ನವದೆಹಲಿ: ದೇಶದೆಲ್ಲೆಡೆ ಇಂದು ಮಹಾತ್ಮ ಗಾಂಧೀಜಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದ್ದು, ಗಾಂಧಿ ಜಯಂತಿ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಪುಷ್ಪನಮನ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಎಲ್ ಜಿ ಸಕ್ಸೇನಾ, ಕೇಂದ್ರ ಸಚಿವರಾದ ಡಾ ಜಿತೇಂದ್ರ ಸಿಂಗ್ ಮತ್ತು ಮೀನಾಕ್ಷಿ ಲೇಖಿ ರಾಜ್ಘಾಟ್ನಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.
“ಮಹಾತ್ಮ ಗಾಂಧೀಜಿ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿರುವ ವ್ಯಕ್ತಿ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನರೇಂದ್ರ ಮೋದಿ ಗಾಂಧೀಜಿ ಅವರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.
“ಗಾಂಧಿ ಜಯಂತಿಯ ಈ ವಿಶೇಷ ದಿನದಂದು ನಾನು ಮಹಾತ್ಮ ಗಾಂಧಿ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಅವರ ಬೋಧನೆಗಳು ಸದಾ ನಮ್ಮ ಹಾದಿಯನ್ನು ಬೆಳಗುತ್ತಲೇ ಇರುತ್ತವೆ. ಜಾಗತಿಕವಾಗಿ ಪ್ರಭಾವ ಬೀರಿರುವ ಗಾಂಧೀಜಿ, ಇಡೀ ಮಾನವಕುಲದಲ್ಲಿ ಏಕತೆ ಮತ್ತು ಸಹಾನುಭೂತಿಯ ಮನೋಭಾವ ಮತ್ತಷ್ಟು ಹೆಚ್ಚುವಂತೆ ಪ್ರೇರೇಪಿಸಿದವರು. ಅವರ ಕನಸುಗಳನ್ನು ನನಸು ಮಾಡಲು ನಾವು ಯಾವಾಗಲು ಕೆಲಸ ಮಾಡೋಣ. ಅವರು ಕನಸು ಕಂಡ ಬದಲಾವಣೆಯ ರಾಯಭಾರಿಗಳಾಗುವಂತೆ ಅವರ ಆಲೋಚನೆಗಳು ಮಾಡಲಿ. ಎಲ್ಲಾ ಕಡೆ ಏಕತೆ ಮತ್ತು ಸೌಹಾರ್ದತೆ ಬೆಳೆಸಲಿ” ಎಂದು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.