ಜವಹಾರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಮೂಲಗಳ ಪ್ರಕಾರ, ಶ್ರೀ ರಾಮ ನವಮಿ ಹಿನ್ನೆಲೆಯಲ್ಲಿ ಕಾವೇರಿ ಹಾಸ್ಟೆಲ್ ನಲ್ಲಿ ಮಾಂಸಹಾರ ಸೇವಿಸಕೂಡದೆಂದು ಎಬಿವಿಪಿ ವಿದ್ಯಾರ್ಥಿಗಳು ಆಕ್ಷೇಪ ಎತ್ತಿದ್ದು, ಇದು ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.
ಈ ಕುರಿತು ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಟ್ವೀಟ್ ಮಾಡಿದ್ದು, ಎಬಿವಿಪಿ ಸದಸ್ಯರು ಕ್ಯಾಂಪಸ್ ನಲ್ಲಿ ಮಾಂಸಹಾರ ಸೇವಿಸುವುದನ್ನು ತಡೆದು ಹಿಂಸಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಮನವಮಿ ಸಂದರ್ಭದಲ್ಲಿ ಹಾಸ್ಟೆಲ್ ಕ್ಯಾಂಟೀನ್ನಲ್ಲಿ ಮಾಂಸಾಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಕ್ಯಾಂಪಸ್ನಲ್ಲಿ ಎಬಿವಿಪಿ ಸದಸ್ಯರು ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಧ್ಯಾಹ್ನ 3:30ಕ್ಕೆ ಕಾವೇರಿ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ.
ಎಬಿವಿಪಿ ಸದಸ್ಯರು ಮೆಸ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಹಾಸ್ಟೆಲ್ನಲ್ಲಿ ಮಾಂಸ ಭಕ್ಷ್ಯಗಳನ್ನು ನೀಡದಂತೆ ಸಿಬ್ಬಂದಿಯನ್ನು ತಡೆದಿದ್ದಾರೆ ಎಂದು ಜೆಎನ್ಯು ವಿದ್ಯಾರ್ಥಿ ಸಂಘವು ಆರೋಪಿಸಿದೆ.
ಪ್ರತಿಯಾಗಿ ಎಬಿವಿಪಿ ಕಾರ್ಯಕರ್ತರೂ ಪ್ರತ್ಯಾರೋಪ ಮಾಡಿದ್ದು, ಎಡ ಸಂಘಟನೆಗಳ ಕಾರ್ಯಕರ್ತರು ರಾಮನವಮಿ ಪೂಜೆ ಮಾಡದಂತೆ ತಡೆದು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ನಡುವೆ ಘರ್ಷಣೆ ಹಿನ್ನೆಲೆಯಲ್ಲಿ ಜೆಎನ್ ಯು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಕ್ಯಾಂಪಸ್ ನಲ್ಲಿ ಆಹಾರ ಸೇವನೆ ಕುರಿತು ಯಾವುದೇ ನಿರ್ಬಂಧವಿಲ್ಲ. ಅವರ ಆಹಾರ ಪದ್ಧತಿ ಅನುಸರಿಸಲು ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ.