ಗುಜರಾತ್ ಹಾಗು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ದೇಶದಲ್ಲಿ ಮತ್ತೆ ಕೇಸರಿ ಪತಾಕೆ ಹಾರಿದೆ ಅನ್ನೋ ವರದಿಗಳು ಬಂದಿವೆ. ಬಿಜೆಪಿ ಗೆಲುವನ್ನು ರಾಷ್ಟ್ರಾದ್ಯಂತ ಸಂಭ್ರಮಿಸಿದೆ. ಕರ್ನಾಟಕದಲ್ಲೂ ಬಿಜೆಪಿ ನಾಯಕರು ದೇಶದಲ್ಲಿ ಮೋದಿ ಮೇನಿಯಾ ಕೆಲಸ ಮಾಡುತ್ತಿದೆ. ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಜನರು ಬಿಜೆಪಿಯನ್ನೇ ಬೆಂಬಲಿಸ್ತಾರೆ ಎಂದಿದ್ದಾರೆ. ಗುಜರಾತ್ನಲ್ಲಿ ಸತತ 7 ಬಾರಿ ಅಧಿಕಾರಕ್ಕೆ ಬಂದಿರುವುದರಿಂದ ಈ ರೀತಿಯ ಮಾತುಗಳು ಸರ್ವೇ ಸಾಮಾನ್ಯ. ಆದರೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎನ್ನುವುದನ್ನು ಒಪ್ಪಲು ಸಾಧ್ಯವೇ ಅನ್ನೋ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಕಾರಣಕ್ಕೆ ದೇಶದ ಬೇರೆ ಬೇರೆ ಕಡೆ ಬಂದಿರುವ ಇತರೆ ಫಲಿತಾಂಶಗಳು. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವನ್ನು ದೇವರ ನಾಡಿನ ಜನರು ಸೋಲಿಸಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಗುಜರಾತ್ ಮಾದರಿ ಅನ್ನೋದೇ ತಪ್ಪು..! ಯಾಕೆ ಗೊತ್ತಾ..?
ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯಲ್ಲಿ ಘಟಾನುಘಟಿ ನಾಯಕರು ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಷಾ. ಇವರಿಬ್ಬರು ಘಟಾನುಘಟಿ ನಾಯಕರು ಗುಜರಾತ್ನಿಂದಲೇ ಬಂದವರು ಅನ್ನೋದು ವಿಶೇಷ. ತವರು ರಾಜ್ಯದಲ್ಲಿ ಸೋಲುಂಡರೆ ಇಡೀ ದೇಶದಲ್ಲೇ ಮುಖಭಂಗ ಆಗುತ್ತದೆ ಅನ್ನೋ ಕಾರಣಕ್ಕೆ ಚುನಾವಣೆ ತಂತ್ರಗಾರಿಕೆ ಮಾಡಿದ ಬಿಜೆಪಿ, ಚುನಾವಣಾ ಘೋಷಣೆಯನ್ನೇ ತಡ ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ನಿಗದಿಯಂತೆ ಹಿಮಾಚಲಕ ಪ್ರವೇಶದ ಜೊತೆಗೆ ಚುನಾವಣೆ ಘೋಷಣೆ ಆಗಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಅನುಕೂಲ ಆಗುವಂತೆ ಜೊತೆಗೆ ಸಾವಿರಾರು ಕೋಟಿಯ ಯೋಜನೆಗಳನ್ನು ಜನರ ಮುಂದಿಡಲು ಅವಕಾಶ ಮಾಡಿಕೊಡಲಾಗಿತ್ತು ಆನ್ನೋ ಆರೋಪವಿದೆ. ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರ ಮಾಡದ ಪ್ರಧಾನಿ ನರೇಂದ್ರ ಮೋದಿ, ಸಂಪೂರ್ಣ ಪ್ರಮಾಣದ ಶಕ್ತಿಯನ್ನು ಗುಜರಾತಿಗೆ ಉಪಯೋಗಿಸಿ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.
ಉಪಚುನಾವಣೆಯಲ್ಲಿ ಸೋಲು, ರಾಷ್ಟ್ರಾಧ್ಯಕ್ಷರ ರಾಜ್ಯದಲ್ಲೂ ಸೋಲು..!
