~ ಡಾ. ಜೆ ಎಸ್ ಪಾಟೀಲ.
ಮುಂದಿನ ವರ್ಷದ ಪೂರ್ವಾರ್ಧದಲ್ಲಿ ಅಂದರೆ ೨೦೨೪ ರಲ್ಲಿ ದೇಶದ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ೨೦೧೯ ರ ಮಹಾ ಚುನಾವಣೆಗೆ ಸರಿಯಾಗಿ ಮೊದಲು ಪುಲ್ವಾಮಾ ದಾಳಿ ನಡೆದಿತ್ತು. ಈ ಸಲ ಮತ್ಯಾವ ಬಗೆಯ ದಾಳಿ ಕಾದಿದೆಯೊ ಎಂದು ಜನರು ಆತಂಕದಲ್ಲಿದ್ದಾರೆ. ಆದರೆ ಈ ಸಮಾನ ನಾಗರಿಕ ಸಂಹಿತೆ (ಕಾಮನ್ ಸಿವಿಲ್ ಕೋಡ್) ಎಂಬ ಬಾಂಬ್ ಇನ್ನೇನು ದೇಶದ ಬಹುತ್ವ ಸಂಸ್ಕೃತಿ ನೆಲದ ಮೇಲೆ ಅಪ್ಪಳಿಸುವ ಲಕ್ಷಣಗಳು ಕಾಣುತ್ತಿವೆ. ಯಾವುದೇ ಒಂದು ಜನಾಂಗದ ಬಗ್ಗೆ ಇರುವ ನಕಾರಾತ್ಮಕ ಧೋರಣೆ, ಪೂರ್ವಾಗ್ರಹ ಮತ್ತು ದ್ವೇಷಗಳ ಆಧಾರದಲ್ಲಿ ಆಡಳಿತ ನಡೆಸುತ್ತ ಒಂದು ಶಕ್ತಿಶಾಲಿ ರಾಷ್ಟ್ರ ಕಟ್ಟುವುದು ಅಸಾಧ್ಯ ಎನ್ನುವ ಪ್ರಯೋಗ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ಆಡಳಿತ ನಿರೂಪಿಸಿದ್ದನ್ನು ನಾವೆಲ್ಲ ಬಲ್ಲೆವು. ಇತಿಹಾಸ ಮರುಕಳಿಸಿ ಅದರ ಅನುಕರಣೆ ಎಂಬಂತೆ ಸಾಗಿರುವ ಭಾರತದಲ್ಲಿನ ಕಳೆದ ಒಂಬತ್ತು ವರ್ಷಗಳ ಮೋದಿ ನೇತ್ರತ್ವದ ಬಿಜೆಪಿ ಆಡಳಿತ ಅದೇ ತರಹದ ನಿರಂತರ ವಿಫಲತೆಯನ್ನು ಕಾಣುತ್ತಿರುವುದು ನಾವು ನೋಡುತ್ತಿದ್ದೇವೆ.
ಮೋದಿ ಸರಕಾರ ಕೈಗೊಂಡ ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರಗಳು ಸರಣಿ ವಿಫಲತೆ ಕಾಣುತ್ತಿರುವುದಕ್ಕೆ ಕಾರಣ ಅವುಗಳ ಹಿಂದೆ ಯಾವುದೇ ಸೈದ್ಧಾಂತಿಕತೆ ಮತ್ತು ದ್ವೇಷರಹಿತ ಉದ್ದೇಶ ಇಲ್ಲದೆ ಇರುವುದು. ಕಾಶ್ಮೀರದ ವಿಷಯದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಒಕ್ಕೂಟ ಸರಕಾರ ಮತ್ತು ಅದನ್ನು ತೆರೆಮರೆಯಲ್ಲಿ ನಿಯಂತ್ರಿಸುವ ಸಂಘ-ಪರಿವಾರ ತೆಗೆದುಕೊಂಡ ನಿರ್ಧಾರವು ಒಂದು ವಿಫಲ ಯತ್ನ ಅನ್ನುವುದು ರುಜುವಾತಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಕೇವಲ ಒಂದೇ ವರ್ಷದಲ್ಲಿ ಕಾಶ್ಮೀರದ ವಿಷಯದಲ್ಲಿನ ಮೋದಿ ಸರಕಾರದ ನಿರ್ಧಾರವು ಒಂದು ಜನಾಂಗ ಮತ್ತು ನೆಹರುರ ಬಗೆಗಿನ ಬಿಜೆಪಿಗಿರುವ ಪೂರ್ವಾಗ್ರಹದಿಂದ ಕೂಡಿದ್ದಾಗಿತ್ತು ಎನ್ನುವುದು ಈಗ ರುಜುವಾತಾದಂತಾಗಿದೆ. ಮೋದಿ ಸರಕಾರದ ಕಠಿಣ ಕ್ರಮಗಳ ನಂತರವೂ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಅಬಾಧಿತವಾಗಿ ಮುಂದುವರೆದಿದ್ದರಿಂದ ಒಕ್ಕೂಟ ಸರಕಾರದ ಯೋಜನೆಗಳು ಅದ್ಭುತವಾಗಿ ವಿಫಲವಾಗಿವೆ ಎನ್ನುವುದು ಸ್ಪಷ್ಟವಾಗಿದೆ.

