~ ಡಾ. ಜೆ ಎಸ್ ಪಾಟೀಲ.
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಜರುಗಿದ ಸಮಾಜೊ-ವೈಚಾರಿಕ ಚಳುವಳಿಗೆ ಮೂಲ ಪ್ರೇರಣೆಯೆಯೆ ಈ ಶರಣು ಶರಣಾರ್ಥಿ ಎಂದ ಪದದ ಪ್ರಯೋಗ. ಸಾಮಾಜಿಕವಾಗಿ ಕೆಳಸ್ತರದಲ್ಲಿರಸಲ್ಪಟ್ಟಿದ್ದ ಜನರ ಭಾವನೆಗಳಿಗೆ ಸ್ಪಂದಿಸಿದ ಜಗತ್ತಿನ ಏಕೈಕ ಚಳುವಳಿ ಬಸವಣ್ಣನವರು ಕೈಗೊಂಡ ವಚನ ಚಳುವಳಿ. ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ಶತಶತಮಾನಗಳಿಂದ ಜಾರಿಯಲ್ಲಿದೆ. ಅಂದು ಸಮಾಜದ ಎಲ್ಲಾ ಸೌಲಭ್ಯಗಳು ಮೇಲ್ವರ್ಗಕ್ಕೆ ಮಾತ್ರ ಮೀರಲಿದ್ದವು. ಶತಶತಮಾನಗಳ ಆ ಶೋಷಣೆಯನ್ನು ಸರಿಪಡಿಸಲು ದೇಶ ಸ್ವಾತಂತ್ರ ಪಡೆದು ಜನತಂತ್ರ ಅನುಷ್ಠಾನಗೊಂಡ ಮೇಲೆ ಶೋಷಿತರಿಗೆ ಮೀಸಲಾತಿ ಸೌಲಭ್ಯಕ್ಕಾಗಿ ಕಾನೂನಿನ ಚೌಕಟ್ಟು ದೊರೆಕಿಸಲಾಯಿತು.

ಸ್ವಾತಂತ್ರ ಪೂರ್ವದಿಂದ ಭಾರತದಲ್ಲಿದ್ದ ಮೀಸಲಾತಿ ಸಂಪೂರ್ಣ ಭೇದಭಾವದ ನೆಲೆಯಲ್ಲಿ ರೂಪಿತವಾಗಿತ್ತು. ಇಂದು ಶಿಕ್ಷಣ ಮತ್ತು ಸರಕಾರಿ ಸೇವೆಗಳಲ್ಲಿ ತುಳಿತಕ್ಕೊಳಗಾದ ಜನರಿಗೆ ಇರುವುದು ಕೇವಲ ೫೦% ಮೀಸಲಾತಿ. ಉಳಿದ ೫೦% ಮೀಸಲಾತಿ ಮತ್ತದೆ ಮೇಲ್ವರ್ಗಕ್ಕೆ ಮೀಸಲು. ಆದರೆ, ಅಂದು ದೇವಸ್ಥಾನಗಳ ಪೌರೋಹಿತ್ಯ ೧೦೦% ಒಂದೇ ವರ್ಗಕ್ಕೆ ಮೀಸಲಾಗಿತ್ತು. ಇಂದೂ ಕೂಡ ಅದೇ ವರ್ಗ ಶ್ರೀಮಂತ ದೇವಸ್ಥಾನಗಳ ಪೌರೋಹಿತ್ಯ ಮಾಡುತ್ತಿದೆ. ಅದರಲ್ಲಿ ಬೇರೆಯವರಿಗೆ ಅವಕಾಶವೇ ಇರುವುದಿಲ್ಲ. ಇನ್ನು ಶಿಕ್ಷಣ, ಭೂ ಒಡೆತನ ಇವು ಕೂಡ ೧೦೦% ಮೇಲ್ವರ್ಗಕ್ಕೆ ಮೀಸಲಿದ್ದವು. ಹೀಗೆ ತಮ್ಮ ಮೂಗಿನ ನೇರಕ್ಕೆ ಮೀಸಲಾತಿಯನ್ನು ರೂಪಿಸಿದ್ದ ಸವರ್ಣಿಯರು ದುಡಿಮೆ, ಶ್ರಮ, ನೋವು, ಬವಣೆಗಳನ್ನು ನೆಲಮೂಲದ ತಳಸಮುದಾಯಕ್ಕೆ ಮೀಸಲಿಟ್ಟು, ಸಮಾಜದ ಒಳಿತು, ಸಂಪತ್ತು, ಐಷಾರಾಮಿ ಬದುಕು ತಮ್ಮದಾಗಿಸಿಕೊಂಡಿದ್ದರು.
