ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕು. ರಸ್ತೆ ಬದಿಯಲ್ಲಿ ಸಸಿನೆಡುವುದಷ್ಟೇ ಅಲ್ಲದೇ ಅವುಗಳ ರಕ್ಷಣೆ ಮಾಡಬೇಕು. ಸಾರ್ವಜನಿಕರು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ರಾಜ್ಯ ಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಒತ್ತಿ ಹೇಳಿದರು.

ಕಲಬುಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದ ಮನಮಹೋತ್ಸವ 2025 ಹಸಿರುಪಥ ಮತ್ತು ಕಲಬುರಗಿಯ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ತಾವು ಉಸ್ತುವಾರಿ ಸಚಿವರಾಗಿದ್ದಾಗ ಅರಣ್ಯ ಪ್ರದೇಶ ವಿಸ್ತರಣೆಗೆ ಪ್ರಯತ್ನಪಟ್ಟಿರುವುದನ್ನು ನೆನಪಿಸಿಕೊಂಡ ಖರ್ಗೆ ಅವರು ಜನರು ಆಗೆಲ್ಲ ರಸ್ತೆ ಬಡಿಯ ಗಿಡಗಳನ್ನು ಕಡಿದುಕೊಂಡು ಹೋಗಿ ಕೃಷಿ ಪರಿಕರಗಳನ್ನು ಮಾಡಿಕೊಳ್ಳುತ್ತಿದ್ದರು. ಒಣಗಿದ ಅಥವಾ ಕೆಲಸಕ್ಕೆ ಅನುಕೂಲವಾಗದಂತ ಮರ ಕಡಿದರೆ ಅದರಿಂದ ಸಮಸ್ಯೆ ಯಾಗುವುದಿಲ್ಲ. ಆದರೆ ಬೆಳೆದು ನಿಂತ ಮರ ಕಡಿದರೆ ಅಪಾಯವಾಗುತ್ತದೆ ಎಂದು ಹೇಳಿದರು.
ಇತ್ತೀಚಿಗೆ ಹೃದಯಾಘಾತದಿಂದ ಜನರನ್ನು ಅದರಲ್ಲೂ ಯುವಕರು ಸಾವನ್ನಪ್ಪುತ್ತಿದ್ದಾರೆ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಹೆಚ್ಚು ಜನರು ಮೃತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಖರ್ಗೆ ಅವರು ಜನರು ಜೀವನ ನಡೆಸಲು ಸ್ವಚ್ಛ ಗಾಳಿ, ಬೆಳಕು,ನೀರು ಬೇಕೆ ಬೇಕು. ಇವೆಲ್ಲ ದೊರಕಬೇಕೆಂದರೆ ಪರಿಸರ ಉತ್ತಮವಾಗಿರಬೇಕು. ಈ ಕುರಿತು ಎಲ್ಲರೂ ಕ್ರಮ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ 25.15% ಮಾತ್ರ ಅರಣ್ಯ ಅಸ್ಥಿತ್ವದಲ್ಲಿದೆ. ರಾಜ್ಯದಲ್ಲಿ ಕೇವಲ 21% ಮಾತ್ರ ಇದೆ. ದೇಶದ ಇತರೆ ಭಾಗಕ್ಕೆ ಹೋಲಿಸಿದರೆ 11% ಕಡಿಮೆ ಇದೆ. ಕನಿಷ್ಠ 33% ಅರಣ್ಯ ಪ್ರದೇಶ ಇರಲೇಬೇಕು. ಆಗ ಮಾತ್ರ ಜನರಿಗೆ ಆಮ್ಲಜನಿಕ ಸರಬರಾಜು ಆಗುತ್ತದೆ. ನೀರು ಸಿಗುತ್ತದೆ. ಅರಣ್ಯ ಹೆಚ್ಚಾಗಲು ಶಾಲೆ,ಕಾಲೇಜು, ರಸ್ತಡ ಬದಿ ಅಲ್ಲದೇ ಜಮೀನುಗಳಲ್ಲೂ ಕೂಡಾ ಸಸಿ ನೆಡಬೇಕು ಎಂದು ಖರ್ಗೆ ಸಲಹೆ ನೀಡಿದರು.