ಕಾಶ್ಮೀರದಲ್ಲಿ ವ್ಯಾಪಾರ ಅಭಿವೃದ್ಧಿ ಮತ್ತು ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ, ಮತ್ತು ಪ್ರಮುಖ ಕಾಶ್ಮೀರಿ ಪಕ್ಷಗಳು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿಯ ಮಿತ್ರ ಪಕ್ಷಗಳಿಗಿಂತ ಉತ್ತಮ ಪ್ರದರ್ಶನ ನೀಡಿವೆ. ಯಾವುದೇ ಔಪಚಾರಿಕ ಪ್ರಕಟಣೆ ಇಲ್ಲದೆ ಕೇಂದ್ರವು ಕಳೆದೆರಡು ವರ್ಷಗಳ ಹಿಂದೆ ಹೊಸದಿಲ್ಲಿಯಲ್ಲಿ ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳನ್ನು ಮಾತುಕತೆಗೆ ಕರೆದಿತ್ತು. ಸಭೆಯ ಕಾರ್ಯಸೂಚಿಯನ್ನು ಘೋಷಿಸಿರಲಿಲ್ಲವಾಗಿದ್ದರೂ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪನೆ ಮತ್ತು ಹೊಸ ವಿಧಾನಸಭಾ ಚುನಾವಣೆಗಳ ಬಗ್ಗೆ ಮೋದಿ ಸರ್ಕಾರ ಚರ್ಚಿಸಿತ್ತು. ಈ ಬೆಳವಣಿಗೆಯು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಎರಡು ವರ್ಷಗಳ ಹಿಂದೆ ನಡೆದ ಮರು ಮಾತುಕತೆಯ ಫಲಿತಾಂಶವಾಗಿ ನಿರೀಕ್ಷಿಸಲಾಗಿತ್ತು. ಮೋದಿ ಸರ್ಕಾರವು ಸಂವಿಧಾನದ ೩೭೦ ನೇ ವಿಧಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಅಂದರೆ ಆಗಸ್ಟ್ ೫, ೨೦೧೯ ರಂದು ರದ್ದುಗೊಳಿಸಿತ್ತು.
