ಆಮ್ ಆದ್ಮಿ ಪಕ್ಷ 2022ರ ಜನವರಿ 13ರಂದು ಜನರೇ ಎಸ್ ಎಂಎಸ್ ಮಾಡುವ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕರೆ ಕೊಟ್ಟಿತು. “ಜನತಾ ಚುನೇಗಿ ಅಪ್ನಾ ಸಿಎಂ” ಎಂಬ ಅಭಿಯಾನ ಆರಂಭಿಸಿತು. ಇದೊಂದು ಗಿಮಿಕ್ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿದವು. ಗಿಮಿಕ್ಕೇ ಆಗಿರಲಿ, ಜನರಿಂದ ಆಯ್ಕೆ ಮಾಡುವ ಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಕಡೆಗೆ ನಿರೀಕ್ಷೆಯಂತೆ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಲೆಕ್ಕಾಚಾರದಂತೆ ಭಗವಂತ್ ಮಾನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಯಿತು. ನಂತರ ತಮ್ಮನ್ನು ಸಿಎಂ ಎಂದ ಜನರೆದುರು ಕಣ್ಣೀರರಿಸಿದ ಭಗವಂತ್ ಮನ್ ‘ಪಂಜಾಬ್ನ ಜನರನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದರು.
ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಎಎಪಿಯ ಬೃಹತ್ ಗೆಲುವು ತನ್ನ ರಾಷ್ಟ್ರೀಯ ಹೆಜ್ಜೆ ಗುರುತನ್ನು ಹೆಚ್ಚಿಸುವ ಮತ್ತು ಬಿಜೆಪಿಗೆ ವಿಶ್ವಾಸಾರ್ಹ ಪರ್ಯಾಯ ವಿರೋಧವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಅದರ ಮಹತ್ವಾಕಾಂಕ್ಷೆಗಳಿಗೆ ಕೊಡುಗೆ ನೀಡಿತು. ಆದರೆ, ಬರಬರುತ್ತಾ ಭಗವಂತ್ ಮಾನ್ ಅವರು ಅರವಿಂದ ಕೇಜ್ರಿವಾಲ್ ಅವರನ್ನು ಅನುಸರಿಸಲು ಮುಂದಾದರು. ಪರಿಣಾಮ ಪಂಜಾಬ್ ಅನ್ನು ದೆಹಲಿಯಿಂದ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದಾರೇನೋ ಎಂದು ಭಾಸವಾಗತೊಡಗಿತು. ಬಿಜೆಪಿ ರೀತಿಯಲ್ಲೇ ಬಲು ಚಾಣಾಕ್ಷತನದಿಂದ ಮಾಧ್ಯಮವನ್ನು ನಿರ್ವಹಿಸಿದರೂ ಒಳಗೊಳಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಮುಚ್ಚಿಡಲು ಆಪ್ ನಿಂದ ಸಾಧ್ಯವಾಗಿಲ್ಲ.
ಪಂಜಾಬಿನಲ್ಲಿ ಆಪ್ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂಸಾಚಾರ ಘಟಿಸಿವೆ. ಕರ್ಫ್ಯೂ ನಡುವೆಯೂ ಖಲಿಸ್ತಾನ್-ವಿರೋಧಿ ಮೆರವಣಿಗೆ ನಡೆದಿದೆ. ಇದನ್ನು ವಿರೋಧಿಸಲು ತೀವ್ರಗಾಮಿ ಸಿಖ್ ಜನ ರಸ್ತೆಗಿಳಿದಿದ್ದರು. ಜನ ರಸ್ತೆಯಲ್ಲಿ ಕತ್ತಿ ಝಳಪಿಸುತ್ತಿರುವಾಗ ಮುಖ್ಯಮಂತ್ರಿ ಮಾನ್ ಏನೂ ಮಾಡದೆ ನಿರುಮ್ಮಳರಾಗಿದ್ದರು. ಪರಿಣಾಮವಾಗಿ ಎಎಪಿ ಸರ್ಕಾರದ ಅಡಿಯಲ್ಲಿ ಖಲಿಸ್ತಾನ್ ಚಳವಳಿಯ ಪುನರುಜ್ಜೀವನ ಆಗುತ್ತಿದೆ ಎಂಬ ಗುಮಾನಿ ಹುಟ್ಟಿಕೊಂಡಿದೆ.
ಖಾಲಿಸ್ಥಾನಿ ಗಲಾಟೆ ಬಳಿಕ ಮೇ ತಿಂಗಳ ಆರಂಭದಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಛೇರಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಯಿತು. ಇದಕ್ಕೆ ಸಿಖ್ ಫಾರ್ ಜಸ್ಟಿಸ್ ಹೊಣೆ ಹೊತ್ತುಕೊಂಡಿದೆ. ಈ ಘಟನೆಯು ಪಂಜಾಬಿನ ಗುಪ್ತಚರ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಪೊಲೀಸ್ ಪ್ರಧಾನ ಕಛೇರಿಯ ಮೇಲೆ ದಾಳಿ ನಡೆಯುತ್ತೆ ಎನ್ನುವುದಾದರೆ, ಸಾಮಾನ್ಯ ನಾಗರಿಕರ ಸುರಕ್ಷತೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಇದೆಲ್ಲವನ್ನೂ ಮೀರಿಸುವಂತೆ ಮೇ 29ರಂದು ಎಎಪಿ ಸರ್ಕಾರದ ಹೊಳಪನ್ನು ಕಿತ್ತುಹಾಕುವ ದುರಂತವೊಂದು ಸಂಭವಿಸಿದೆ.
