ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿದ್ದು, ಈಗಾಗಲೇ ಅಧ್ಯಯನ ಆರಂಭಿಸಿದೆ, ಇನ್ನು ಈ ಲ್ಯಾಂಡರ್ ಇಳಿದ ಸ್ಥಳವನ್ನು ಶಿವಶಕ್ತಿ ಎಂಬುದಾಗಿ ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಪೀಣ್ಯಾದಲ್ಲಿರುವಂತ ಇಸ್ರೋ ಕಮಾಂಡಿಂಗ್ ಸೆಂಟರ್ ಗೆ ಇಂದು ಭೇಟಿ ನೀಡಿದ ಬಳಿಕ, ವಿಜ್ಞಾನಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮನ್ನು ಭೇಟಿಯಾಗಿದ್ದು ನನಗೆ ತುಂಬಾ ಸಂತೋಷವಾಗಿದೆ, ಎನ್ನುತ್ತಾ ಎಂದಿನಂತೆ ಮಾತು ಆರಂಭಿಸಿದ್ದಾರೆ
ಇಸ್ರೋ ವಿಜ್ಞಾನಿಗಳನ್ನು ಕೊಂಡಾಡಿದ ಪ್ರಧಾನಿ ನಿಮ್ಮ ಧೈರ್ಯ, ಶಕ್ತಿ, ಸಾಮರ್ಥ್ಯಗಳಿಗೆ ನನ್ನ ನಮನಗಳು. ದೇಶದ ಘನತೆಯನ್ನು ಉತ್ತುಂಗಕ್ಕೆ ಏರಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ

ಜಗತ್ತಿನ ಬೃಹತ್ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡುಕೊಂಡಿದೆ. ಪ್ರತಿಯೊಬ್ಬ ವಿಜ್ಞಾನಿಗೂ ನನ್ನದೊಂದು ಸಲ್ಯೂಟ್ ಎಂದು ನುಡಿದಿದ್ದಾರೆ
ಭಾರತದ ಈ ಮಹತ್ತರವಾದ ವೈಜ್ಞಾನಿಕ ಸಾಧನೆಗೆ ವಿಶ್ವವೇ ಕೊಂಡಾಡುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ನನ್ನ ತನು, ಮನ ಸಂತೋಷದಿಂದ ಕೂಡಿದೆ. ಸಮರ್ಪಣಾ ಮನೋಭಾವ, ಕಠಿಣ ಪರಿಶ್ರಮಕ್ಕೆ ನನ್ನ ಸೆಲ್ಯೂಟ್ ಎಂಬುದಾಗಿ ತಿಳಿಸಿದರು.

ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ಪರಾಕ್ರಮ ಕಂಡು ಸಂತೋಷವಾಗಿದೆ. ದೇಶದ ಘನತೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ತಿದ್ದೀರಿ ಎಂಬುದಾಗಿ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದರು. ಇನ್ನು ಪ್ರಧಾನಿ ಮೋದಿ ಮಾತಿಗೆ ಇಸ್ರೋ ವಿಜ್ಞಾನಿಗಳು ಚಪ್ಪಾಳೆಯ ಸುರಿಮಳೆ ಸುರಿಸಿದ್ದರು.