ಸ್ವಾತಂತ್ರದ ಆರಂಭಿಕ ದಿನಗಳಲ್ಲಿ ಅಂದಿನ ಸ್ಥಿತಿಗತಿಗಳಿಗನುಗುಣವಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು. ಈಗ ಮೋದಿ ಸರಕಾರ ಅದನ್ನು ಹಿಂತೆಗೆದುಕೊಂಡಿತ್ತಲ್ಲದೆ ಕಾಶ್ಮೀರ ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿತ್ತು. ಆ ನಿರ್ಧಾರದ ನಂತರ ನಡೆದ ಸಭೆಯು ಒಂದು ಮಹತ್ವದ ಬೆಳವಣಿಗೆ ಎನ್ನಲಾಗುತ್ತಿತ್ತು. ಮೋದಿ ಸರಕಾರವು ಕಾಶ್ಮಿರಿಗಳ ಮೇಲೆ ಸಂವಿಧಾನದ ೩೫ ಎ ವಿಧಿಯನ್ನು ಹೇರುವ ಮೂಲಕ ಅಲ್ಲಿ ಡೆಮೊಗ್ರಾಫಿಕ್ ರಕ್ಷಣೆಯನ್ನೂ ಕೂಡ ತೆಗೆದುಹಾಕಿತ್ತು. ಕಾಶ್ಮೀರದಲ್ಲಿ ಕಠಿಣ ಭದ್ರತೆಯನ್ನು ನಿಯೋಜಿಸುವ ಮೂಲಕ ಸಂಪರ್ಕ ಮಾಧ್ಯಮಗಳನ್ನು ಕೂಡ ನಿಷೇಧಗೊಳಿಸಿತ್ತು. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮಾಡಿದ ಒಕ್ಕೂಟ ಸರಕಾರ ಕಾಶ್ಮೀರದ ಮುಖ್ಯವಾಹಿನಿ ಪ್ರಾದೇಶಿಕ ಪಕ್ಷಗಳ ಎಲ್ಲ ನಾಯಕರನ್ನು ಗೃಹಬಂಧನದಲ್ಲಿರಿಸಿತ್ತು ಮತ್ತು ನ್ಯಾಷನಲ್ ಕಾನ್ಫರನ್ಸ್ ಹಾಗು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧ ಬಿಜೆಪಿಯ ಉನ್ನತ ಮಟ್ಟದ ರಾಷ್ಟ್ರೀಯ ನಾಯಕರು ಸಂಘಟಿತ ದಾಳಿ ನಡೆಸಿದ್ದರು.

ಕಾಶ್ಮೀರದ ರಾಜಕಾರಣಿಗಳು ಭ್ರಷ್ಟರು, ಜನಪ್ರಿಯವಲ್ಲದವರು, ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ ಮತ್ತು ಮೋದಿಯವರ ಕಾಶ್ಮೀರ ಕುರಿತ ದೂರದೃಷ್ಟಿಯ ಯೋಜನೆಯಲ್ಲಿ ಇವರಿಗೆ ಯಾವುದೇ ಸ್ಥಾನವಿಲ್ಲ ಎಂದು ನಿರಂತರವಾಗಿ ಆರೋಪಿಸಲಾಗಿತ್ತು. ಕಾಶ್ಮೀರದ ವಿಷಯದಲ್ಲಿ ಮೋದಿ ಮತ್ತು ಶಾ ಅವರು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಗಳು ಸ್ಪಷ್ಟವಾಗಿ ವಿಫಲವಾಗಿದ್ದವು. ಏಕೆಂದರೆ, ಎರಡು ಪ್ರಮುಖ ಕಾಶ್ಮೀರಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿಹಾಕಿ ಅವುಗಳಿಗೆ ಒಂದು ಪರಿಣಾಮಕಾರಿ ಪರ್ಯಾಯ ಪಕ್ಷವನ್ನು ಸೃಷ್ಟಿಸುವ ಬಿಜೆಪಿಯ ಪ್ರಯತ್ನಗಳು ಫಲ ನೀಡಲಿಲ್ಲ. ಬಿಜೆಪಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳು ದೇಶದ ಹಿತದೃಷ್ಟಿ ಹೊಂದಿರದೆ ಅವು ರಾಜಕೀಯ ನಿರ್ಧಾರಗಳಾಗಿರುತ್ತದೆ ಮತ್ತು ಸ್ವಹಿತಾಸಕ್ತಿಯಿಂದ ಕೂಡಿರುತ್ತವೆ ಎನ್ನುವುದಕ್ಕೆ ಈ ಘಟನೆಯೆ ಸಾಕ್ಷಿ. ಆನಂತರ ಪ್ರಮುಖ ಕಾಶ್ಮೀರಿ ರಾಜಕೀಯ ನಾಯಕರನ್ನು ಬಂಧನದಿಂದ ಬಿಡುಗಡೆಗೊಳಿಸಿ ತರಾತುರಿಯಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಗಳನ್ನು ನಡೆಸಲಾಗಿತ್ತು.