ಇದಕ್ಕೂ ಒಂದು ದಿನದ ಹಿಂದೆ (ಮೇ 28) ಮಾನ್ ಸರ್ಕಾರವು 424 ವಿಐಪಿ ರಕ್ಷಕರ ಪಟ್ಟಿ ಬಿಡುಗಡೆ ಮಾಡಿ ಪಂಜಾಬಿ ಗಾಯಕ ಮತ್ತು ಸಾಂಸ್ಕೃತಿಕ ಐಕಾನ್ ಆಗಿದ್ದ ಕಾಂಗ್ರೆಸ್ ನಾಯಕ ಸಿದ್ದು ಮೂಸೆವಾಲಾ ಅವರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯಿತು. ಇಂಟೆಲಿಜೆನ್ಸ್ ಬ್ಯೂರೋ ವರದಿಯು ಸಿದ್ದು ಮೂಸೆವಾಲಾ ಅವರನ್ನು ಹೆಚ್ಚಿನ ಅಪಾಯದ ವರ್ಗಕ್ಕೆ ಒಳಪಡಿಸಿದ್ದರೂ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ತೆಗೆದುಹಾಕಲಾಗಿತ್ತು. ಮರುದಿನವೇ ಪಾತಕಿಗಳು ಸಿದ್ದು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ವಿಐಪಿ ಭದ್ರತೆ ಹೊಂದಿರುವ ಜನರ ಪಟ್ಟಿಯನ್ನು ಅತ್ಯಂತ ಗೌಪ್ಯ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಆದರೆ ಎಎಪಿ ವಾಟ್ಸಾಪ್ ಗುಂಪುಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪಟ್ಟಿ ಹರಿದಾಡುತ್ತಿತ್ತು. ಮುಖ್ಯಮಂತ್ರಿ ಮನ್ ಅವರು ವಿಐಪಿ ಪಟ್ಟಿಯನ್ನು ಪ್ರಚಾರ ಸಾಧನವಾಗಿ ಮತ್ತು ತಮ್ಮ ಸರ್ಕಾರ ವಿಐಪಿ ಸಂಸ್ಕೃತಿಯ ವಿರುದ್ಧವಾಗಿದೆ ಎಂದು ಬಿಂಬಿಸಿಕೊಳ್ಳಲು ಟ್ವೀಟ್ ಮಾಡಿದ್ದಾರೆ. ಅತ್ಯಂತ ಗೌಪ್ಯ ಭದ್ರತಾ ದಾಖಲೆಯನ್ನು ಸೋರಿಕೆ ಮಾಡಿದರೆ ಅದು ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಸಿದ್ದು ಮೂಸೆವಾಲಾ ಅವರ ಹತ್ಯೆಯು ಪಂಜಾಬಿನ ಕರಾಳ ಅಧ್ಯಾಯವನ್ನು, ವಿಶೇಷವಾಗಿ ಅಲ್ಲಿನ ಬಂದೂಕು ಸಂಸ್ಕೃತಿಯನ್ನು ಬಹಿರಂಗಪಡಿಸಿದೆ. ಆದರೆ ಇದು ಎಎಪಿ ಸರ್ಕಾರದ ಕಾರ್ಯಚಟುವಟಿಕೆಯನ್ನು ಸ್ಕ್ಯಾನರ್ ಅಡಿಯಲ್ಲಿ ಇರಿಸಿದೆ. ಸಿಎಂ ಮಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವ ಜೊತೆಗೆ ರಹಸ್ಯ ವಿಐಪಿ ಪಟ್ಟಿ ಸೋರಿಕೆಯ ಕುರಿತು ನ್ಯಾಯಾಲಯಕ್ಕೆ ಹೋಗಲು ಕಾಂಗ್ರೆಸ್ ನಿರ್ಧರಿಸಿದೆ. ಇದರಿಂದ ಪಂಜಾಬ್ನಲ್ಲಿ ಎಎಪಿ ಸರ್ಕಾರದ ಹನಿಮೂನ್ ಅವಧಿ ಮುಗಿದಿದೆ ಎಂಬುದಂತೂ ಖಚಿತವಾಗಿದೆ.
ಈ ಘಟನೆಯೂ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಎಎಪಿ ಗೌಪ್ಯ ಭದ್ರತಾ ದಾಖಲೆಯನ್ನು ಏಕೆ ಸೋರಿಕೆ ಮಾಡಿತು? ಎಎಪಿ ತನ್ನ ನೈತಿಕತೆಯನ್ನು ಕಳೆದುಕೊಂಡಿದೆಯೇ? ಇಷ್ಟುದಿನ ತನ್ನಷ್ಟಕ್ಕೆ ತಾನು ಘೋಷಿಸಿಕೊಂಡ ನೈತಿಕತೆಯ ಮಹತ್ವವನ್ನು ಅದು ಮುಂದೆಯೂ ಹೇಳಿಕೊಳ್ಳಬಹುದೇ? ಸರ್ಕಾರಿ ಗುತ್ತಿಗೆಗಳಲ್ಲಿ ಕಮಿಷನ್ ಕೇಳಿದ್ದಕ್ಕಾಗಿ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ವಿಫಲಗೊಳಿಸಿದ ಮತ್ತು ಸೂಕ್ಷ್ಮ ಭದ್ರತಾ ದಾಖಲೆಗಳನ್ನು ಸೋರಿಕೆ ಮಾಡಿದ ಸಿಎಂ ಭಗವಂತ್ ಮಾನ್ ಅವರನ್ನು ಹೊಣೆಗಾರರನ್ನಾಗಿಸುವವರು ಯಾರು?