೈಗೊಂಡು ಸಿಬಿಐ ತನಿಖೆಗೆ ಆದೇಶಿಸಿ ಸರಿಯಾದ ನಿರ್ಧಾರ ಕೈಗೊಂಡಿದೆ. ವಿವಿಧ ರಾಜ್ಯಗಳಲ್ಲಿ ಅಕ್ರಮಕ್ಕೆ ಕಾರಣರಾದವರನ್ನು ಸಿಬಿಐ ಬಂಧಿಸಿದೆ. ತನಿಖೆ ಮುಗಿಯುವ ತನಕ ಪ್ರತಿಪಕ್ಷಗಳು ಸಹಕರಿಸಬೇಕು ಹಾಗೂ ಸರಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಪ್ರಯತ್ನ ಮಾಡಬಾರದು ಎಂದಿದ್ದಾರೆ.
ಈ ವರ್ಷ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಶಿಕ್ಷಣ ಸಚಿವರು ಲೋಕಸಭೆಯಲ್ಲಿ ತುಟಿ ಬಿಚ್ಚಲಿಲ್ಲ.. ಆದ್ರೆ ಹೊರಗೆ ಬಂದು ಇಂಡಿಯಾ ಕೂಟ ಚರ್ಚೆಗೆ ರೆಡಿ ಇರಲಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ. ಆದರೆ ವಿಪಕ್ಷ ನಾಯಕ ರಾಹುಲ್ಗಾಂಧಿ ಮಾತ್ರ ನೀಟ್ ಹಗರಣ ತಾರ್ಕಿಕ ಅಂತ್ಯ ಕಾಣಿಸೋದಾಗಿ ಸವಾಲ್ ಹಾಕಿದ್ದಾರೆ. ಸಂಸತ್ನಲ್ಲಿ ನನಗೆ ಮಾತಾಡೋಕೆ ಅವಕಾಶ ಕೊಡ್ಲಿಲ್ಲ. 2 ಕೋಟಿ ಮಕ್ಕಳ ಭವಿಷ್ಯಕ್ಕೆ ಸಮಸ್ಯೆ ಆಗಿದೆ. 7 ವರ್ಷದಲ್ಲಿ 70 ಸಲ ಪೇಪರ್ ಲೀಕ್ ಆಗಿದೆ. ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ, ಹಗರಣ ನಡೆದಿದೆ. ಹೀಗೆ ಮುಂದುವರೆಯಲು ನಾವು ಬಿಡಲ್ಲ. ಹಗರಣದ ವಿರುದ್ಧ ಕಠಿಣ ನಿರ್ಣಯ ಆಗ್ಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷ್ಣಮಣಿ