ಅರಣ್ಯ ಅಭಿವೃದ್ದಿಗೆ 20 ಅಂಶದ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗಿತ್ತು. ಆದರೆ ಅದನ್ನು ಕೆಲವರು ಲೇವಡಿ ಮಾಡಿದ್ದರು. ಪ್ರಸ್ತುತ 20 ಲಕ್ಷ ಹೆಕ್ಟೇರ್ ಪ್ರದೇಶದ ಅರಣ್ಯ ನಾಶವಾಗಿದೆ. ಕರಾವಳಿ ಭಾಗದಲ್ಲಿಯೂ ಕೂಡಾ ಅರಣ್ಯ ನಾಶವಾಗುತ್ತಿದೆ. ಹೊರಭಾಗದಲ್ಲಿ ಮಾತ್ರ ಗಿಡ ಮರಗಳಿವೆ. ಆದರೆ, ಒಳಗೆ ಹೋದರೆ ಗಿಡಗಳನ್ನು ಕಡಿದು ಜಮೀನು ಮಾಡಿಕೊಂಡಿರುತ್ತಾರೆ. ಇದು ಸರಿಯಾದ ಕ್ರಮವಲ್ಲ. ನಿಸರ್ಗ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ.ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಕಿವಿ ಮಾತು ಹೇಳಿದರು.
ಮಾಜಿ ಪ್ರದಾನಿ ಇಂದಿರಾಗಾಂಧಿ ಅವರು ಕಾನೂನು ಸಂರಕ್ಷಗಾಗಿ forest conservative act ಜಾರಿಗೆ ತಂದರು. ರಾಜ್ಯದಲ್ಲಿ ಬರಗಾಲ ಬಂದಾಗ ಇಲ್ಲಿಗೆ ಬಂದಿದ್ದ ಅವರು ಅರಣ್ಯ ಬೆಳೆಸುವ ಬಗ್ಗೆ ಸಲಹೆ ನೀಡಿದ್ದರು. ಮತ್ತೊಬ್ಬ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ಕಾಲದಲ್ಲಿ forest right act ಜಾರಿಗೆ ತಂದು ಅರಣ್ಯದಲ್ಲಿ ವಾಸಮಾಡುವ ಜನರು ಕಾಡಿನ ಸಂರಕ್ಷಣೆ ಹಾಗೂ ಮರಗಳಿಂದ ಬರುವ ಉತ್ಪನ್ನಗಳನ್ನು ಜೀವ ನಿರ್ವಹಣೆಗಾಗಿ ಬಳಸಲು ಅನುವು ಮಾಡಿಕೊಟ್ಟಿದ್ದರು. ಆದರೆ, ಅರಣ್ಯಕ್ಕೆ ಸಂಬಂಧಿಸಿದಂತೆ ಜಾರಿಗೆ ಬಂದ ಕಾನೂನುಗಳನ್ನು ದೇಶದ ಯಾವ ರಾಜ್ಯಗಳು ಪಾಲನೆ ಮಾಡುತ್ತಿಲ್ಲ.

ಇತ್ತೀಚಿಗೆ ಮೋದಿ ಸರ್ಕಾರ forest conservative amendment act ಜಾರಿಗೆ ತಂದಿದೆ. ಆದರೆ ಈ ಕಾನೂನು ಕೂಡಾ ಪಾಲನೆಯಾಗುತ್ತಿಲ್ಲ. ಪರಿಸ್ಥತಿ ಹೀಗೆ ಮುಂದುವರೆದರೆ, ಪರಿಸರ ಹಾಳಾದರೆ ಜನರು ಸ್ವಚ್ಛ ಗಾಳಿ, ಬೆಳಕು, ಆಹಾರ ಸಿಗದೆ ಅಪಾಯವಾಗಲಿದೆ.