BJP ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಹುಟ್ಟೂರು ಹಿಮಾಚಲ ಪ್ರದೇಶ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋಲುಂಡಿದೆ. ದೇಶದಲ್ಲಿ ಬಿಜೆಪಿ ಪರವಾಗಿ ಅಲೆ ಎದ್ದಿದ್ದರೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲುಂಡಿದ್ದು ಯಾಕೆ..? ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದ್ದ ರಾಜ್ಯವನ್ನು ಬಿಜೆಪಿ ಕಳೆದುಕೊಂಡಿದೆ. ಆ ಬಗ್ಗೆ ಯಾರೊಬ್ಬರೂ ಸೋಲು ಎಂದು ಹೇಳುತ್ತಿಲ್ಲ. ಉಪಚುನಾವಣೆಗಳಲ್ಲೂ ಜನರು ಬಿಜೆಪಿಯನ್ನು ಸೋಲಿಸಿದ್ದಾರೆ. ಬಿಹಾರದ ಕುರ್ಹಾನಿ ಹಾಗು ಉತ್ತರಪ್ರದೇಶ ರಾಂಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಛತ್ತಿಸ್ಗಡದ ಭಾನುಪ್ರತಾಪಪುರದಲ್ಲಿ ಕಾಂಗ್ರೆಸ್ ಗೆದ್ದಿದ್ರೆ, ಒಡಿಶಾದ ಪದಂಪುರದಲ್ಲಿ ಬಿಜೆಡಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಜಸ್ಥಾನದ ಸರ್ದರ್ಶಹಾರದಲ್ಲಿ ಕಾಂಗ್ರೆಸ್ಗೆ ಜಯ ಸಿಕ್ಕಿದೆ. ಇನ್ನು ಉತ್ತರಪ್ರದೇಶದ ಖತೌಲಿಯಲ್ಲಿ ಆರ್ಜೆಡಿಗೆ ಗೆಲುವು ಸಿಕ್ಕರೆ, ಉತ್ತರ ಪ್ರದೇಶದ ಮೈನ್ಪುರಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿಯ ಡಿಂಪಲ್ ಯಾದವ್ ಭರ್ಜರಿ ಜಯ ದಾಖಲಿಸಿದ್ದಾರೆ.

ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದು ಆಮ್ ಆದ್ಮಿ ಅಬ್ಬರ..!
ಎಲ್ಲಾ ಮಾಧ್ಯಮಗಳಲ್ಲೂ ಮೋದಿ ಅಲೆ, ದೇಶದ ಜನ ಭಾರತೀಯ ಜನತಾ ಪಾರ್ಟಿಗೆ ಜೈ ಅಂದಿದ್ದಾನೆ ಎನ್ನುವ ವಿಮರ್ಷೆಗಳೇ ಬಂದಿದ್ದು, ಸೋಲಿನ ಬಗ್ಗೆ ಯಾರೂ ಚಕಾರ ಎತ್ತಲೇ ಇಲ್ಲ. ಇನ್ನು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬಂದಿದೆ. ಆದರೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ನಶಿಸಿ ಹೋಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದವು. ನಿಜ ಬಿಜೆಪಿ ಗುಜರಾತ್ನಲ್ಲಿ ಭರ್ಜರಿಯಾಗಿ 37 ವರ್ಷಗಳ ಬಳಿಕ ದಾಖಲೆಯ ಮಟ್ಟದಲ್ಲಿ ಜಯಗಳಿಸಿದೆ. ಆದರೆ ಬೇರೆ ಕಡೆ ಸೋತಿರುವುದು ಸೋಲೇ ಅಲ್ಲ ಎನ್ನುವ ರೀತಿ ಬಿಂಬಿಸುವುದು ದೇಶಕ್ಕೆ ಒಳ್ಳೆಯದಲ್ಲ. ಅದೂ ಅಲ್ಲದೆ ಒಂದು ವಿರೋಧ ಪಕ್ಷವೇ ಇರಬಾರದು ಎನ್ನುವ ರೀತಿಯ ಮಾತುಗಳು ದೇಶಕ್ಕೇ ಮಾರಕ. ಗುಜರಾತ್ನಲ್ಲಿ ಆಮ್ ಆದ್ಮಿ ಪಾರ್ಟಿ ಕೇವಲ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಆಮ್ ಆದ್ಮಿ ಪಾರ್ಟಿ ಪಡೆದಿರುವ ಮತಗಳ ಸಂಖ್ಯೆ ಶೇಕಡ 12.92 ರಷ್ಟು. ಕಳೆದ 2014ರಲ್ಲಿ ಬಿ.ಎಸ್ ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಪಕ್ಷ ಪಡೆದಿದ್ದ ಮತಗಳಿಗೂ ಅಧಿಕ. ಅಂದು ರಾಜ್ಯದಲ್ಲಿ ಬಿಜೆಪಿ ಸೋಲುಂಡಂತೆ, ಇದೀಗ ಕಾಂಗ್ರೆಸ್ ಆಮ್ ಆದ್ಮಿ ಪಾರ್ಟಿಯ ಪರಿಣಾಮ ಅನುಭವಿಸಿದೆ.
