ಮಂಡ್ಯ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಸಹ ಭರದಿಂದ ಸಾಗುತ್ತಿದೆ. ಈ ನಡುವೆ ಬಿಜೆಪಿ ಪಕ್ಷದಿಂದ ಕೆಲವು ಸಚಿವರು ಬೇರೆ ಪಕ್ಷಕ್ಕೆ ಕಾಲಿಡಲು ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡಿದೆ. ಈ ಸಾಲಿನಲ್ಲಿ ಸಚಿವ ವಿ.ಸೋಮಣ್ಣ, ಕೆಸಿ ನಾರಾಯಣ ಗೌಡ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಬಿಜೆಪಿ ನಾಯಕರು ಇದೆಲ್ಲ ವದಂತಿ ಎಂದು ಹೇಳಿಕೊಂಡು ಬರ್ತಿದ್ದರೂ ಸಹ ಇಬ್ಬರ ವರ್ತನೆ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
![](https://pratidhvani.com/wp-content/uploads/2023/03/pic-1-1024x538.jpg)
ಸಚಿವ ಕೆಸಿ ನಾರಾಯಣ ಗೌಡ ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಮಾತು ಮಂಡ್ಯ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಬಲವಾಗಿ ಕೇಳಿ ಬರ್ತಿದೆ. ಮೊನ್ನೆ ಮೊನ್ನೆಯಷ್ಟೇ ಕೆ.ಸಿ ನಾರಾಯಣಗೌಡರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳದಂತೆ ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು .
ಈ ಎಲ್ಲದರ ನಡುವೆ ಸಚಿವ ಕೆಸಿ ನಾರಾಯಣ ಗೌಡ ಸರ್ಕಾರದ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ಬಳಕೆ ಮಾಡದೇ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರಂತೆ. ಶೀಳನೆರೆ, ಬೂಕನಕೆರೆ, ವಿಠಲಾಪುರ ಹಾಗೂ ಸಂತೆಬಾಚನಹಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪಕ್ಷದ ಯಾವುದೇ ಬ್ಯಾನರ್ಗಳನ್ನು ಬಳಕೆ ಮಾಡದೆಯೇ ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದು ಪಕ್ಷಾಂತರದ ಬಗ್ಗೆ ಗುಟ್ಟಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರಾ ಎಂಬ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.