ಕಳೆದ ವಾರ ದೇಶದ ವಾಯುವ್ಯ ಕರಾವಳಿಗೆ ಕಳೆದ ವಾರ ಅಪ್ಪಳಿಸಿದ ಬಿಪರ್ ಜಾಯ್ ಚಂಡಮಾರುತವು ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗುವಂತೆ ಮಾಡಿತ್ತು. ಆದರೆ ಈ ಚಂಡಮಾರುತವು ಕರ್ನಾಟಕ ಸೇರಿದಂತೆ ಇನ್ನು ಕೆಲವು ರಾಜ್ಯಗಳಲ್ಲಿ ಮುಂಗಾರು ಮಳೆ ವಂಚಿತವಾಗುವಂತೆ ಮಾಡುವ ಮೂಲಕ ಮಳೆ ಕೊರತೆಗೆ ಕಾರಣವಾಗಿದೆ ಮಾತ್ರವಲ್ಲದೇ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದ ಹಲವು ಕಡೆಗಳಲ್ಲಿ ಬಿಸಿ ಗಾಳಿ ಹೊಡೆತಕ್ಕೂ ಕಾರಣವಾಗಿದೆ.
ಹವಾಮಾನ ತಜ್ಞರು ಹೇಳುವಂತೆ, ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಈ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಉಷ್ಣತೆಯು ಇತ್ತೀಚಿನ ದಶಕಗಳಲ್ಲಿ ಏರುತ್ತಿರುವುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ, ಮತ್ತಿದು ಚಂಡಮಾರುತಗಳ ಸ್ವರೂಪ ತೀವ್ರತೆ, ಸಂಭವಿಸುವಿಕೆ ಮತ್ತು ಅವಧಿಗಳ ಮೇಲೂ ಪರಿಣಾಮ ಬೀರಿರುವುದಲ್ಲದೇ ಸಮುದ್ರದಲ್ಲಿ ತೀವ್ರಸ್ವರೂಪದ ಚಂಡಮಾರುತದ ಸೃಷ್ಟಿಗೂ ಇದು ಕಾರಣವಾಗುತ್ತಿದೆ.
ಬಿಪರ್ ಜಾಯ್ ಎಂಬ ವಿನಾಶಕಾರಕ!
![](https://pratidhvani.com/wp-content/uploads/2023/06/fdddffdd-compressed-1.jpg)
ಬಿಪರ್ ಜಾಯ್ ಚಂಡಮಾರುತವು ತನ್ನ ಹೆಸರಿಗೆ ತಕ್ಕಂತೆ (ಬಾಂಗ್ಲಾದಲ್ಲಿ ಬಿಪರ್ ಜಾಯ್ ಎಂದರೆ ವಿನಾಶಕಾರಿ ಎಂದು ಅರ್ಥ!) ಹಲವು ವಿಧಗಳಲ್ಲಿ ವಿನಾಶಕಾರಿಯಾಗಿಯೇ ಪರಿಣಮಿಸಿದೆ. ತೀವ್ರ ಸ್ವರೂಪದ ಗಾಳಿಯೊಂದಿಗೆ ಗುಜರಾತ್ ತೀರಕ್ಕೆ ಅಪ್ಪಳಿಸಿ ಬಿಪರ್ ಜಾಯ್ ಆ ಬಳಿಕ ತನ್ನ ಶಕ್ತಿಯನ್ನು ಕಳೆದುಕೊಂಡಿತ್ತು. ಇದರ ಪರಿಣಾಮವಾಗಿ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಅತಿ ವೇಗದ ಗಾಳಿ ಮತ್ತು ಭಾರೀ ಪ್ರಮಾಣದ ಅಕಾಲಿಕ ಮಳೆಗೂ ಕಾರಣವಾಗಿತ್ತು. ಐಎಂಡಿ ವರದಿಗಳ ಪ್ರಕಾರ ರಾಜಸ್ಥಾನದಲ್ಲಿ ಜೂನ್ 01ರಿಂದ ಈಚೆಗೆ 320% ಅಧಿಕ ಮಳೆಯಾಗಿದೆ! ಹಾಗೆಯೇ ಗುಜರಾತಿನಲ್ಲಿ ಇದೇ ಅವಧಿಯಲ್ಲಿ 166% ಹೆಚ್ಚಿನ ಪ್ರಮಾಣದ ಮಳೆ ಬಿದ್ದಿದೆ. ಗುಜರಾತಿನಲ್ಲಿ 40ಕ್ಕೂ ಹೆಚ್ಚು ಜನ ಈ ಚಂಡಮಾರುತದ ಪರಿಣಾಮದಿಂದ ಗಾಯಗೊಂಡಿದ್ದರು ಮಾತ್ರವಲ್ಲದೇ ಸೌರಾಷ್ಟ್ರ ಮತ್ತು ಕಛ್ ಭಾಗದ 4500 ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿತ್ತು ಎಂಬುದನ್ನು ‘ಲೈವ್ ಮಿಂಟ್’ ವೆಬ್ ಸೈಟ್ ವರದಿ ಮಾಡಿದೆ. ಮಧ್ಯಪ್ರದೇಶದಲ್ಲೂ ಭಾರೀ ಮಳೆಯಾಗುವ ಸಂಭವವಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಮುಂಗಾರಿನ ಸಂಭ್ರಮಕ್ಕೆ ಹೊಡೆತ ನೀಡಿದ ‘ಬಿಪರ್ ಜಾಯ್’!
