ಅಂಬಾವಿಲಾಸ ಅರಮನೆಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಸೋಮವಾರ ಶರನ್ನವರಾತ್ರಿಯ 9ನೇ ದಿನ ಅರಮನೆಯಲ್ಲಿ ಸಂಪ್ರದಾಯಬದ್ಧವಾಗಿ ಆಯುಧ ಪೂಜೆ ನೆರವೇರಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ಅರಮನೆಯ ಕಲ್ಯಾಣ ಮಂಟದದಲ್ಲಿ ರಾಜವಶಂಸ್ಥ ಯದುವೀರ್ ಒಡೆಯರ್ರಿಂದ ಆಯುಧ ಪೂಜೆ ನೆರವೇರಲಿದೆ. ಆಯುಧ ಪೂಜೆ ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಕುದುರೆ, ಹಸು, ವಾಹನಗಳಿಗೆ ಯದುವೀರ್ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ.
ಮತ್ತೊಂದೆಡೆ ಆಯುಧ ಪೂಜೆ ಆಚರಣೆಗೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ನಗರದ ದೇವರಾಜ ಮಾರುಕಟ್ಟೆ, M.G. ರಸ್ತೆ ಮಾರುಕಟ್ಟೆಯಲ್ಲಿ ಆಯುಧ ಪೂಜೆಯ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಮಾರುಕಟ್ಟೆ, ರಸ್ತೆ ಬದಿಗಳಲ್ಲಿ ಪೂಜಾ ಸಾಮಗ್ರಿ, ಬೂದು ಕುಂಬಳಕಾಯಿ, ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ದೇವರಾಜ ಮಾರ್ಕೆಟ್, ವಾಣಿವಿಲಾಸ ಮಾರ್ಕೆಟ್ ನಲ್ಲೂ ವ್ಯಾಪಾರ ವಹಿವಾಟು ಹೆಚ್ಚಿದೆ.

ಜಂಬೂಸವಾರಿಗೂ ದಿನಗಣನೆ ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಮೈಸೂರಿನಾದ್ಯಂತ ಪೊಲೀಸ್ ಇಲಾಖೆಯಿಂದ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 4 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿರುವ ಅಭಿಮನ್ಯು ಆನೆ ಸುತ್ತ ಜನಸಂದಣಿ ಉಂಟಾಗದಂತೆ ಮುನ್ನೆಚ್ಚರಿಕೆವಹಿಸಲಾಗಿದೆ. ಇನ್ನು ಜಂಬೂಸವಾರಿ ಬಳಿಕ ಪಂಜಿನ ಕವಾಯತ್ನಲ್ಲೂ ಯಾವುದೇ ರೀತಿ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಜಂಬೂ ಸವಾರಿಯಲ್ಲಿ ಕಣ್ಮನ ಸೆಳೆಯುವ 40ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ತಯಾರಾಗುತ್ತಿವೆ. ನಗರದ APMC ಆವರಣದಲ್ಲಿ ದಸರಾ ಸ್ತಬ್ಧ ಚಿತ್ರಗಳು ತಯಾರಾಗುತ್ತಿವೆ. ಅ.24ರ ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿ ವೇಳೆ ಸ್ತಬ್ಧಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ನಾಡಿನ ಇತಿಹಾಸ, ಪರಂಪರೆ, ಸಂಸ್ಕೃತಿಗಳ ಸ್ತಬ್ಧ ಚಿತ್ರಗಳ ಮೂಲಕ ಅನಾವರಣಗೊಳ್ಳಲಿವೆ. ಪ್ರವಾಸಿಗರನ್ನ ಆಕರ್ಷಿಸಲು ಕಲಾವಿದರು ಉತ್ತಮ ರೀತಿಯಲ್ಲಿ ಸ್ತಬ್ಧ ಚಿತ್ರ ತಯಾರಿಸುತ್ತಿದ್ದಾರೆ. ಆಯಾ ಜಿಲ್ಲೆಯ ಪ್ರಾಕೃತಿಕ, ಐತಿಹಾಸಿಕ ವಿಶೇಷತೆಯು ಸ್ತಬ್ಧ ಚಿತ್ರಗಳ ಮೂಲಕ ಅನಾವರಣಗೊಳ್ಳಲಿವೆ. ಮೈಸೂರು ಜಿಲ್ಲೆಯಿಂದ ನಾಲ್ವಡಿ ಕೊಡುಗೆಗಳ ಅನಾವರಣ, ಮಂಡ್ಯ ಜಿಲ್ಲೆಯಿಂದ ಸಾಂಪ್ರದಾಯಕ ಉದ್ಯಮ ಆಲೆಮನೆ, ಚಾಮರಾಜನಗರ ಜಿಲ್ಲೆಯಿಂದ ಜಾನಪದ ಭಕ್ತಿಯ ಬೀಡು, ಹುಲಿ ಆನೆಗಳ ಸಂತೃಪಿ ಕಾಡು ಸ್ತಬ್ಧಗಳ ಪ್ರದರ್ಶನ ಸೇರಿ ಅನೇಕ ಸ್ತಬ್ಧ ಚಿತ್ರಗಳು ಅನಾವಣಗೊಳ್ಳಲಿವೆ.