ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆಯೇ ʼಅಗ್ನಿಪಥ್ʼ ಎನ್ನಲಾದ ಬಿಜೆಪಿ ಯೋಜನೆಗೆ ಈಗ ದೇಶಾದ್ಯಾಂತ ವಿರೋಧ ವ್ಯಕ್ತವಾಗಿ ದೇಶದ ಹಲವಾರು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದೆ.
ಸರ್ಕಾರದ ತೀವ್ರಗಾಮಿ ಸೇನಾ ನೇಮಕಾತಿ ಯೋಜನೆಯ ವಿರುದ್ಧ ಬಿಹಾರ ರಾಜ್ಯ ಈಗ ದೊಡ್ಡ ಹೋರಾಟ / ಆಂದೋಲನದ ಕೇಂದ್ರಬಿಂದುವಾಗಿದೆ. ಪಾಟ್ನಾ-ಗಯಾ ರೈಲು ಮಾರ್ಗದ ಜಹಾನಾಬಾದ್ ರೈಲು ನಿಲ್ದಾಣದಲ್ಲಿ ಗುರುವಾರ ಸಾವಿರಾರು ಯುವಕರು / ವಿದ್ಯಾರ್ಥಿಗಳು ಜಮಾಯಿಸಿ ಪಾಟ್ನಾ-ಗಯಾ ಪ್ಯಾಸೆಂಜರ್ ರೈಲನ್ನು ತಡೆದಿದ್ದಾರೆ. ರೈಲ್ವೆ ಅಧಿಕಾರಿಗಳು, ಜಿಲ್ಲಾ ಪೊಲೀಸರೊಂದಿಗೆ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಪುನಃಸ್ಥಾಪಿಸಲು ರೈಲ್ವೆ ಹಳಿಯನ್ನು ಬಿಡುವಂತೆ ವಿನಂತಿಸಿದರು. ಆದರೆ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಬಿಡದೆ ಮುಂದುರೆಸಿದ್ದಾರೆ.
ರಾಜ್ಯದ ಮುಜಾಫರ್ಪುರ ಮತ್ತು ಬಕ್ಸರ್ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಪ್ರತಿಭಟನೆ ನಡೆಸಿದರು ಮತ್ತು ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು. ಉತ್ತರಾಖಂಡದ ಕೆಲವು ಭಾಗಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿದೆ.

ವರುಷಗಳ ಹಿಂದೆ ರಮಣ್ ಸಿಂಗ್ ಛತ್ತೀಸ್ಗಢದ ಮುಖ್ಯಮಂತ್ರಿಯಾಗಿದ್ದಾಗ, ನಕ್ಸಲೀಯರನ್ನು ಎದುರಿಸಲು ‘ಸಲ್ವಾ ಜುಡುಂ’ ಎನ್ನುವ ಕ್ವಾಸಿ, ಖಾಸಗಿ ಭದ್ರತಾ ಪಡೆಗಳನ್ನು ಹುಟ್ಟು ಹಾಕಿದರು. ಬಿಜೆಪಿ ಸರಕಾರವಾದರೂ, ಅಲ್ಲಿನ ಎಲ್ಲಾ ವಿರೋಧ ಪಕ್ಷಗಳೂ ಇದನ್ನು ಬೆಂಬಲಿಸಿದವು. ಇವರಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟು, ಅವರ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಕೊಟ್ಟು ನಕ್ಸಲೀಯರನ್ನು ಎದುರಿಸಲು ರಚಿಸಿದ ಖಾಸಗಿ ಪೋಲೀಸ್ ಇಲಾಖೆ ಇದು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಿತು. ಆದರೆ ದಿನಗಳೆದಂತೆ ನಕ್ಸಲೀಯರಿಗಿಂತಾ ಸಲ್ವಾ ಜುಡುಂ ಸದಸ್ಯರ ಹಾವಳಿ ಹೆಚ್ಚಾಯಿತು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಯುವಕರು ಹಳ್ಳಿಹಳ್ಳಿಗಳಲ್ಲಿ ದಾಂಧಲೆ ಎಬ್ಬಿಸತೊಡಗಿದರು. ಜನರನ್ನು ಬೆದರಿಸಿ ಸುಲಿಗೆ ಮಾಡಲಾರಂಭಿಸಿದರು. ನಕ್ಸಲರೆಂದು ತಮಗಾಗದವರನ್ನು ಕೊಲ್ಲತೊಡಗಿದರು. ಅದರ ಜೊತೆಗೆ ಕೇವಲ ಸ್ವಲ್ಪ ದಿನಗಳ ತರಬೇತಿ ಪಡೆದ ಯುವಕರು ಕೆಲವೆಡೆ ನಕ್ಸಲೀಯರ ಕೈಗೆ ಸುಲಭ ಬಲಿಯಾದರು.