ಅಂದು ಶ್ರೇಷ್ಠತೆಯ ಆಧಾರದಲ್ಲಿ ಭೇದಭಾವಪೂರಿತವಾಗಿ ರೂಪಿಸಿ ಜಾರಿಗೆಗೊಳಿಸಲಾಗಿದ್ದ ಮೀಸಲಾತಿ ವ್ಯವಸ್ಥೆಯಿಂದ ಶೋಷಣೆಗೊಳಗಾಗುತ್ತಿದ್ದ ಜನರು ಅದರಲ್ಲಿ ಒಂದಷ್ಟೂ ಪಾಲು ಪಡೆಯದಿದ್ದರೂ ಕೂಡ ಆ ಕರಾಳ ವ್ಯವಸ್ಥೆಯನ್ನು ಒಮ್ಮೆಯೂ ಪ್ರಶ್ನಿಸಲಿಲ್ಲ. ಪ್ರಶ್ನಿಸುವ ಅಧಿಕಾರವೇ ಆ ಜನಾಂಗಗಳಿಗೆ ಇರಲಿಲ್ಲ. ಆದರೆ ಶತಶತಮಾನಗಳಿಂದ ಈ ನೆಲದಲ್ಲಿ ಅವೈಜ್ಞಾನಿಕ/ಅಸಂಬದ್ಧ/ಅನ್ಯಾಯದ ಮೀಸಲಾತಿಯನ್ನು ಬಳಸಿ ಸೊಕ್ಕಿರುವ ವರ್ಗವು ಇಂದು ಜಾರಿಯಲ್ಲಿರುವ ೭೦ ವರ್ಷಗಳ ಕಾನೂನು ಬದ್ಧ/ವೈಜ್ಞಾನಿಕ ಆಧಾರದಲ್ಲಿ ರೂಪಿಸಲಾಗಿರುವ ಮೀಸಲಾತಿಯನ್ನು ಪ್ರಶ್ನಿಸುತ್ತಿದೆ.
ಈ ಶ್ರೇಷ್ಠತೆಯ ವ್ಯವನಧಾರಿಗಳು ರೂಪಿಸಿದ್ದ ಸಾಮಾಜಿಕ ಕಟ್ಟಳೆಯಿಂದ ಬೆಂದು ಬಸವಳಿದಿದ್ದ ಜನಾಂಗಗಳಿಗೆ ಬಸವಣ್ಣನವರು ವಚನ ಚಳುವಳಿಯ ಮಾಧ್ಯಮ ಬಳಸಿ ಲಿಂಗಾಯತವೆಂಬ ಹೊಸ ಧರ್ಮವನ್ನು ನೀಡಿದರು. ಆ ವಚನ ಚಳುವಳಿಗೆ ಪ್ರೇರಣೆˌ ಬಸವಣ್ಣ ಮತ್ತು ಸಮಗಾರ ಹರಳಯ್ಯನವರ ನಡುವೆ ನಡೆದ ಒಂದು ಸಂಭಾಷಣೆಯ ಘಟನೆ. ಆ ಘಟನೆಯೇ ಕಲ್ಯಾಣದಲ್ಲಿ ನಡೆದ ಸಮಗ್ರ ವಚನ ಚಳುವಳಿಗೆ ನಾಂದಿ ಹಾಡಿತ್ತು. ನೊಂದವರಿಗೆ ಸಾಂತ್ವನ ಹೇಳುವ ಸಮಾಧಾನದ ಮಾತುಗಳು ನೀಡುವ ಸಂತಸ ಬೇರೆ ಯಾವ ಸಂಪತ್ತು ನೀಡಲಾರದು. ಅಂದು ಬಸವಣ್ಣನವರು ಶರಣ ಸಮಗಾರ ಹರಳಯ್ಯನವರಿಗೆ ನುಡಿದ ಸಾಂತ್ವನದ ಮಾತುಗಳು ಕಲ್ಯಾಣದಲ್ಲಿ ಒಂದು ಬಹುದೊಡ್ಡ ಸಂಚಲನವನ್ನೇ ಸೃಷ್ಠಿಸಿದವು.
