ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಎಕ್ಸಿಟ್ ಪೋಲ್ ಲೆಕ್ಕಾಚಾರಗಳು ಬಹುತೇಕ ನಿಜವಾಗಿದ್ದು, ಭಾರತದ ರಾಜಕಾರಣದ ಶಕ್ತಿಕೇಂದ್ರ ಎಂದೇ ಹೇಳಲಾಗುವ ಉತ್ತರಪ್ರದೇಶದಲ್ಲಿ ಮತ್ತೆ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಪಂಜಾಬ್ ಹೊರತುಪಡಿಸಿ ಉಳಿದಂತೆ ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಕೂಡ ಬಿಜೆಪಿ ಅಧಿಕಾರದ ಸಮೀಪದಲ್ಲಿದೆ.
ಪಂಜಾಬ್ ನಲ್ಲಿ ಮಾತ್ರ ಆಮ್ ಆದ್ಮಿ ಪಾರ್ಟಿ(ಎಎಪಿ) ಭಾರೀ ಜನಾದೇಶದೊಂದಿಗೆ ಅಧಿಕಾರ ಹಿಡಿಯಲಿದೆ. ಸದ್ಯದ ಮಾಹಿತಿಯ ಪ್ರಕಾರ ಒಟ್ಟು 117 ಸ್ಥಾನಬಲದ ಅಲ್ಲಿನ ವಿಧಾನಸಭೆಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ ಈಗಾಗಲೇ 90 ಸ್ಥಾನಗಳಲ್ಲಿ ಗೆಲುವು ಪಡೆಯುವುದು ನಿಶ್ಚಿತವಾಗಿದೆ. ಎಎಪಿ ನಂತರದ ಸ್ಥಾನದಲ್ಲಿರುವ ಅಧಿಕಾರರೂಢ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು ಕೇವಲ 16 ಸ್ಥಾನಗಳಲ್ಲಿ ಮಾತ್ರ ಗೆಲುವು ಪಡೆಯುವ ಸಾಧ್ಯತೆ ಇದೆ(ಮತ ಎಣಿಕೆ ಪ್ರಗತಿಯಲ್ಲಿದೆ).
ಎಎಪಿಯ ಆ ಅಭೂತಪೂರ್ವ ಸಾಧನೆಯ ಹಿನ್ನೆಲೆಯಲ್ಲಿ ಅತಿದೊಡ್ಡ ರಾಜ್ಯ ಉತ್ತರಪ್ರದೇಶದ ಚುನಾವಣಾ ಫಲಿತಾಂಶಕ್ಕಿಂತಲೂ ಪಂಜಾಬ್ ಫಲಿತಾಂಶ ದೇಶವ್ಯಾಪಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಪಂಜಾಬ್ ನಲ್ಲಿ ಎಎಪಿ ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ ಆ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಪಂಜಾಬ್ ಉಸ್ತುವಾರಿ ರಾಘವ್ ಛಡ್ಡಾ, “ಎಎಪಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ ಎಂಬುದನ್ನು ಪಂಜಾಬ್ ಚುನಾವಣಾ ಫಲಿತಾಂಶ ತೋರಿಸಿಕೊಟ್ಟಿದೆ. ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬಂದಾಗ ಮೊಟ್ಟಮೊದಲ ಬಾರಿಗೆ ಒಂದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅದಕ್ಕೆ ಹತ್ತು ವರ್ಷ ಬೇಕಾಯಿತು. ಆದರೆ, ಎಎಪಿ ಅಸ್ತಿತ್ವಕ್ಕೆ ಬಂದು ಇನ್ನೂ ಹತ್ತು ವರ್ಷ ಕೂಡ ಪೂರೈಸಿಲ್ಲ. ಈ ಅಲ್ಪ ಅವಧಿಯಲ್ಲೇ ನಾವು ಎರಡು ರಾಜ್ಯದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದೇವೆ. ಈ ಬೆಳವಣಿಗೆ ದೇಶದಲ್ಲಿ ಕಾಂಗ್ರೆಸ್ ಸ್ಥಾನವನ್ನು ತುಂಬಲು ಎಎಪಿ ಮಾತ್ರ ಶಕ್ತವಾಗಿದೆ ಎಂಬುದನ್ನೂ ತೋರಿಸಿಕೊಟ್ಟಿದೆ. ಹಾಗಾಗಿ ಎಎಪಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಬದಲಿಗೆ ಒಂದು ಸಹಜ ಪರ್ಯಾಯ ಆಯ್ಕೆಯಾಗಿ ಜನತೆ ಒಪ್ಪಿಕೊಂಡಿದ್ದಾರೆ” ಎಂದು ವ್ಯಾಖ್ಯಾನಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ ಎರಡನೇ ಅವಧಿಗೆ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಎಎಪಿ, ಅಲ್ಲಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದೆ. ಪಂಜಾಬ್ ನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದ ಎಎಪಿ ಈ ಬಾರಿ ಭರ್ಜರಿ ಜಯ ಗಳಿಸಿದ್ದು, ಅಲ್ಲಿ ಪಕ್ಷದ ನಾಯಕ ಭಗವಂತ್ ಮನ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಕ್ಷಣಗಣನೆ ಆರಂಭವಾಗಿದೆ.
