“ಕುಮಾರಸ್ವಾಮಿ (Kumarswamy) ಅವರ ಬಗ್ಗೆ ಸಚಿವ ಜಮೀರ್ ಅವರು ಕರಿಯ ಎಂದು ಪದ ಬಳಸಿರುವುದು ತಪ್ಪು. ಅವರನ್ನು ತಿದ್ದುತ್ತೇವೆ. ಕ್ರಮ ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
ಜಮೀರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ (ARM Hussain) ಅವರು ಪತ್ರ ಬರೆದಿದ್ದು, ಜಮೀರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಿರ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಅದು ಅವರಿಬ್ಬರ ಆಂತರಿಕ ವಿಚಾರ. ಆದರೂ ಜಮೀರ್ ಅವರು ಕುಮಾರಸ್ವಾಮಿ ಬಗ್ಗೆ ಕಪ್ಪು, ಬಿಳುಪು ಹಾಗೂ ಆಸ್ತಿ ವಿಚಾರವನ್ನೆಲ್ಲ ಮಾತನಾಡಬಾರದಿತ್ತು. ಜಮೀರ್ ಅವರು ಪ್ರೀತಿಯಿಂದ, ಸಲಿಗೆಯಿಂದ ಮಾತನಾಡಿದ್ದಾರೋ ಗೊತ್ತಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಅವರು ಮಾತನಾಡಿದ್ದು ತಪ್ಪು ಎಂದು ಹೇಳುತ್ತಿದ್ದೇನೆ. ಇದನ್ನು ಅವರಿಗೆ ಆಂತರಿಕವಾಗಿ ಹೇಳಿದ್ದೀವೆ. ಅದಕ್ಕೆ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ” ಎಂದರು.

ಕುಮಾರಸ್ವಾಮಿ ಕೊಚ್ಚೆ ಎಂದು ಕರೆದಿದ್ದನ್ನು ಜನ ನೋಡಿದ್ದಾರೆ

ಜಮೀರ್ (Jameer) ಅವರನ್ನು ಕುಮಾರಸ್ವಾಮಿ ಅವರು ಕೊಚ್ಚೆ ಎಂದು ಕರೆದಿರುವ ಬಗ್ಗೆ ಕೇಳಿದಾಗ, “ನಾನು ಮೊದಲೇ ಹೇಳಿದಂತೆ ಇದು ಅವರಿಬ್ಬರಿಗೆ ಬಿಟ್ಟ ವಿಚಾರ. ಅವರು ಕೊಚ್ಚೆ ಎಂದು, ಇವರು ಕರಿಯ ಎಂದು ಕರೆದಿದ್ದನ್ನು ಜನರು ನೋಡಿದ್ದಾರೆ. ಅವರು ಇದನ್ನು ತೀರ್ಮಾನ ಮಾಡುತ್ತಾರೆ” ಎಂದರು.