ರಾಜ್ಯದ ನದಿ ನೀರನ್ನು ಬಳಸಿಕೊಂಡು ಎಲ್ಲ ಡ್ಯಾಂ ಗಳ ಹಿನ್ನೀರಿನ ಬಳಿ ಅರಣ್ಯ ಬೆಳೆಸಲು ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದ ಖರ್ಗೆ ಅವರು ಸಾರ್ವಜನಿಕರ ತಮ್ಮ ತಮ್ಮ ಮನೆಗಳಲ್ಲಿ ಸಸಿ ನೆಡುವ ಮೂಲಕ ಅರಣ್ಯ ಪ್ರದೇಶ ಬೆಳೆಸಲು ಸರ್ಕಾರದ ಜೊತೆಗೆ ಇರಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಈ ವರ್ಷ 3 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅವುಗಳಲ್ಲಿ 2.50 ಕೋಟಿ ಸಸಿಗಳು ಬದುಕಿದರೆ ಅದೆಷ್ಟೋ ಅನುಕೂಲವಾಗಲಿದೆ ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ 21% ಹಾಗೂ ಕಲ್ಯಾಣ ಕರ್ನಾಟಕದಲ್ಲಿ 5% ಕ್ಕಿಂತ ಕಡಿಮೆ ಅರಣ್ಯಪ್ರದೇಶವಿದೆ. ಈ ಭಾಗದಲ್ಲಿ ಹೆಚ್ಚು ಹಸಿರು ಹೊದಿಕೆ ಮಾಡುವ ಗುರಿಯೊಂದಿಗೆ 28 ಲಕ್ಷ ಸಸಿ ನೆಡಲಾಗುತ್ತಿದೆ. ಇವುಗಳಲ್ಲಿ 7 ಲಕ್ಷ ಎತ್ತರದ ಸಸಿಗಳಿವೆ. ಮರ ನೆಡುವುದು ಅತ್ಯಂತ ಪವಿತ್ರವಾದ ಕೆಲಸವಾಗಿದೆ. ಹಾಗಾಗಿ, ನೀವೆಲ್ಲ ಸಸಿಗಳನ್ನು ನೆಟ್ಟು ಪೋಷಿಸಿ ಪರಿಸರ ರಕ್ಷಣೆ ಮಾಡಬೇಕು. ಸರ್ಕಾರದ ವತಿಯಿಂದ ಕಕ ಭಾಗದಲ್ಲಿ ಪ್ರತಿವರ್ಷ 1 ಕೋಟಿ ಸಸಿ ನೆಡಲಾಗುವುದು ಎಂದರು.
” ಮನೆಗೊಂದು ಮರ ಊರಿಗೊಂದು ವನ ” ಯೋಜನೆಯಡಿಯಲ್ಲಿ ಸಸಿಗಳನ್ನು ನೆಡುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಈ ವರ್ಷ 3 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಪ್ರಕೃತಿ ವಿಕೋಪದಿಂದ ಬೆಟ್ಟಗಳು ಕುಸಿಯತ್ತಿವೆ ಹಾಗೂ ಜಾಗತಿಕ ತಾಪಮಾನ ಏರುವಿಕೆಯಿಂದ ಅಪಾಯ ಎದುರಾಗುತ್ತಿದೆ. ಮಳೆ ಸರಿಯಾದ ಸಮಯದಲ್ಲಿ ಬಾರದ ಕಾರಣ ಬೆಳೆಗಳು ನಷ್ಟವಾಗುತ್ತಿವೆ. ನಗರೀಕರಣ ಹಾಗೂ ಅಭಿವೃದ್ದಿ ಹೆಸರಿನಲ್ಲಿ ಜನರು ಮರಗಳನ್ನು ಕಡಿಯುತ್ತಿದ್ದಾರೆ. ಗಾಳಿ, ನೀರು, ಆಹಾರದಲ್ಲಿ ಮಾಲಿನ್ಯಗಳಿದ್ದು ಜನರಿಗೆ ರೋಗಗಳು ಬರುತ್ತಿವೆ. ಆರೋಗ್ಯಕರ ವಾತಾವರಣ ಮಾಡಲು ಮರ ಗಿಡಗಳನ್ನು ಬೆಳೆಸಬೇಕು.