ಇನ್ನೊಂದೆಡೆ, ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಪ್ರವೇಶ ವಿಳಂಬವಾಗಲು ಈ ಬಿಪರ್ ಜಾಯ್ ಕಾರಣವಾಗಿದೆ! ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್ ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಜೂನ್ 01ರಿಂದೀಚೆಗೆ ಸುಮಾರು 80% ಮಳೆ ಕೊರತೆ ಕಾಣಿಸಿಕೊಂಡಿದ್ದರೆ ಕರ್ನಾಟಕದಲ್ಲಿ 71% ಮಳೆ ಕೊರತೆ ಕಾಣಿಸಿಕೊಂಡಿದೆ ಎಂದು ಐಎಂಡಿ ಹೇಳಿದೆ. ಕರ್ನಾಟಕದಲ್ಲಿ ನೈಋತ್ಯ ಮಾರುತಗಳ ಪಸರಿಸುವಿಕೆ ಮೇಲೂ ಬಿಪರ್ ಜಾಯ್ ತನ್ನ ಪ್ರಭಾವನ್ನು ತೋರಿದೆ! ‘ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ಗೆ ಐಎಂಡಿ – ಬೆಂಗಳೂರಿನ ನಿರ್ದೇಶಕ ಎ. ಪ್ರಸಾದ್ ಅವರು ನೀಡಿರುವ ಮಾಹಿತಿಯಂತೆ, ‘ಬಿಪರ್ ಜಾಯ್ ಮುಂಗಾರು ಮಾರುತಗಳ ಪ್ರಸರಣ ವಿಧದ ಮೇಲೆ ಪರಿಣಾವನ್ನು ಬೀರಿದೆ, ಆದಾಗ್ಯೂ ಮುಂಬರುವ ದಿನಗಳಲ್ಲಿ ಮುಂಗಾರಿ ಮಾರುತಗಳ ಚಲನೆಗೆ ಪೂರಕವಾಗಿರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದವರು ತಿಳಿಸಿದ್ದಾರೆ.
![](https://pratidhvani.com/wp-content/uploads/2023/06/znvbzxmvnb-compressed-2.jpg)
ಇದೇ ಸಂದರ್ಭದಲ್ಲಿ, ಉತ್ತರದ ಹಲವು ರಾಜ್ಯಗಳಲ್ಲಿ ಬಿಸಿ ಗಾಳಿಯ ಹೊಡೆತಕ್ಕೆ ಜನ ತತ್ತರಿಸುವಂತಾಗಿದೆ. ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸ್ ಗಢ ರಾಜ್ಯಗಳ ಒಳನಾಡಿನಲ್ಲಿ ಮತ್ತು ಬಿಹಾರದ ಕೆಲ ಪ್ರದೇಶಗಳಲ್ಲಿ ‘ಬಿಸಿ ಗಾಳಿ ಮತ್ತು ಅತೀ ಬಿಸಿ ಗಾಳಿ’ ಸ್ಥಿತಿ ಇರಲಿದೆ ಎಂದು ಐಎಂಡಿ ಜೂನ್ 19ರಂದು ಎಚ್ಚರಿಕೆ ನೀಡಿದೆ. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಉತ್ತರ ಕರಾವಳಿ ತೀರಪ್ರದೇಶ, ವಿದರ್ಭದ ಕೆಲ ಪ್ರದೇಶಗಳು ಮತ್ತು ಪೂರ್ವ ಮಧ್ಯಪ್ರದೇಶ, ಪೂರ್ವ ಉತ್ತರ ಪ್ರದೇಶದ ಕೆಲ ಒಳಪ್ರದೇಶಗಳು ಮತ್ತು ಪಶ್ಚಿಮ ಬಂಗಾಲದ ಗಂಗಾ ತೀರ ಪ್ರದೇಶಗಳಲ್ಲಿ ಬಿಸಿಗಾಳಿ ಪರಿಸ್ಥಿತಿ ಕಾಣಿಸಿಕೊಂಡಿದೆ ಎಂದು ಐಎಂಡಿ ತಿಳಿಸಿದೆ.
