ಎಂಬಿ ಪಾಟೀಲ್ಗೆ ಈಗ ಸಿಕ್ಕಿರುವ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತಿದೆ. ಕೂತ ಕಡೆ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ಎಂಬಿ ಪಾಟೀಲ್ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಮೂಲಕ ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂಬಿ ಪಾಟೀಲ್ ಹೇಳಿಕೆಗೆ ಮೈಸೂರು ಕೊಡಗು ಸಂಸದ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ಗೆ ಬರೀ ಚಿಲ್ಲರೆ, ನೋಟು ಇದರ ಬಗ್ಗೆ ಮಾತ್ರ ಚಿಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಓಲೈಕೆಯೇ ತಮ್ಮ ಖಾತೆಯ ಜವಾಬ್ದಾರಿ ಎಂದು ಪಾಟೀಲ್ ಅಂದು ಕೊಂಡಿದ್ದಾರೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ ಎಂಬಿ ಪಾಟೀಲ್ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯಗೆ ಪುಕ್ಕಲುತನ ; ಸಿಎಂ ಸಿದ್ದರಾಮಯ್ಯಗೆ ಪುಕ್ಕಲುತನ. ನಾನೇ 5 ವರ್ಷ ಮುಖ್ಯಮಂತ್ರಿ ಅಂತ ಡಿಕೆಶಿಗೆ ನೇರವಾಗಿ ಹೇಳೋಕೆ ಧೈರ್ಯವಿಲ್ಲ. ಹೀಗಾಗಿ ಅವರ ಚೇಲಾಗಳಾದ ಮಹದೇವಪ್ಪ, ಎಂಬಿಪಾಟೀಲ್ ಬಾಯಿಂದ ಹೇಳಿಸುತ್ತಿದ್ದಾರೆ ಅಂತ ಪ್ರತಾಪ್ ಸಿಂಹ ಲೇವಡಿ ಮಾಡಿದ್ರು.

ಬಸನಗೌಡ ಪಾಟೀಲ್ ಸೂಕ್ತ ; ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯೋಗ್ಯ ವ್ಯಕ್ತಿ. ಉತ್ತರ ಕರ್ನಾಟಕದಲ್ಲಿ ಅವರದ್ದೇ ಆದ ಹವಾ ಇದೆ. ಹಿಂದುತ್ವ ಹಾಗೂ ರಾಷ್ಟ್ರೀಯವಾದದಲ್ಲಿ ಅವರಿಗೆ ನಂಬಿಕೆ ಇದೆ. ಸೋಷಿಯಲ್ ಮಿಡಿಯಾದಲ್ಲಿ ಅವರಿಗೆ ವಿಪಕ್ಷ ನಾಯಕ ಸ್ಥಾನ ಕೊಡೋ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಕಾಂಗ್ರೆಸ್ ಪಕ್ಷದ ಸರ್ಕಾರವನ್ನ ಸಮರ್ಥವಾಗಿ ಎದುರಿಸುವ ನಾಯಕನ ಅವಶ್ಯಕತೆ ಇದೆ. ಅಧಿವೇಶನದ ಒಳಗಾಗಿ ವಿಪಕ್ಷ ಸ್ಥಾನಕ್ಕೆ ನಾಯಕನ ಆಯ್ಕೆ ಆಗುತ್ತದೆ. ಕಾರ್ಯಕರ್ತರ ಮನದಾಸೆಯಂತೆ ಅರ್ಹ ವ್ಯಕ್ತಿಗೆ ಸ್ಥಾನ ಸಿಗಲಿದೆ ಎಂದರು.
ಬಂದ್ಗೆ ಬೆಂಬಲಿಸಿ ; ವಿದ್ಯುತ್ ದರ ಏರಿಕೆ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯದ್ವಾತದ್ವಾ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್ ನೀಡಿದೆ. ಇದರ ವಿರುದ್ಧ ಜೂನ್ 22 ರಂದು ಕೈಗಾರಿಕೆಗಳ ಸಂಘದಿಂದ ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ. ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಹೇಳಿದರು.
ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಮಾಡಲ್ಲ ಎಂದು ಹೇಳುತ್ತಿದ್ದಾರೆ. ಅಂದರೆ ಕೈಗಾರಿಕೆಗಳು ಮುಚ್ಚಿ ಹೋಗಲಿ ಎಂಬ ಇರಾದೆ ಸರ್ಕಾರಕ್ಕೆ ಇರಬಹುದು. ನಿಮ್ಮ ಬಿಟ್ಟಿ ಭಾಗ್ಯಗಳಿಗೆ ದುಡ್ಡು ಎಲ್ಲಿಂದ ಬರಬೇಕು. ಇಂಡಸ್ಟ್ರೀಸ್ ಗೆ ಬರೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರದ ನಿಲುವನ್ನು ನಾವು ಖಂಡಿಸುತ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗಂಡನ ದರೋಡೆ ಮಾಡಿ ಹೆಂಡತಿಗೆ ದುಡ್ಡು! ; ಇನ್ನು, ಗಂಡನ ದರೋಡೆ ಮಾಡಿ ಹೆಂಡತಿಗೆ ಕೊಡುವ ಕೆಲಸವನ್ನು ಕಾಂಗ್ರೆಸ್ನವರು ಮಾಡ್ತಾ ಇದ್ದಾರೆ ಎಂದು ಗೃಹಲಕ್ಷ್ಮೀ ಯೋಜನೆ ಬಗ್ಗೆ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಗಂಡನ ಜೇಬಿಗೆ ಕತ್ತರಿಹಾಕಿ ಹೆಂಡತಿಗೆ ಮಾಸಿಕ ಎರಡು ಸಾವಿರ ರೂಪಾಯಿ ಕೊಡಲು ಹೊರಟಿದ್ದಾರೆ. ಅದು ಜನರಿಗೆ ಈಗ ಅರ್ಥ ಆಗ್ತಿದೆ. ಮದ್ಯದ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಿಟ್ಟಿ ಭಾಗ್ಯಗಳ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಇದು ದೋಖಾ ಸರ್ಕಾರ ಎಂಬುದು ಜನರಿಗೆ ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.











