ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಮ್ಮೆಯೂ ಜನಾದೇಶದಿಂದ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ನಾಯಕರು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಬಾರಿಯೂ ಕೂಡ ಬಿಜೆಪಿ ಸರ್ಕಾರ ರಚನೆ ಆಗುತ್ತೆ, ಆದರೆ ಜನರಿಂದ ಬಿಜೆಪಿ ಆಯ್ಕೆಯಾಗುವುದಿಲ್ಲ. ಸಂಕ್ರಾಂತಿ ಬಳಿಕ ಚುನಾವಣೆಯ ಮೊದಲೇ ನಾವು ಆಪರೇಷನ್ ಕಮಲ ಮಾಡುತ್ತೇವೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ ಹಬ್ಬದ ದಿನ ತನ್ನ ಕಾರ್ಯಕರ್ತರ ಜೊತೆಗೆ ಮಾತನಾಡಿರುವ ಆಡಿಯೋ ಹೊರ ಬಿದ್ದಿದ್ದು, ಮುಂದಿನ ಚುನಾವಣೆಯಲ್ಲಿ ಯಾರ್ಯಾರು ಸೋಲುತ್ತಾರೆ..? ಯಾರ್ಯಾರು ಮುಂದೆ ಬಿಜೆಪಿ ಸೇರಲಿದ್ದಾರೆ ಎನ್ನುವ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಅಮಿತ್ ಷಾ ರೌಡಿ ಎಂದಿದ್ದಾರೆ.
ಜೆಡಿಎಸ್ನಲ್ಲಿ ಘಟಾನುಘಟಿ ನಾಯಕರು ಸೋಲ್ತಾರೆ..!
ಸ್ವತಃ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನಾನು ಸೋಲುತ್ತೇನೆ ಎಂದಿರುವ ಸಿ.ಪಿ ಯೋಗೇಶ್ವರ್, ಜೆಡಿಎಸ್ನ ಪ್ರಮುಖ ನಾಯಕರು ಈ ಚುನಾವಣೆಯಲ್ಲಿ ಸೋಲನ್ನಪ್ಪುತ್ತಾರೆ ಎನ್ನುವ ಭವಿಷ್ಯ ಹೇಳಿದ್ದಾರೆ. ಜೆಡಿಎಸ್ನ ಹಾಲಿ 20 ಜನ ಶಾಸಕರು ಸೋಲಲಿದ್ದಾರೆ ಎಂದಿರುವ ಯೋಗೇಶ್ವರ್, ಮದ್ದೂರು ಡಿ.ಸಿ ತಮ್ಮಣ್ಣ, ಮಳವಳ್ಳಿ ಅನ್ನದಾನಿ, ಕೆ.ಆರ್ ನಗರ ಸಾರಾ ಮಹೇಶ್, ನೆಲಮಂಗಲ ಶ್ರೀನಿವಾಸ ಮೂರ್ತಿ, ಗುಬ್ಬಿ ಶ್ರೀನಿವಾಸ್, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ ರಾಮಸ್ವಾಮಿ, ಬೇಲೂರು ಲಿಂಗೇಶ್, ಸಕಲೇಶಪುರ ಹೆಚ್.ಕೆ ಕುಮಾರಸ್ವಾಮಿ ಸೋಲುವುದು ಖಚಿತ ಎಂದಿದ್ದಾರೆ ಯೋಗೇಶ್ವರ್. ಜೊತೆಗೆ ರಾಮನಗರ ಮೂರು ಸ್ಥಾನಗಳ ಪೈಕಿ ಜೆಡಿಎಸ್ ಒಂದನ್ನು ಕಳೆದುಕೊಳ್ಳಲಿದೆ ಎಂದಿದ್ದಾರೆ.
ಕೋಲಾರ ಭಾಗದಲ್ಲಿ ಕೆ.ಹೆಚ್ ಮುನಿಯಪ್ಪ ಕೇಸರಿ ಪಾಳಯ ಸೇರ್ತಾರಾ..?
