![](https://pratidhvani.com/wp-content/uploads/2024/07/93256306-1-1024x576.webp)
18ನೇ ಲೋಕಸಭೆ ಚುನಾವಣೆ ಬಳಿಕ ಸಂಸತ್ ಅಧಿವೇಶನ ಕರೆಯುವಾಗ ರಾಷ್ಟ್ರಪತಿಗಳು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯ.
75 ವರ್ಷಗಳಲ್ಲಿ ನೆಹರೂ ಅವರಿಂದ ಹಿಡಿದು ಮೋದಿ ಅವರು ಈ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು. ರಾಷ್ಟ್ರಪತಿಗಳ ಭಾಶದ ಮೂಲಕ ದೇಶಕ್ಕೆ ಉತ್ತಮ ಸಂದೇಶ ರವಾನಿಸುವ ಪ್ರಕ್ರಿಯೆ ಇದಾಗಿದೆ.
![](https://pratidhvani.com/wp-content/uploads/2024/07/1200-675-19439968-1033-19439968-1693934826260-1024x576.jpg)
ಆದರೆ ಮೋದಿ ಅವರು ರಾಷ್ಟ್ರಪತಿಗಳಿಂದ ಹೇಳಿಸಿರುವ ಭಾಷಣ ನೋಡಿದರೆ ದೇಶ ಹಾಗೂ ಸಂವಿಧಾನದ ಬಗ್ಗೆ ಮೋದಿ ಅವರಿಗೆ ಎಷ್ಟು ಗೌರವವಿದೆ ಎಂಬುದು ತಿಳಿಯುತ್ತದೆ.
ತುರ್ತುಪರಿಸ್ಥಿತಿಗೆ 50 ವರ್ಷಗಳಾಗಿದ್ದು ಈ ಸಂದರ್ಭದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಲಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಸಂವಿಧಾನದ ಆರ್ಟಿಕಲ್ 352ನಲ್ಲಿ ಅವಕಾಶವಿದೆ. ದೇಶದ ಮೇಲೆ ಬಾಹ್ಯ ದಾಳಿ ಹಾಗೂ ಆಂತರಿಕ ಗದ್ದಲ ಇದ್ದಾಗ ತುರ್ತುಪರಿಸ್ಥಿತಿ ಹೇರಬಹುದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ದೇಶದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಿ, ದೇಶದ ಪರಿಸ್ಥಿತಿ ನಿಭಾಯಿಸಲು ಶ್ರೀಮತಿ ಇಂದಿರಾ ಗಾಂಧಿ ಅವರು ಸಂವಿಧಾನ ಬದ್ಧವಾಗಿ ತುರ್ತುಪರಿಸ್ಥಿತಿ ಹೇರಿದರು.
ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನು ಬಂಧನ ಮಾಡಿರಲಿಲ್ಲ. ಸಮಾಜಘಾತುಕ ಶಕ್ತಿಗಳು ಹಾಗು ಸರ್ಕಾರ ಬುಡಮೇಲು ಮಾಡುವ ಪ್ರಯತ್ನಕ್ಕೆ ಮುಂದಾದವರನ್ನು ಮಾತ್ರ ನಿಯಂತ್ರಣ ಮಾಡಲಾಗಿತ್ತು. ಸಂವಿಧಾನಕ್ಕೆ ಅಡಚಣೆ ಮಾಡುವ ಕೆಲಸ ಆಗಿರಲಿಲ್ಲ.
ಆಗಿನ ಹೋರಾಟಗಾರರು ಇಂದಿರಾ ಗಾಂಧಿ ಅವರ ಸರ್ಕಾರದ ವಿರುದ್ಧ ಹೋರಾಟ ಮಾಡದೇ, ದೇಶದ ಸೇನೆ ಹಾಗೂ ಸಶಸ್ತ್ರ ಪಡೆಗಳು ದಂಗೆ ಮಾಡುವಂತೆ ಕರೆ ನೀಡುತ್ತಾರೆ. ಆಗ ಬೇರೆ ದಾರಿಯಿಲ್ಲದೆ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿ ಪರಿಸ್ಥಿತಿ ನಿಯಂತ್ರಿಸಿದರು. ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಅವರೇ ತುರ್ತುಪರಿಸ್ಥಿತಿ ಹಿಂಪಡೆದರು.
