ಒಕ್ಕಲಿಗರ ಭದ್ರ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳುವಂತೆ ಮಾಡುವ ಕಸರತ್ತು ನಡೆಸುತ್ತಿದ್ದಾರೆ. ಇಂದು ಹಳೇ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಸಮುದಾಯದ ಕೋಟೆಗೆ ಪ್ರಧಾನಿ ಬರ್ತಿದ್ದಾರೆ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಜನಮನ ಗೆಲ್ಲಲು ವಿಫಲವಾಗಿರುವ ಭಾರತೀಯ ಜನತಾ ಪಾರ್ಟಿ ಈ ಬಾರಿ ಅಭಿವೃದ್ಧಿ ಎನ್ನುವ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿ ಮೂಲಕ ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡಿದ್ದು, ಬೆಂಗಳೂರು – ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ವೇದಿಕೆ ಕಲ್ಪಿಸಿದೆ.
ಮೈಸೂರು ಬೇಕಿಲ್ಲ, ಮಂಡ್ಯ-ರಾಮನಗರ ಟಾರ್ಗೆಟ್..!
ಈಗಾಗಲೇ ಮೈಸೂರು – ಕೊಡಗು ಕ್ಷೇತ್ರದಲ್ಲಿ ಸಂಸದರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಭಾರತೀಯ ಜನತಾ ಪಾರ್ಟಿ , ಇದೀಗ ಮಂಡ್ಯ, ರಾಮನಗರದ ಕಡೆಗೆ ದೃಷ್ಟಿ ಹಾಯಿಸಿದೆ. ಬೆಳಗ್ಗೆ 11 ಗಂಟೆಗೆ ಬಂದಿಳಿಯಲಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದು, ಕಾಂಗ್ರೆಸ್- ಜೆಡಿಎಸ್ ಪಕ್ಷ ಹಣಿಯಲು ಸುಮಲತಾ ಮೂಲಕ ಪ್ರಯೋಗ ನಡೆಸಲು ಸಿದ್ಧತೆಗಳು ನಡೆದಿವೆ.
ಮೋದಿ ಭದ್ರತೆಗೆ 2 ಸಾವಿರ ಜನ ಪೊಲೀಸ್ ಸೇನೆ..!
ಮಂಡ್ಯಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ರಕ್ಷಣೆಗೆ ಕೇಂದ್ರ ಸರ್ಕಾರದ ವಿಶೇಷ ಭದ್ರತಾ ಪಡೆ SPG ( Special Protection Group ) ಇದೆ. ಆದರೂ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೈವೇ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದಿಂದ 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ಖುದ್ದು ಭದ್ರತೆ ನೇತೃತ್ವ ವಹಿಸಿಕೊಂಡಿದ್ದಾರೆ. ಓರ್ವ ಐಜಿಪಿ, ಇಬ್ಬರು ಎಸ್ಪಿಗಳು, 8 ಮಂದಿ ಡಿವೈಎಸ್ಪಿಗಳು ಸೇರಿ 2 ಸಾವಿರ ಪೊಲೀಸ್ ಪಡೆ ಮೋದಿ ಭದ್ರತೆಗೆ ಕಟಿಬದ್ಧವಾಗಿದೆ. ಸಾರ್ವಜನಿಕ ಸಮಾರಂಭ ನಡೆಯುವ ಸ್ಥಳದಲ್ಲಿ SPG ಮೊಕ್ಕಾಂ ಹೂಡಿದೆ. ಪ್ರಧಾನಿ ಭೇಟಿ ಕೊಡುವ ಜಾಗಗಳನ್ನು ಈಗಾಗಲೇ ಎಸ್ಪಿಜಿ ವಶಕ್ಕೆ ಪಡೆದಿದೆ.

2 ಗಂಟೆಯಲ್ಲಿ ಮಂಡ್ಯ ಕಾರ್ಯಕ್ರಮ ಅಂತ್ಯ..!