ಸಮಾಜದಲ್ಲಿ ಐಡೆಂಟಿಟಿ ಕ್ರೈಸಿಸ್ ಅನ್ನುವುದು ಹಿಂದಿನಿಂದಲೂ ಅಸ್ಥಿತ್ವದಲ್ಲಿದೆ. ಈ ಐಡೆಂಟಿಟಿ ಕ್ರೈಸಿಸ್ಗೆ ಸೂಕ್ತ ಪರಿಹಾರ ದೊರಕಿದರೆ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ಕಾಣಬಹುದು. ಅಂದು ಮೇಲ್ವರ್ಗದವರು ತಳಸಮುದಾಯದವರನ್ನು ಮುಟ್ಟಿಸಿಕೊಳ್ಳದ ಕಾಲ. ಆಗ ಬಸವಣ್ಣನವರು ಸಮಾಜದ ಕೆಳಸ್ಥರದಲ್ಲಿದ್ದ ಸಮಗಾರ ಓಣಿಗೆ ಬಂದು ಶರಣ ಹರಳಯ್ಯನವರನ್ನು ಭೇಟಿ ಮಾಡಿ ಗೌರವಪೂರ್ವಕವಾಗಿ ಮಾತನಾಡುತ್ತಾರೆ. ಆ ಮಾತುಕತೆ ಮುಗಿದು ಬಸವಣ್ಣನವರು ಹೊರಡಲನುವಾದಾಗ ಶರಣ ಹರಳಯ್ಯನವರು ಶರಣು ಬಸವಣ್ಣ ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ಬಸವಣ್ಣನವರು ಶರಣು ಶರಣಾರ್ಥಿ ಹರಳಯ್ಯನವರೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸುತ್ತಾರೆ. ಈ ಐತಿಹಾಸಿಕ ಘಟನೆಯೇ ಮುಂದೆ ಕಲ್ಯಾಣ ಕ್ರಾಂತಿಗೆ ಮುನ್ನುಡಿ ಬರೆಯುತ್ತದೆ.