ಹೀಗೆ ಮಾಡುವ ಮೂಲಕ ಕಾಶ್ಮೀರದ ಆ ಎರಡು ಪ್ರಾದೇಶಿಕ ಪಕ್ಷಗಳನ್ನು ನಗಣ್ಯಗೊಳಿಸುವ ಬಿಜೆಪಿಯ ಪ್ರಯತ್ನ ಸಂಪೂರ್ಣ ವಿಫಲವಾಯಿತು. ಆ ಪ್ರಮುಖ ಕಾಶ್ಮೀರಿ ಪ್ರಾದೇಶಿಕ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿ ಕಣಿವೆಯ ಎಲ್ಲಾ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ಮಾಡಿದವು. ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿ ಮಾಡಿದ ಎಲ್ಲ ಹುನ್ನಾರಗಳನ್ನು ಅಲ್ಲಿನ ಜನರು ವಿಫಲಗೊಳಿಸಿದರು. ಏಳು ದಶಕಗಳಿಂದ ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಗೊಳಿಸಿ ರಾಜ್ಯವನ್ನು ಮೂರು ಭಾಗಗಳಾಗಿ ವಿಘಟಿಸುವ ಒಕ್ಕೂಟ ಸರಕಾರದ ನಿರ್ಧಾರವು ತಾನು ಹಾಗೆ ಮಾಡುವ ಮೊದಲು ನೀಡಿದ್ದ ಎಲ್ಲ ಭರವಸೆಗಳು ಸಾಧಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿತು. ಈ ನಿರ್ಧಾರ ಮಾಡುವ ಮೊದಲು ಬಿಜೆಪಿ ಸರಕಾರ ಕಣಿವೆ ಪ್ರದೇಶದಲ್ಲಿ ಅಪಾರ ವ್ಯಾಪಾರ ಹೂಡಿಕೆಗಳನ್ನು ಆಕರ್ಷಿಸುವ, ಕಾಶ್ಮೀರಿ ಪಂಡಿತರು ಕಣಿವೆಗೆ ಮರಳುವ, ಮತ್ತು ಉಗ್ರವಾದಿ ಚಟುವಟಿಕೆಗಳು ಕಡಿತಗೊಳ್ಳುವ ಭರವಸೆಗಳನ್ನು ನೀಡಿತ್ತು. ಆದರೆ ಮೋದಿ-ಶಾ ನೀಡಿದ್ದ ಆ ಯಾವೊಂದು ಭರವಸೆಗಳೂ ಈಡೇರಲಿಲ್ಲ.

ಅದಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ನಮ್ಮ ನೆರೆಯ ಚೀನಾ ಸಮರ್ಥಿಸುವ ಮೂಲಕ ಮೋದಿ-ಶಾ ನಿರ್ಧಾರವು ಜಾಗತಿಕ ಮಟ್ಟದಲ್ಲಿ ವಿವಾದಕ್ಕೆ ಗುರಿಯಾಗಿತ್ತು. ಲಡಾಕ್ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ಚೀನಾದ ಅತಿಕ್ರಮಣ ಮತ್ತು ಕೊರೋನ ಸಾಂಕ್ರಾಮಿಕ ಪಿಡುಗು ಇವು ಕಾಶ್ಮೀರದ ವಿಷಯದಲ್ಲಿ ಮೋದಿ ಸರಕಾರದ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಿದ್ದವು. ಅಮೆರಿಕೆಯಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಬಿಡೆನ್ ಆಡಳಿತದ ಒತ್ತಡಕ್ಕೆ ಮಣಿದು, ಒಕ್ಕೂಟ ಸರಕಾರವು ೪ ಜಿ ಮೊಬೈಲ್ ಅಂತರ್ಜಾಲ್ ಸೌಲಭ್ಯವನ್ನು ಕಾಶ್ಮೀರದಲ್ಲಿ ನೆಲೆಗೊಳಿಸಬೇಕಾಯಿತು. ಚೀನಾ ಮತ್ತು ಪಾಕಿಸ್ತಾನದಿಂದ ಮುಂಭಾಗದ ಮಿಲಿಟರಿ ಬೆದರಿಕೆಯ ಭೀತಿಯನ್ನು ಎದುರಿಸಿದ ಮೋದಿ ಸರ್ಕಾರ ೨೦೨೦ ರಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಿತು. ಇದರ ಪರಿಣಾಮವಾಗಿ ಆನಂತರದಲ್ಲಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಂಟಾಯಿತು.
