ಬೆಟ್ಟದ ಮೇಲೆ 15ಕಟ್ಟೆಗಳನ್ನು ಕಟ್ಟುವ ಮೂಲಕ ಪ್ರಸಿದ್ದಿ ಪಡೆದಿದ್ದ ಪರಿಸರ ಸಂರಕ್ಷಕ ಕಲ್ಮನೆ ಕಾಮೇಗೌಡ(83) ಸೋಮವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ಮೃತರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ನಿವಾಸಿಗಳಾಗಿದ್ದರು. ವೃತ್ತಿಯಲ್ಲಿ ಕುರಿಗಾಹಿ ಆಗಿದ್ದ ಇವರು ಕುರಿ ಮಾರಿ ಸಂಪಾದಿಸಿದ ಹಣದಲ್ಲಿ ಬೆಟ್ಟದ ಮೇಲೆ ಕಟ್ಟೆಗಳನ್ನು ಕಟ್ಟಿಸಿ ಪ್ರತಿ ಕಟ್ಟೆಗೂ ದೇವರ ಹಾಗೂ ತಮ್ಮ ಮೊಮ್ಮಕ್ಕಳ ಹೆಸರನ್ನು ಇಟ್ಟಿದ್ದರು.
ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟಿದ ಇವರು ಬೆಟ್ಟದ ಮೇಲಿನ ಕಟ್ಟೆಗಳನ್ನು ಸಂರಕ್ಷಿಸುತ ಬೆಟ್ಟದ ಮೇಲ್ಭಾಗ ಹಾಗೂ ತಟದಲ್ಲಿ ನೂರಾರು ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಕಾಳಜಿ ಮೆರೆದಿದ್ದರು.
![](https://pratidhvani.com/wp-content/uploads/2022/10/Lake.jpg)
ಕಾಮೇಗೌಡರ ಪರಿಸಂರ ಸಂರಕ್ಷಣೆಯನ್ನು ಖುದ್ದು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಾಡಿ ಹೊಗಳಿದ್ದರು. ಇವರ ಪರಿಸರ ಸಂರಕ್ಷಣೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು ಮತ್ತು ವಿವಿಧ ಕ್ಷೇತ್ರದ ಗಣ್ಯರು ಇವರ ಸೇವೆಯನ್ನು ಕೊಂಡಾಡ್ಡಿದರು. ಕಾಮೇಗೌಡರ ಸಾವಿಗೆ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕಾಮೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಾಳೆ ಎಂದು ತಿಳಿದು ಬಂದಿದೆ.
ಮೃತರ ಅಂತ್ಯಸಂಸ್ಕಾರವು ಮಧ್ಯಾಹ್ನ 2 ಘಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.