ಒಂದು ಬ್ರಹತ್ ಸಾಮ್ರಾಜ್ಯದ ಪ್ರಧಾನಮಂತ್ರಿ, ಇಡೀ ಭರತಖಂಡವನ್ನಷ್ಟೇ ಅಲ್ಲದೆ ಜಗತ್ತಿನ ವಿವಿಧ ಭಾಗದ ಜನರನ್ನು ಪ್ರಭಾವಿಸಿದ ವಚನ ಚಳುವಳಿಯ ನೇತಾರ ಬಸವಣ್ಣನವರು ತನ್ನಂತ ಯಕಕ್ಷಿತ ಸಾಮಾನ್ಯ ಪ್ರಜೆಯ ಮನೆ ಬಾಗಿಲಿಗೆ ಬಂದು ತಾನು ಒಂದು ಸಲ ಶರಣು ಎಂದದ್ದಕ್ಕೆ ಪ್ರತಿಯಾಗಿ ಎರಡು ಸಲ ಶರಣು ಶರಣಾರ್ಥಿ ಹೇಳಿದ ಘಟನೆಯಿಂದ ಒಂದು ಕಡೆ ಸಂತೋಷವಾದರೂ ಬಸವಣ್ಣನವರಂತ ಮಹಾನ್ ಕ್ರಾಂತಿಕಾರಿ ನೇತಾರನ ಋಣದಲ್ಲಿ ಉಳಿದೆನಲ್ಲ ಎನ್ನುವ ಕೊರಗು ಶರಣ ಹರಳಯ್ಯನವರನ್ನು ಬಾಧಿಸುತ್ತದೆ. ಆ ಕಾರಣದಿಂದ ತಮ್ಮ ಪುಣ್ಯಸ್ತ್ರೀಯೊಂದಿಗೆ ಸಮಾಲೋಚಿಸಿ ಬಸವಣ್ಣನವರ ಋಣದಿಂದ ಮುಕ್ತರಾಗಬೇಕಾದರೆ ಸತಿಪತಿಗಿಬ್ಬರ ತೊಡೆಯ ಒಂದಷ್ಟು ಚರ್ಮ ಸೇರಿಸಿ ಸುಂದರ ಚೆಮ್ಮಾವುಗೆಗಳನ್ನು ಮಾಡಿ ಬಸವಣ್ಣನವರಿಗೆ ಸಮರ್ಪಿಸುವ ನಿರ್ಧಾರಕ್ಕೆ ಶರಣ ಹರಳಯ್ಯನವರು ಬರುತ್ತಾರೆ.
ಸಂಕಲ್ಪಿಸಿದಂತೆ ಶರಣ ದಂಪತಿಗಳು ತಮ್ಮ ತೊಡೆಯ ಚರ್ಮದ ಒಂದು ತುಕಡಿ ಸೇರಿಸಿ ಬಸವಣ್ಣನವರಿಗೆ ಚೆಮ್ಮಾವುಗಳನ್ನು ಸಿದ್ಧಪಡಿಸಿಡುತ್ತಾರೆ. ಬ್ರಾಹ್ಮಣ ಮಧುವರಸನ ಕಣ್ಣುಗಳು ಆ ಸುಂದರ ಚೆಮ್ಮಾವುಗೆಗಳ ಮೇಲೆ ಬಿದ್ದು, ಅವನ್ನು ಆತ ಒತ್ತಾಯದಿಂದ ಕಿತ್ತಿಕೊಂಡು ಮೆಟ್ಟುತ್ತಾನೆ. ಈ ಕೃತ್ಯಕ್ಕಾಗಿ ಮಧುವಯ್ಯ ಪಾಪಪ್ರಜ್ಞೆಯಿಂದ ಬಳಲಿˌ ಕೊನೆಗೆ ಚರ್ಮ ಹದಗೊಳಿಸುವ ಮಾತಂಗಿ ತೊಟ್ಟಿಯ ನೀರಿನಿಂದ ಸ್ನಾನ ಮಾಡಿ ಮನಸ್ಸಿನ ಉರಿ ಉಪಶಮನಗೊಳಿಕೊಳ್ಳುತ್ತಾನೆ. ಆಮೇಲೆ ಶರಣ ಹರಳಯ್ಯ ದಂಪತಿಗಳು ಚೆಮ್ಮಾವುಗೆಗಳನ್ನು ಬಸವಣ್ಣನವರಿಗೆ ಸಮರ್ಪಿಸುತ್ತಾರೆ. ಆಗ ಬಸವಣ್ಣನವರು ಶರಣರ ಮೈಯ ಚರ್ಮದಿಂದ ಸಿದ್ಧಪಡಿಸಿದ ಸುಂದರ ಚೆಮ್ಮಾವುಗೆಗಳನ್ನು ಕಾಲಿನಲ್ಲಿ ಮೆಟ್ಟದೆ ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ. ಇದು ಬಸವಣ್ಣನವರಿಗೆ ಶರಣರ ಬಗ್ಗೆ ಇದ್ದ ಭಕ್ತಿ, ಕರುಣೆ ವಿಶ್ವಾಸ ಮತ್ತು ಕಿಂಕರಭಾವ ತೋರುತ್ತದೆ.