ಸಂಯುಕ್ತ ಅರಬ್ ಒಕ್ಕೂಟದ ಮಧ್ಯಸ್ಥಿಕೆಯ ಪರಿಣಾಮವಾಗಿ ಕಾಶ್ಮೀರದ ಬಗ್ಗೆ ಮೋದಿ ಸರ್ಕಾರದಿಂದ ಕೆಲವು ರಿಯಾಯತಿಗಳು ಘೋಷಿಸಲ್ಪಟ್ಟವು ಎಂಬ ವಿಷಯ ಸ್ಪಷ್ಟವಾಯಿತು. ಇದರಿಂದ ಪಾಕಿಸ್ತಾನ ಒತ್ತಾಯಿಸಿದ್ದ ಮಾತುಕತೆಗೆ ‘ಶಕ್ತಗೊಳಿಸುವ ವಾತಾವರಣ’ ಸೃಷ್ಟಿಯಾಗಿದ್ದು ನಿಜ. ಅದರ ಪರಿಣಾಮವಾಗಿ ಕಾಶ್ಮೀರದ ಮೇಲೆ ಹೇರಲಾಗಿದ್ದ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಯಿತು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
🔸 ಕಾಶ್ಮೀರದಲ್ಲಿನ ಡೆಮೊಗ್ರಾಫಿಕ್ ಬದಲಾವಣೆಯನ್ನು ಶಾಶ್ವತವಾಗಿ ನಿಲ್ಲಿಸುವುದು.
🔹 ರಾಜಕೀಯ ಮತ್ತು ಇತರ ಕೈದಿಗಳನ್ನು ಬಿಡುಗಡೆಗೊಳಿಸುವುದು.
🔸 ಕಾಶ್ಮೀರದಲ್ಲಿ ಸಂಪರ್ಕ, ಸಂವಹನ ಮತ್ತು ಚಲನೆಯ ಮೇಲಿನ ದಿಗ್ಬಂಧನಗಳನ್ನು ತೆಗೆದುಹಾಕುವುದು.
🔹 ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವ ಭರವಸೆ ಮತ್ತು
🔸 ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳ ನಿಯೋಜನೆಯಲ್ಲಿ ಕಡಿತಗೊಳಿಸುವುದು.
ಪಾಕಿಸ್ತಾನದ ಅಂದಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಸಂಕ್ಷೀಪ್ತ ಹೇಳಿಕೆಯನ್ನು ಆಧರಿಸಿ ವೀಕ್ಷಕರು ಮಾಡಿರುವ ವರದಿಯು ಡಾನ್ ಪತ್ರಿಕೆ ಪ್ರಕಟಿಸಿತ್ತು. ಆ ವರದಿಯ ಪ್ರಕಾರ, ಉಭಯ ದೇಶಗಳ ಗುಪ್ತಚರ ಇಲಾಖೆಯ ನಾಯಕತ್ವದ ನಡುವೆ ನಡೆದ ಮರು ಮಾತುಕತೆ ಪ್ರಕಾರ ಆರಂಭಿಕ ಹಂತದಲ್ಲಿ ಪಾಕಿಸ್ತಾನದ ಪ್ರಾಥಮಿಕ ಆಸಕ್ತಿಯೆಂದರೆ “ಕಾಶ್ಮೀರ ತನ್ನ ರಾಜ್ಯದ ಸ್ಥಾನಮಾನ ಮರಳಿ ಪಡೆಯುವುದು ಮತ್ತು ಅಲ್ಲಿ ಯಾವುದೇ ಡೆಮೊಗ್ರಾಫಿಕ್ ಬದಲಾವಣೆಗಳನ್ನು ತರದಿರಲು ಭಾರತ ಒಪ್ಪುವುದು. ಏತನ್ಮಧ್ಯೆ, ಎರಡು ವರ್ಷಗಳ ಹಿಂದೆ “ಇಂಡೋ-ಪೆಸಿಫಿಕ್ನಲ್ಲಿ ಪ್ರಜಾಪ್ರಭುತ್ವದ ವಿಚಾರಣಾ ಸಮ್ಮೇಳನ”ದ ಸಂದರ್ಭದಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾದ ರಾಜ್ಯ ಕಾರ್ಯಕಾರಿ ಸಹಾಯಕ ಕಾರ್ಯದರ್ಶಿ ಡೀನ್ ಥಾಂಪ್ಸನ್ “ಕಾಶ್ಮೀರ ಸಾಧ್ಯವಾದಷ್ಟು ಬೇಗ ಸಹಜ ಸ್ಥಿತಿಗೆ ಮರಳುವಂತೆ ಕ್ರಮ ಕೈಗೊಳ್ಳಲು ಮೋದಿ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಭಾರತ ಸರಕಾರ ಕೈಗೊಂಡ ಕೆಲವು ಕ್ರಮಗಳಾದ ಕೈದಿಗಳ ಬಿಡುಗಡೆ, ೪ ಜಿ ಅಂತರ್ಜಾಲ ಸೌಲಭ್ಯ ಮರು ಸ್ಥಾಪನೆಯನ್ನು ನಾವು ಅವಲೋಕಿಸಿದ್ದೇವೆ ಎಂದಿದ್ದದ್ದರು.

