ವಾಲ್ಮೀಕಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಸಚಿವ ಬಿ.ನಾಗೇಂದ್ರ ಸುದ್ದಿಗೋಷ್ಟಿ ನಡೆಸಿದ್ದು, ನಿನ್ನೆ ನಡೆದ ಘಟನೆಯಲ್ಲಿ ನಮ್ಮ ನಿಗಮದ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅವರ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಪ್ರಕರಣದ ತನಿಖೆ ಸಿಐಡಿ ತನಿಖೆಗೆ ವಹಿಸಲಾಗಿದೆ. ಎಂಡಿ ಪದ್ಮನಾಭ ಕೂಡ ಒಂದು ದೂರು ಕೊಟ್ಟಿದ್ದಾರೆ. ಎಂಡಿ ಪದ್ಮನಾಭ್ ಸಹಿ ನನ್ನದಲ್ಲ ಎಂದು ದೂರು ಕೊಟ್ಟಿದ್ದಾರೆ. ನನ್ನ ಗಮನಕ್ಕೆ ಬಾರದೆ ನನ್ನ ಸಹಿ ನಕಲು ಮಾಡಿ ಬ್ಯಾಂಕ್ ಅಧಿಕಾರಿಗಳೇ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಅಂತ ಹೇಳಿದ್ದಾರೆ.
![](https://pratidhvani.com/wp-content/uploads/2024/05/Screenshot-2024-05-28-151602.png)
87 ಕೋಟಿಯಷ್ಟು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಂದು ಸಂಜೆಯೊಳಗೆ ಹಣ ನಿಗಮದ ಖಾತೆಗೆ ವರ್ಗಾಯಿಸುತ್ತೇವೆ ಅಂತ ಯೂನಿಯನ್ ಬ್ಯಾಂಕ್ ಅಧ್ಯಕ್ಷರು ಹೇಳಿದ್ದಾರೆ. ನಮ್ಮ ಡೆಡ್ಲೈನ್ನೊಳಗೆ ಹಣ ವರ್ಗಾಯಿಸದಿದ್ರೆ ಎಫ್ಐಆರ್ ಮಾಡಿಸುತ್ತೇವೆ ಎಂದಿದ್ದಾರೆ. ಡೆತ್ ನೋಟ್ ಆಧಾರದ ಮೇಲೆ ಮೂವರು ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಯಾರು ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ಸುಮ್ಮನೆ ಬಿಡಲ್ಲ. ಸಹಿ ನಕಲೋ ಅಸಲಿಯೋ ಅಂತ ತಿಳಿಯಲು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಎಂಡಿ ಸಹಿ ನಿಜವಾದರೆ ಅವರನ್ನ ಸೇವೆಯಿಂದ ವಜಾ ಮಾಡಲು ಹಿಂಜರಿಯಲ್ಲ ಎಂದಿದ್ದಾರೆ.
![](https://pratidhvani.com/wp-content/uploads/2024/05/1200-675-21570496-thumbnail-16x9-news-1024x576.jpg)
ನಿನ್ನೆಯೇ ಸಿಐಡಿಗೆ ತನಿಖೆಗೆ ವಹಿಸಲಾಗಿದೆ. ಸಿಐಡಿ ಪೊಲೀಸರು ಇಂದು ಬೆಳಿಗ್ಗೆಯಿಂದಲೇ ತನಿಖೆ ಆರಂಭಿಸಿದ್ದಾರೆ ಎಂದಿರುವ ಸಚಿವ ಬಿ.ನಾಗೇಂದ್ರ, ಎಂಡಿ, ಲೆಕ್ಕಾಧಿಕಾರಿ ತಪ್ಪಿದ್ದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಮೊಬೈಲ್ಗೆ ಮೆಸೆಜ್ ಬಾರದ ರೀತಿ ಉಪ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ ಅಂತಾನೂ ನಾಗೇಂದ್ರ ಹೇಳಿದ್ದಾರೆ. ನಿಗಮದ ಖಾತೆಯಲ್ಲಿ ಒಟ್ಟು 187 ಕೋಟಿ ಇತ್ತು. ಅನಧಿಕೃತ ಖಾತೆಗೆ 87 ಕೋಟಿ ವರ್ಗಾಯಿಸಿದ್ದಾರೆ. ಇದು ನನ್ನ ವೈಫಲ್ಯ ಎನ್ನುವುದಕ್ಕಿಂತ ಇಷ್ಟೊಂದು ಹಣ ವರ್ಗಾವಣೆ ನೋಡಿ ಶಾಕ್ ಆಯ್ತು. ಇಂದು ಸಂಜೆಯೊಳಗೆ ಪೂರ್ತಿ ಹಣ ವರ್ಗಾವಣೆಯಾಗದಿದ್ರೆ ಬ್ಯಾಂಕ್ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
![](https://pratidhvani.com/wp-content/uploads/2024/05/images-4-1.jpg)
ಎಂಡಿ ಪದ್ಮನಾಭ್ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲವೇ ಇಲ್ಲ. ಬಡ ಅಧಿಕಾರಿ ಚಂದ್ರಶೇಖರ್ ಕುಟುಂಬವನ್ನು ನಾನೇ ಭೇಟಿ ಮಾಡ್ತೀನಿ. ಪಾಪ ಬಹಳ ದುಃಖ ಆಗುತ್ತೆ, ಚಿಕ್ಕ ಅಧಿಕಾರಿ, ದೊಡ್ಡ ಹುದ್ದೆಯಲ್ಲೇನು ಇರಲಿಲ್ಲ. ಸಂಜೆಯೊಳಗೆ ಹಣ ವರ್ಗಾವಣೆ ಆಗಬೇಕಿದೆ. ಅದಕ್ಕಾಗಿ ಎಂಡಿಯವರು ಹಾಜರಿರಬೇಕಾಗುತ್ತೆ. ಸಂಜೆ ಮೇಲೆ ಅವರ ಕರ್ತವ್ಯ ಲೋಪದ ಮೇಲೆ ಕ್ರಮಕ್ಕೆ ತೀರ್ಮಾನ ಮಾಡ್ತೇವೆ. ನನ್ನ ಹೆಸರನ್ನ ಯಾಕೆ ತಳುಕು ಹಾಕಿದ್ರೋ ಗೊತ್ತಿಲ್ಲ. ಅದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ನನ್ನ ಪ್ರಕಾರ ನನ್ನದು ತಪ್ಪಿಲ್ಲ. ವಿಪಕ್ಷಗಳಿಗೆ ರಾಜೀನಾಮೆ ಕೇಳುವುದು ಸರಿ ಇರಬಹುದೇನೊ..! ತಪ್ಪಿತಸ್ಥ ಅಧಿಕಾರಿಗಳು ಆ ಹುದ್ದೆಯಲ್ಲಿ ಮುಂದುವರಿಯಲ್ಲ. ಇಂದು ಸಂಜೆಯೊಳಗೆ ವರದಿ ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.