ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ ಯತ್ನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ, ಸುರತ್ಕಲ್ನಲ್ಲಿ ಫಾಜಿಲ್, ಜಲೀಲ್ ಹತ್ಯೆ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಈ ಮಾತಿಗೆ ಪುಷ್ಠಿ ಎಂಬಂತೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ತಡರಾತ್ರಿ ವ್ಯಕ್ತಿಗೆ ಚೂರಿ ಇರಿಯಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಉಳ್ಳಾಲದ ಕೋಟೆಪುರ ನಿವಾಸಿಯಾಗಿರುವ ಸದಕತ್ತುಲ್ಲಾ(34) ಎಂಬಾತನ ಮೇಲೆ ಚೂರಿ ಇರಿದು ಕೊಲೆಗೆ ಯತ್ನಿಸಲಾಗಿದೆ. ಸದಕತ್ತುಲ್ಲಾ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಕರೆಯಿಸಿ ಚೂರಿಯಿಂದ ಇರಿದು ಹತ್ಯೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ.
ಛಬ್ಬಿ ಅಲಿಯಾಸ್ ಕಬೀರ್ ಹಾಗೂ ರಾಝಿಕ್ ಎಂಬವರಿಂದ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಫಿಶ್ ಆಯಿಲ್ ಮಿಲ್ ಮಾಲೀಕರನ್ನು ಬೆದರಿಸಿ ಹಲ್ಲೆಗೊಳಗಾದ ಸದಕತ್ತುಲ್ಲಾ ಹಣ ಪಡೆದಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಉಂಟಾದ ಘರ್ಷಣೆಯಲ್ಲಿ ಸದಕತ್ತುಲ್ಲಾಗೆ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.