“ಅದರಂತೆ ಭಾರತ ಸರಕಾರವು ಅಲ್ಲಿ ಇತರ ಸುಧಾರಣಾ ಕ್ರಮಗಳಾದ ಚುನಾವಣಾ ಪ್ರಕ್ರೀಯೆಗಳ ಚಾಲನೆಗೆ ಪ್ರಯತ್ನಿಸುವ ಕೆಲಸವನ್ನು ನಾವು ನಿರೀಕ್ಷಿಸುತ್ತೇವೆ ಹಾಗು ಅದನ್ನು ಪ್ರೋತ್ಸಾಹಿಸುತ್ತೇವೆ” ಎಂದು ಥ್ಯಾಂಪ್ಸನ್ ಹೇಳಿದ್ದರು. ಕಾಶ್ಮೀರಿ ರಾಜಕೀಯ ಪಕ್ಷಗಳೊಂದಿಗೆ ಮೋದಿಯವರು ಮಾತುಕತೆಗೆ ಮುಂದಾಗಿದ್ದರ ಹಿಂದೆ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಆದ ಒಂದಷ್ಟು ಬೆಳವಣಿಗೆಗಳು ಕಾರಣವಾಗಿರುವುದು ಎದ್ದು ಕಾಣುತ್ತಿದೆ. ಮೋದಿಯವರ ಕಾಶ್ಮೀರದ ವಿಷಯದಲ್ಲಿನ ಯು-ಟರ್ನ್ ನಿರ್ಧಾರದ ಹಿಂದೆ ಈ ಕೆಳಗಿನ ಅಂಶಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ;
🔸 ಈ ಎರಡು ವರ್ಷಗಳ ಹಿಂದೆ ಸೆಪ್ಟೆಂಬರ್ ತಿಂಗಳಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕೆಯ ಮಿಲಿಟರಿ ಪಡೆಗಳು ನಿರ್ಗಮಿಸುತ್ತಿವೆ ಎನ್ನಲಾಗುವ ಸುದ್ದಿ.
🔹 ಪಾಕಿಸ್ತಾನದ ನೆಲದಲ್ಲಿ ಅಮೆರಿಕದ ಮಿಲಿಟರಿ ನೆಲೆಗಳ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ಇನ್ನೂ ಪ್ರಗತಿಯಲ್ಲಿದ್ದದ್ದು.
🔸 ಕೊರೋನ ಸಾಂಕ್ರಾಮಿಕ ಸಂಕಷ್ಟ ಮತ್ತು ತೀವ್ರ ಆರ್ಥಿಕ ಕುಸಿತದಿಂದ ಭಾರತವು ಜರ್ಜರಿತಗೊಂಡಿದ್ದಿದ್ದದ್ದು.
🔹 ಚೀನಾದೊಂದಿಗಿನ ಲಡಾಖ್ನಲ್ಲಿ ಭಾರತದ ಗಡಿ ಬಿಕ್ಕಟ್ಟು ಬಗೆಹರಿಯದೆ ಹಾಗೆ ಉಳಿದಿರುವುದು.
🔸 ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿದ್ದು ಮತ್ತು ಅನೇಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷದೊಳಗಿನ ಆಂತರಿಕ ಭಿನ್ನಮತದ ಬೆಳವಣಿಗೆಗಳು.
🔹 ಮೋದಿಯವರ ಜನಪ್ರೀಯತೆ ಗಣನೀಯವಾಗಿ ಕುಸಿದಿರುವುದು ಹಾಗು ಅಮಿತ್ ಶಾ ಅವರ ೨೦೧೯ ರ ಹೊಳಪು ಮಾಸಿ ಮೌನಕ್ಕೆ ಜಾರಿರುವುದು.
