(ಮೂಲ : Why Modi’s claim of “ Timely Intervention “ in Manipur ́ Improved situation Rings hollow – ಶ್ರಾವಸ್ತಿ ದಾಸ್ ಗುಪ್ತಾ – ದ ವೈರ್ 9 ಏಪ್ರಿಲ್ 2024)
ಕನ್ನಡಕ್ಕೆ : ನಾ ದಿವಾಕರ
ಮೇ 3, 2023 ರಂದು ಹಿಂಸಾಚಾರ ಪ್ರಾರಂಭವಾದಾಗಿನಿಂದ ಮಣಿಪುರವು ಜನಾಂಗೀಯ ಕಲಹದ ಹಿಡಿತದಲ್ಲಿ ಮುಂದುವರಿದಿದ್ದು, ಕೇಂದ್ರ ಸರ್ಕಾರದ ಸಮಯೋಚಿತ ಮಧ್ಯಪ್ರವೇಶ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಪ್ರಯತ್ನಗಳಿಂದ ರಾಜ್ಯದಲ್ಲಿ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ ಎಂದು ನಾವು ನಂಬುತ್ತೇವೆ. ನಾನು ಈಗಾಗಲೇ ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಸಂಘರ್ಷವನ್ನು ಪರಿಹರಿಸಲು ನಾವು ನಮ್ಮ ಅತ್ಯುತ್ತಮ ಸಂಪನ್ಮೂಲಗಳು ಮತ್ತು ಆಡಳಿತ ಯಂತ್ರವನ್ನು ಒದಗಿಸಿದ್ದೇವೆ. ಭಾರತ ಸರ್ಕಾರದ ಸಕಾಲಿಕ ಮಧ್ಯಪ್ರವೇಶ ಮತ್ತು ಮಣಿಪುರ ಸರ್ಕಾರದ ಪ್ರಯತ್ನಗಳಿಂದಾಗಿ, ರಾಜ್ಯದ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ” ಎಂದು ಸೋಮವಾರ (ಏಪ್ರಿಲ್ 8) ಅಸ್ಸಾಂ ಟ್ರಿಬ್ಯೂನ್ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

“ಸಂಘರ್ಷವು ಉತ್ತುಂಗದಲ್ಲಿದ್ದಾಗ ಗೃಹ ಸಚಿವ ಅಮಿತ್ ಶಾ ಮಣಿಪುರದಲ್ಲಿ ಉಳಿದುಕೊಂಡರು, ಸಂಘರ್ಷವನ್ನು ಪರಿಹರಿಸಲು ಸಹಾಯ ಮಾಡಲು ಮಧ್ಯಸ್ತಿಕೆ ವಹಿಸುವವರೊಡನೆ 15 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದರು. ರಾಜ್ಯ ಸರ್ಕಾರದ ಅಗತ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ನಿರಂತರವಾಗಿ ತನ್ನ ಬೆಂಬಲವನ್ನು ನೀಡುತ್ತಿದೆ. ಪರಿಹಾರ ಮತ್ತು ಪುನರ್ವಸತಿ ಪ್ರಕ್ರಿಯೆ ನಡೆಯುತ್ತಿದೆ. ಕೈಗೊಂಡ ಪರಿಹಾರ ಕ್ರಮಗಳಲ್ಲಿ ರಾಜ್ಯದ ಆಶ್ರಯ ಶಿಬಿರಗಳಲ್ಲಿ ವಾಸಿಸುವ ಜನರ ಪರಿಹಾರ ಮತ್ತು ಪುನರ್ವಸತಿಗಾಗಿ ಆರ್ಥಿಕ ಪ್ಯಾಕೇಜ್ ಸೇರಿದೆ “ ಎಂದು ಹೇಳಿದ್ದಾರೆ.
ಆದರೆ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದ 79 ದಿನಗಳ ನಂತರ ಮೌನ ಮುರಿಯುವುದರಿಂದ ಹಿಡಿದು, ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರಿಂದ ಸಂಸತ್ತಿನೊಳಗೆ ಮಾತನಾಡಲು ಒತ್ತಾಯಿಸುವವರೆಗೆ, ಕಳೆದ ಹನ್ನೊಂದು ತಿಂಗಳುಗಳಲ್ಲಿ ರಾಜ್ಯದಲ್ಲಿ ನಿರಂತರ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಕುಸಿತ ಸ್ಪಷ್ಟವಾಗಿದ್ದರೂ ಈ ಸಂಘರ್ಷ ಪೀಡಿತ ರಾಜ್ಯಕ್ಕೆ ಭೇಟಿ ನೀಡಲು ವಿಫಲರಾಗಿರುವುದು ಪ್ರಧಾನಮಂತ್ರಿಗಳ ಸಮಯೋಚಿತ ಮಧ್ಯಪ್ರವೇಶ ಹೇಳಿಕೆ ಟೊಳ್ಳು ಎಂದು ತೋರಿಸುತ್ತದೆ

ನಿರಂತರ ಹಿಂಸಾಚಾರದ ಪರಿಣಾಮ
ಫೆಬ್ರವರಿ 28 ರಂದು ಮಣಿಪುರ ರಾಜ್ಯಪಾಲ ಅನುಸೂಯಾ ಉಯಿಕೆ ಅವರು ನೀಡಿದ ಮಾಹಿತಿಯ ಪ್ರಕಾರ, ಮೇ 3, 2023 ರಿಂದ ರಾಜ್ಯದ ಗಲಭೆಗಳಲ್ಲಿ ಒಟ್ಟು 219 ಜನರು ಸಾವನ್ನಪ್ಪಿದ್ದಾರೆ. ಡಿಸೆಂಬರ್ 2023ರಲ್ಲಿ ಸಂಸತ್ತಿನ ಚರ್ಚೆಯೊಂದರಲ್ಲಿ ರಾಜ್ಯ ಸಚಿವ ನಿತ್ಯಾನಂದ ರೈ, 2023 ರ ಜನವರಿ ಮತ್ತು ನವೆಂಬರ್ 15 ರ ನಡುವೆ 13 ನಾಗರಿಕ ಹತ್ಯೆಗಳನ್ನು ಕಂಡ ಜಮ್ಮು ಮತ್ತು ಕಾಶ್ಮೀರದ ಕ್ಷೋಭೆಯನ್ನು ಆಂತರಿಕ ಕ್ಷೋಭೆಯ ಮಾನದಂಡವೆಂದು ಹೇಳಿದ್ದುದನ್ನು ಈಗಾಗಲೇ ವರದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಮಣಿಪುರದ ಗಲಭೆಗಳಲ್ಲಿ ಇನ್ನೂ ಹೆಚ್ಚಿನ ಸಾವು ಸಂಭವಿಸಿದೆ. ರಾಜ್ಯಪಾಲರು ಒದಗಿಸಿರುವ ಅಂಕಿಅಂಶಗಳ ಪ್ರಕಾರ 1,87,143 ಜನರನ್ನು ಗಲಭೆ ನಿಯಂತ್ರಿಸುವ ಉದ್ದೇಶದಿಂದ ಮುಂಚೆಯೇ ಬಂಧಿಸಿ ಅನಂತರ ಬಿಡುಗಡೆ ಮಾಡಲಾಗಿದೆ. ಈವರೆಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕನಿಷ್ಠ 10 ಸಾವಿರ ಎಫ್ಐಆರ್ಗಳನ್ನು ದಾಖಲಿಸಲಾಗಿದೆ.

