ಕೆಎಸ್ಡಿಎಲ್ ಲಂಚಾವತಾರ ಪ್ರಕರಣದಲ್ಲಿ ಸೋಮವಾರ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರನ್ನು ಐದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಲಾಗಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಮಾಡಾಳು ವಿರೂಪಾಕ್ಷಪ್ಪರನ್ನು ಜಡ್ಜ್ ಜಯಂತ್ ಕುಮಾರ್ ಏಪ್ರಿಲ್ ಒಂದನೇ ತಾರೀಖಿನವರೆಗೆ ಲೋಕಾಯುಕ್ತ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಕೆಎಸ್ಡಿಎಲ್ ಲಂಚ ಪ್ರಕರಣದ ಎ 1 ಆರೋಪಿಯಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಬಂಧನದ ಬಳಿಕ ತಲೆಮರೆಸಿಕೊಂಡಿದ್ದರು. ಮಧ್ಯಂತರ ಆದೇಶ ಜಾಮೀನು ಸಿಗುತ್ತಿದ್ದಂತೆಯೇ ಪ್ರತ್ಯಕ್ಷರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಅವಧಿ ಕೊನೆಗೊಳ್ಳುತ್ತಿದ್ದಂತೆಯೇ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸೋಮವಾರ ಹೈಕೋರ್ಟ್ ಮಾಡಾಳು ವಿರೂಪಾಕ್ಷಪ್ಪರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಚೆನ್ನಗಿರಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾಡಾಳು ವಿರೂಪಾಕ್ಷಪ್ಪರನ್ನು ತುಮಕೂರಿನ ಕ್ಯಾತ್ಸಂದ್ರದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಇನ್ನು ಮಾಡಾಳು ವಿರೂಪಾಕ್ಷಪ್ಪ ಬಂಧನದ ಬಳಿಕ ಚೆನ್ನಗಿರಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಚೆನ್ನಗಿರಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೆಚ್.ಎಸ್ ಶಿವಕುಮಾರ್ ಬಿಜೆಪಿ ಟಿಕೆಟ್ಗ ಪಡೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ.ಇತ್ತ ಕಾಂಗ್ರೆಸ್ನಲ್ಲಂತೂ ಚೆನ್ನಗಿರಿ ಕ್ಷೇತ್ರ ಗೆಲ್ಲುವ ಹುರುಪು ಇನ್ನಷ್ಟು ಹೆಚ್ಚಾಗಿದ್ದು ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸಹೋದರನ ಪುತ್ರ ಅಶೋಕ್ ವಡ್ನಾಳ್ ಕ್ಷೇತ್ರದಲ್ಲಿ ಭರ್ಜರಿ ಸುತ್ತಾಟ ನಡೆಸುತ್ತಿದ್ದಾರೆ .