ಮೋದಿ ನೇತ್ರತ್ವದ ಬಿಜೆಪಿ ಸರಕಾರವು ೨೦೧೯ ರಲ್ಲಿ ಮರು ಆಯ್ಕೆಗೊಂಡ ನಂತರ ಮೂರು ಪ್ರಮುಖ ಸಾಧನೆಗಳನ್ನು ಮಾಡಿದೆ ಎಂದು ಬಿಜೆಪಿ, ಅದರ ಅಂಗ ಸಂಸ್ಥೆಗಳು ಮತ್ತು ಅವುಗಳ ಐಟಿ ಸೆಲ್ಲಗಳು ಪ್ರಚಾರವನ್ನು ಮಾಡುತ್ತಿವೆ. ಆ ಸಾಧನೆಗಳಲ್ಲಿ ಮೊದಲನೆಯದು ಅಮಿತ್ ಶಾ ಅವರ ಅತಿ ಮಹಾತ್ವಾಕಾಂಕ್ಷೆಯ ಪೌರತ್ವ ತಿದ್ದುಪಡಿ ಕಾಯ್ದೆ. ಆದರೆ ಇದುವರೆಗೂ ಆ ಕಾಯ್ದೆಗೆ ಒಂದು ಸೂಕ್ತ ಅಂತಿಮ ಸ್ವರೂಪ ನೀಡದೆ ಯಥಾಸ್ಥಿತಿಯಲ್ಲಿಡಲಾಗಿದೆ. ಎರಡನೇಯ ಸಾಧನೆ, ಮೋದಿಯವರ ಹಿಂದುತ್ವದ ಟ್ರಂಪ್ ಕಾರ್ಡ್ ಎಂದೇ ಹೇಳಲಾಗುವ ರಾಮಮಂದಿರ ನಿರ್ಮಾಣ. ಆದರೆ ಈಗ ರಾಮ ಮಂದಿರ ಟ್ರಸ್ಟ್ ಸಾರ್ವಜನಿಕರಿಂದ ಸಂಗ್ರಹಿಸದ ದೇಣಿಗೆಯ ಹಣದಲ್ಲಿ ರೀಯಲ್ ಎಸ್ಟೇಟ್ ವ್ಯಾಪಾರ ಮಾಡುವಲ್ಲಿ ಭ್ರಷ್ಟಾಚಾರ ಎಸಗಿದೆ ಎನ್ನುವ ಆರೋಪಗಳು ಹೊರಬಿದ್ದಿವೆ. ಮೂರನೆಯದು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿಯ ಕ್ರಮ. ಆದರೆ, ಆ ವಿಷಯದಲ್ಲಿ ಈಗ ಮೋದಿಯವರು ಯು-ಟರ್ನ್ ಹೊಡೆದಿದ್ದಾರೆ.
ಅಮಿತ್ ಶಾ ಅವರು ಕಾಶ್ಮೀರದಲ್ಲಿ ಜನತಂತ್ರ ವ್ಯವಸ್ಥೆ ಮತ್ತು ವಿಶೇಷಾಧಿಕಾರದ ಬೇಡಿಕೆಗಾಗಿ ಅಲ್ಲಿನ ಪ್ರಾದೇಶಿಕ ಪಕ್ಷಗಳು ಸ್ಥಾಪಿಸಿರುವ ಒಕ್ಕೂಟವನ್ನು ‘ಗುಪ್ಕರ್ ಗ್ಯಾಂಗ್’ ಎಂದು ಕರೆದಿದ್ದರು. ತಾವೇ ಗುಪ್ಕರ್ ಗ್ಯಾಂಗ್ ಎಂದು ನಾಮಕರಣ ಮಾಡಿದ ಒಕ್ಕೂಟದ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ಮೋದಿ-ಶಾ ಜೋಡಿ ಬಿಜೆಪಿ ಮತ್ತು ಸಂಘ-ಪರಿವಾರದ ಮೂಲ ಗುಣವಾಗಿರುವ ಅವಕಾಶವಾದಿ ಹೊಂದಾಣಿಕೆಗೆ ಮುಂದಡಿ ಇಟ್ಟಂತಾಗಿದೆ. ಆ ಸಭೆಯಲ್ಲಿ ಈ ಗುಪ್ಕರ್ ಗ್ಯಾಂಗ್ ಭಾಗವಹಿಸಿತ್ತು. ಕಳೆದ ಒಂಬತ್ತು ವರ್ಷಗಳ ಮೋದಿ ಸರಕಾರದ ಎಲ್ಲ ವಿಫಲ ಆಡಳಿತಾತ್ಮಕ ಕ್ರಮಗಳನ್ನು ಬಿಜೆಪಿಯ ಪ್ರಚಾರ ಯಂತ್ರೋಪಕರಣಗಳು ಮೋದಿ ಕೈಗೊಂಡ “ದಿಟ್ಟ” ಕ್ರಮಗಳೆಂದು ಬಿಂಬಿಸುತ್ತ ಬಂದಿವೆ. ನೋಟು ನಿಷೇಧದ ನಿರ್ಧಾರದಿಂದ ಹಿಡಿದು ಕಾಶ್ಮೀರ ವಿಭಜನೆಯ ಎಲ್ಲ ಕ್ರಮಗಳನ್ನು ಸರ್ಜಿಕಲ್ ಸ್ಟ್ರೈಕ್ ಎಂದೇ ಬಿಂಬಿಸಲಾಗಿದ್ದರೂ ಮೋದಿ ಸರಕಾರದ ಈ ಎಲ್ಲ ಕ್ರಮಗಳು ಭಾರಿ ಹೀನಾಯ ವೈಫಲ್ಯಗಳನ್ನು ಕಂಡಿವೆ ಎನ್ನುವ ಸಂಗತಿ ಕ್ರಮೇಣವಾಗಿ ಸಾರ್ವಜನಿಕರಿಗೆ ಸ್ಪಷ್ಟವಾಗುತ್ತಿದೆ.
ಮೋದಿ-ಶಾ ಜೋಡಿ ಮತ್ತು ಅವರನ್ನು ನಿಯಂತ್ರಿಸುವ ಅಸಂವಿಧಾನಿಕ ಸಂಘಟನೆಗಳು ಈಗ ಕಾಶ್ಮೀರ ವಿಷಯದಲ್ಲಿ ಮತ್ತೊಮ್ಮೆ ಮುಖ ಕಳೆದುಕೊಂಡು ಯು-ಟರ್ನ್ ಹೊಡೆದಿವೆ. ಇನ್ನು ಭಾರತದ ಇತಿಹಾಸ ಇತಿಹಾಸ ತಿರುಚುವ ಮೋದಿ ಸರಕಾರದ ಮಹತ್ವಾಕ್ಷಾಂಕ್ಷೆಯ ಯೋಜನೆ ಪ್ರಗತಿಯಲ್ಲಿದೆ. ವಿದೇಶಿ ಆರ್ಯರು ಭಾರತದ ಮೂಲ ನಿವಾಸಿಗಳೆಂದು ಸಂಘಕ್ಕೆ ಸಾಬೀತು ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗ ಸಮಾನ ನಾಗರಿಕ ಸಹಿಂತೆಯನ್ನು ಮುಂದಿನ ಚುನಾವಣೆಯ ‘ಟೂಲ್ಕಿಟ್’ ಆಗಿ ಬಿಜೆಪಿ ಬಳಿಸಿಕೊಳ್ಳಲು ತಯ್ಯಾರಿ ನಡೆಸುತ್ತಿದೆ. ತನಗೆ ಸಿಕ್ಕ ಒಂದು ದಶಕ ಸುದೀರ್ಘ ಅವಧಿಯ ಅಧಿಕಾರದಲ್ಲಿ ಜನಪರವಾಗಿ ಆಡಳಿತ ಕೊಡಲು ಸೋತ ಬಿಜೆಪಿ, ಇಂದು ಭಾವನಾತ್ಮಾಕ ಮತ್ತು ತನ್ನ ಏಕೈಕ ಅಜೆಂಡಾ ಆಗಿರುವ ಚುನಾವಣಾ ಗಿಮಿಕ್ ಅನ್ನು ಮತ್ತೆ ಮುನ್ನೆಲೆಗೆ ತರಲು ಹೊಂಚು ಹಾಕುತ್ತಿದೆ. ಬಿಜೆಪಿಯ ಈ ಭಾವನಾತ್ಮಕ ಅತಿರೇಕಗಳು ಕರ್ನಾಟಕದ ಜನರು ಇತ್ತೀಚನ ಚುನಾವಣೆಯಲ್ಲಿ ಸಾರಾಸಗಟಾಗಿ ತಿರಸ್ಕರಿಸಿದ್ದನ್ನು ಬಿಜೆಪಿ ಮರೆತಂತಿದೆ.