ದೆಹಲಿಯಂತಹ ಮಧ್ಯಮವರ್ಗದ ಶಿಕ್ಷಿತ ಜನರ ಆಯ್ಕೆಯಾಗಿ ಮಾತ್ರ ಎಎಪಿ ಪಕ್ಷ ಉಳಿಯಲಿದೆ. ಭಾರತದ ರೈತರು, ಕೂಲಿಕಾರ್ಮಿಕರು, ಜನಸಾಮಾನ್ಉರ ಆಯ್ಕೆಯಾಗಿ ಎಎಪಿ ಉಳಿಯಲಾರದು ಎಂಬ ವಿಶ್ಲೇಷಣೆಗಳನ್ನು ಪಂಜಾಬ್ ನ ಈ ಗೆಲುವು ತಿರುವುಮುರುವು ಮಾಡಿದೆ. ರೈತರೇ ಹೆಚ್ಚಿರುವ ಮತ್ತು ಸಂಘಟಿತ ರೈತ ಶಕ್ತಿಗೆ ಹೆಸರಾಗಿರುವ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿಯ ಈ ಗೆಲುವು ದೇಶ ವ್ಯಾಪಿ ಸಂಘಟನೆ ವಿಸ್ತರಣೆಗೆ ಅದರ ನಾಯಕತ್ವದ ಉದ್ದೇಶಕ್ಕೆ ದೊಡ್ಡ ಪ್ರೇರಣೆಯಾಗಲಿದೆ.
ಆ ಹಿನ್ನೆಲೆಯಲ್ಲಿಯೇ ರಾಘವ್ ಛಡ್ಡಾ ಮಾತಿನ ಬೆನ್ನಲ್ಲೇ ಪಕ್ಷದ ದೆಹಲಿ ಸಿಎಂ ಮತ್ತು ನಾಯಕ ಮನೀಷ್ ಶಿಷೋಡಿಯಾ, “ಅರವಿಂದ್ ಕೇಜ್ರಿವಾಲ್ ಮಾದರಿಯ ಆಡಳಿತಕ್ಕೆ ಪಂಜಾಬ್ ಜನತೆ ಮಾನ್ಯತೆ ನೀಡಿದ್ದಾರೆ. ಅದರ ಪರಿಣಾಮ ಈ ಚುನಾವಣಾ ವಿಜಯ. ಆ ಜಯದ ಮೂಲಕ ಕೇಜ್ರಿವಾಲ್ ಆಡಳಿತದ ಮಾದರಿ ರಾಷ್ಟ್ರಮಟ್ಟಕ್ಕೆ ವಿಸ್ತರಿಸಿದಂತಾಗಿದೆ” ಎಂದಿದ್ದಾರೆ.
ಬಿಜೆಪಿಗೆ ಪ್ರಬಲ ಪರ್ಯಾಯವೊಂದರ ಕೊರತೆ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ, ಕಾಂಗ್ರೆಸ್ ದಿನೇದಿನೆ ಪತನದ ಹಾದಿ ಹಿಡಿದಿರುವಾಗ ದೇಶದ ಜನತೆಗೆ ಮೋದಿ ಮತ್ತು ಬಿಜೆಪಿಗೆ ಒಂದು ವಿಶ್ವಾಸಾರ್ಹ ಪರ್ಯಾಯವೇ ಇಲ್ಲ ಎಂಬ ರಾಜಕೀಯ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊತ್ತಿನಲ್ಲಿ ಆಮ್ ಆದ್ಮಿ ಪಕ್ಷದ ಈ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಒಂದು ಪರ್ಯಾಯ ಶಕ್ತಿಯನ್ನು ಜನಸಾಮಾನ್ಯರು ಎಎಪಿಯಲ್ಲಿ ಕಂಡಿದ್ದಾರೆ ಎಂಬ ಸಂದೇಶ ರವಾನೆಯಾಗಿದೆ.