ಚಂಡಮಾರುತ, ಮುಂಗಾರು ಕೊರತೆ, ಬಿಸಿಗಾಳಿ – ಇವೆಲ್ಲಕ್ಕೂ ಇದೆ ಅಂತರಿಕ ಸಂಬಂಧ!
ಬಿಪರ್ ಜಾಯ್ ಚಂಡಮಾರುತ ಉಂಟಾಗಿರುವುದು ಮತ್ತು ಅದರ ಚಲನೆ, ಮುಂಗಾರು ಮಳೆ ಕೊರತೆ ಸನ್ನಿವೇಶ ಹಾಗೂ ಬಿಸಿ ಗಾಳಿ ಇವೆಲ್ಲವೂ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ ಎಂದು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮೀಟರಾಲಜಿ ವಿಭಾಗದ ಪರಿಸರ ವಿಜ್ಞಾನಿ ರೋಕ್ಸಿ ಕೋಲ್ ಮ್ಯಾಥ್ಯೂ ‘ದಿ ವೈರ್’ಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ. ದಕ್ಷಿಣ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮುಂಗಾರು ಮಾರುತಗಳು ರಚನೆಗೊಳ್ಳಲು ಪೂರಕವಾಗಿದ್ದ ತೇವಾಂಶವನ್ನು ತನ್ನೊಂದಿಗೆ ಒಯ್ದಿದೆ ಎಂಬ ಅಂಶವನ್ನು ಅವರು ಎತ್ತಿಹಿಡಿದ್ದಾರೆ. ಇನ್ನು ಹಗಲಿನಲ್ಲಿ ಮೋಡ ರಹಿತ ಆಕಾಶದಿಂದಾಗಿ ಸೌರ ವಿಕಿರಣಗಳ ಪ್ರಮಾಣವೂ ಹೆಚ್ಚಿರುತ್ತದೆ ಎಂಬ ಅಂಶವನ್ನು ಮ್ಯಾಥ್ಯೂ ಉಲ್ಲೇಖಿಸಿದ್ದಾರೆ.
![](https://pratidhvani.com/wp-content/uploads/2023/06/weather-ecotimes-1.webp)
ಇನ್ನೊಂದು ಆತಂಕಕಾರಿ ವಿಚಾರವೆಂದರೆ ಅರಬ್ಬೀ ಸಮುದ್ರದ ಮೇಲ್ಮೈ ಉಷ್ಣತೆಯು ಕಳೆದ ನಾಲ್ಕು ದಶಕಗಳಿಗೆ ಹೋಲಿಸಿದಲ್ಲಿ ಇತ್ತೀಚಿನ ದಶಕಗಳಲ್ಲಿ 1.2 ಡಿಗ್ರಿ ಸೆಲ್ಷಿಯಸ್ ನಿಂದ 1.4 ಡಿಗ್ರಿ ಸೆಲ್ಷಿಯಸ್ ಗಳಿಗೆ ಹೆಚ್ಚಾಗಿದೆ! ಇವೆಲ್ಲವೂ ಕರ್ನಾಟಕ ಮತ್ತು ಒಟ್ಟಾರೆಯಾಗಿ ದೇಶದಲ್ಲಿನ ಮಳೆ ಪ್ರಮಾಣದ ಮೇಲೆ ಪರಿಣಾವನ್ನು ಬೀರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.