ಹಿಂಸಾಚಾರದ ಬಗ್ಗೆ ತನಿಖೆ ನಡೆಸುವಲ್ಲಿ ಎನ್.ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಆಡಳಿತದ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬುದಕ್ಕೆ ರಾಜ್ಯಪಾಲರು ಒದಗಿಸಿರುವ ದತ್ತಾಂಶಗಳೇ ಸಾಕ್ಷಿಯಾಗಿದೆ, ಶಸ್ತ್ರಾಸ್ತ್ರ ಸಂಬಂಧಿತ ಹಿಂಸಾಚಾರಕ್ಕೆ ಸಂಬಂಧಿಸಿದ 38 ಪ್ರಕರಣಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೇರಿದಂತೆ ಕೇಂದ್ರ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಗಲಭೆಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ವರ್ಷ ಆಗಸ್ಟ್ 25 ರಂದು ಸಿಬಿಐ ತನಿಖೆ ನಡೆಸುತ್ತಿರುವ ಹಲವಾರು ಮಣಿಪುರ ಹಿಂಸಾಚಾರ ಪ್ರಕರಣಗಳನ್ನು ಅಸ್ಸಾಂಗೆ ವರ್ಗಾಯಿಸಲು ಆದೇಶಿಸಿದೆ. ಸುಪ್ರೀಂ ಕೋರ್ಟ್ ಕಳೆದ ತಿಂಗಳು ರಾಜ್ಯ ಸರ್ಕಾರ ಸಿಬಿಐ, ಎನ್ಐಎಯಿಂದ ವಾಸ್ತವ ಸ್ಥಿತಿಗತಿಗಳ ವರದಿಯನ್ನು ಕೇಳಿದೆ. ಹನ್ನೊಂದು ತಿಂಗಳ ಗಲಭೆಗಳಿಂದ ಆಂತರಿಕವಾಗಿ ಸ್ಥಳಾಂತರಗೊಂಡ 50 ಸಾವಿರ ಜನರು ರಾಜ್ಯದಾದ್ಯಂತ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಮಣಿಪುರದ ಬಿಕ್ಕಟ್ಟನ್ನು ಪರಿಹರಿಸಲು “ಅತ್ಯುತ್ತಮ ಸಂಪನ್ಮೂಲಗಳು ಮತ್ತು ಆಡಳಿತ ಯಂತ್ರವನ್ನು” ಮೀಸಲಿಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದರೂ, ಹನ್ನೊಂದು ತಿಂಗಳುಗಳ ಹಿಂಸಾಚಾರದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಲೂಟಿಯ ಪ್ರಕರಣಗಳೂ ಹೆಚ್ಚಾಗಿದ್ದು ಹಿಂಸಾಚಾರದ ಹೆಚ್ಚಳಕ್ಕೂ ಕಾರಣವಾಗಿದೆ. ಫೆಬ್ರವರಿಯಲ್ಲಿ, ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಚಿಂಗರೆಲ್ ತೇಜ್ಪುರದಲ್ಲಿರುವ ಐದನೇ ಭಾರತೀಯ ರಿಸರ್ವ್ ಬೆಟಾಲಿಯನ್ ನಿಲ್ದಾಣದ ಮೇಲೆ ಗುಂಪೊಂದು ದಾಳಿ ನಡೆಸಿ ಗಣನೀಯ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದಾಗ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದರು. ಕಣಿವೆ ಜಿಲ್ಲೆಗಳಿಂದ ಜನಸಮೂಹಗಳು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ವರದಿಗಳು ಬಂದ ಕೂಡಲೇ ಅವುಗಳನ್ನು ಹಿಂದಿರುಗಿಸುವಂತೆ ರಾಜ್ಯ ಸರ್ಕಾರ ಆದೇಶಿಸಿಸದ್ದು, ಈ ನಿಟ್ಟಿನಲ್ಲಿ ಇಂಫಾಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ನಿಬಂಧನೆಗಳನ್ನು ಹೇರಲಾಗಿತ್ತು. ಆದಾಗ್ಯೂ ಈವರೆಗೂ ರಾಜ್ಯ ಪೊಲೀಸರು ಒಂದು ಭಾಗವನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ.
ಈ ನಡುವೆಯೇ ತೀವ್ರಗಾಮಿ ಮೈಟಿ ಪ್ರಾಬಲ್ಯದ ಸಂಘಟನೆ ಅರಂಬೈ ತೆಂಗೋಲ್ ಮುಖ್ಯಮಂತ್ರಿಯ ಬೆಂಬಲವನ್ನು ಹೊಂದಿದೆಯೇ ಎಂಬ ಬಗ್ಗೆಯೂ ಅನುಮಾನಗಳು ಸೃಷ್ಟಿಯಾಗಿವೆ. ಅರಂಬೈ ತೆಂಗೋಲ್ ಬ್ಯಾನರ್ ಅಡಿಯಲ್ಲಿ 200 ಜನರ ಗುಂಪೊಂದು, ಫೆಬ್ರವರಿ 27 ರಂದು ಇಂಫಾಲ್ ಪಶ್ಚಿಮ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೊಯಿರಾಂಗ್ಥೆಮ್ ಅಮಿತ್ ಸಿಂಗ್ ಅವರನ್ನು ಅಪಹರಿಸಿತ್ತು. ತರುವಾಯ, ಅಪಹರಣದ ವಿರುದ್ಧದ ಮುಷ್ಕರದ ಭಾಗವಾಗಿ ಐದು ಜಿಲ್ಲೆಗಳ ಮಣಿಪುರ ಪೊಲೀಸ್ ಕಮಾಂಡೋ ಸಿಬ್ಬಂದಿ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಇದೇ ಸಂದರ್ಭದಲ್ಲಿ ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಲು ಜನವರಿಯಲ್ಲಿ ಎಲ್ಲಾ 37 ಮೈಟಿ ಶಾಸಕರು ಮತ್ತು ಇಬ್ಬರು ಸಂಸದರಿಗೆ ಇಂಫಾಲ್ನ ಕಾಂಗ್ಲಾ ಕೋಟೆಯನ್ನು ತಲುಪುವಂತೆ ಸಂಘಟನೆಯು ಆದೇಶಿಸಿತ್ತು. ಅವರ ನಾಯಕರು ಇಬ್ಬರು ಶಾಸಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ಈ ಕೋಟೆಯು 1891 ರವರೆಗೆ ಮಣಿಪುರ ರಾಜರ ಆವಾಸ ಸ್ಥಾನವಾಗಿತ್ತು. ಸಂಘಟನೆಯ ಮುಖ್ಯಸ್ಥರು ಆ ದಿನ ಪೊಲೀಸ್ ವಾಹನದಲ್ಲಿ ಕೋಟೆಗೆ ಬಂದಿದ್ದರು.

ಮೋದಿ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್ ಕುಮಾರ್ ರಂಜನ್ ಸಿಂಗ್ ಮತ್ತು ಮಣಿಪುರದ ನಾಮಮಾತ್ರ ಮುಖ್ಯಸ್ಥ ಎಲ್.ಸನಾಜೌಬಾ ಅವರು ಕಾಂಗ್ಲಾ ಕೋಟೆಯ ಆವರಣದಲ್ಲಿ ವಾಸಿಸುತ್ತಿದ್ದಾರೆ. ಸನಾಜೌಬಾ ಅವರನ್ನು 2020 ರಲ್ಲಿ ಬಿಜೆಪಿಯ ಬೆಂಬಲದೊಂದಿಗೆ ರಾಜ್ಯಸಭೆಗೆ ಕಳುಹಿಸಲಾಯಿತು ಮತ್ತು ಅರಂಬೈ ತೆಂಗೋಲ್ ಸಂಘಟನೆಯ ಸ್ಥಾಪಕ ನಾಯಕರಾಗಿದ್ದಾರೆ.
ಆಡಳಿತ ವೈಫಲ್ಯದ ಹೊಣೆ
ಮಣಿಪುರದ ಬಗ್ಗೆ ಈಗಾಗಲೇ ಸಂಸತ್ತಿನಲ್ಲಿ ಮಾತನಾಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದರೂ, ಸದನದಲ್ಲಿ ಮಾತನಾಡುವಂತೆ ಮಾಡಲು ಅವಿಶ್ವಾಸ ಗೊತ್ತುವಳಿ ಬೇಕಾಯಿತು ಎಂಬುದನ್ನು ನೆನಪಿನಲ್ಲಿಡಬೇಕು. ಆಗಸ್ಟ್ 10 ರಂದು ಸಂಸತ್ತಿನಲ್ಲಿ ತಮ್ಮ ಸರ್ಕಾರದ ವಿರುದ್ಧ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಯ ಬಗ್ಗೆ 2 ಗಂಟೆ 20 ನಿಮಿಷಗಳ ಕಾಲ ಚರ್ಚೆ ನಡೆದ ನಂತರ ಪ್ರಧಾನಿ ಮೋದಿ ಕೇವಲ ಹತ್ತು ನಿಮಿಷಗಳ ಕಾಲ ಮಣಿಪುರದ ಬಗ್ಗೆ ಮಾತನಾಡಿದರು. ಸಂಸತ್ತಿನಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪರಿಹರಿಸಲು ಪ್ರಧಾನಿಯನ್ನು ಒತ್ತಾಯಿಸುವುದು ಅವಿಶ್ವಾಸ ನಿರ್ಣಯದ ಗುರಿಯಾಗಿದೆ ಎಂದು ಪ್ರತಿಪಕ್ಷಗಳು ಹೇಳಿದ್ದವು. ಇದಕ್ಕೂ ಮೊದಲು ಹಿಂಸಾಚಾರ ಪ್ರಾರಂಭವಾದ 79 ದಿನಗಳ ನಂತರ ಜುಲೈ 20, 2023 ರಂದು ಮೋದಿ ಮಣಿಪುರ ಕುರಿತು ಮಾತನಾಡಿದ್ದರು. ಹಿಂಸಾಚಾರ ಪ್ರಾರಂಭವಾಗಿ ಹನ್ನೊಂದು ತಿಂಗಳು ಕಳೆದರೂ, ಪ್ರಧಾನಮಂತ್ರಿಗಳು ಇನ್ನೂ ಸಂಘರ್ಷ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ. ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳ ನಿಯೋಗಗಳು ರಾಜ್ಯಕ್ಕೆ ಭೇಟಿ ನೀಡಿದ್ದರೂ, ಮೋದಿ ಸ್ವತಃ ದೂರ ಉಳಿದಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಮೋದಿ ನೆರೆಯ ಅಸ್ಸಾಂಗೆ ಆನೆ ಮತ್ತು ಜೀಪ್ ಸಫಾರಿ ಸೇರಿದಂತೆ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶಕ್ಕೆ ಕನಿಷ್ಠ ಎರಡು ಬಾರಿ ಭೇಟಿ ನೀಡಿದ್ದಾರೆ ಆದರೆ ಮಣಿಪುರಕ್ಕೆ ಭೇಟಿ ನೀಡಿಲ್ಲ.

ಚುನಾವಣೆಯ ಸಮಯದಲ್ಲಿ ದೇಶಾದ್ಯಂತ ವ್ಯಾಪಕವಾಗಿ ಪ್ರಚಾರ ಮಾಡಲು ಮುಂದಾಗುವ ಪ್ರಧಾನಿ, ಡಿಸೆಂಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮಿಜೋರಾಂನಲ್ಲಿ ಪ್ರಚಾರ ಮಾಡಲು ಹೋಗಿರಲಿಲ್ಲ. ಅಕ್ಟೋಬರ್ 2023ರಲ್ಲಿ ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದ ಮಿಜೋರಾಂ ಮುಖ್ಯಮಂತ್ರಿ ಮಿಜೋ ನ್ಯಾಷನಲ್ ಫ್ರಂಟ್ನ ಝೋರಾಮ್ತಂಗಾ ಅವರು ಮಣಿಪುರದಲ್ಲಿ ಚರ್ಚುಗಳ ಮೇಲಿನ ದಾಳಿಯನ್ನು ಉಲ್ಲೇಖಿಸಿ ಚುನಾವಣಾ ಪ್ರಚಾರಕ್ಕೆ ಬಂದರೆ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಮಣಿಪುರದ ಶಾಸಕರು ಹಲವಾರು ಬಾರಿ ರಾಜಧಾನಿಗೆ ಭೇಟಿ ನೀಡಿದ್ದರೂ ಮತ್ತು ಶಾಸಕರ ನಿಯೋಗವನ್ನು ಭೇಟಿ ಮಾಡಲು ಪ್ರಧಾನಿಯನ್ನು ಮನವೊಲಿಸುವಂತೆ ಮಣಿಪುರ ಬಿಜೆಪಿ ಘಟಕವು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದರೂ ಮೋದಿ ಮಣಿಪುರದ ಬಿಜೆಪಿ ಶಾಸಕರನ್ನು ಭೇಟಿಯಾಗುವುದನ್ನು ತಪ್ಪಿಸಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದ್ದಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದರೂ, ಹಿಂಸಾಚಾರದ ಮೊದಲ ತಿಂಗಳಲ್ಲಿ ಮಾತ್ರ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು – ಅಂದಿನಿಂದ ನೂರಾರು ಜನರು ಕೊಲ್ಲಲ್ಪಟ್ಟಿದ್ದಾರೆ, ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಹಿಂಸಾಚಾರ ಮುಂದುವರೆದಿದೆ. ಡಿಸೆಂಬರ್ನಲ್ಲಿ, ಮಣಿಪುರದಲ್ಲಿ ಕೇಂದ್ರದ ಮಧ್ಯಪ್ರವೇಶವನ್ನು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು ಮತ್ತು ನ್ಯಾಯಮೂರ್ತಿ (ನಿವೃತ್ತ) ಗೀತಾ ಮಿತ್ತಲ್ ನೇತೃತ್ವದ ಸಮಿತಿಯು ಈಗಾಗಲೇ ಹಿಂಸಾಚಾರ ಮತ್ತು ಇತರ ಅಂಶಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು. ಆದರೆ ಕುಕಿ ನಾಗರಿಕ ಸಮಾಜ ಸಂಘಟನೆಗಳು, ಇಂಡಿಜಿನಿಯಸ್ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್ಎಫ್) ಮತ್ತು ಕಮಿಟಿ ಆನ್ ಟ್ರೈಬಲ್ ಯೂನಿಟಿ (ಸಿಒಟಿಯು) ಅಸಮಾಧಾನ ವ್ಯಕ್ತಪಡಿಸಿದ್ದವು ಮತ್ತು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಗಾಗಿ ಸಮಿತಿಯು ತಮ್ಮನ್ನು ಸಂಪರ್ಕಿಸಿಲ್ಲ ಎಂದು ನಿರಾಕರಿಸಿದ್ದವು.
ರಾಜ್ಯದಲ್ಲಿ ನಿರಂತರ ಹಿಂಸಾಚಾರ ಮತ್ತು ಬಿಜೆಪಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಬಗ್ಗೆ ಅಸಮಾಧಾನವಿದ್ದರೂ, ಪಕ್ಷವು ಅವರನ್ನು ಪದಚ್ಯುತಗೊಳಿಸಲು ನಿರಾಕರಿಸಿದೆ. ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಬಿರೇನ್ ಸಿಂಗ್ ಅವರು ಸಹಕಾರ ನೀಡುತ್ತಿರುವುದರಿಂದ ಅವರನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದರು. ಸಂಸತ್ ಅಧಿವೇಶನ ಪ್ರಾರಂಭವಾಗುವ ಮೊದಲು ಇಬ್ಬರು ಕುಕಿ ಮಹಿಳೆಯರನ್ನು ಮೆರವಣಿಗೆ ಮಾಡುವ ವೀಡಿಯೊವನ್ನು ಬಿಡುಗಡೆ ಮಾಡುವ ಸಮಯದ ಬಗ್ಗೆಯೂ ಅವರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಪ್ರಧಾನಿ ಮೋದಿಯನ್ನು ಅವಮಾನಿಸುವ ಸಲುವಾಗಿ ಕಾಂಗ್ರೆಸ್ ಈ ವಿಡಿಯೋವನ್ನು ಪ್ರಸಾರ ಮಾಡಿದೆ ಎಂದು ಸಿಂಗ್ ಆರೋಪಿಸಿದ್ದರು .
ರಾಜ್ಯದಲ್ಲಿನ ಕಲಹದ ನಡುವೆಯೇ, ಈ ತಿಂಗಳ ಲೋಕಸಭಾ ಚುನಾವಣೆಯಲ್ಲಿ (ಏಪ್ರಿಲ್ 19 ಮತ್ತು ಏಪ್ರಿಲ್ 26) ರಾಜ್ಯದ ಎರಡು ಸಂಸದೀಯ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ ಅವರು ಪರಿಹಾರ ಶಿಬಿರಗಳಿಂದ 24,500 ಜನರು ಮತ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಜನಾಂಗೀಯ ಕಲಹವು ರಾಜ್ಯವನ್ನು ಗುಡ್ಡಗಾಡು ಮತ್ತು ಕಣಿವೆ ಜಿಲ್ಲೆಗಳ ನಡುವೆ ಎರಡು ಭಾಗಗಳಾಗಿ ವಿಭಜಿಸಲು ಕಾರಣವಾಗಿದೆ – ಇದು ಮಣಿಪುರದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಮೊದಲನೆಯದು. ಹಿಂಸಾಚಾರದಲ್ಲಿ ಸ್ಥಳಾಂತರಗೊಂಡ ಸುಮಾರು 50,000 ಜನರು ಐದು ಕಣಿವೆ ಜಿಲ್ಲೆಗಳು ಮತ್ತು ಮೂರು ಗುಡ್ಡಗಾಡು ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ನೆರೆಯ ಮಿಜೋರಾಂಗೆ ಪಲಾಯನ ಮಾಡಿದ ರಾಜ್ಯದ 9,000 ಕ್ಕೂ ಹೆಚ್ಚು ಜನರು ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಲು ಸಾಧ್ಯವಾಗದಿರಬಹುದು.






