![](https://pratidhvani.com/wp-content/uploads/2024/05/HD-Revanna-Jail.webp)
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋದಲ್ಲಿ ಇರುವ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ ಅವರನ್ನು ಕಳೆದ ಶನಿವಾರ ಬಂಧನ ಮಾಡಲಾಗಿದೆ. ಮೇ 3ರಂದು ಶನಿವಾರ ಬಂಧನ ಮಾಡಿದ ಬಳಿಕ ಭಾನುವಾರ ಜಡ್ಜ್ ನಿವಾಸದಲ್ಲಿ ಹಾಜರು ಮಾಡಿ ಮೇ 8ರ ತನಕ ಎಸ್ಐಟಿ ಕಸ್ಟಡಿಗೆ ಪಡೆದುಕೊಂಡಿದ್ದರು. ನಿನ್ನೆ ಕೋರ್ಟ್ ಮೇ 14ರ ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಮಾಡಿದ ಹಿನ್ನೆಲೆಯಲ್ಲಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ಈ ನಡುವೆ ಜಾಮೀನು ಪಡೆಯಲು ಸಾಧ್ಯವಾಗದಂತೆ ಎಸ್ಐಟಿ ತಂತ್ರಗಾರಿಕೆ ಮಾಡ್ತಿರೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.
![](https://pratidhvani.com/wp-content/uploads/2024/05/prajwal-revanna-hd-revanna-034135840-16x9_0-1024x576.webp)
ಸೋಮವಾರ ರೇವಣ್ಣ ಪರ ಸಿ.ವಿ ನಾಗೇಶ್ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ಅರ್ಜಿ ವಿಚಾರಣೆಗೆ ಬಂದಿತ್ತು. ಆದರೆ ಆಗ ರೇವಣ್ಣ ನ್ಯಾಯಾಂಗ ಬಂಧನದಲ್ಲಿ ಇದ್ದ ಕಾರಣಕ್ಕೆ ಜಾಮೀನು ಅರ್ಜಿ ವಿಚಾರಣೆ ನೀಡುವ ಬಗ್ಗೆ ಗೊಂದಲ ಉಂಟಾಗಿತ್ತು. ಬುಧವಾರ ಬೆಳಗ್ಗೆ ಆಕ್ಷೇಪಣೆ ಸಲ್ಲಿಸದ ಎಸ್ಐಟಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿಕೆ ಆಗುವಂತೆ ನೋಡಿಕೊಂಡಿತ್ತು. ಮಧ್ಯಾಹ್ನ ಮತ್ತೆ ವಿಚಾರಣೆ ಶುರುವಾದಾಗ ತನಿಖಾಧಿಕಾರಿಯಿಂದ ವರದಿ ಬಂದಿಲ್ಲದ ಕಾರಣ ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗಿಲ್ಲ. ಮತ್ತಷ್ಟು ಕಾಲಾವಕಾಶ ಬೇಕೆಂದು ಮನವಿ ಮಾಡಿತ್ತು. ಅದೇ ಕಾರಣಕ್ಕೆ ಜಾಮೀನು ಅರ್ಜಿ ಗುರುವಾರಕ್ಕೆ ಮುಂದೂಡಿಕೆ ಆಗಿತ್ತು.
![](https://pratidhvani.com/wp-content/uploads/2024/05/109947945-1024x576.webp)
ಗುರುವಾರ ಬೆಳಗ್ಗೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ಮತ್ತೆ ಆಕ್ಷೇಪಣೆ ಸಲ್ಲಿಸದ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಸೋಮವಾರದ ತನಕ ಕಾಲಾವಕಾಶ ಬೇಕೆಂದು ಮನವಿ ಮಾಡಿದರು. ಇದರಿಂದ ಕೆರಳಿದ ನ್ಯಾಯಾಧೀಶರು, ನೀವು ಹೇಳಿದಂತೆಲ್ಲಾ ಅವಕಾಶ ಕೊಡಲು ಆಗುವುದಿಲ್ಲ, ಇಂದು ಮಧ್ಯಾಹ್ನವೇ ಆಕ್ಷೇಪಣೆ ಸಲ್ಲಿಸಿ, ವಾದವನ್ನೂ ಮಾಡಬೇಕು ಎಂದು ಕಟ್ಟಪ್ಪಣೆ ವಿಧಿಸಿದ್ದಾರೆ. ಜಾಮೀನು ಅರ್ಜಿಗೆ ಆಕ್ಷೇಪಣೆಯನ್ನೇ ಸಲ್ಲಿಸದೆ ಕಾಲಹರಣ ಮಾಡುವುದು ನೋಡಿದಾಗ ಮೇಲ್ನೋಟಕ್ಕೆ ಉದ್ದೇಶಪೂರ್ವಕ ತಂತ್ರಗಾರಿಕೆ ಎನ್ನುವಂತಾಗಿದೆ.
![](https://pratidhvani.com/wp-content/uploads/2024/05/JD-s-1024x576.jpg)
ಇಂದು ಮಧ್ಯಾಹ್ನ ಆಕ್ಷೇಪಣೆ ಸಲ್ಲಿಕೆ ಆದರೂ ಸಿ.ವಿ ನಾಗೇಶ ರೇವಣ್ಣ ಪರ ವಾದ ಮಂಡಿಸಲಿದ್ದಾರೆ. ಜಾಮೀನು ಕೊಡಬೇಕು ಎಂದು ಕೋರ್ಟ್ಗೆ ಮನವರಿಕೆ ಮಾಡುತ್ತಾರೆ. ಅದೇ ಸಮಯದಲ್ಲಿ ಎಸ್ಐಟಿ ಪರ ವಕೀಲರು ಇಂದು ವಾದ ಮಂಡಿಸಿ ಮುಗಿಸುವ ಸಾಧ್ಯತೆ ತೀರಾ ಕಡಿಮೆ. ಪ್ರತಿವಾದ ಮುಗಿಸಿದರೂ ಜಾಮೀನು ಅರ್ಜಿ ತೀರ್ಪು ಇಂದೇ ಹೊರಬೀಳುವುದು ಅನುಮಾನ. ನ್ಯಾಯಾಧೀಶರು ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಬಳಿಕ ಕಾನೂನು ಏನನ್ನು ಹೇಳುತ್ತದೆ ಎಂದು ಗಮನಿಸಿ ತೀರ್ಪು ನೀಡಲು ಸಮಯ ಕಾಯ್ದಿರಿಸುತ್ತಾರೆ. ಇನ್ನು ನಾಳೆ ಬಸವಜಯಂತಿ, ಕೋರ್ಟ್ಗೆ ರಜೆ, ಶನಿವಾರ ಜಾಮೀನು ತೀರ್ಪು ಹೊರಬೀಳಬಹುದು. ಆದರೂ ಕೋರ್ಟ್ ಆದೇಶ ಪ್ರತಿ ಅಂದೇ ರಿಲೀಸ್ ಆಗುವಂತೆ ಸಿಗುವುದು ಕಷ್ಟ. ಸೋಮವಾರ ಜೈಲಿನಿಂದ ಬಿಡುಗಡೆ ಆಗಬಹುದು ಅಷ್ಟೆ.
ಕೃಷ್ಣಮಣಿ