![](https://pratidhvani.com/wp-content/uploads/2024/07/download-13.jpeg)
ಇಂದಿರಾ ಗಾಂಧಿ ಅವರು ಎಂದಿಗೂ ತಮ್ಮ ಎದುರಾಳಿಗಳ ಮನೆ ಮುಂದೆ ಬುಲ್ಡೋಜರ್ ಕಳುಹಿಸಲಿಲ್ಲ. ಐಎಎಸ್ ಅಧಿಕಾರಿಗಳನ್ನು ಬಂಧಿಸಿರಲಿಲ್ಲ. ನಕಲಿ ಎನ್ ಕೌಂಟರ್ ಮಾಡಲಿಲ್ಲ.
ಮೋದಿ ಅವರು ತಮ್ಮ ಭಾಷಣದಲ್ಲಿ ವಿವೇಕಾನಂದ ಹಾಗೂ ಸಾರ್ವರ್ಕರ್ ವಿಚಾರ ಹೇಳಿದರು.
ಕಾಂಗ್ರೆಸ್ ಪಕ್ಷ ಯಾವುದೇ ರೀತಿ ಅಸಂವಿಧಾನಿಕ ಕ್ರಮ ಕೈಗೊಂಡಿಲ್ಲ. ತುರ್ತು ಪರಿಸ್ಥಿತಿ ನಂತರವೂ ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಿದ್ದರು.
ಸಂವಿಧಾನ ಬದಲಾವಣೆ ಮಾಡಬೇಕು ಎಂದು 2015ರ ಬಿಹಾರ ಚುನಾವಣೆ ಸಮಯದಲ್ಲಿ ಮೋಹನ್ ಭಾಗವತ್ ಅವರು ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದರು. ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೀಸಲಾತಿ ತೆಗೆಯಲು ಪುನರ್ಪರಿಶೀಲನೆ ಮಾಡಲು ಮುಂದಾಗಿದ್ದಾಗ ರಾಷ್ಟ್ರಪತಿಗಳ ಕೆ.ಆರ್ ನಾರಾಯಣ ಅವರು ಇದಕ್ಕೆ ಅವಕಾಶ ನೀಡಲಿಲ್ಲ. ಸಂವಿಧಾನ ತಿದ್ದುಪಡಿಗೂ ಸಂವಿಧಾನ ಬದಲಾವಣೆಗೂ ಬಹಳ ವ್ಯತ್ಯಾಸವಿದೆ.
![](https://pratidhvani.com/wp-content/uploads/2024/07/rahul-gandhi-counters-bjps-accusations-1719847240-1024x576.jpg)
ಲೋಕಸಭೆ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣದ ಹೊರತಾಗಿಯೂ ಉತ್ತರಪ್ರದೇಶದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ನಂತರ ಬಿಜೆಪಿ ನಾಯಕರು ಬುದ್ಧಿಭ್ರಮಣೆಗೆ ಒಳಗಾಗಿದ್ದಾರೆ. ಅವರ ಭಾಷಣಗಳೇ ಇದಕ್ಕೆ ಸಾಕ್ಷಿ.
ರಾಹುಲ್ ಗಾಂಧಿ ಸಾಂವಿಧಾನಿಕವಾಗಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಅವರ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡುತ್ತಿರುವುದು ನೋಡಿದರೆ ಬುದ್ಧಿಭ್ರಮಣೆ ಯಾಗಿರುವುದಕ್ಕೆ ಸಾಕ್ಷಿ.
ರಾಹುಲ್ ಗಾಂಧಿ ಅವರು ಮೋದಿ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಅವರನ್ನೇ ನೇರವಾಗಿ ಪ್ರಶ್ನೆ ಮಾಡಬಹುದಾಗಿತ್ತು. ಆದರೆ ಬಾಲಕ ಬುದ್ಧಿ, ಬಚ್ಚಾ ಎಂಬ ಪದ ಬಳಕೆ ಮಾಡಿದ್ದಾರೆ. ಆಮೂಲಕ ದೇಶದ ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದಾರೆ. ದೇಶದಲ್ಲಿ ಇವರಿಗಿಂತ ಹಾಗೂ ಇವರ ಮಂತ್ರಿಗಳಿಗಿಂತ ಹೆಚ್ಚು ಬುದ್ಧಿವಂತಿಕೆ ಇರುವ ಮಕ್ಕಳು ಇದ್ದಾರೆ.