ಈಗಾಗಲೇ ನೆಟ್ಟಿರುವ ಸಸಿಗಳು ಅಸ್ಥಿತ್ವದಲ್ಲಿಲ್ಲ ಎನ್ನುವ ಮಾತುಗಳಿವೆ. ಹಾಗಾಗಿ, ಮೂರನೆಯ ( Third party ) ಖಾಸಗಿ ಸಂಸ್ಥೆಯಿಂದ ತನಿಖೆ ನಡೆಸಲಾಗುವುದು. ಈಗಾಗಲೇ 6,000 ಹೆಕ್ಟೇರ್ ಪ್ರದೇಶದ ಅರಣ್ಯ ಭೂಮಿ ತೆರವು ಮಾಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ವನ್ಯ ಜೀವಿ ಸಂರಕ್ಷಣೆ, ಉದ್ಯಾನವನ, ಮೃಗಾಲಯ ಹಾಗೂ ಟೀ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಚಿಂಚೋಳಿಯ ಚಂದ್ರಂಪಳ್ಳಿಯ ಬಳಿ ಎಕೋ ಟೂರಿಸಂ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.

ದ್ರಾವಿಡರ ನಾಡಿನಲ್ಲಿ ನಿಸರ್ಗ ದೇವರಾಗಿತ್ತು. ಆದರೆ, ಆಧುನಿಕರಣದ ಹೆಸರಲ್ಲಿ ಅರಣ್ಯ,ನದಿ ಹಾಳಮಾಡಲಾಗುತ್ತಿದೆ. ಭೂಮಿಯ ಶೇ 33 ರಷ್ಟು ಅರಣ್ಯ ಇರಬೇಕಿತ್ತು. ಕಲುಬುರಗಿ ಜಿಲ್ಲೆಯಲ್ಲಿ ಕೇವಲ 2% ಮಾತ್ರ ಅರಣ್ಯ ಇದೆ. ಇದು ಅಪಾಯಕಾರಿ ಬೆಳವಣಿಗೆ. ಪ್ರತಿಯೊಬ್ಬರು ಸಸಿ ನೆಡುವ ಕಡ್ಡಾಯ ಕಾನೂನು ಜಾರಿಗೆ ತರಬೇಕು. ಜನರು ಆಂದೋಲನ ಮಾಡಬೇಕು. ಈ ಹಿಂದೆ ಸುಂದರ್ ಲಾಲ್ ಬಹುಗುಣ ಅವರಂತ ನಾಯಕರು ನಿಸರ್ಗ ರಕ್ಷಣೆಗಾಗಿ ಅಪ್ಪಿಕೋ ಚಳುವಳಿ ಮಾಡಿದರು. ಈಗ ಅಂತಹ ಚಳುವಳಿ ಅಗತ್ಯವಿದೆ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರ್ಟಿಕಲ್ 371( J) ಜಾರಿಗೆ ತಂದು ಈ ಭಾಗದ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಾಗಲೀ. ಕೇಂದ್ರ ಸರ್ಕಾರ ಖರ್ಗೆ ಸಾಹೇಬರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.
ವೇದಿಕೆಯ ಮೇಲೆ ಸಂಸದರಾದ ರಾಧಾಕೃಷ್ಣ ದೊಡ್ಡಮನಿ(radhakrishna Doddamani), ಸಚಿವರಾದ ಈಶ್ವರ ಖಂಡ್ರೆ(Eshwar Khandre), ಪ್ರಿಯಾಂಕ್ ಖರ್ಗೆ(Priyanka Kharge), ಶಾಸಕರಾದ ಬಿ.ಆರ್.ಪಾಟೀಲ್(BR Patil), ಎಂ.ವೈ.ಪಾಟೀಲ್(MY Patil), ಅಲ್ಲಮಪ್ರಭು ಪಾಟೀಲ್(Allamaprabhu Patil), MLC ತಿಪ್ಪಣ್ಣಪ್ಪ ಕಮಕನೂರು(MLC Thippannappa Kamakanur), ಶಶೀಲ್ ನಮೋಸಿ(Shashil Namosi), ಜಗದೇವ ಗುತ್ತೇದಾರ, ಚಂದ್ರಶೇಖರ್ ಪಾಟೀಲ್, ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರು, ರೇವುನಾಯಕ ಬೆಳಮಗಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕಮೀಷನರ್ ಶರಣಪ್ಪ, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಕಮೀಷನರ್ ಶಿಂಧೆ ಅವಿನಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾದೇಶಿಕ ಅರಣ್ಯ ವಿಭಾಗ ಸುಮೀತ್ ಕುಮಾರ ಪಾಟೀಲ್ ಸೇರಿದಂತೆ ಹಲವರಿದ್ದರು.

ಪ್ರಮುಖಾಂಶ
ಜುಲೈ 1 ರಿಂದ 7 ರವರೆಗೆ ರಾಜ್ಯ ಅರಣ್ಯ ಇಲಾಖೆ ವನಮಹೋತ್ಸವ ಕಾರ್ಯಕ್ರಮದಡಿಯಲ್ಲಿ ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿದೆ. ಕಕ ಭಾಗದಲ್ಲಿ 25 ಲಕ್ಷ ಹಾಗೂ ರಾಜ್ಯಾದ್ಯಂತ 3 ಕೋಟಿ ಸಸಿ ನೆಡಲಾಗುತ್ತಿದೆ. ಜಿಯೋ ಟ್ಯಾಗ್ ಮಾಡುವ ಮೂಲಕ ಸಸಿಗಳ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ” ಹಸಿರು ಪಥ ” ಕಾರ್ಯಕ್ರಮದ ಅಡಿಯಲ್ಲಿ ರಾಜ್ಯ ಸುಮಾರು 5,000 ಕಿಮಿ ಉದ್ದದ ರಸ್ತೆ ಬದಿ ಸಸಿ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸುಮಾರು 249 ಕಿಮಿ ಉದ್ದದ ರಸ್ತೆ ಬದಿಯಲ್ಲಿ ಸಸಿನೆಡಲಾಗುವುದು. ಈ ಕಾರ್ಯಕ್ರಮದ ಲೋಗೋ ಹಾಗೂ ವಿಡಿಯೋ ಅನಾವರಣ ಕೂಡಾ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು.

ನರೇಗಾ ಯೋಜನಯಡಿಯಲ್ಲಿ ಸಸಿ ನೆಟ್ಟು ಪಾಲನೆ ಪೋಷಣೆ ಮಾಡಲಾಗುವುದು. ಜಿಯೋ ತಂತ್ರಜ್ಞಾನ ಬಳಕೆ ಮಾಡುವುದರ ಜೊತೆಗೆ ಜಿಯೋ ಟ್ಯಾಗ್ ಅಳವಡಿಸಿ ಸಸಿಗಳ ಬೆಳವಣಿಕೆ ಬಗ್ಗೆ ಮಾಹಿತಿ ಒದಗಿಸಲಾಗುವುದು.
“ಕಲಬುರಗಿ ಹಸಿರು ಹಜ್ಜೆ” ಕಾರ್ಯಕ್ರಮದ ಅಡಿಯಲ್ಲಿ ರೂ 38.30 ಕೋಟಿ ವೆಚ್ಚದಲ್ಲಿ
ಕೆರೆ ಅಭಿವೃದ್ದಿಗೆ, ರೂ 21.27 ಕೋಟಿ ವೆಚ್ಚದಲ್ಲಿ 30 ಕೆರೆಗಳ ಪುನರುಜ್ಜೀವನ ಕಾರ್ಯಕ್ರಮ ಹಾಗೂ ರೂ 18.60 ಕೋಟಿ ವೆಚ್ಚದಲ್ಲಿ ಕಲಬುರಗಿ ನಗರದ 25 ಪ್ರಮುಖ ವೃತ್ತಗಳ ಅಭಿವೃದ್ದಿ ಹಾಗೂ ಸೌಂದರ್ಯೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಿಎಂ ಎಫ್ ಅನುದಾನದಲ್ಲಿ ರೂ 60 ಲಕ್ಷ ವೆಚ್ಚದಲ್ಲಿ ನಗರದ 37,100 ಕುಟುಂಬಗಳಿಗೆ ಸಸಿ ನೆಡುವ ಮನೆಗೊಂದು ಮರ ಕಾರ್ಯಕ್ರಮದ ಅಡಿಯಲ್ಲಿ ಸಸಿಗಳನ್ನು ವಿತರಿಸುವ ಯೋಜನೆಗೆ ಚಾಲನೆ. ಸಾಂಕೇತಿಕವಾಗಿ ಮೂವರು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಸಿಗಳನ್ನು ನೆಟ್ಟರು.