ಕೋಲಾರದಲ್ಲಿ ಚುನಾವಣಾ ಅಖಾಡಕ್ಕೆ ಇಳಿಯಲು ತಯಾರಿ ಮಾಡಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಅವರ ಅಸಮಾಧಾನ ತಣಿಸುವ ಕೆಲಸ ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೆ ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ಮುನಿಯಪ್ಪ ಜೊತೆಗೆ ವೇದಿಕೆಗೆ ಆಗಮಿಸಿದ್ದ ಸಿದ್ದರಾಮಯ್ಯ, ದಲಿತ ಸಮುದಾಯದ ಮತಗಳು ಕೈ ಬಿಟ್ಟು ಹೋಗದಂತೆ ತಂತ್ರಗಾರಿಕೆ ಮಾಡಿದ್ದಾರೆ. ಈ ನಡುವೆ ಯೋಗೇಶ್ವರ್ ಸಿಡಿಸಿರುವ ಮಾತು ಸಿದ್ದರಾಮಯ್ಯ ಅವರಿಗೂ ಆತಂಕ ಉಂಟುಮಾಡುತ್ತದೆ. ಕೋಲಾರ ಭಾಗದ ಹಿರಿಯ ದಲಿತ ನಾಯಕರು ಬಿಜೆಪಿ ಸೇರ್ಪಡೆ ಆಗುತ್ತಾರೆ. ಕೇಂದ್ರದಲ್ಲಿ ಮಂತ್ರಿ ಆಗಿದ್ದವರು ಬಿಜೆಪಿ ಸೇರುವುದರಿಂದ ದೊಡ್ಡ ಮಟ್ಟದ ಬಲ ಬರಲಿದೆ ಎಂದಿದ್ದಾರೆ. ಜೊತೆಗೆ ಚನ್ನಪಟ್ಟಣದಲ್ಲಿ ನಾನು ಕುಮಾರಸ್ವಾಮಿ ಎದುರಿಸುವ ರೀತಿಯಲ್ಲೇ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಶ್ವತ್ಥ ನಾರಾಯಣ ಹಾಗು ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ಸ್ಪರ್ಧೆ ಮಾಡುವ ಮೂಲಕ ವಿರೋಧಿಗಳನ್ನು ಕಟ್ಟಿ ಹಾಕಬೇಕಿದೆ ಎಂದಿದ್ದಾರೆ. ಜೊತೆಗೆ ಅಮಿತ್ ಷಾ ರೌಡಿ ರೀತಿ ವರ್ತಿಸುತ್ತಾರೆ, ಯಾರು ಯಾರೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಕೆಲಸ ಮಾಡ್ತಿದ್ದಾರೆ ಎನ್ನುವುದನ್ನು ನೇರವಾಗಿ ಹೇಳಿದ್ದಾರೆ ಎಂದಿದ್ದಾರೆ. ಇಷ್ಟೆಲ್ಲಾ ಆಡಿಯೋ ವೈರಲ್ ಆಗ್ತಿದ್ದ ಹಾಗೆ ಸಿಎಂ ಬಸವರಾಜ ಬೊಮ್ಮಾಯಿ ಯೋಗೇಶ್ವರ್ಗೆ ಬುಲಾವ್ ಕೊಟ್ಟಿದ್ದರು.
ಆಡಿಯೋ ನನ್ನದಲ್ಲ ಎಂದ ಮಾಜಿ ಸಚಿವ ಸಿ ಪಿ ಯೋಗೇಶ್ವರ್..!
ಬಿಜೆಪಿ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಯೋಗೇಶ್ವರ್ ಆಡಿಯೋ ಮೂಲಕ ಬಯಲಾಗ್ತಿದ್ದ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಗೇಶ್ವರ್ಗೆ ಕರೆ ಮಾಡಿದ್ರು. ಸಿಎಂ ಭೇಟಿ ಮಾಡಿಕೊಂಡು ಹೊರಕ್ಕೆ ಬಂದ ಯೋಗೇಶ್ವರ್, ಆಡಿಯೋ ನನ್ನದಲ್ಲ. ನನ್ನ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಬಿಡುಗಡೆ ಮಾಡಿದ್ದಾರೆ. ನನಗೆ ವಿಶ್ವಾಸವಿದೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದು, ಆಡಿಯೋ ವೀಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಕೊಡುವುದಿಲ್ಲ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಜನರು ಬಿಜೆಪಿಗೆ ಅಧಿಕಾರ ಕೊಡುವುದಿಲ್ಲ ಎನ್ನುವ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಚರ್ಚೆ ಆಗದಂತೆ ಎಚ್ಚರಿಕೆ ನಡೆ ಅನುಸರಿಸಿದ್ದಾರೆ.