ಚೆನ್ನೈ: ದ್ರಾವಿಡ ಸಿದ್ಧಾಂತ ನಿರ್ಮೂಲನಾ’ ಸಭೆ ನಡೆಸಲು ಸೋಮವಾರ ಅನುಮತಿ ನಿರಾಕರಿಸಿದ ಮದ್ರಾಸ್ ಹೈಕೋರ್ಟ್, ಯಾವುದೇ ವ್ಯಕ್ತಿಗೆ ಸಮಾಜವನ್ನು ವಿಭಜಿಸುವ ವಿಚಾರಗಳನ್ನು ಪ್ರಚಾರ ಮಾಡಲು ಅಥವಾ ಯಾವುದೇ ಸಿದ್ಧಾಂತವನ್ನು ‘ನಿರ್ಮೂಲನೆಗೊಳಿಸಲು’ ಸಭೆಗಳನ್ನು ನಡೆಸುವ ಹಕ್ಕು ಇಲ್ಲ ಎಂದು ಹೇಳಿದೆ. ಆಡಳಿತಾಂಗದಲ್ಲಿರುವ ವ್ಯಕ್ತಿಗಳು ಸಮಾಜವನ್ನು ‘ವಿಭಜಿಸುವ ಪ್ರವೃತ್ತಿ’ಯೊಂದಿಗೆ ಮಾಡುವ ಟೀಕೆಗಳ ಅಪಾಯವನ್ನು ಅರಿತುಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.

ಸೆಪ್ಟೆಂಬರ್ನಲ್ಲಿ ಇಲ್ಲಿ ನಡೆದ ಸನಾತನ ಧರ್ಮ ನಿರ್ಮೂಲನಾ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ಆಡಳಿತಾರೂಢ ಡಿಎಂಕೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಪೊಲೀಸರನ್ನು ಪೀಠವು ತರಾಟೆಗೆ ತೆಗೆದುಕೊಂಡಿತು. ದ್ರಾವಿಡ ಸಿದ್ಧಾಂತ ನಿರ್ಮೂಲನೆ ಮತ್ತು ತಮಿಳರನ್ನು ಸಂಘಟಿಸುವ ಸಮಾವೇಶ’ ನಡೆಸಲು ಅನುಮತಿ ನೀಡಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಮಗೇಶ್ ಕಾರ್ತಿಕೇಯನ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯ ತನ್ನ ಆದೇಶದಲ್ಲಿ ಈ ರೀತಿ ತಿಳಿಸಿದೆ.
ಸೆಪ್ಟೆಂಬರ್ನಲ್ಲಿ ಇಲ್ಲಿ ನಡೆದ ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಭಾಗವಹಿಸಿದ್ದರು ಮತ್ತು ಸನಾತನ ಧರ್ಮದ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿ ಭಾರಿ ವಿವಾದ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು.