ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಂದ್ಯಗಳ ಹಿನ್ನೆಲೆ ಅಭಿಮಾನಿಗಳಿಗೆ ನಮ್ಮಮೆಟ್ರೊ ಗುಡ್ನ್ಯೂಸ್ ನೀಡಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಲ್ಲಿ ನಡೆಯಲಿರುವ ಪಂದ್ಯಗಳ ದಿನಗಳಲ್ಲಿ ‘ನಮ್ಮ ಮೆಟ್ರೋ’ ಸೇವೆಯನ್ನು ವಿಶೇಷವಾಗಿ ವಿಸ್ತರಿಸಲಾಗಿದೆ.ಏಪ್ರಿಲ್ 15 ಮತ್ತು 24ರಂದು ನಡೆಯಲಿರುವ RCB ಪಂದ್ಯಗಳ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸೇವೆಗಳನ್ನು ಮಧ್ಯರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಪಂದ್ಯ ವೀಕ್ಷಣೆಗೆ ಆಗಮಿಸುವ ಸಾವಿರಾರು ಅಭಿಮಾನಿಗಳಿಗೆ ಸುಗಮ ಮತ್ತು ಸುರಕ್ಷಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈ ದಿನಗಳಲ್ಲಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಗಳು ಸಾಮಾನ್ಯ ಸಮಯದ ನಂತರವೂ ಮುಂದುವರೆಯಲಿವೆ. ಪ್ರಮುಖವಾಗಿ, ವೈಟ್ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 12:30ಕ್ಕೆ, ಚಲ್ಲಘಟ್ಟದಿಂದ 12:45ಕ್ಕೆ, ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ 12:45ಕ್ಕೆ, ಬೊಮ್ಮಸಂದ್ರದಿಂದ 12:30ಕ್ಕೆ ಹಾಗೂ ಆರ್.ವಿ. ರಸ್ತೆ ನಿಲ್ದಾಣದಿಂದ ರಾತ್ರಿ 2:00 ಗಂಟೆಗೆ ಕೊನೆಯ ರೈಲು ಸಂಚರಿಸಲಿದೆ.ನಗರದ ಪ್ರಮುಖ ಜಂಕ್ಷನ್ ಆಗಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1:30ಕ್ಕೆ ಕೊನೆಯ ರೈಲುಗಳು ಹೊರಡಲಿವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.ಆದರೆ, ಏಪ್ರಿಲ್ 18ರಂದು ನಡೆಯಲಿರುವ ಪಂದ್ಯ ದಿನದಲ್ಲಿ ಯಾವುದೇ ವಿಶೇಷ ವಿಸ್ತರಣೆ ಇರುವುದಿಲ್ಲ. ಆ ದಿನ ಮೆಟ್ರೋ ಸೇವೆಗಳು ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪಂದ್ಯ ದಿನಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಲು ಬಿಎಂಆರ್ಸಿಎಲ್ ಈ ರೀತಿಯ ವಿಶೇಷ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ. ಅಭಿಮಾನಿಗಳು ಖಾಸಗಿ ವಾಹನಗಳ ಬದಲಿಗೆ ಮೆಟ್ರೋ ಸೇವೆ ಬಳಸುವಂತೆ ಸಂಸ್ಥೆ ಮನವಿ ಮಾಡಿದೆ. ಈ ಕ್ರಮದಿಂದ ಪಂದ್ಯ ವೀಕ್ಷಣೆಗೆ ಬರುವ ಜನರಿಗೆ ರಾತ್ರಿ ವೇಳೆಯಲ್ಲೂ ಸುಗಮ ಪ್ರಯಾಣ ಸೌಲಭ್ಯ ದೊರೆಯಲಿದೆ.