“ಬಿಜೆಪಿಯ ಪ್ರಬಲ ಪರ್ಯಾಯ ಶಕ್ತಿಗಳೇ ಇಲ್ಲ. ಆ ಕಾರಣಕ್ಕಾಗಿಯೇ ಇಂದು ಬಿಜೆಪಿ ಅಧಿಕಾರದಲ್ಲಿದೆ. ಹಾಗೆ ಜನರಿಗೆ ಒಂದು ಪರ್ಯಾಯ ಆಯ್ಕೆ ಸಿಕ್ಕ ದಿನ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ. ನಾವೆಲ್ಲಾ ಒಂದಾಗಿ ಅಂತಹ ರಾಜಕೀಯ ಪರ್ಯಾಯವನ್ನು ದೇಶದ ಜನತೆಗೆ ನೀಡಬೇಕಿದೆ” ಎಂದು ಪಶ್ಚಿಮಬಂಗಾಳದ ಸಿಎಂ ಮತ್ತು ಟಿಎಂಸಿ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಮೊನ್ನೆ ತಾನೆ ಹೇಳಿದ್ದರು. ಅವರು ತಮ್ಮ ಎರಡು ಮೂರು ವರ್ಷಗಳ ಪ್ರಯತ್ನವಾದ ರಾಷ್ಟ್ರೀಯ ಮಟ್ಟದ ಪರ್ಯಾಯ ರಾಜಕೀಯ ವೇದಿಕೆಯ ಕುರಿತು ಆ ಮಾತುಗಳನ್ನು ಆಡಿದ್ದರೂ, ಇದೀಗ ಪಂಜಾಬ್ ಚುನಾವಣೆ ಈಗಾಗಲೇ ಜನತೆ ಅಂತಹ ಪರ್ಯಾಯ ರಾಜಕೀಯ ಆಯ್ಕೆಯನ್ನು ಕಂಡುಕೊಂಡಿದ್ದಾರೆ ಎಂಬ ಸಂದೇಶವನ್ನಂತೂ ರವಾನಿಸಿದೆ.
ಕಳೆದ ಆರು ತಿಂಗಳ ಹಿಂದೆ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವ ಕುರಿತು ಪ್ರತಿಕ್ರಿಯಿಸಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, “ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಒಂದು ರಾಜಕೀಯ ಶಕ್ತಿ ಬೇಕು ಎಂದಿದ್ದರೆ, ಅದನ್ನು ದೇಶದ ಜನತೆಯೇ ಕಂಡುಕೊಳ್ಳುತ್ತಾರೆ. ತಮ್ಮ ಜನಾದೇಶದ ಮೂಲಕವೇ ಜನತೆ ಅಂತಹ ಪರ್ಯಾಯವನ್ನು ಸೃಷ್ಟಿಸಲಿದ್ದಾರೆ. ಇನ್ನಾರೋ ಆ ಶಕ್ತಿಯನ್ನು ಕಟ್ಟುವುದು ಸಾಧ್ಯವಿಲ್ಲ. ಕಳೆದ ಹಲವು ದಶಕಗಳಲ್ಲಿ ಅಂತಹ ಅಗತ್ಯಬಿದ್ದಾಗೆಲ್ಲಾ ಈ ದೇಶದ ಜನತೆ ಅಂತಹ ರಾಜಕೀಯ ಪರ್ಯಾಯವನ್ನು ತಾವಾಗಿಯೇ ಕಂಡುಕೊಂಡಿದ್ದಾರೆ” ಎಂದು ಹೇಳಿದ್ದರು.
ಹಾಗೇ, ಕಳೆದ ವರ್ಷ ಗುಜರಾತಿನ ಸೂರತ್ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಎಪಿ ಭಾರೀ ಯಶಸ್ಸು ಸಾಧಿಸಿದ ಬಳಿಕ ಗುಜರಾತ್ ಜನತೆಯನ್ನು ಅಭಿನಂದಿಸಿ ಪ್ರತಿಕ್ರಿಯಿಸಿದ್ದ ಎಎಪಿ ನಾಯಕ ಕೇಜ್ರಿವಾಲ್, “ಬಿಜೆಪಿಗೆ ನಿಜವಾದ ಪರ್ಯಾಯ ಎಎಪಿ ಎಂಬುದನ್ನು ಗುಜರಾತ್ ಜನತೆ ತೋರಿಸಿಕೊಟ್ಟಿದ್ದು, ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ” ಎಂದು ಹೇಳಿದ್ದರು.
ಇದೀಗ ದೆಹಲಿ ವಿಧಾನಸಭಾ ಚುನಾವಣೆಯ ಸತತ ಗೆಲುವಿನ ಬಳಿಕ ಪಂಜಾಬ್ ನಲ್ಲಿ ಭಾರೀ ಸ್ಥಾನಗಳನ್ನು ನೀಡುವ ಮೂಲಕ ಜನತೆ, ಉಳ್ಳವರ(ಕಾರ್ಪೊರೇಟ್ ಮಂದಿಯ ಪಕ್ಷ) ಪಕ್ಷ ಬಿಜೆಪಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷವನ್ನು ನಿಜವಾಗಿಯೂ ಜನಸಾಮಾನ್ಯರ(ಆಮ್ ಆದ್ಮಿ) ಪಕ್ಷವಾಗಿ ಆಯ್ಕೆಮಾಡಿಕೊಂಡಿದ್ದಾರೆಯೇ? ಎಂಬುದು ಚರ್ಚೆಯ ಮುನ್ನೆಲೆಗೆ ಬಂದಿದೆ.