ಸೋಲಿನ ಬಗ್ಗೆ ಮಾತನ್ನೇ ಆಡಲಿಲ್ಲ ಪ್ರಧಾನಿ ನರೇಂದ್ರ ಮೋದಿ..!
ಗುಜರಾತ್ ಗೆಲುವಿನ ಬಳಿಕ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನತಾ ಜನಾರ್ದನನ ಆಶೀರ್ವಾದ ನಮ್ಮ ಮೇಲಿದೆ. ಗೆಲುವಿಗೆ ಕಾರಣರಾದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಧನ್ಯವಾದ ಎಂದಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ಈ ಬಾರಿ ಚುನಾವಣೆಯಲ್ಲೂ ಜಾದು ಮಾಡಿದೆ. ಈ ಸಲ ನರೇಂದ್ರನ ರೆಕಾರ್ಡ್ ಭೂಪೇಂದ್ರ ಮುರಿಯಬೇಕು ಎಂದಿದ್ದೆ. ರೆಕಾರ್ಡ್ ಮುರಿಯುವುದರಲ್ಲೇ ಗುಜರಾತಿನ ಜನ ರೆಕಾರ್ಡ್ ಮಾಡಿದ್ದಾರೆ. ಜನರು ಜಾತಿ, ಮತ, ಶ್ರೀಮಂತ, ಬಡವ ಎನ್ನದೆ ಮತ ನೀಡಿದ್ದಾರೆ. ಗುಜರಾತ್ ಯುವಕರು ಬಿಜೆಪಿ ಮೇಲೆ ಭರವಸೆ ಇಟ್ಟಿದ್ದು, ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅಭಿವೃದ್ಧಿಯಿಂದ ಗೆಲ್ಲಬಹುದು ಎಂಬುವುದನ್ನು ಬಿಜೆಪಿ ತೋರಿಸಿದೆ ಎಂದಿದ್ದಾರೆ. ಆದರೆ ಸೋಲಿನ ಬಗ್ಗೆ ನರೇಂದ್ರ ಮೋದಿ ಸೊಲ್ಲೆತ್ತಿಲ್ಲ. ಸೋಲನ್ನು ಒಪ್ಪಿಕೊಳ್ತೇವೆ. ಆಗಿರುವ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೇವೆ. ಜನರು ಸೋಲಿಸಿದ್ದಾರೆ ಎಂದರೆ ನಮ್ಮಲ್ಲಿ ಏನೋ ತಪ್ಪಿದೆ ಎಂದೇ ಅರ್ಥ ಎಂದು ಪ್ರಧಾನಿ ಬಹಿರಂಗವಾಗಿ ಹೇಳಬೇಕಿತ್ತು. ಕೇವಲ ಗೆದ್ದ ರಾಜ್ಯದ ಬಗ್ಗೆ ಮಾತನಾಡಿ ಸುಮ್ಮನಾಗಿದ್ದು ಕೂಡ ಸರಿಯಲ್ಲ. ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿ ಸೋಲುತ್ತಿರುವ ಬಿಜೆಪಿ ಗೆಲುವಿಗೆ ಸಹಕಾರಿ ಆಗಿದೆ ಎನ್ನುವುದು ಮಾತ್ರ ನಿಶ್ಚಿತ.
ಕೃಷ್ಣಮಣಿ