ಮೋದಿ ಅವರು ತಮ್ಮ ಭಾಷಣದಲ್ಲಿ ದೇಶಕ್ಕಾಗಿ ಏನು ಮಾಡುತ್ತೇವೆ ಎಂದು ಮಾತನಾಡಲೇ ಇಲ್ಲ. ದೇಶದಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಆಕ್ರಮಣದಿಂದ ವಂಚನೆಗೆ ಒಳಗಾಗಿದ್ದಾರೆ. ಅವರ ಬಗ್ಗೆ ಮಾತಾಡಲಿಲ್ಲ. ಮಣಿಪುರ ಗಲಭೆ ಸಂತ್ರಸ್ತರ ಬಗ್ಗೆ ಮಾತನಾಡಲಿಲ್ಲ. ದೇಶದ ಗಡಿಯನ್ನು ಚೀನಾ ಸೇನೆ ಅತಿಕ್ರಮಣ ಮಾಡಿರುವ ಬಗ್ಗೆ ಮಾತಾಡಲಿಲ್ಲ.
![](https://pratidhvani.com/wp-content/uploads/2024/07/manipur-pulse-express-1024x576.jpeg)
ಮೋದಿ ಅವರು ತಮ್ಮ ಭಾಷಣದಲ್ಲಿ ಕೇವಲ ರಾಹುಲ್ ಗಾಂಧಿ ಅವರನ್ನು ಟೀಕೆ ಮಾಡುವುದರಲ್ಲೇ ನಿರತರಾದರು. ನನ್ನ ರಾಜಕೀಯ ಇತಿಹಾಸದಲ್ಲಿ ಇಷ್ಟು ಕೀಳುಮಟ್ಟದ ಭಾಷಣ ಮಾಡಿದ ಮತ್ತೊಬ್ಬ ಪ್ರಧಾನಿ ಇಲ್ಲ.
ಮೋದಿ ಅವರು ತಮ್ಮ ಭಾಷಣದಲ್ಲಿ ವಿವೇಕಾನಂದ ಹಾಗೂ ಸಾರ್ವರ್ಕರ್ ಅವರ ಬಗ್ಗೆ ಮಾತನಾಡಿದರು. ವಿವೇಕಾನಂದ ಅವರು ಚಿಕಾಗೋ ಭಾಷಣದಲ್ಲಿ ಪ್ರಪಂಚದ ಶೋಷಿತ, ತುಳಿತಕ್ಕೆ ಒಳಗಾದ ಎಲ್ಲಾ ಜಾತಿ, ಧರ್ಮದವರಿಗೆ ಆಶ್ರಯ ನೀಡಿರುವ ಭಾರತ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದರು. ಹೀಗಾಗಿ ಮೋದಿ ಹಾಗೂ ಬಿಜೆಪಿ ಅವರಿಗೆ ವಿವೇಕಾನಂದರ ಹೆಸರು ಹೇಳುವ ಯೋಗ್ಯತೆ ಇಲ್ಲ. ಇನ್ನು ಸಾರ್ವರ್ಕರ್ ಅವರು ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು. ಇವರಿಬ್ಬರ ಹೆಸರು ಹೇಳಿ ಮೋದಿ ಅವರು ಭಾಷಣ ಮಾಡಿದ್ದಾರೆ.
ಮೋದಿ ಅವರು ನಮ್ಮ ಪಕ್ಷದ ಅನೇಕ ನಾಯಕರ ಬಗ್ಗೆ ಕೀಳಾಗಿ ಮಾತನಾಡಿ ಪ್ರಧಾನಮಂತ್ರಿ ಹುದ್ದೆಗೆ ಕಳಂಕ ತಂದಿದ್ದಾರೆ. ಮೋದಿ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ 543 ಸ್ಥಾನಗಳಲ್ಲಿ ಕೇವಲ 99 ಸ್ಥಾನ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಅವರು ಕೂಡ 543 ಸ್ಥಾನಗಳಲ್ಲಿ 242 ಸ್ಥಾನ ಪಡೆದಿದ್ದಾರೆ. ಬೇರೆಯವರ ಹೆಗಲ ಮೇಲೆ ಕೂತು ಸರ್ಕಾರ ಮಾಡಬೇಕಿದೆ.
![](https://pratidhvani.com/wp-content/uploads/2024/07/108369204-1-1024x576.webp)
ಬಿಜೆಪಿಯ ಪಿತೃ ಸಂಸ್ಥೆ ಆರ್ ಎಸ್ ಎಸ್ ನಾಯಕರು ತುರ್ತುಪರಿಸ್ಥಿತಿ ಬೆಂಬಲ ಘೋಷಣೆ ಮಾಡಿದ್ದರು. ಆದರೂ ಬಿಜೆಪಿಯವರು ಆರ್ ಎಸ್ ಎಸ್ ವಿರುದ್ಧವಾಗಿ ಹೋಗುತ್ತಿದ್ದಾರೆ.
ತುರ್ತು ಪರಿಸ್ಥಿತಿಯ ನಂತರ ದೇಶದ ಜನ 1980, 1984, 1991, 2004, 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ.