ಕರ್ನಾಟಕ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಸಂಸ್ಥೆಗಳನ್ನು ಮಾನಿಟೈಸೇಷನ್ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗಳಿಗೆ ವಹಿಸುವ ಕೆಲಸ ಮಾಡಲಾಗ್ತಿದೆ. ಖಾಸಗಿ ಸಂಸ್ಥೆಗಳಿಗೆ ಕೊಡುವುದರಿಂದ ದಕ್ಷತೆ ಹಾಗು ಉದ್ಯೋಗ ಹೆಚ್ಚಳ ಆಗುತ್ತದೆ ಎನ್ನುವುದು ಸರ್ಕಾರದ ವಾದ. ಅದರ ಜೊತೆಗೆ ಜನಸಾಮಾನ್ಯರಿಗೆ ಬರೆ ಬೀಳುತ್ತದೆ ಎನ್ನುವುದು ಅಸಂಖ್ಯಾತ ಜನರ ವಾದವಾಗಿತ್ತು. ಆದರೂ ನಗದೀಕರಣ ಯೋಜನೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬರಲಿದ್ದು, ಅಭಿವೃದ್ಧಿ ಕೆಲಸಗಳಿಗೆ ಅನುಕೂಲ ಎನ್ನಲಾಗಿತ್ತು. ಇದೀಗ ಜನಸಾಮಾನ್ಯರ ಬದಲು ಕೋಟಿ ಕೋಟಿ ಒಡೆಯರ ಕಂಪನಿಗಳಿಗೆ ಅನುಕೂಲ ಆಗಲಿದೆ ಎನ್ನುವ ವರದಿಗಳು ಜನರನ್ನು ದಿಗ್ಬ್ರಾಂತರನ್ನಾಗಿ ಮಾಡುತ್ತಿವೆ. ಅದರಲ್ಲೂ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಹೊಡೆತ ಮೊದಲಿಗೆ ಕರ್ನಾಟಕದ ಜನರಿಗೆ ತಟ್ಟುತ್ತಿದೆ ಅನ್ನೋದು ವಿಶೇಷ.
ಅದಾನಿ ಕಂಪನಿ ಪಾಲಾಗಿದೆ ಮಂಗಳೂರಿನ ಅಂತಾರಾಷ್ಟ್ರೀಯ ಏರ್ಪೋರ್ಟ್..!
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಸಂಸ್ಥೆ ಪಾಲಾಗಿದೆ. 2019ರಲ್ಲಿ ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿಲುವಿನಿಂತೆ, 2020ರ ಅಕ್ಟೋಬರ್ 30ರಿಂದ ಅದಾನಿ ಸಂಸ್ಥೆ ನಿರ್ವಹಣೆಗೆ ಕೈ ಎತ್ತುಕೊಂಡಿದೆ. ಬರೋಬ್ಬರಿ 50 ವರ್ಷಗಳ ಕಾಲ ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಲೀಸ್ಗೆ ನೀಡಿದೆ. ಇದ್ರಿಂದ ಜನರಿಗೆ ಆಗಿರುವ ಸಮಸ್ಯೆ ಏನು ಅಂದರೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶ, ವಿದೇಶಕ್ಕೆ ಹೋಗುವ ಪ್ರಯಾಣಿಕರು ಹಾಗು ದೇಶ, ವಿದೇಶಗಳಿಂದ ಮಂಗಳೂರಿಗೆ ಬಂದಿಳಿಯುವ ಪ್ರಯಾಣಿಕರು ಇನ್ಮುಂದೆ ದುಬಾರಿ ಪ್ರಮಾಣದ ದರ ಭರಿಸಬೇಕಿದೆ. ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ User Development Fee (UDF) ಸಂಗ್ರಹ ಮಾಡಲಾಗುತ್ತದೆ. ಆ ದರವನ್ನು ಅದಾನಿ ಕಂಪನಿ ಏಳೆಂಟು ಪಟ್ಟು ಹೆಚ್ಚಳ ಮಾಡಲು ಮುಂದಾಗಿದೆ.
150 ರೂಪಾಯಿ ಬದಲು ಇನ್ಮುಂದೆ 1120 ರೂಪಾಯಿ ಫಿಕ್ಸ್..!
ಪ್ರತಿ ಪ್ರಯಾಣಿಕನಿಂದಲೂ ಯೂಸರ್ ಡೆವಲಪ್ಮೆಂಟ್ ಫೀ User Development Fee (UDF) ಆಗಿ ಸ್ಥಳೀಯ ಪ್ರಯಾಣಿಕರಿಂದ 150 ರೂಪಾಯಿ ಹಾಗು ಇಂಟರ್ ನ್ಯಾಷನಲ್ ಪ್ರಯಾಣಿಕರಿಂದ 825 ರೂಪಾಯಿ ಸಂಗ್ರಹ ಮಾಡಲಾಗುತ್ತಿತ್ತು. ಆದರೆ ಇದೀಗ ಅದಾನಿ ಸಂಸ್ಥೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೈವಶ ಮಾಡಿಕೊಂಡ ಬಳಿಕ 2026ರ ತನಕ UDF ಫೀ ಹೆಚ್ಚಳ ಮಾಡಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಂಡಿದೆ. Airports Economic Regulatory Authority of India (AERA) ಅನುಮತಿ ನೀಡಿದ್ದು, ಫೆಬ್ರವರಿಯಿಂದ ಫೀ ಹೆಚ್ಚಳ ಮಾಡಲಾಗ್ತಿದೆ. 2025ರ ತನಕ ಹಂತಹಂತವಾಗಿ ಫೀ ಏರಿಕೆ ಮಾಡಲಿದ್ದು, 1120 ರೂಪಾಯಿ ಆಗಲಿದೆ ಎಂದು CNBC TV18 ವರದಿ ಮಾಡಿದೆ. ಅಂದರೆ ಮುಂದಿನ ಆರ್ಥಿಕ ವರ್ಷದಿಂದ ಪ್ರಯಾಣಿಕರಿಗೆ ಬರೆ ಎಳೆಯುವುದಕ್ಕೆ ಅದಾನಿ ಸಂಸ್ಥೆ ನಿರ್ಧಾರ ಮಾಡಿದೆ.
ಮಂಗಳೂರಲ್ಲಿ ಯಾವ ಪ್ರಮಾಣದಲ್ಲಿ ಹೆಚ್ಚಾಗಲಿದೆ UDF ಫೀ..?
ಮೊದಲಿಗೆ ದೇಶಿಯ ವಿಮಾನ ಪ್ರಯಾಣಿಕರು ಏಪ್ರಿಲ್ನಲ್ಲಿ 150 ರೂಪಾಯಿ ಇಂದ 560 ರೂಪಾಯಿಗೆ ಹೆಚ್ಚಾಗಲಿದೆ. 2024ಕ್ಕೆ 700 ರುಪಾಯಿ ಆಗಲಿದೆ. 2025ಕ್ಕೆ4 735 ರೂಪಾಯಿ ಆಗಲಿದೆ. ಅದೇ ರೀತಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಏಪ್ರಿಲ್ನಲ್ಲಿ 825 ರಿಂದ 1015 ರೂಪಾಯಿಗೆ ಏರಿಕೆ ಆಗಲಿದೆ. 2025ಕ್ಕೆ 1120ಕ್ಕೆ ಏರಿಕೆ ಆಗಲಿದೆ. ಅದಾನಿ ಸಂಸ್ಥೆ ಕಳೆದ ನವೆಂಬರ್ನಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದ UDF ಚಾರ್ಜ್ ಹೆಚ್ಚಳಕ್ಕೆ ಮನವಿ ಮಾಡಿತ್ತು. ಆದರೆ ಇನ್ನೂ ಕೂಡ ಅನುಮತಿ ಸಿಕ್ಕಿಲ್ಲ. ಅದಾನಿ ಸಂಸ್ಥೆ ದೇಶದಲ್ಲಿ 7 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡುತ್ತಿದೆ. ಮುಂಬೈ, ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ, ಗುವಹಟಿ ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡುತ್ತಿದೆ. ಅದರಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ದರ ಹೆಚ್ಚಳ ಮಾಡಲಾಗ್ತಿದೆ.
ಬ್ರಿಟೀಷ್ ಆಳ್ವಿಕೆಯಲ್ಲೂ ಆಗಿದ್ದು ಇದೇ ರೀತಿ ಅಲ್ಲವೇ..?
ಒಂದು ರೀತಿಯಲ್ಲಿ ಬ್ರಿಟೀಷರು ಆಳ್ವಿಕೆ ಮಾಡುವಾಗ ರಾಜರ ಆಡಳಿತದಲ್ಲೇ ಬ್ರಿಟೀಷರು ತೆರಿಗೆ ಸಂಗ್ರಹ ಮಾಡುವ ಹೊಣೆ ಹೊತ್ತುಕೊಂಡಿದ್ದರು. ರಾಜರ ಆಳ್ವಿಕೆಯಲ್ಲೇ ಜನರನ್ನು ಹಿಂಸೆ ನೀಡಲು ಶುರು ಮಾಡಿದ್ದರು. ಇದೀಗ ಬಿಜೆಪಿ ಸರ್ಕಾರದಲ್ಲಿ ಖಾಸಗಿ ಸಂಸ್ಥೆಗಳು ಜನರಿಗೆ ಹಿಂಸೆ ಕೊಡುವುದಕ್ಕೆ ಶುರು ಮಾಡಿವೆ. ನಿಧಾನವಾಗಿ ಬ್ರಿಟೀಷರು ಕೈವಶ ಮಾಡಿಕೊಂಡಂತೆ ಇಡೀ ಭಾರತದಲ್ಲಿ ಖಾಸಗಿ ಸಂಸ್ಥೆಗಳು ಪ್ರಮುಖ ಸ್ಥಳಗಳನ್ನು ಕೈವಶ ಮಾಡಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳು ಖಾಸಗಿ ಸಂಸ್ಥೆಗಳ ಪಾಲಾಗುವ ಸಾಧ್ಯತೆಯಿದೆ. ಖಾಸಗಿಯವರು ಇಡೀ ದೇಶದಲ್ಲಿ ನಿಯಂತ್ರಣ ಸಾಧಿಸಿದ ಬಳಿಕ ಖಾಸಗಿಯವರು ಹೇಳಿದ್ದೇ ಆಡಳಿತ. ಅವರು ಮಾಡಿದ್ದೇ ಕಾನೂನು ಎನ್ನುವಂತೆ ಆಗುವುದಕ್ಕೆ ಸಮಯ ತುಂಬಾ ದೂರ ಇಲ್ಲ ಎನ್ನಬಹುದು.
ಕೃಷ್ಣಮಣಿ