ಮುಂದೆ ಇದೇ ಬ್ರಾಹ್ಮಣ ಮಧುವರಸ ಮನಪರಿವರ್ತನೆಗೊಂಡು ಲಿಂಗಸಂಸ್ಕಾರಿಯಾಗುತ್ತಾನೆ. ಮುಂದೊಂದು ದಿನ ಬಸವಣ್ಣನವರ ವರ್ಗˌ ವರ್ಣ, ಲಿಂಗಭೇದ ರಹಿತ ಸಮಾಜ ನಿರ್ಮಾಣದ ಮಹಾತ್ಕಾರ್ಯಕ್ಕೆ ಕೈಜೋಡಿಸುತ್ತಾನೆ. ಶರಣ ಮಧುವರಸ ತನ್ನ ಮಗಳನ್ನು ಶರಣ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಈ ವಿವಾಹದ ಘಟನೆಯೇ ಮುಂದೆ ಕಲ್ಯಾಣದಲ್ಲಿ ಶರಣರ ನರಮೇಧಕ್ಕೆ ಕಾರಣವಾಗುತ್ತದೆ. ಸನಾತನಿಗಳು ಇದು ಪ್ರತಿಲೋಮ ವಿವಾಹವೆಂದು ಹಲಬುತ್ತ ಸನಾತನ ಧರ್ಮದ ಚಾತುರ್ವರ್ಣದ ಕಟ್ಟಳೆಗೆ ವಿರುದ್ಧವಾಗಿ ವರ್ಣಸಂಕರವಾಯ್ತೆಂದು ಬೊಬ್ಬೆಹಾಕಿ ಕಲ್ಯಾಣದ ರಾಜಬೀದಿಯಲ್ಲಿ ಶರಣರ ಹತ್ಯೆ ಮಾಡಿಸುತ್ತಾರೆ. ಶರಣರು ಬರೆದಿಟ್ಟ ವಚನ ರಾಶಿಗೆ ಬೆಂಕಿ ಹಾಕುತ್ತಾರೆ.
ಈ ರೀತಿಯಾಗಿ ಬಸವಣ್ಣನವರು ಅಂದು ಶರಣ ಹರಳಯ್ಯನವರಿಗೆ ಹೇಳಿದ ಶರಣು ಶರಣಾರ್ಥಿ ಪದವು ಜಗತ್ತಿನ ಬಹುದೊಡ್ಡ ಸಮಗ್ರ ಕಾಂತ್ರಿಗೆ ಪ್ರೇರಣೆಯಾಗುತ್ತದೆ. ಅಂತಹ ಕಲ್ಯಾಣಕಾರಿ ಸಂಬರ್ಭದಲ್ಲಿ ಬಸವಣ್ಣನವರು ಬಳಸಿದ ಈ ಪದವು ಇಂದು ಎಲ್ಲೆಂದರಲ್ಲಿ, ಯಾವಯಾವುದೋ ಕಾರಣಗಳಿಗೆ ದುರ್ಬಳಕೆಯಾಗುತ್ತಿದೆ. ದರೋಡೆಕೋರನೊಬ್ಬ ದರೋಡೆ ಮಾಡಲು ಸಹಕರಿಸಿದವರಿಗೆˌ ಭ್ರಷ್ಟನೊಬ್ಬ ತನ್ನ ಭ್ರಷ್ಟಾಚಾರಕ್ಕೆ ಸಹಾಯ ಮಾಡಿದವರಿಗೆ, ಜಾತಿವಾದಿ ರಾಜಕಾರಣಿಯೊಬ್ಬ ತನ್ನ ಗೆಲುವಿಗೆ ಕಾರಣರಾದ ಜಾತಿವಾದಿ ಮತದಾರರಿಗೆ ಮತ್ತು ಮಠಾಧೀಶ ತನ್ನ ಜಾತಿ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದ ಜಾತಿಬಾಂಧವರಿಗೆ ಕೃತಜ್ಞನೆ ತಿಳಿಸಲು ಈ ಪದದ ದುರ್ಬಳಗೆ ಮುಂದುವರೆದಿದೆ. ಜಗತ್ತಿನ ಒಳಿತಿಗಾಗಿ ಮತ್ತು ಶೋಷಿತರ ವಿಮೋಚನೆಗಾಗಿ ಘಟಿಸಿದ ಕಲ್ಯಾಣದ ವಚನ ಚಳುವಳಿಯ ಬೀಜಾಂಕುರಕ್ಕೆ ಕಾರಣವಾಗಿದ್ದ ಶರಣು ಶರಣಾರ್ಥಿ ಪದವು ಇಂದು ರಾಜಕೀಯ, ಜಾತಿ ಸಂಘಟನೆ, ಮೀಸಲಾತಿ ಮುಂತಾದ ಸಂಕುಚಿತ ಕಾರಣಗಳಿಗೆ ದುರ್ಬಳಕೆಯಾಗುವುದು ಬಸವಾದಿ ಶರಣರಿಗೆ ಮಾಡುವ ಬಹುದೊಡ್ಡ ದ್ರೋಹವಲ್ಲದೆ ಮತ್ತೇನೂ ಅಲ್ಲ.
ನಾವು ಬಸವಾದಿ ಶರಣರ ವಿಚಾರಗಳನ್ನು ಜಾತಿ, ಮತ, ರಾಜಕೀಯ ಸಂಘಟನೆ ಮುಂತಾದ ಸಿಮೀತ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಶರಣರ ನೈಜ ಆಶಯಗಳು ಅನುಷ್ಠಾನಗೊಳಿಸುವುದು ಹೋಗಲಿ, ಕನಿಷ್ಠ ಅವುಗಳನ್ನು ಅರ್ಥಮಾಡಿಕೊಳ್ಳುವಲ್ಲೂ ಸೋತಿದ್ದೇವೆ. ಬಸವಣ್ಣನವರು ಜಂಗಮ ಎನ್ನುವ ಚಲನಶೀಲ ತತ್ವ ಮತ್ತು ಧರ್ಮ ಪ್ರಚಾರದ ವ್ಯವಸ್ಥೆಯನ್ನು ಹುಟ್ಟುಹಾಕಿದ್ದರು. ಈಗಾಗಲೇ ಜಂಗಮ ಎನ್ನುವುದೊಂದು ಜಡ್ಡು ಜಾತಿಯಾಗಿ ಇಡೀ ಲಿಂಗಾಯತ ಧರ್ಮಕ್ಕೆ ಕ್ಯಾನ್ಸರನಂತೆ ಭಾದಿಸುತ್ತಿದೆ. ಅದರಂತೆ, ಶರಣರು ಪ್ರತಿಪಾದಿಸಿದ ತತ್ವಗಳು, ಬಳಸಿದ ಪದಗಳು ಈ ಹುಲು ಮಾನವರು ತಮ್ಮ ಮನಸ್ಸಿಗೆ ಬಂದಂತೆ ಬಳಸುತ್ತ, ತಿರುಚುತ್ತ, ವಿಕೃತಗೊಳಿಸುತ್ತ ಸಾಗುತ್ತಿದ್ದಾರೆ. ಲಿಂಗಾಯತ ಧರ್ಮಾನುಯಾಯಿಗಳೇ ಇಂದು ಲಿಂಗಾಯತ ಧರ್ಮದ ತತ್ವಗಳು ಮತ್ತು ಶರಣರ ಉದಾತ್ ಆಶಯಗಳಿಗೆ ಮಾರಕವಾಗಿ ಪರಿಣಮಿಸಿದ್ದಾರೆ. ಇದೊಂದು ಬಹುದೊಡ್ಡ ವಿಷಮ ಘಳಿಗೆ ಎನ್ನದೆ ಬೇರೆ ವಿಧಿಯಿಲ್ಲ.
~ ಡಾ. ಜೆ ಎಸ್ ಪಾಟೀಲ.