ದೆಹಲಿಯಿಂದ ಬೆಳಗ್ಗೆ ಹೊರಡುವ ಪ್ರಧಾನಿ ಮೋದಿ ಬೆಳಗ್ಗೆ 11.10ಕ್ಕೆ ಮೈಸೂರು ಏರ್ಪೋರ್ಟ್ಗೆ ಬಂದಿಳಿಯಲಿದ್ದಾರೆ. ಬೆಳಗ್ಗೆ 11.35 ಮಂಡ್ಯಗೆ ಹೆಲಿಪ್ಯಾಡ್ಗೆ ಬಂದು ಅಲ್ಲಿಂದ ಬೆಳಗ್ಗೆ 11.40 PES ಕಾಲೇಜು ಬಳಿಯಿಂದ ರೋಡ್ಶೋ ಆರಂಭಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಅಮರಾವತಿ ಬಳಿ ಹೆದ್ದಾರಿಯಲ್ಲಿ ಕೆಲವು ದೂರ ನಡೆಯಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಗೆಜ್ಜಲಗೆರೆಗೆ ಆಗಮಿಸಲಿರುವ ಮೋದಿ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 1.10 ಮಂಡ್ಯದಿಂದ ನಿರ್ಗಮಿಸಲಿದ್ದು, ಮೈಸೂರಿಗೆ ತೆರಳಿ ಅಲ್ಲಿಂದ ಧಾರವಾಡದಲ್ಲಿ IIT ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.
ಧಾರವಾಡದಲ್ಲಿ ರಾಜ್ಯದ ಮೊದಲ IIT ಲೋಕಾರ್ಪಣೆ..!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರು ವಿಮಾನ ನಿಲ್ದಾಣದಿಂದ ಧಾರವಾಡಕ್ಕೆ ತೆರಳಲಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಐಐಟಿ ಕ್ಯಾಂಪಸ್ಗೆ ಮಧ್ಯಾಹ್ನ 2.45 ಕ್ಕೆ ಆಗಮಿಸಲಿದ್ದಾರೆ. ಧಾರವಾಡದ ಹೊರವಲಯದ ಚಿಕ್ಕಮಲ್ಲಿಗವಾಡ ಗ್ರಾಮದ ಬಳಿ ನಿರ್ಮಾಣ ಆಗಿರುವ ಐಐಟಿ ಕ್ಯಾಂಪಸ್ ಉದ್ಘಾಟನೆ ಮಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಧಾರವಾಡ ಇತಿಹಾಸದಲ್ಲೇ ದೊಡ್ಡ ಕಾರ್ಯಕ್ರಮ ಎಂದು ಪ್ರಹ್ಲಾದ್ ಜೋಷಿ ಬಣ್ಣಿಸಿದ್ದು, 2 ಲಕ್ಷ ಕುರ್ಚಿಗಳು ಸಾಕಾಗಲ್ಲ ಎಂದು ಅಧಿಕಾರಿಗಳಿಗೆ ಹೇಳಿದ್ದೇವೆ. ಪಕ್ಷದ ಕಾರ್ಯಕರ್ತರ ಮೂಲಕ ಪ್ರತಿ ಹಳ್ಳಿಗೆ ಎರಡು ಬಸ್ ಬಿಟ್ಟಿದ್ದೇವೆ. ಜನ ಇನ್ನೂ ಬಸ್ ಬೇಕು ಎಂದು ಕೇಳುತ್ತಿದ್ದಾರೆ. ಮೋದಿ ನೋಡಬೇಕು ಎಂದು ಜನರಲ್ಲಿ ಉತ್ಸುಕತೆ ಇದೆ ಎಂದಿದ್ದಾರೆ. ಧಾರವಾಡದಿಂದಲೇ ಹುಬ್ಬಳ್ಳಿ ರೈಲು ವಿದ್ಯುತ್ತೀಕರಣ ಯೋಜನೆಗೂ ಚಾಲನೆ ನೀಡಲಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್ ಆಗಲಿದ್ದಾರೆ.